ಕವಿ ಶ್ರೀಪಾದ ಆಲಗೂಡಕರ ಅವರ ಒಂದು ಗಝಲ್ ನ್ನು ತಪ್ಪದೆ ಮುಂದೆ ಓದಿ…
ಮಾವಿನ ತೋಪಲಿ ಜೀಕಲು ಉಯ್ಯಾಲೆ ಗಿಣಿಗಳು ಬಂದವು ನೋಡು
ತವರಿನ ಮನೆಯಲಿ ಸಂತಸದಿ ಹಾರಾಡಲು ಮರಿಗಳ ತಂದವು ನೋಡು
ನವೀನ ಅರಳಿದ ಹೂವುಗಳ ಮಕರಂದ ಹೀರಲು ಭ್ರಮರವು ಬರುವುದೇ
ಸವಿದು ಮಧುವನು ಗೂಡಿನಲಿ ಜೇನನು ಶೇಖರಿಸಿದ ಅಂದವು ನೋಡು
ತೂಗುವ ತೊಟ್ಟಿಲಂತೆ ಮರದ ಟೊಂಗೆಯಲಿ ನೇತಾಡುತ ಚಿಲಿಪಿಲಿ ಹಾಡಿದೆ
ಮಾಗಿದ ಹಣ್ಣಿನ ಗಿಡದಲಿ ಸ್ವಾದವನು ತೋರುತ ತಿಂದವು ನೋಡು
ಭಾವದ ಬಿಂದಿಗೆಯಲಿ ಚಿಗುರಿದ ಕನಸುಗಳು ಬೆರೆತು ಒಂದಾಗಿ ಹೋಗಿದೆ
ನೋವನು ಮರೆತು ನೆರಳಿನ ಆಸರೆಯ ಅರಸುತ ನಿಂದವು ನೋಡು
ಜೀವನದ ಪಯಣದಲಿ ಅನಿರೀಕ್ಷಿತ ಕ್ಷಣಗಳು ಬರುವದು ಸಹಜ ಶ್ರೀಪಾದ
ಬೇವಿನ ಕಹಿಯಲಿ ಸಿಹಿಯನು ತುಂಬುವ ಯುಗಾದಿಯ ಚೆಂದವು ನೋಡು
- ಶ್ರೀಪಾದ ಆಲಗೂಡಕರ – ಪುಣೆ