ನಮ್ಮ ಕಷ್ಟಗಳ ಸಮಯದಲ್ಲಿ ಯಾರು ಕೈಬಿಟ್ಟರು ದೇವರು ಕೈಬಿಡುವುದಿಲ್ಲ ಅನ್ನುವ ನಂಬಿಕೆ. ನಾವು ಯಾವುದೇ ಸಮಯದಲ್ಲಿ ತೊಂದರೆ ಅನುಭವಿಸುತ್ತಿದ್ದಾಗ ದೇವರನ್ನು ನೆನೆಯುತ್ತೇವೆ. ದೈವದ ಅಸ್ತಿತ್ವ ಇದೆ ಎನ್ನುವುದು ನಂಬಬೇಕು ಅಷ್ಟೆ. ಲೇಖಕಿ ಬಿ.ಆರ್.ಯಶಸ್ವಿನಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ದೈವ ಅಂತ ಬಂದಾಗ ಮೊದಲಿಗೆ ನೆನಪಾಗುವ ಪದ ಬ್ರಹ್ಮಾಂಡ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಬ್ರಹ್ಮಾಂಡ ಅನ್ನುವುದು ಸ್ಥಿರವಾಗಿರಲು ಕಾರಣಕರ್ತರು ಬ್ರಹ್ಮ, ವಿಷ್ಣು, ಮಹೇಶ್ವರ ಅಂತ ತಿಳಿದಿರುವುದೇ. ಬ್ರಹ್ಮ ಸೃಷ್ಟಿಕರ್ತನಾದರೆ, ವಿಷ್ಣು ಸಂರಕ್ಷಕನಾದರೆ, ಸರ್ವೋಚ್ಚ ಶಕ್ತಿಯಾಗಿ ಸೃಷ್ಟಿಯು ಸಮತೋಲನದಲ್ಲಿ ಲಯವಾಗಿರಲು ವಿನಾಶಕದ ಚಕ್ರವನ್ನು ಶಿವನು (ಮಹೇಶ್ವರ) ಪ್ರತಿನಿಧಿಸುತ್ತಾರೆ.
ಇದು ಕೇವಲ ನಂಬಿಕೆಯಲ್ಲ. ಕೆಲವೊಂದು ಪೌರಾಣಿಕ ಕಥೆಗಳನ್ನು ಕೇಳಿದಾಗ ಸತ್ಯದ ಸಂಗತಿಗಳಿರಬಹುದು ಎಂದು ಅನ್ನಿಸಿದ್ದರು , ಕೆಲವೊಂದು ಪ್ರದೇಶಗಳಲ್ಲಿ ಸಿಕ್ಕ ದೈವಶಕ್ತಿಯ ಗುರುತುಗಳು ಸ್ಥಳಗಳ ಮಹಿಮೆ ಎಲ್ಲವು ದೈವಶಕ್ತಿ ಇರುವಂತೆ ಕಂಡುಬರುತ್ತದೆ. ನಮಗೆ ಅರಿವಿಲ್ಲದೇ ದೈವಿಶಕ್ತಿಯ ನಂಬಿಕೆ ನಮ್ಮೊಳಗೆ ಸೇರಿರುತ್ತದೆ. ಒಂದಲ್ಲಾ ಒಂದು ಘಟನೆಗಳು ನಮ್ಮನ್ನು ದೈವದತ್ತ ಕರೆದುಕೊಂಡುಹೋಗುತ್ತವೆ. ಸಮಸ್ಯೆಗಳು ಕೈಮೀರಿ ಹೋದಾಗ ಹೋಗುವುದೇ ದೇವರ ಬಳಿ. ನಮ್ಮ ಕಷ್ಟಗಳ ಸಮಯದಲ್ಲಿ ಯಾರು ಕೈಬಿಟ್ಟರು ದೇವರು ಕೈಬಿಡುವುದಿಲ್ಲ ಅನ್ನುವ ನಂಬಿಕೆ ತುಂಬಾ ಜಾಸ್ತಿಯೇ ಇರುತ್ತದೆ.
ಇಷ್ಟೆಲ್ಲಾ ನಂಬಿಕೆಯಿಂದ ನಡೆದುಕೊಳ್ಳುವ ಮನುಜರಿಗೆ ದೈವದ ಅಸ್ತಿತ್ವ ಕಣ್ಣಿಗೆ ಕಾಣಿಸುವುದಿಲ್ಲ. ನಂಬಂದ ಆನೇಕ ಜನರಿಗೆ ದೈವ ನಮಗೆ ಗೋಚರಿಸುವುದಿಲ್ಲ ಅಂದ ಮೇಲೆ ದೈವದ ಅಸ್ತಿತ್ವವೇ ಇಲ್ಲ ಎಂದು ಪ್ರತಿಪಾದಿಸುತ್ತಾರೆ. ನಿಜಕ್ಕೂ ನಮಗೆ ದೈವದ ದರ್ಶನ ಸಿಕ್ಕಿರುತ್ತದೆ. ಆದು ಯಾವ ಮುಖಾಂತರವಾದರು ಸರಿ.. ಅದನ್ನು ಅರಿಯುವ ಶಕ್ತಿ ನಮ್ಮಲ್ಲಿ ಇರಬೇಕು ಅಷ್ಟೇ. ಹಾಗಾದರೆ ನಾವು ದೈವದ ಅಸ್ತಿತ್ವ ಇದೆ ಎಂದು ಹೇಗೆ ಕಂಡು ಹಿಡಿಯುವುದು ?.

ಫೋಟೋ ಕೃಪೆ : ಅಂತರ್ಜಾಲ
ನಾವು ಯಾವುದೇ ಸಮಯದಲ್ಲಿ ತೊಂದರೆ ಅನುಭವಿಸುತ್ತಿದ್ದಾಗ ದೇವರನ್ನು ನೆನೆಯುತ್ತೇವೆ. ಆಗ ಅಲ್ಲಿ ದೇವರು ಪ್ರತ್ಯಕ್ಷವಾಗುವುದಿಲ್ಲ. ಆದರೆ ಯಾರಾದರು ನಮ್ಮ ಬಳಿ ಬಂದು ಸಹಾಯ ಮಾಡಿ ಹೋಗುತ್ತಾರೆ. ಆ ವ್ಯಕ್ತಿ ಬಂದು ಸಹಾಯ ಮಾಡಲು ದೇವರು ಅವರಿಗೆ ಪ್ರೇರಣೆ ನೀಡಿರುತ್ತಾರೆ. ಅವರ ಮುಖಾಂತರ ನಮ್ಮ ಸಮಸ್ಯೆಗಳನ್ನು ದೇವರು ಪರಿಹರಿಸಿರುತ್ತಾರೆ. ಆತನ ಮೂಲಕ ನಮಗೆ ಒಳಿತಾದಾಗ ಆತನು ನಮ್ಮ ದೃಷ್ಟಿಕೋನದಲ್ಲಿ ದೇವರು ಬಂದಂಗೆ ಸಹಾಯ ಮಾಡಿದನು ಅನ್ನುವ ಮಾತೇ ನಮ್ಮಿಂದ ಹೊರಬರುತ್ತದೆ. ಈ ನುಡಿಯಲ್ಲಿಯೇ ತಿಳಿಯುತ್ತದೆ ದೈವಿಶಕ್ತಿ ಇದೆ ಅಂತ. ದೈವಿಶಕ್ತಿ ಇದ್ದ ಮೇಲೆ ದೈವದ ಅಸ್ತಿತ್ವ ಇದ್ದೆ ಇರುತ್ತದೆ.
ಮನುಷ್ಯ ತುಂಬಾ ಆಸೆಬುರುಕ. ಅವನ ಆಸೆಗಳಿಗೆ ಕೊನೆಯೇ ಇಲ್ಲ. ಆಗಿದ್ದಾಗ ದೇವರು ನಮ್ಮ ಕಣ್ಣೆದುರಿಗೇ ಪ್ರತ್ಯಕ್ಷವಾದರೆ ನಮ್ಮ ಬೇಡಿಕೆಗಳ ಪಟ್ಟಿ ತುಂಬಾ ಉದ್ದವಾಗಿರುತ್ತದೆ.
ಸರಿಯಾದ ಕೆಲಸಗಳಿಗಿಂತ, ಕೆಡುಕು ಮಾಡುವಂತ ಕೆಲಸಗಳಿಗೆ ವರವನ್ನು ಪಡೆಯುವುದು ಜಾಸ್ತಿ ಆಗುತ್ತದೆ. ಆದರಿಂದ ದೇವರು ನಮ್ಮ ಕಣ್ಣಿಗೆ ಗೋಚರಿಸದೆ ಬೇರೆಯವರ ಮುಖಾಂತರ ನಮಗೆ ಸಹಾಯ ಮಾಡಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತಾನೆ.
ನಿಜವಾಗಿಯೂ ನಾವು ದೈವದ ಅಸ್ತಿತ್ವವನ್ನು ಕಾಣಬೇಕೆಂದರೆ ನಮ್ಮಲ್ಲಿ ಒಳ್ಳೆಯತನ, ಸತ್ಯ, ಧರ್ಮವಾಗಿ ಇರಬೇಕು.ಇನ್ನೊಬ್ಬರಿಗೆ ಕೆಡುಕನ್ನು ಬಯಸಬಾರದು. ದೇವರ ಮೇಲೆ ಭಕ್ತಿ ಎಲ್ಲವೂ ನಮ್ಮೊಳಗೆ ಇದ್ದಾಗ ನಮಗೆ ಎದುರಾಗುವ ಕಷ್ಟಗಳು ಮಿಂಚಿನಂತೆ ಹೀಗೆ ಬಂದು ಹಾಗೆ ಹೋಗಿ ಬಿಡುತ್ತವೆ. ನಾವು ಮಾಡುವ ಕೆಲಸವು ನ್ಯಾಯವಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ನಮಗೆ ಸಿಗುವ ಯಶಸ್ಸಿನ ಹಿಂದೆ ದೇವರು ಇದ್ದೆ ಇರುತ್ತಾರೆ. ಆದರಿಂದ ಯಾರನ್ನು ಮೆಚ್ಚಿಸಲು ಪ್ರಯತ್ನ ಮಾಡದೇ ನಮ್ಮ ಆತ್ಮಸಾಕ್ಷಿ ಒಪ್ಪುವಂತಹ ಕೆಲಸ ಮಾಡಿದಾಗ ಯಾವಾಗಲೂ ನಮ್ಮ ಜೊತೆ ದೇವರು ಇದ್ದೆ ಇರುತ್ತಾನೆ. ದೇವರು ನಮ್ಮ ಜೊತೆ ಇದ್ದಾಗ ದೈವದ ಅಸ್ತಿತ್ವ ಇದ್ದೆ ಇರುತ್ತದೆ. ನಮ್ಮಲ್ಲಿ ನಾವು ನಂಬಿದ ದೈವದ ಬಗ್ಗೆ ಅಪಾರವಾದ ನಂಬಿಕೆ ಇದ್ದಾಗ ಮಾತ್ರ ದೈವದ ಅಸ್ತಿತ್ವ ನಮಗೆ ತಿಳಿಯುತ್ತದೆ. ನಂಬಿಕೆ ಇಲ್ಲದಿದ್ದಾಗ ದೈವದ ಅಸ್ತಿತ್ವ ತಿಳಿಯುವುದಿಲ್ಲ.
ನಂಬಿಕೆ ಜೀವನ. ಜೀವನದ ಪ್ರತಿಯೊಂದು ಕ್ಷಣಗಳಲ್ಲಿ ನಾವು ದೇವರ ಮೊರೆ ಹೋಗುತ್ತೇವೆ. ಅಂದ ಮೇಲೆ ದೈವದ ಅಸ್ತಿತ್ವ ಇದೆ. ನಂಬಬೇಕು ಅಷ್ಟೆ. ಆದರೆ ಯಾವುದನ್ನು ಆತಿಯಾಗಿ ನಂಬಬಾರದು. ನಮ್ಮ ಕೈಯಲ್ಲಿ ಆಗುವ ಕೆಲಸಗಳನ್ನು ನಾವು ಮಾಡದೆ ದೇವರು ಮಾಡುತ್ತಾನೆಂದು ಕೈಚೆಲ್ಲಿ ಕುಳಿತುಕೊಳ್ಳದೆ ಪ್ರಾಮಾಣಿಕವಾಗಿ ನಾವೇ ಮಾಡಿದಾಗ ಆ ಕೆಲಸದ ಯಶಸ್ಸಿನ ಹಿಂದೆ ದೈವದ ಆರ್ಶಿವಾದ ಇರುತ್ತದೆ ಎನ್ನುವುದು ನನ್ನ ನಂಬಿಕೆ.
- ಬಿ.ಆರ್.ಯಶಸ್ವಿನಿ
