ಬದುಕಿಗೊಂದು ಸೆಲೆ (ಭಾಗ- ೫೧)

ಭಾರತದ ಇತಿಹಾಸವನ್ನು ಪುನರ್ ನಿರ್ಮಿಸಿದ ಕೆಲವೇ ಜನರಲ್ಲಿ ಶಾಂತಿ ಸುಧಾ ಘೋಷ್ ಕೂಡ ಒಬ್ಬರು. ಭಾರತವು ಬ್ರಿಟಿಷ್ ವಸಾಹತುಶಾಹಿಯ ಅಧಿಕಾರದ ಅಡಿಯಲ್ಲಿ ನರಳುತ್ತಿರುವಾಗ ಅವಿಭಜಿತ ಬಂಗಾಳದ ಬಾರಿಸಾಲ್ ಎಂಬ ಊರಿನಲ್ಲಿ ಜನಿಸಿದ ಹಾಗೂ ಅಲ್ಲಿಯೇ ಬೆಳೆದರು. ಅವರ ಹೋರಾಟದ ಕುರಿತು ವೀಣಾ ಹೇಮಂತಗೌಡ ಪಾಟೀಲ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಅತ್ಯಂತ ಸಾಮಾನ್ಯ ಬದುಕನ್ನು ಬದುಕಿದ ಅವರು ಮೌನ ಮತ್ತು ಸೈರಣೆಯನ್ನು ಅಪ್ಪಿಕೊಳ್ಳಲಿಲ್ಲ. ಅಂದಿನ ಕಾಲದಲ್ಲಿಯೇ ಅತ್ಯಂತ ಸುಶಿಕ್ಷಿತ ಬಂಗಾಳ ಪ್ರಾಂತ್ಯದಲ್ಲಿ ಜನಿಸಿದ ಶಾಂತಿ ಸುಧಾ ಅವರು ಉನ್ನತ ಶಿಕ್ಷಣವನ್ನು ಪಡೆದರು. ಧೈರ್ಯವನ್ನು ತಮ್ಮ ಆಯುಧದಂತೆ ಧರಿಸಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದರು.

ಶಾಂತಿ ಸುಧಾ ಘೋಷ್ ಅವರ ತಂದೆ ಕ್ಷೇತ್ರನಾಥ ಘೋಷ್ ಅವರು ಅಲೋಕಾನಂದ ಎಂಬ ಹಳ್ಳಿಯ ಬ್ರಜಮೋಹನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಈ ಬಾರಿಶಾಲ ಪ್ರಾಂತವು ಇಂದಿನ ಬಂಗಾಳ ದೇಶದಲ್ಲಿ ವಿಲೀನವಾಗಿದೆ.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಬ್ರಹ್ಮೋ ಬಾಲಿಕ ವಿದ್ಯಾಲಯದಲ್ಲಿ ಪಡೆದ ಆಕೆ ಮುಂದೆ 1928ರಲ್ಲಿ ಬಿಎ ಪದವಿಯನ್ನು ಪಡೆದರು. ನಂತರ 1930ರಲ್ಲಿ ಕಲ್ಕತ್ತಾ ಯುನಿವರ್ಸಿಟಿಯಿಂದ ಗಣಿತ ವಿಷಯದಲ್ಲಿ ಮೊದಲ ಸ್ಥಾನದಲ್ಲಿ ತೇರ್ಗಡೆಯಾಗಿ ಎಮ್ ಎ ಪದವಿಯನ್ನು ಪಡೆದರು. ಆಕೆಯ ಸಹೋದರ ಪ್ರಖ್ಯಾತ ಕಮ್ಯುನಿಸ್ಟ್ ಚಿಂತಕ ಹಾಗೂ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಸಂಸ್ಥಾಪಕರಾದ ದೇವಪ್ರಸಾದ್ ಘೋಷ್ ಆಗಿದ್ದರೂ ಕೂಡ ಆಕೆ ತನ್ನ ಮುಂದಿನ ಬದುಕಿನಲ್ಲಿ ರಾಜಕೀಯದ ಹಾದಿಯನ್ನು ತುಳಿಯಲಿಲ್ಲ.

ಅರವಿಂದ ಘೋಷರ ಅಭಿಮಾನಿಯಾಗಿದ್ದ ಆಕೆ ರಾಜಕೀಯ ಕ್ರಾಂತಿ ಹಾಗೂ ಯೋಗದ ಅನೂಹ್ಯ ಬಂಧವನ್ನು ಹೊಂದಿದ್ದರು. ಗಾಂಧೀಜಿಯವರ ಕುರಿತು ಆಕೆಗೆ ಅಪಾರ ಗೌರವವಿದ್ದರೂ ಕೂಡ ಅವರ ಅಹಿಂಸಾ ಪರ ನಿಲುವುಗಳಿಗೆ ಆಕೆಯ ವಿರೋಧವಿತ್ತು.

ಮಹಿಳೆಯರು ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿಸಿದಂತಹ ಸಮಯದಲ್ಲಿ ಅತ್ಯಂತ ಧೈರ್ಯದಿಂದ ಆ ಎಲ್ಲಾ ಸಂಕೋಲೆಗಳನ್ನು ದಾಟಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪಡೆದು ಓರ್ವ ಟೀಚರ್ ಆಗಿ ಆಕೆ ಕಾರ್ಯನಿರ್ವಹಿಸಿದರು. ಜನರ ವಿಸ್ಮೃತಿಯನ್ನು ತೊಡೆದು ಹಾಕಲು ಹಾಗೂ ಅವರನ್ನು ಎಚ್ಚರಿಸಲು ಶಿಕ್ಷಣ ಹಾಗೂ ಜ್ಞಾನಗಳು ಅತ್ಯವಶ್ಯಕ ಎಂದು ಆಕೆ ನಂಬಿದ್ದರು. ಆಕೆಯ ತರಗತಿಯ ಕೋಣೆಗಳು ಕೇವಲ ಕಲಿಕಾ ತಾಣಗಳಾಗಿರಲಿಲ್ಲ ಬದಲಾಗಿ ವಿದ್ಯಾರ್ಥಿಗಳಲ್ಲಿ ವಿಚಾರ ಪ್ರಚೋದನೆಯನ್ನು ಮೂಡಿಸುವಂತಹ, ಸ್ವತಂತ್ರ ವಿಚಾರಧಾರೆಗಳನ್ನು ಹೊಂದುವಂತಹ ಹಾಗೂ ಅನ್ಯಾಯದ ವಿರುದ್ಧ ಮಾತನಾಡುವ ಧೈರ್ಯವನ್ನು ತುಂಬುವಂತಹ ಸ್ಪೂರ್ತಿಯ ತಾಣಗಳಾಗಿದ್ದವು. ಶಿಕ್ಷಣ ಆಕೆಗೆ ಕೇವಲ ವೃತ್ತಿ ಆಗಿರದೆ ಅದೊಂದು ಗುರಿಯಾಗಿತ್ತು

ಶೈಕ್ಷಣಿಕ ಚಟುವಟಿಕೆಗಳ ಹೊರತಾಗಿ ಭಾರತದ ಕುರಿತಾದ ಆಕೆಯ ಪ್ರೀತಿ ಹಾಗೂ ಗೌರವಗಳು ಆಕೆ ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿ ಭಾಗವಹಿಸಲು ಕಾರಣವಾದವು. ಕ್ರಾಂತಿಕಾರಿಗಳೊಂದಿಗೆ ಸಂಪರ್ಕವನ್ನು ಹೊಂದಿ ಸ್ವಾತಂತ್ರ್ಯ ಹೋರಾಟದ ಭೂಗತ ಚಟುವಟಿಕೆಗಳನ್ನು ನಡೆಸಲು ಆಕೆ ಆರಂಭಿಸಿದರು. ಹಾಗೆ ಶಾಂತಿ ಸುಧಾ ಅವರು ಆಯ್ದುಕೊಂಡ ದಾರಿ ಅತ್ಯಂತ ಅಪಾಯಕಾರಿ ಹಾಗೂ ವೈಯುಕ್ತಿಕ ತ್ಯಾಗವನ್ನು ಬಯಸುತ್ತದೆ ಎಂಬ ಅರಿವಿದ್ದು ಕೂಡ ಆಕೆ ಈ ದಾರಿಯನ್ನು ಆಯ್ದುಕೊಂಡದ್ದು ಆಕೆಯ ಧೀಶಕ್ತಿಯನ್ನು ನಮಗೆ ಪರಿಚಯಿಸುತ್ತದೆ.

ಪ್ರಾಥಮಿಕವಾಗಿ ಕ್ರಾಂತಿಕಾರಿಗಳ ಸಹಯೋಗಿಯಾಗಿದ್ದು ಸತಿನ್ ಸೇನ್ ತರುಣ ಸಂಘವನ್ನು ಆಕೆ ಪ್ರತಿನಿಧಿಸುತ್ತಿದ್ದರೂ ತನ್ನದೇ ಆದ ಶಕ್ತಿ ವಾಹಿನಿ ಎಂಬ ಹೆಣ್ಣು ಮಕ್ಕಳ ಸಂಘವನ್ನು ಕೂಡ 1930ರಲ್ಲಿ ಆಕೆ ಬಾರಿಶಾಲ್ ನಲ್ಲಿ ಆರಂಭಿಸಿದಳು. ಕ್ರಾಂತಿಕಾರಕ ಚಟುವಟಿಕೆಗಳಿಗೆ ಹೆಚ್ಚುವರಿ ಸಹಾಯಕರಾಗಿ ಹೆಣ್ಣು ಮಕ್ಕಳನ್ನು ತಯಾರಿಸಿದ ಖ್ಯಾತಿ ಶಾಂತಿ ಸುಧಾ ಅವರದು.

ಪ್ರೀಮಿಯರ್ ಕಾಲೇಜುಗಳು ಎಂದೇ ಹೆಸರಾದ ವಿಕ್ಟೋರಿಯಾ ಎಕ್ಸಿಕ್ಯೂಷನ್ ಕಲ್ಕತ್ತಾ ಮೊಹಮ್ಮದ್ ಮುಹಸಿನ್ ಕಾಲೇಜು ಹಾಗೂ ಬಾರಿಶಾಲ್ ಬ್ರಜಮೋಹನ್ ಕಾಲೇಜುಗಳಲ್ಲಿ ಶಿಕ್ಷಕಿಯಾಗಿ ಆಕೆ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ಆಕೆಯನ್ನು ಎಲ್ಲರೂ ಕ್ರಾಂತಿಕಾರಿಗಳ ಸಹಯೋಗಿ ಎಂದೇ ಗುರುತಿಸುತ್ತಿದ್ದರು.

ಕ್ರಾಂತಿಕಾರಿಗಳಿಗೆ ಸಹಾಯವನ್ನು ಮಾಡುವ, ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿ ಭಾಗವಹಿಸಿದ್ದ ಆಕೆ 1934 ರಲ್ಲಿ ಬಂಧನಕ್ಕೆ ಒಳಗಾಗಬೇಕಾಗಿತ್ತು. ಕಠಿಣಾತಿ ಕಠಿಣ ಕಾರಾಗೃಹ ಶಿಕ್ಷೆಯು ಆಕೆಯ ಆರೋಗ್ಯದಲ್ಲಿ ಸಾಕಷ್ಟು ತೊಂದರೆಗಳನ್ನು ಉಂಟು ಮಾಡಿದರೂ ಕೂಡ ಆಕೆಯ ಉತ್ಸಾಹ ಮಾತ್ರ ಒಂದಿನಿತೂ ಕಮರಲಿಲ್ಲ. ಕಠಿಣ ಕಾರಾಗೃಹ ವಾಸದ ತೊಂದರೆಗಳನ್ನು ಅನುಭವಿಸಿದರೂ ಕೂಡ ಭಾರತಕ್ಕೆ ಖಂಡಿತವಾಗಿಯೂ ಸ್ವಾತಂತ್ರ್ಯ ದೊರೆಯುತ್ತದೆ ಅದಕ್ಕಾಗಿ ಎಲ್ಲ ರೀತಿಯ ತ್ಯಾಗಕ್ಕೆ ಸಿದ್ದರಾಗಲೇಬೇಕು ಎಂಬ ಆಕೆಯ ದೃಢನಂಬಿಕೆಯ ಮಹಾವೃಕ್ಷದ ಬೇರನ್ನು ಕಿಂಚಿತ್ತು ಅಲುಗಿಸಲು ಕೂಡ ಸಾಧ್ಯವಾಗಲಿಲ್ಲ. ಆಕೆ ಮತ್ತೆ ಸ್ವಾತಂತ್ರ್ಯ ಯಜ್ಞದಲ್ಲಿ ತನ್ನನ್ನು ತಾನು ಸಮಿತ್ತಾಗಿಸಿಕೊಂಡರು.

1942ರಲ್ಲಿ ನಡೆದ ಚಲೇ ಜಾವ್ ಚಳುವಳಿಯ ಸಮಯದಲ್ಲಿ ಆಕೆ ಮತ್ತೊಮ್ಮೆ ಬಂಧನಕ್ಕೆ ಒಳಗಾದರು. ಪ್ರತಿಯೊಂದು ಜೈಲುವಾಸವು ಆಕೆಯನ್ನು ಗಟ್ಟಿಗೊಳಿಸುತ್ತಿತ್ತು.ಹಾಗೆ ಜೈಲಿನಿಂದ ಹೊರಬಂದ ಆಕೆಯ ಮನಸ್ಸಿನಲ್ಲಿ ಯಾವುದೇ ಕಹಿ ಇರದೆ ದೇಶ ಸೇವೆಯ ಅಗಾಧ ಇಚ್ಛೆ ಆಕೆಯಲ್ಲಿ ಮತ್ತಷ್ಟು ಕೊನರುತ್ತಿತ್ತು. ಭೀಕರ ಬರಗಾಲವು ಆವರಿಸಿದ ಆ ಸಮಯದಲ್ಲಿ ಜನರಲ್ಲಿ ಬದುಕಿನ ಕುರಿತು ಆಸೆಯೇ ಕಮರಿ ಹೋಗಿ ಹತಾಶೆ ಅವರಲ್ಲಿ ಬೇರು ಬಿಟ್ಟಿತ್ತು. ಇಂತಹ ಸಮಯದಲ್ಲಿ ಆಕೆ ಹಸಿದ ಹಾಗೂ ನೋವಿನಿಂದ ನರಳುತ್ತಿದ್ದ ಜನರಿಗೆ ಸಹಾನುಭೂತಿಯನ್ನು ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದಳು. ಆಕೆ ನೊಂದವರ ಪಾಲಿಗೆ ನೆಮ್ಮದಿಯ ತಾಣವಾಗಿದ್ದರು. ಅವರ ಕಣ್ಣೀರು ವರೆಸುವ ತಾಯಿಯಾಗಿ, ಸೋದರಿಯಾಗಿ ಅವರಲ್ಲಿ ಭರವಸೆಯನ್ನು ಮೂಡಿಸುತ್ತಿದ್ದರು

ನಂತರ ಶಾಂತಿ ಸುಧಾ ಘೋಷ್ ಅವರು ಹೆಣ್ಣು ಮಕ್ಕಳ ಹೈಸ್ಕೂಲಿನ ಮುಖ್ಯೋಪಾಧ್ಯಾಯನಿಯಾಗಿ ಕಾರ್ಯನಿರ್ವಹಿಸಿದರು. ಹೆಣ್ಣು ಮಕ್ಕಳ ಸಬಲೀಕರಣದ ಕುರಿತು ಭಾರತ ದೇಶ 1947 ರಲ್ಲಿ ಸ್ವಾತಂತ್ರ್ಯ ಪಡೆಯುವವರೆಗೂ ಆಕೆ ಯೋಚಿಸಿದ್ದು ಹೆಣ್ಣು ಮಕ್ಕಳಿಗೆ ನಿಜವಾದ ಸ್ವಾತಂತ್ರ್ಯ ಸಿಗುವುದು ಶಿಕ್ಷಣದಿಂದ ಎಂದು. ಬೌದ್ಧಿಕ ಜಾಣ್ಮೆ ಹಾಗೂ ಶೈಕ್ಷಣಿಕ ಮೌಲ್ಯಗಳನ್ನು ಹೊಂದಿದ ನಾಗರಿಕರಿಂದ ದೇಶದ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ದೊರೆಯುತ್ತದೆ ಎಂದೇ ಆಕೆ ಸಾರುತ್ತಿದ್ದರು.

ಜೋರಾದ ಧ್ವನಿ ಹಾಗೂ ಖಡ್ಗಗಳಿಂದ ಮಾತ್ರ ಕ್ರಾಂತಿ ಸಾಧ್ಯವಿಲ್ಲ… ಬದಲಾಗಿ ನೈತಿಕ ಶಕ್ತಿ, ಭರವಸೆಯನ್ನು ಹೊತ್ತ ಹೃದಯ ಹಾಗೂ ನಿಖರವಾದ ಗುರಿಯನ್ನು ಹೊಂದಿದ ವ್ಯಕ್ತಿತ್ವದಿಂದ ಕೂಡ ಕ್ರಾಂತಿಯನ್ನು ಮಾಡಲು ಸಾಧ್ಯ ಎಂಬುದು ಸುಧಾ ಅವರ ಬದುಕಿನಿಂದ ನಾವು ಅರಿಯಬಹುದು. ತಮ್ಮ ಬದುಕಿನ ಪ್ರತಿ ಕ್ಷಣವನ್ನು ದೇಶದ ಏಳಿಗೆಗಾಗಿ, ದೇಶದ ಜನತೆಗಾಗಿ ಹಾಗೂ ಧೈರ್ಯ, ನಂಬಿಕೆ ಹಾಗೂ ಸಹಾನುಭೂತಿಯಿಂದ ದೇಶದ ಇತಿಹಾಸವನ್ನೇ ಬದಲಿಸಬಹುದು ಎಂಬುದಕ್ಕೆ ಸುಧಾ ಅವರೇ ಸಾಕ್ಷಿ.

ಶಾಂತಿ ಸುಧಾ ಘೋಷ್ ರಂತಹ ಹೆಣ್ಣು ಮಕ್ಕಳು ಮತ್ತೆ ಹುಟ್ಟಿ ಬರಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾ


  • ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW