ಹೊರದೇಶಗಳಲ್ಲಿ ಕಾಣಬರುವ ಇಲಿ ಜಾತಿಗಳು ಕೇವಲ ಮೂರೋ ನಾಲ್ಕೋಗಳಿದ್ದರೆ, ನಮ್ಮ ದೇಶದಲ್ಲಿ ಇಲಿಗಳ ಪ್ರಭೇದಗಳು ಸುಮಾರು ಮೂವತ್ತೆರೆಡು. ಇಲಿಗಳ ಕುರಿತು ಇನ್ನಷ್ಟು ಕುತೂಹಲಕರ ವಿಷಯವನ್ನು ನಿವೃತ್ತ ವಿಜ್ಞಾನಿ ಶಕುಂತಲಾ ಶ್ರೀಧರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಇದು ಅವರ ಅನುಭವದ ಕಥನದ ಭಾಗವು ಹೌದು, ತಪ್ಪದೆ ಮುಂದೆ ಓದಿ…
ನಾನು ೧೯೭೩ ರ ನವೆಂಬರ್ ತಿಂಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಹೊಲ, ಗದ್ದೆ, ತೋಟಗಳಲ್ಲಿ ಇಲಿ, ಹೆಗ್ಗಣಗಳನ್ನೂ ನಿಯಂತ್ರಿಸಿ, ಬೆಳೆಗಳಗೆ ಅವುಗಳಿಂದಾಗುವ ಹಾನಿಯನ್ನು ತಡೆಗಟ್ಟುವ ಬಗ್ಗೆ ಸಂಶೋಧನಾ ಸಹಾಯಕಿಯಾಗಿ ನೇಮಿಸಲಪ್ಪಟ್ಟೆ. ನನಗಿದು ಹೊಸದೇ ವಿಷಯವಾಗಿತ್ತು.
ನನಗೇಕೆ, ಇಡೀ ಭಾರತದಲ್ಲೇ ಈ ವಿಷಯದ ಬಗ್ಗೆ ಕೇವಲ ಒಂದೆರೆಡು ಕಡೆ ಸಂಶೋಧನೆ ನಡೆದಿತ್ತು. ಇಲ್ಲಿಯವರೆಗೆ ವ್ಯವಸಾಯ ಬೆಳೆಗಳಿಗೆ ಕ್ರಿಮಿಕೀಟಗಳಿಂದ ಅಪಾರ ನಷ್ಟವಾಗುತ್ತಿರುವುದು ಸೂರ್ಯನ ಬೆಳಕಿನಷ್ಟೇ ನಿಚ್ಚಳವಾಗಿತ್ತು. ಎಲ್ಲಾ ಬೆಳೆಗಳಿಗೂ ಪ್ರಪಂಚಾದ್ಯಂತ ಹೆಚ್ಚು ಕಡಿಮೆ ಒಂದೇ ಜಾತಿಯ, ಇಲ್ಲ ಉಪ ಜಾತಿಯ ಕೀಟಗಳು ಹಾನಿಮಾಡುತ್ತಿದ್ದವು. ಮುಂದುವರೆದಿದ್ದ ದೇಶಗಳಲ್ಲಿ ಅವುಗಳ ಹತೋಟಿಯ ಬಗ್ಗೆ ಸಾಕಷ್ಟು ಸಂಶೋಧನೆ ನಡೆದು ಅವುಗಳನ್ನು ತಕ್ಕ ಮಟ್ಟಿಗೆ, ಕೆಲವು ಬೆಳೆಗಳುನುಸಾರವಾಗಿ, ಇಲ್ಲಿಯ ಹವಾಮಾನ, ಮಣ್ಣಿನ ಗುಣಕ್ಕೆ ಸರಿಹೊಂದುವತೆ ಒಂದಷ್ಟು ಅಧ್ಯಯನ ನಡೆಸಿದ್ದರೆ ಸಾಕಾಗುತಿತ್ತು. ಆದರೆ ಇಲಿಗಳ ಕಥೆ ಬೇರೆಯದೇ ಆಗಿತ್ತು. ಮೊದಲನೆಯದಾಗಿ ಅವು ಸಸ್ತಿನಿಗಳು. ಅವುಗಳ ಜೀವಮಾನ ಕೀಟಗಳಿಗೆ ಹೋಲಿಸಿದರೆ ಸುದೀರ್ಘ. ತೀವ್ರ ಬುದ್ದಿಮತ್ತೆ, ಶೀಘ್ರ ಕಲಿಯುವಿಕೆ, ಕಲಿತಿದ್ದನ್ನ ಮರೆಯಲಾರದೆ ನೆನೆಪಿನಲ್ಲಿ ಉಳಿಸುಕೊಳ್ಳುವ ಗುಣ, ಎಲ್ಲದರ, ಎಲ್ಲರ ಬಗ್ಗೆ ಅನುಮಾನ ಈ ಎಲ್ಲ ಗುಣಗಳು ಅವುಗಳನ್ನ ನಿಯಂತ್ರಿಸಲು ಕಷ್ಟಸಾಧ್ಯ ಮಾಡುತ್ತದೆ.ಹೆಚ್ಚಾಗಿ ಅವುಗಳ ತೀವ್ರ ವೇಗದ ಸಂತಾನೋತ್ಪತ್ತಿ ಅವುಗಳ ನಿಯಂತ್ರಣಕ್ಕೆ ಒದಗುವ ಮತ್ತೊಂದು ತೊಡರು. ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇಶದಲ್ಲಿ ನಮ್ಮೊಂದಿಗೆ ಸಹ ಬಾಳ್ವೆ ಮಾಡುತ್ತಿರುವ ಇಲಿಗಳ ಪ್ರಭೇದಗಳು ಸುಮಾರು ಮೂವತ್ತೆರೆಡು.
ಇದಕ್ಕೆ ಹೋಲಿಸಿದರೆ ಹೊರದೇಶಗಳಲ್ಲಿ ಕಾಣಬರುವ ಇಲಿ ಜಾತಿಗಳು ಕೇವಲ ಮೂರೋ ನಾಲ್ಕೋ.ಇಷ್ಟೊಂದು ಜಾತಿಗಳ ಗಾತ್ರ, ನಡೆವಳಿಕೆ, ವರ್ತನೆ, ಆಹಾರ , ಜೀವನ ಚರಿತ್ರೆ, ಆವಾಸಸ್ತಾನಗಳು ಬೇರೆ ಬೇರೆ. ಇದೆಲ್ಲಾ ಸಾಲದಂತೆ ನಮ್ಮಲ್ಲಿ ಬೆಳೆಯುವ ಬೆಳೆಗಳ ವೈವಿಧ್ಯ ಅಪಾರ.
ಫೋಟೋ ಕೃಪೆ: AZ animals
ಅಮವಾಸ್ಯಗೆ ಗ್ರಹಣ ಹಿಡಿದಂತೆ, ಇಲಿ, ಹೆಗ್ಗಣಗಳು ನಿಶಾಚರರು. ರಾತ್ರೋ ರಾತ್ರಿ ಸಾಕಷ್ಟು ತಿನ್ನುವುದಲ್ಲದೆ ಉಂಡೂ ಹೋದ್ರು, ಕೊoಡು ಹೋದರು ಅನ್ನುವಂತೆ ಬಲಿತ ತೆನೆಗಳನ್ನ ಕತ್ತರಿಸಿ, ಎಳೆದುಕೊಡು ಹೋಗಿ ತಮ್ಮ ಬಿಲದಲ್ಲಿ ಭದ್ರವಾಗಿ ಸಂಗ್ರಹಮಾಡಿಡುತ್ತವೆ. ನಾನು ಮೊದಲೇ ಹೇಳಿದಂತೆ ನಾಗೇನಹಳ್ಳಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಭತ್ತದ ಇಲಿಗಳ ಬಗ್ಗೆ ಒಂದು ವರ್ಷ ಕೆಲಸ ಮಾಡಿ ಸ್ವಲ್ಪ ಅನುಭವ ಗಳಿಸಿದ್ದೆ. ಆದರೆ ಅಲ್ಲಿ ಕೇವಲ ಒಂದೇ ಜಾತಿಯ ಇಲಿ ಭತ್ತಕ್ಕೆ ಹಾನಿ ಮಾಡುತ್ತಿತ್ತು. ಇಂಗ್ಲೀಷಿನಲ್ಲಿ ಬಂಡಿಕೋಟ ಬೆಂಗಾಲೆನ್ಸಿಸ್ (Bandicota bengalensis) ಎಂಬ ಈ ಇಲಿ ನಮ್ಮ ರೈತ ಬಾಂಧವರಿಗೆ ಚೆನ್ನಾಗಿ ಗೊತ್ತು. ಸ್ಥಳೀಯವಾಗಿ ಇದನ್ನ ತೋಡ ಅನ್ನುತ್ತಾರೆ. ಯಾಕೆಂದರೆ ಇದು ಭೂಮಿಯಲ್ಲಿ ಆಳವಾದ ಬಿಲ ಅಗೆದು ಹಲವಾರು ಮೀಟರುಗಟ್ಟಲೆ ಉದ್ದದ, ಒಂದೆರಡು ಮೀಟರು ಆಳದ ಬಿಲ ಕೊರೆಯುವುದಲ್ಲದೆ, ಕೊರೆದ ಮಣ್ಣನ್ನ ಬಿಲದ ಮುಖ್ಯ ದ್ವಾರದ ಹೊರಗಡೆ ಸಣ್ಣ ಗುಡ್ಡೆ ಹಾಕುತ್ತದೆ. ಬಿಲದ ಉದ್ದಕ್ಕೂ ಹಲವಾರು ಹೊರಬರುವ ಬಿಲದ ತೂತುಗಳಿದ್ದು, ಕೆಲವನ್ನು ತೆಳುವಾದ ಮಣ್ಣಿನಿಂದ ಮುಚ್ಚಿರುತ್ತವೆ. ಮನಷ್ಯ ಬಿಲ ಅಗೆದಾಗಲೋ,ಅಥವಾ ಹಾವು ಮುಂತಾದ ಪೀಡಕಗಳು ಬಿಲಕ್ಕೆ ನುಗ್ಗಿದಾಗಲೋ, ಇವು ಸರ ಸರ ಬಿಲದೊಳಗೆ ಓಡೋಡಿ ಇಂಥ ಫಾಲ್ಸ್ ಓಪನಿಂಗ್ ಮೂಲಕ ಹೊರಗೋಡಿ ಹೋಗುತ್ತವೆ. ಸವಿಶಾಲವಾದ ಬಿಲದೊಳಗೆ ಮಲಗುವ ಗೂಡು, ಧಾನ್ಯ ಸಂಗ್ರಹಣಾ ಗೂಡು, ಜನ್ಮವಿತ್ತ ಮರಿಗಳಿಗೆ ಹುಲ್ಲು ಹಾಸಿ ಮೆದುವಾಗಿ ಸಿದ್ಧಪಡಿಸಿದ ಮಲಗುವ ಗೂಡು,ಮತ್ತೆ ಶತೃಗಳನ್ನು ದಾರಿ ತಪ್ಪಿಸಲು ಕೆಲವೊಂದು ಖಾಲಿ ಗೂಡುಗಳು ಇರುತ್ತವೆ. ಇಷ್ಟೆಲ್ಲಾ ಕಂಡು ಹಿಡಿಯಬೇಕಾದರೆ, ಕೂಲಿಯವನ ಮೂಲಕ ಹತ್ತಾರು ಇಲಿ ಬಿಲಗಳನ್ನ ಅಗೆಸಿ, ಅವುಗಳ ಅಳತೆ ಮಾಡಿಸಿ, ಅವುಗಳ ಒಳಗಿದ್ದ ಕೋಣೆಗಳನ್ನೆಲ್ಲ ಹುಡುಕಾಡಬೇಕಾಗಿತ್ತು.
ಫೋಟೋ ಕೃಪೆ: wikipedia
ನಾನೋ ಇದುವರೆಗೆ ಪ್ರಯೋಗಶಾಲೆಯಲ್ಲಿ ಕುಳಿತು attender ತಂದು ಕೊಟ್ಟ ಇಲಿಗಳನ್ನ ಕತ್ತರಿಸಿ ಅ ಕತ್ತರಿಸಿ ಅವುಗಳ ಸ್ನಾಯುಗಳನ್ನ ಹುಷಾರಾಗಿ ಹೊರತೆಗೆದು, ತೂಕ ಮಾಡಿ, ರಾಸಾಯನಿಕ ವಿಧಾನಗಳನ್ನ ಬಳಸಿ ಶರೀರ ಕ್ರಿಯೆಗಳನ್ನ ಅಭ್ಯಾಸ ಮಾಡಿದವಳು. ಇಲ್ಲಿ ತಲೆಗೊಂದು ಹ್ಯಾಟ್ ಹಾಕಿಕೊಂಡು, ತೋಳಿಗೊಂದು ಪೆನ್ನು, ನೋಟ್ ಬುಕ್ ಇದ್ದ ಚೀಲ ಏರಿಸಿಕೊಂಡು, ಭತ್ತದ ಬದುವಿನ ಮೇಲೆ,ಆಯಾ ತಪ್ಪದಂತೆ ಸಮತೋಲನ ಕಾಪಾಡಿಕೊಂಡು ಬಿಲ ಎಣಿಸಿಕೊಂಡು, ಅದನ್ನ ಬರೆದುಕೊಂಡು ಓಡಾಡಬೇಕಾಗಿತ್ತು. ಛತ್ರಿ ಹಿಡಿದುಕೊಂಡು, ಬಿಸಿಲಿನಲ್ಲಿ ದಿನವೆಲ್ಲ ನಿಂತು ಬಿಲಗಳನ್ನ ಅಗೆಸಿ ಅವುಗಳ ಆಳ, ಅಗಲ, ಒಳಕೋಣೆಗಳು ಅವುಗಳ ಒಳಗೇನಿದೆ ಅನ್ನೋದನ್ನ ದಾಖಲಿಸಿ, ಇವುಗಳ ಆಧಾರದ ಮೇಲೆ ಲೇಖನವೊಂದನ್ನ ಬರೆದು ವಿಜ್ಞಾನ ಪತ್ರಿಕೆಗೆ ಕಳುಹಿದರೆ, ಅದು ಪ್ರಕಟವಾಗುವುದು ‘ಶಾರ್ಟ್ ನೋಟ್’ ಅಂತ. ಮುಂದೆ ನಾವು ಮಾಡಬೇಕಾದ ಕೆಲಸದ ಮುಂದೆ ನಾಗೇನಹಳ್ಳಿಯ ಕೆಲಸ ಅತ್ಯoಥ ಸುಲಭಸಾದ್ಯದ್ದು. ನನ್ನ ಪಾಡಿಗೆ ನಾನು ಹೋಗುತ್ತಿದ್ದೆ, ಹೆಚ್ಚೆಂದರೆ ಒಬ್ಬ ಕೂಲಿಯವನನ್ನ ಆಗೆಯುವುದಕ್ಕೆ ಗೊತ್ತು ಮಾಡಿಕೊಳ್ಳುತ್ತಿದ್ದೆ. ಜಾಗವೂ ಚಿಕ್ಕದಿತ್ತು. ಇಲಿಯೂ ಒಂದೇ ಜಾತಿಯದು. ಬೇರೆ ಮನುಷ್ಯರೊಂದಿಗೂ ಸಂಪರ್ಕವಿರಲಿಲ್ಲ. ಯಾವ ಬಗೆಯ challenge , ಹೆಚ್ಚಿನ adjustment ಬೇಕಾಗಿರಲಿಲ್ಲ. ಆದರೆ ಮುಂದೆ ಮುಂದಕ್ಕೆ ಕೆಲಸ ಇಷ್ಟು ಸುಲಭ ಇರಲಿಲ್ಲ
- ಶಕುಂತಲಾ ಶ್ರೀಧರ – ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಾಣಿ ಶರೀರಶಾಸ್ತ್ರದಲ್ಲಿ ಪಿಎಚ್ಡಿ ಪಡೆಡಿದ್ದು, ಭಾರತೀಯ ದಶಕಗಳ ಮೇಲಿನ ಅವರ ಪ್ರವರ್ತಕ ಕೆಲಸವನ್ನು ಗುರುತಿಸಿ, ಡಾ.ಶ್ರೀಧರ ಅವರನ್ನು ಆಕ್ಸ್ಫರ್ಡ್, ನಾಟಿಂಗ್ಹ್ಯಾಮ್, ಯಾರ್ಕ್, ಮ್ಯೂನಿಚ್, ಡ್ಯಾನಿಶ್ ಕೀಟ ನಿಯಂತ್ರಣ ಪ್ರಯೋಗಾಲಯ, ಸ್ಪೇನ್, ವಿಯೆನ್ನಾ, ಟುಬಿಂಗೆನ್,ಅಮೇರಿಕಾದ ಪ್ರತಿಷ್ಟಿತ ವಿಶ್ವವಿದ್ಯಾನಿಲ್ಸಯಾಗಳೇ ಸೇರಿದಂತೆ ವಿಶ್ವದಾದ್ಯಂತ ಸೆಮಿನಾರ್ಗಳನ್ನು ನೀಡಲು ಆಹ್ವಾನಿಸಿದ್ದಾರೆ.