‘ಸಣ್ಣ ಪ್ರಮಾಣದ ಮಾನಸಿಕ ಒತ್ತಡವನ್ನು ನಾವೆಲ್ಲರೂ ಅನುಭವಿಸಿರುತ್ತೇವೆ,ತನ್ನ ಯಾವುದೊ ಅವಮಾನವನ್ನು ಹತ್ತಿಕ್ಕಲು ಆ ಕ್ಷಣಕ್ಕೆ ಸುಳ್ಳು ಅಥವಾ ಕತೆ ಹೇಳುತ್ತೇವೆ, ಅದುವೇ ಬಾನಾಮತಿಯ ಮತ್ತೊಂದು ರೂಪ’ – ಮನು ಎಚ್.ಎಸ್.ಹೆಗ್ಗೋಡು ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಯುವ ವಿಜ್ಞಾನಿಯ ಸಾಧನೆಗಳು ಒಂದು ಕಡೆ ತುಂಬಿ ತುಳುಕುತ್ತಿದ್ದರೆ ಇನ್ನೊಂದು ಕಡೆ ಮಾಧ್ಯಮದಲ್ಲಿ ಮೀಡಿಯೋಕರ್ ಗಳು ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಆ ಯುವಕನಿಗಿಂತಲೂ ಇವರೇ ಒಂದು ಕೈ ಮೇಲೆ ಅಂತ ಹೇಳಿದ್ರು ತಪ್ಪೇನಾಗೋಲ್ಲ. ಇಂಥ ಕಲಿಯುಗದಲ್ಲೂ ಭಾರತೀಯ ಶಿಕ್ಷಣ ಹಾಗೂ ಮಾಧ್ಯಮ ಮುಂತಾದವು ವಿಜ್ಞಾನದಿಂದ ಬಹಳವೇ ಅಂತರವನ್ನು ಇಲ್ಲಿನ ತನಕ ಕಾಯ್ದುಕೊಂಡು ಬಂದಿವೆ. ಮಾಧ್ಯಮಗಳತ್ತ ಮುಖಮಾಡದ ವಿಜ್ಞಾನಿಗಳೇನಾದ್ರೂ ಅಪರೂಪಕ್ಕೆ ದಾರಿತಪ್ಪಿ ಬಂದು ಉಪಯುಕ್ತ ಅಥವಾ ಕುತೂಹಲಕರ ಲೇಖನ ಬರೆದು ಕೊಟ್ಟರೂ ಹೆಚ್ಚಿನ ಪತ್ರಿಕೆಗಳು ಅಂತವನ್ನ ಓದಿ ನೋಡೋಕು ಹೋಗೋಲ್ಲ. ಬಹುಶಃ ಈ ಯುವಕನ ಸಾಧನೆ ಆರಂಭ ಗೊಂಡಿದ್ದು ಒಂದು ಮಾನಸಿಕ ತೊಳಲಾಟದಿಂದ ಇರಬಹುದು ಅಂತ ನನ್ನ ಊಹೆ. ಈ ನಿಟ್ಟಿನಲ್ಲಿ ಯಾವುದಾದರೂ ಪತ್ರಿಕೆ ಲೇಖನ ಪ್ರಕಟಿಸಿರಬಹುದೇ ಅಂತ ಹುಡ್ಕಿದ್ರೆ ಕಾಣಿಸಲಿಲ್ಲ. ಬಾನಾಮತಿಯಂತೆಯೇ ಇದು ಕೂಡಾ ಯಾವುದೊ ಮಾಸಿಕ ಒತ್ತಡದಿಂದ ಉಂಟಾದ ಕಾಯಿಲೆಯ ಪರಿಣಾಮ. ಆತನಿಗೆ ಯಾವುದೋ ಸಹಿಸಲಾರದ ಅವಮಾನವನ್ನು ಹತ್ತಿಕ್ಕಲು ಆತನದೇ ಮನಸ್ಸು ಹೊಂದಿಸಿಕೊಂಡ ರಕ್ಷಣಾ ತಂತ್ರವೇ ಮುಂದುವರೆದು ಹೀಗೆ ಸುಳ್ಳು ಹೇಳುವ, ಜನರನ್ನು ನಂಬಿಸುವ ಸಿದ್ಧಿ ಪಡೆದಿರುತ್ತದೆ.
ಫೋಟೋ ಕೃಪೆ :GOOGLE
ಸಣ್ಣ ಪ್ರಮಾಣದ ಮಾನಸಿಕ ಒತ್ತಡವನ್ನು ನಾವೆಲ್ಲರೂ ಅನುಭವಿಸಿರುತ್ತೇವೆ, ಹಾಗೆ ನಮಗೆ ಗೊತ್ತೇ ಇಲ್ಲದೆ ಅದಕ್ಕೇನೋ ಒಂದು ರಕ್ಷಣಾ ತಂತ್ರವನ್ನೊ, ಇಲ್ಲಾ ಕುಕ್ಕರ್ ಕೂಗಿದಂತೆ ಒತ್ತಡವನ್ನು ಹೊರಹಾಕಲು ಸುಲಭ ಉಪಾವನ್ನೋ ಮಾಡಿಕೊಂಡಿರುತ್ತೇವೆ. ಆದ್ರೆ ಅದು ನಮ್ಮ ಗಮನಕ್ಕೆ ಬಾರದೇ ನಡೆಯುವ ಪ್ರಕ್ರಿಯೆ ಆಗಿದ್ರು ಆಶ್ಚರ್ಯವಿಲ್ಲ. ಉದಾಹರಣೆಗೆ ಹೆಂಡತಿಯ ಮೇಲಿನ ಸಿಟ್ಟನ್ನು ಅಲ್ಲಿ ತೋರಿಸಲಾಗದೆ ಆಫೀಸ್ ನಲ್ಲಿ ಹೋಗಿ ಇನ್ನೊಬ್ಬರ ಮೇಲೆ ತೋರಿಸೋದು. ಇನ್ನೆಲ್ಲಿಯದೋ ಅವಮಾನ ಸಿಟ್ಟನ್ನು ಯಾರೋ ಆಟೋದವನ ಮೇಲೆ ಎಗರಾಡಿ ಇಲ್ಲಾ ಬಸ್ ಕಂಡಕ್ಟ್ರನ ಹತ್ರ ಚಿಲ್ಲರೆ ವಿಷ್ಯಕ್ಕೆ ಜಗಳವಾಡಿ ನಮಗೆ ಗೊತ್ತಿಲ್ಲದೇ ನಮ್ಮ ಮನಸ್ಸನ್ನು ಹಗುರಮಾಡಿಕೊಳ್ಳುತ್ತಾ ಇರುತ್ತೇವೆ!
ಆದರೆ ಬಾನಾಮತಿಯಂಥ ಮಟ್ಟಕ್ಕೆ ಇಲ್ಲಾ ಈ ಡ್ರೋಣ್ ಯುವಕನ ಮಟ್ಟಕ್ಕೆ ಹೋಗುವ ಪ್ರಕರಣಗಳು ಬೇರೆಯೇ ಥರನವು. ತನ್ನ ಯಾವುದೊ ಅವಮಾನವನ್ನು ಹತ್ತಿಕ್ಕಲು ಆ ಕ್ಷಣಕ್ಕೆ
ಬಾಯ್ಗೆ ಬಂದ ಸುಳ್ಳು ಹೇಳಿ ಕತೆ ಕಟ್ಟಿ ಸಣ್ಣ ಮಟ್ಟದಲ್ಲಿ ಒಮ್ಮೆ ಯಶಸ್ಸು ಪಡೆದ ಅಂದ್ರೆ ಅಲ್ಲಿಂದಾ ಅದೇ ಒಂದು ಶಕ್ತಿಯಾಗಿ ಅವನ ಅರಿವಿಗೆ ಬರದೇ ಅವನ ಸ್ವಭಾವವೇ ಆಗಿ ಬದಲಾಗಿ ಬಿಡತ್ತೆ. ನಟನೊಬ್ಬ ವೇಷತೊಟ್ಟಂತೆ. ಆತ ದಿನದ 24 ಗಂಟೆಯೂ ಆ ಪಾತ್ರಧಾರಿಯಾಗಿಯೇ ಕೆಲಸಮಾಡಲು ಶುರುಮಾಡಿ ಬಿಡುತ್ತಾನೆ. (ಹುಲಿಸವಾರಿ ಮಾಡಿದಂತೆ) ಮುಂದೆ ಆ ಪಾತ್ರವನ್ನು ನಿಲ್ಲಿಸಲಾರದೆ ಹಾಗೆ ಮುಂದುವರೆಸೋದು ಅನಿವಾರ್ಯ ಕೂಡಾ ಆಗೋಗತ್ತೆ. ಅತಿ ಒತ್ತಡದಿಂದ ಉಂಟಾದ ಮನಸ್ಸಿನ ಈ ಸಿದ್ಧಿ ಜನರನ್ನು ಒಲಿಸಿಕೊಳ್ಳುವ ಅಥವಾ ವಶೀಕರಣ ಮಾಡುವ ಶಕ್ತಿಯನ್ನು ಪಡೆದಿರುತ್ತದೆ. ಹಾಗಾಗಿ ಆತನು ಅಂದುಕೊಂಡ ಕೆಲಸಗಳಿಗೆ ಜನರು ಪೂರಕವಾಗಿ ಸಹಕರಿಸಿ ಎಲ್ಲವನ್ನು ಸುಲಭ ಮಾಡಿಕೊಡೊ ಸಂದರ್ಭಗಳೇ ಜಾಸ್ತಿ ಆಗೋದ್ರಿಂದಾ ಇಂಥ ಘಟನೆಗಳಿಗೆ ಬ್ರೇಕ್ ಬೀಳೋದು ಅಪರೂಪ.
ಇಂತಾ ಮಾನಸಿಕ ಸಿದ್ದಿ ಕೆಲವರಿಗೆ ವರವಾಗಿರಲೂಬಹುದು. ಇದರ ಬಗ್ಗೆ ಎಲ್ಲೂ ಸರಿಯಾಗಿ ಓದೋಕೆ ಸಿಗಲಿಲ್ಲ. ಇದನ್ನ ಸ್ನೇಹಿತ್ರು ಯಾರಾದ್ರೂ ವೈಜ್ಞಾನಿಕ ವಿಧಾನದಲ್ಲಿ ವಿವರಿಸಿದ್ರೆ ಇನ್ನು ಚನ್ನಾಗಿ ಅರ್ಥ ಮಾಡ್ಕೊಬೋದು.
- ಮನು ಎಚ್.ಎಸ್.ಹೆಗ್ಗೋಡು