ಕೈ ಕಟ್ಟಿ ಕುಳಿತರೆ ತಣ್ಣಗೆ ಬದುಕು ಸಾಗುವುದೆಂತು ನುಣ್ಣಗೆ…ಕವಿ ಡಾ. ಅಶೋಕ ಕುಮಾರ ಎಸ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನಗಳು, ತಪ್ಪದೆ ಮುಂದೆ ಓದಿ…
ಭಾವ ಬಂಧಗಳ ಬೆಸೆದು
ಪ್ರೀತಿ ವಾತ್ಸಲ್ಯಗಳ ಹೊಸೆದು
ದುಡಿಮೆಯಲ್ಲಿ ಬೆವರು ಬಸಿದು.
ಮನದಲಿಲ್ಲದಿದ್ದರೆ ಕರುಣೆ
ಮಹಾದೇವನೊಲಿವನೆಂತು ಕಾಣೆ
ಪರರಾಸ್ತಿಯ ಮೇಲೇಕೆ ನಿನ್ನಾಸೆಯ ಕಣ್ಣೆ.
ಕೈ ಕಟ್ಟಿ ಕುಳಿತರೆ ತಣ್ಣಗೆ
ಬದುಕು ಸಾಗುವುದೆಂತು ನುಣ್ಣಗೆ
ಜಗವೆಲ್ಲ ಹಳದಿಯಲ್ಲವೆ ಕಾಮಾಲೆ ಕಣ್ಣಿಗೆ.
ಅಂತರಂಗದಲ್ಲಿ ಭಕ್ತರು
ಭವ ಬಂಧನದಿಂದ ಮುಕ್ತರು
ಭವ ಕಳೆದು ಬದುಕಲವರು ಶಕ್ತರು.
ಆಸೆಯುಳ್ಳವರು ಮನುಜರು
ಭಕ್ತಿ ಭಾವದವರೆ ನಿಜ ಶರಣರು
ಆಸೆ ನಿರಾಸೆಯಿಲ್ಲದವರೇ ದೇವರು.
ತಾಯಿ ಮಡಿಲೆ ತೊಟ್ಟಿಲು
ಕಾಯಕವೇ ಬದುಕಿನ ಮೆಟ್ಟಿಲು
ಹಸನಾದ ಬದುಕಿಗೆ ಹೊಸ ಸೌಧ ಕಟ್ಟಲು.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ.
