ಮೃದು ಮಾತಿನಲ್ಲಿ ಮೋಡಿ, ಹೃದಯದಲ್ಲಿ ಅನುರಾಗ ಹಾಡಿ, ಮನಸುಗಳ ಬೆಸೆದ ಮಧುರ ಜೋಡಿ…ಕವಿ ಡಾ. ಅಶೋಕ ಕುಮಾರ ಎಸ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಭಾವ ಬಂಧವೇ ಬೇಡಿ
ಮನಸಿನಾಸೆಗಳು ನಿತ್ಯ ಕಾಡಿ
ಹೃದಯ ಹಿಂಡುವ ನೋವು ನೀಡಿ.
ಕಣ್ಣಲ್ಲಿ ಕಣ್ಣುಗಳು ಕೂಡಿ
ಮನದಾಸೆಗಳಿಗೆ ಗೋರಿ ತೋಡಿ
ನೋವು ಸಹಿಸದ ಮನಸು ಬಲು ಹೇಡಿ.
ಮೃದು ಮಾತಿನಲ್ಲಿ ಮೋಡಿ
ಹೃದಯದಲ್ಲಿ ಅನುರಾಗ ಹಾಡಿ
ಮನಸುಗಳ ಬೆಸೆದ ಮಧುರ ಜೋಡಿ.
ಹಾವ ಭಾವ ಚೇತನ ಮೂಡಿ
ಹಿಡಿದು ಹೊರಟ ಪಯಣದ ಜಾಡಿ
ಬೆಸೆದ ಮನಸುಗಳ ಮುರಿಯಿತು ಚಾಡಿ.
ಅನಂತ ಭಾವ ಮೂಡಿ
ಮನಸು ನಿರ್ದಿಗಂತ ನೋಡಿ
ಉಕ್ಕಿ ಹರಿಯುತ್ತಿದೆ ಕಣ್ಣೀರ ಕೋಡಿ.
ಮನಸು ಮನಸನ್ನು ತೀಡಿ
ಬಾನಲ್ಲಿ ಬೆಳ್ಳಕ್ಕಿ ಸಾಲುಗಳೋಡಿ
ಅನಂತ ಆಕಾಶದ ಪರದೆ ಮೇಲೆ ಚಿತ್ರ ಮೂಡಿ.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ, ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ.
