ಲೇಖಕ ದೊಡ್ಡ ಬಾಣಗೆರೆ ಪ್ರಕಾಶಮೂರ್ತಿ ಅವರ ‘ಗಾದೆ ಮಾತಿನ ಗುಟ್ಟು’ ಪುಸ್ತಕದ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಗಾದೆ ಮಾತಿನ ಗುಟ್ಟು
ಲೇಖಕರು: ದೊಡ್ಡ ಬಾಣಗೆರೆ ಪ್ರಕಾಶಮೂರ್ತಿ,
ದೀಪ್ತಿ ಬುಕ್ ಹೌಸ್ ಮೈಸೂರು.
ಮುದ್ರಣದ ವರ್ಷ: ೨೦೧೬
ಪುಟಗಳು: ೨೨೦
ಬೆಲೆ: ರೂ. ೧೭೫
ಯಾವುದೇ ವಿಷಯ -ವಿಚಾರ -ಅಭಿಪ್ರಾಯಗಳು ಚಿಕ್ಕ ದೊಡ್ಡದು, ಏನೇ ಇದ್ದರೂ ಅದರ ಅರಿವಿನ ಚೆಲುವು ಹೊಳೆದು ಅರ್ಥ ಮಾಡಿ ಕೊಳ್ಳುವ ಪರಿಜ್ಞಾನ ಕೆಲವರಿ ಗಷ್ಟೇ ಸಾಧ್ಯ. ಅದಕ್ಕೇ ‘ಹಿರಿಯರು ಬಲ್ಲವರೇ ಬಲ್ಲರು ಬೆಲ್ಲದ ಸವಿಯ’ ಎಂದು ಹೇಳುತ್ತಾರೆ. ಪ್ರಸ್ತುತ ಈ ಪುಸ್ತಕದಲ್ಲಿ ಲೇಖಕ ದೊಡ್ಡ ಬಾಣಗೆರೆ ಪ್ರಕಾಶಮೂರ್ತಿಯವರು ಬಹಳಷ್ಟು ಗಾದೆ ಮಾತುಗಳು ಹಾಗೂ ಅವುಗಳ ಅರ್ಥವನ್ನು ಇಲ್ಲಿ ತಿಳಿವಿನ ಅಂತರ್ಭಾವದಲ್ಲಿ ಮೂಡಿಸಿದ್ದಾರೆ.
‘ಗಾದೆ ಮಾತು ವೇದಕ್ಕೆ ಸಮಾನ ‘. ಎನ್ನುವುದು ಇವರ ಮೊದಲ ಪುಸ್ತಕವಾಗಿದ್ದು ‘ಗಾದೆ ಮಾತಿನ ಗುಟ್ಟು’ಇದು ಅವರ ಎರಡನೆಯ ಪುಸ್ತಕ. ಇಲ್ಲಿರುವ ಕೆಲವನ್ನು ಪರಿಚಯ ಮಾಡಿರುವೆ ನೋಡಿ…

*ಅಡಿಯ ಮುಂಡಿದೆ ಸ್ವರ್ಗ. ಅಡಿಯ ಹಿಂಡಿದೆ ನರಕ.
ಬದುಕಲ್ಲಿ ಸರಳ ಸುಲಭವೆಂಬ ಪ್ರಶ್ನೆ ಬರುವುದೇ ಇಲ್ಲ. ಆದರೆ ನಮ್ಮ ಹೆಜ್ಜೆಗಳು ಸ್ಫೂರ್ತಿದಾಯಕವಾಗಿದ್ದು, ಜಡತೆ ತೊರೆದು ಅಂಜಿಕೆ ಇಲ್ಲದೇ, ಗುರಿ ಮರೆಯದೇ ಮುನ್ನೆಡೆದರೆ ಗೆಲುವಿನ ಸ್ವರ್ಗ ಮುಟ್ಟ ಬಹುದು.
*ಅಲ್ಪ ವಿದ್ಯೆ ಮಹಾ ಗರ್ವಿ
ತನ್ನ ಶ್ರಮದಿಂದ ವಿದ್ಯೆ ಕಲಿತು ತಿಳಿದಾತನು ಜಂಬ ಮಾಡದೇ ವಿಧೇಯತೆಯಿಂದ ಸರಳವಾಗಿರುತ್ತಾನೆ. ಆದರೆ ಅಲ್ಪ ಕಲಿತವನು ತನ್ನ ಮಾತೇ ಸರಿ ಎಂದು ವಿತಂಡವಾದ ಮಾಡುತ್ತಾ, ಸ್ವಾರ್ಥದಿಂದ, ಗರ್ವದಿಂದ ಮೆರೆಯುತ್ತಾನೆ. ಇಂದು ಎಲ್ಲ ರೀತಿಯ ಜನರೂ ನಮ್ಮೆದುರಿಗಿದ್ದಾರೆ. ಎಚ್ಚರಿಕೆಯಿಂದ ಇರುವುದೇ ಒಳಿತು.
*ಅಗಳು ನುಂಗಲಾರದವನ ಬಾಯಿಗೆ ಕಡುಬು ತುರುಕಿದ.
ಬದುಕಿನ ಪ್ರತಿ ನಿರ್ವಹಣೆಗೂ ಸಮರ್ಥ್ಯತೆ ಬಹು ಮುಖ್ಯ. ವಿದ್ಯಾವಂತನಿರಲಿ ಅವಿದ್ಯಾವಂತನಿರಲಿ ಬುದ್ಧಿ ಕೌಶಲ್ಯತೆಯನ್ನು ಬೆಳೆಸಿಕೊಳ್ಳದಿದ್ದರೆ, ಯಾವ ಕೆಲಸಕ್ಕೂ ಅವಕಾಶವಿರುವುದಿಲ್ಲ. ಅಂತವರು ಸೋಮರಿಗಳ ಪಟ್ಟಿಗೆ ಸೇರುತ್ತಾರೆ. ಹೀಗೆ ಅಸಮರ್ಥ ರಾದ ಇಂತಹವರು ಅಗಳು ನುಂಗಲಾರದವರ ಪಟ್ಟಿಗೆ ಸೇರುತ್ತಾರೆ. ಯಾವುದೇ ಬಗೆಯ ಸಣ್ಣ ಕೆಲಸಕ್ಕೂ ಲಾಯಕ್ಕಿರದ ಇಂತಹವರಿಂದ ಯಾವ ಸಾಧನೆಯನ್ನೂ ಕಾಣಲಾಗದು.ಇವರಿಗೆ ದೊಡ್ಡ ಕೆಲಸ ಹೇಳಿದರೆ ಕಡುಬು ತುರುಕಿದಂತಾಗುತ್ತದೆ.
* ಅಳಿಲು ಸೇವೆ ಮಳಲು ಭಕ್ತಿ.
ಸೇವೆ ಎಂಬುದು ಎಷ್ಟೇ ಚಿಕ್ಕದಾಗಿದ್ದರೂ, ಸೇವಾ ನಿಷ್ಠತೆ ಅತೀವ ಪ್ರಧಾನವಾದುದು. ತೃಣ ಮಾತ್ರದ ಅಳಿಲು ಜೀವಿಗಳು ಶ್ರೀರಾಮನಿಗೆ ಸೇತುವೆ ಕಟ್ಟಲು ಮರಳಿನ ಹರಳು ಹೊತ್ತು ಭಕ್ತಿಯಿಂದ ತಮ್ಮ ಕೈಲಾದಷ್ಟು ಸೇವೆ ಮಾಡಿ ರಾಮನ ಕೃಪೆಗೆ ಪಾತ್ರ ವಾದವು. ಸೇವೆ ತೃಣ ವಿದ್ದರೂ ಸೇವೆಯೇ. ಶಕ್ತ್ಯಾನು ಸಾರ ಶ್ರದ್ಧೆಯಿಂದ ಅರ್ಪಿಸಿದಾಗ ಆ ಸೇವೆ ಶ್ಲಾಘನೀಯವೇ ಆಗಿರುತ್ತದೆ.
*ಅಳದಿದ್ದರೆ ಅಮ್ಮನೂ ಹಾಲು ಕೊಡುವುದಿಲ್ಲ.
ಇದು ಅನುಭವದ ನಿಜ ನುಡಿ.ಕೆಲವರಿಗೆ ಪ್ರತಿ ಕೆಲಸಗಳಿಗೂ ಒತ್ತಾಯಿಸಿ ಮೇಲೆ ಬಿದ್ದು ಹೇಳದೇ ಇದ್ದರೆ ಯಾವುದೂ ಆಗುವುದಿಲ್ಲ. ಅದಕ್ಕೆ ಉದಾಹರಣೆಯಾಗಿ…ಮಗುವಿಗೆ ಹಾಲು ಕೊಡುವ ತಾಯಿಗೆ ನೂರೆಂಟು ಕೆಲಸಗಳು. ಈ ಮಧ್ಯೆ ಮಗು ಅತ್ತು ಗದ್ದಲ ಮಾಡಿದಾಗ ಮಾತ್ರ ಆಕೆ ಹಾಲು ಕೊಡುತ್ತಾಳೆ. ಎನ್ನುತ್ತಾರೆ.
*ಅನ್ನೋ ಹಾಗೂ ಇಲ್ಲ ಅನುಭವಿಸುವ ಹಾಗೂ ಇಲ್ಲ.
ಕೆಲವೊಮ್ಮೆ ಸಂಧಿಗ್ಧ ಪರಿಸ್ಥಿತಿಯಲ್ಲಿ ಮಾತಾಡಿದರೂ ಕಷ್ಟ ಸುಮ್ಮನಿದ್ದರೂ ಕಷ್ಟ. ಸೀತೆಯನ್ನು ಕಾಡಿಗೆ ಕಳಿಸಿ ಬಾ ಎಂದ ರಾಮನ ಮಾತಿಗೆ ಲಕ್ಷ್ಮಣ ಅಣ್ಣನ ಆಜ್ಞೆಯನ್ನು ಪಾಲಿಸಲು ಹೊರಟ ಪ್ರಸಂಗವನ್ನು ವಿವರಿಸಿದ್ದಾರೆ.ಅನೇಕ ಬಾರಿ ಕುಟುಂಬ, ಸಭೆ, ಕಚೇರಿ ಮುಂತಾದ ಕಡೆ ಇಂತಹ ಪ್ರಸಂಗ ಎದುರಾಗುವುದಿದೆ.

*ಊಟಕ್ಕೆ ಮುಂದು ಕೆಲಸಕ್ಕೆ ಹಿಂದು.
*ಊರು ಬಾಗಿಲು ಮುಚ್ಚ ಬಹುದು ದೂರುವ ಬಾಯಿ ಮುಚ್ಚಲಾಗದು.
* ಊದೋದು ಕೊಟ್ಟು ಒದರೋದು ತಂದ.
*ಒಬ್ಬನಿಗಿಂತ ಇಬ್ಬರು ಲೇಸು.
* ಚಾಡಿಕೋರನಿಗೆ ಊರೆಲ್ಲಾ ನೆಂಟರು.
ಇಂತಹ ಇನ್ನಷ್ಟು ಗಾದೆಗಳನ್ನು ಅರ್ಥದೊಂದಿಗೆ ನಾವಿಲ್ಲಿ ಓದ ಬಹುದು. ಗಾದೆ ಮಾತುಗಳು ತುಂಬಾ ಅರ್ಥಪೂರ್ಣ. ಶಕ್ತಿಯುತ ಸರಳ ನೀತಿಯ ನಿಲುವಿನ ಗಾದೆಗಳನ್ನು ಓದುವಾಗ ಒಂದು ರೀತಿಯ ಜಾಗೃತಿಯುಂಟಾಗುವುದಂತೂ ಸತ್ಯ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
