“ಹಾಗೆ ಒಂದು ಹಾಸ್ಯಗವಿತೆ. ಹಬ್ಬದ ಸಾಲಿನ ಮನೆ-ಮನೆ ಕತೆ. ಕೇವಲ ನಿಮ್ಮ ಮೊಗವರಳಿಸಲಿಕ್ಕಾಗಿ ಈ ನಗೆಗವಿತೆ. ಈ ಬದುಕು ಅನಿಶ್ಚಿತ. ನಿತ್ಯವೂ ಸಮಸ್ಯೆಗಳು ಅನಂತ. ನಗುವೊಂದೆ ಉಚಿತ. ನಗುತಿದ್ದರೆ ಆರೋಗ್ಯ ಖಚಿತ. ಹಾಗಾಗಿ ನಗುತ್ತಿರೋಣ, ನಗಿಸುತ್ತಿರೋಣ.. ಏನಂತೀರಾ..?? – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಸತಿಯೆಂದಳು ಸಿಡುಕಿನಲಿ..
“ಎಷ್ಟು ದುಡಿದರೇನು..?
ಎಂಥ ಹುದ್ದೆಯಲಿದ್ದರೇನು?
ದಿನಾ ತೊಡುತಿರುವಿರಲ್ಲ
ಅದೇ ಹರಿದ-ಬನೀನು..?”
ಗಂಡನೆಂದ ದಿಗ್ಭ್ರಮೆಯಲಿ..
“ಪ್ರಳಯ ಮುನ್ಸೂಚನೆಯೇನು
ಎಂದಿರದ ಕಾಳಜಿ-ಇಂದೇನು?
ಈ-ಹರಿದ-ಬನೀನು ನಿನ್ನ
ಕಣ್ಣುಕುಕ್ಕಲು ಕಾರಣವೇನು.?”
ಹೆಂಡತಿಯೆಂದಳು ಹುರುಪಲಿ..
“ಬಂದಿದೆಯಂತೆ ಅಂಗಡಿಯಲಿ
ಬಣ್ಣ-ಬಣ್ಣದ ಬನೀನು!
ಎರಡು ಸಾವಿರ ಕೊಟ್ಟು
ತರಲೇನು ಎರಡು-ಬನೀನು?”
ಹೌಹಾರಿದ ಗಂಡನೆಂದ..
“ಎರಡುcಸಾವಿರಕೆರಡು ಬನೀನು!
ಅಬ್ಬಾ.!ಅಂಥಾ ವಿಶೇಷವೇನು?!”
ಸತಿಯೆಂದಳು ಸಡಗರದಿ..
“ಸಾವಿರ ರೂಪಾಯಿಗೊಂದು
ಬೊಂಬಾಟ್ ಬಣ್ಣದ ಬನೀನಂತೆ!
ಹಬ್ಬದ ಭಾರಿ-ಕೊಡುಗೆಯಂತೆ
ಬನೀನಿನೊಂದಿಗೆ ಒಂದು
ಕಾಟನ್-ಸೀರೆ ಉಚಿತವಂತೆ..!!”
- ಎ.ಎನ್.ರಮೇಶ್. ಗುಬ್ಬಿ (ಲೇಖಕರು, ಕವಿಗಳು), ಕೈಗಾ
