ಗುರುವೆ ನಿನ್ನೆದುರಿಗೆ ಒಪ್ಪು ತಪ್ಪುಗಳನು ಸ್ವೀಕರಿಸಿ,ಅಪೂರ್ಣಳು ನಾ ಮತ್ತೆ ಮತ್ತೆ ಎರಗುವೆ ನಿನ್ನ ಪಾದಕೆ…ಕವಿಯತ್ರಿ ಪೂರ್ಣಿಮಾ ಮರಳಿಹಳ್ಳಿ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಸಾಲುಗಳು ಓದುಗರ ಮುಂದೆ…
ಮಾಡಿರುವ ತಪ್ಪುಗಳು ಅನಂತ
ಆಡಿರುವ ಎಷ್ಟೋ ಮಾತು ಅಹಿತ
ಪಟ್ಟ ಪಶ್ಚಾತ್ತಾಪವೂ ಅಪರಿಮಿತ
ಸನ್ಮಾರ್ಗದಲ್ಲಿ ನಡೆಸೆಂದು ಮತ್ತೆ
ಬೇಡುವೆನು ಗುರುವೆ ಅನವರತ
ಭೂತದೊಳು ಮಾಡಿದ ತಪ್ಪು
ಭವಿಷ್ಯದಲಿ ಮರುಕಳಿಸಿದೆಷ್ಟೋ
ಕ್ಷಣಕ್ಕೊಮ್ಮೆ ಆತ್ಮಾವಲೋಕನ
ಆದರೂ ಕಲಿಯಬೇಕಿದೆ ಸಾಕಷ್ಟು
ಸದ್ಭಾವ ಕಲಿಸೆಂದು ಮತ್ತೆ
ಬೇಡುವೆನು ಗುರುವೆ ಅನವರತ
ನೋಯಿಸಿದ ಮನಗಳಿರಬಹುದು
ಸ್ಪಂದಿಸದ ಕ್ಷಣಗಳೇ ಇರಬಹುದು
ಕರುಣೆಗೆ ಕುರುಡಾಗಿರಬಹುದು
ಮಾನವೀಯತೆಯ ಮರೆತಿರಬಹುದು
ಸದ್ಭುದ್ಧಿ ನೀಡೆಂದು ಮತ್ತೆ
ಬೇಡುವೆನು ಗುರುವೆ ಅನವರತ
ಸ್ವಾರ್ಥ ಭಾವದಲಿ ಸೆಣಸಿದ್ದೆಷ್ಟೋ
ಮನದ ವಾಂಛೆಗೆ ಬಯಸಿದ್ದೆಷ್ಟೋ
ಕೋಪ ಭಾವದಲಿ ನುಡಿದಿದೆಷ್ಟೋ
ನಡೆ ನುಡಿಯಲಿ ಭಿನ್ನತೆಯೆಷ್ಟೋ
ಸಮಚಿತ್ತ ಅನುಗ್ರಹಿಸೆಂದು ಮತ್ತೆ
ಬೇಡುವೆನು ಗುರುವೆ ಅನವರತ
ಒಪ್ಪ ತಪ್ಪುಗಳುನು ಹಾಕಿರುವೆ
ನಿನ್ನ ಪಾದದಗಳಡಿಗೆ
ಅಂತರಂಗವನೇ ತೆರದಿಡುವೆ
ಗುರುವೆ ನಿನ್ನೆದುರಿಗೆ
ಒಪ್ಪು ತಪ್ಪುಗಳನು ಸ್ವೀಕರಿಸಿ
ಭಿಕ್ಷೆ ನೀಡು ಈ ಜೀವಕೆ
ಅಪೂರ್ಣಳು ನಾ ಮತ್ತೆ ಮತ್ತೆ
ಎರಗುವೆ ನಿನ್ನ ಪಾದಕೆ.
- ಪೂರ್ಣಿಮಾ ಮರಳಿಹಳ್ಳಿ (ಕವಿಯತ್ರಿ, ಲೇಖಕರು) ಧಾರವಾಡ.