‘ಗೇಮ್ ಆಫ್ ಥ್ರೋನ್’ ಸೀರಿಸ್ ನೋಡಿದ ಮೇಲೆ ಅನಸಿದ್ದು ಹೀಗೆ ಅಂತಾರೆ ಲೇಖಕಿ ತೇಜಸ್ವಿನಿ ಹೆಗಡೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
GOT (Game of Throne) ಸೀರಿಸ್ ನೋಡದವರು ಕಡಿಮೆ ಎನ್ನಬಹುದು. ಇಡೀ ಜಗತ್ತಿನ ರಾಜಕೀಯ ನಡೆಗಳನ್ನು, ಜಗತ್ತು ಬದಲಾಗುವುದು ಯಾವುದರ ಮೇಲೆ ನಿಂತಿದೆ ಎನ್ನುವುದನ್ನು, ಮನುಷ್ಯನ ಮನೋವ್ಯಾಪಾರ, ಅಧಿಕಾರದಲ್ಲಿರುವವರು ತೆಗೆದುಕೊಳ್ಳುವ ಹುಚ್ಚು ನಿರ್ಣಗಳು ಜನಸಾಮಾನ್ಯರ ಮೇಲೆ ಬೀರುವ ಪರಿಣಾಮಗಳು, ಮನುಷ್ಯನ ಅರಿವಿಗೆ ನಿಲುಕದ ನಿಗೂಢ ಪ್ರಪಂಚ, ದ್ವೇಷದ ಪರಾಕಷ್ಠೆ, ಪ್ರೀತಿಯ ತಾಕತ್ತು – ಹೀಗೆ ಎಲ್ಲವನ್ನೂ ತೆರೆದಿಡುವ ಅತ್ಯದ್ಭುತ ಸೀರೀಸ್ ಅದು. ಈಗ ನಾನು ಹೇಳ ಹೊರಟಿರುವುದು ಬೇರೆಯೇ…
ಈ ಸೀರೀಸಿನ ಆರಂಭದಿಂದ, ಉದ್ದಕ್ಕೂ ಓರ್ವನ ಪ್ರಸ್ತಾಪ ಪದೇಪದೇ ಬರ್ತಿರ್ತದೆ ಮಾರ್ರೆ. ಆತನೇ “ಮ್ಯಾಡ್ ಕಿಂಗ್ (Mad King)” ಈತ ಅಷ್ಟು ಕ್ರೂರಿಯಾಗಿದ್ದ, ಆತನ ಹುಚ್ಚುತನದ ಅತಿರೇಕಗಳು ಹೇಗೆಲ್ಲ ಇದ್ದವು, ಆತನ ಹುಚ್ಚುತನದಿಂದ ಎಷ್ಟೆಲ್ಲ ಅವಾಂತರಗಳಾದವು ಎಂಬೆಲ್ಲ ವಿವರಣೆಯನ್ನು ಹಲವು ಪಾತ್ರಗಳು ಹೇಳುತ್ತಾ ಹೋಗುತ್ತವೆ. ಆದರೆ ನಾವು ಎಂದೂ ಆತನ ಮುಖದರ್ಶನ ಮಾಡುವುದಿಲ್ಲ. Kingslayer (ರಾಜನನ್ನೇ ಕೊಂದವ) Jaime Lannister ಆ ಹುಚ್ಚು ರಾಜನನ್ನು ಕೊಂದು ಪ್ರಸಿದ್ಧಿ ಪಡೆದಿರುತ್ತಾನೆ. ಕೆಲವು ತಿಂಗಳಿಂದ ನನಗೆ ಆ ಮ್ಯಾಡ್ ಕಿಂಗಿನ ಮುಖದರ್ಶನ ಪದೇಪದೇ ಆಗ್ತಿದೆ ನೋಡಿ!
ಒಮ್ಮೆ ಭಾರತ, ಪಾಕಿಸ್ತಾನ ಯುದ್ಧ ನಿಲ್ಲಿಸಿದೆ ಹೇಳ್ತಾನೆ, (ನಮ್ಮ ಪ್ರಧಾನಿಯವರು ಅದನ್ನು ಸರಾಸಗಾಟ ತಿರಸ್ಕರಿಸಿ ಯುದ್ಧಕ್ಕೆ ತಾತ್ಕಾಲಕ್ಕೆ ತಡೆ ನಾವೇ ಹಾಕಿದ್ದೇವೆ ಪಾಕಿನ ಕೋರಿಕೆ ಮೇರೆಗೆ ಅಂದ ಮೇಲೆಯೂ), ಅತ್ತ ಇರಾನ್ ತನ್ನ ಹತ್ರ ಮಾತುಕತೆಗೆ, ಮಧ್ಯಸ್ತಿಕೆಗೆ ವಿನಂತಿ ಮಾಡಿದೆ ಅಂತಾನೆ ಅತ್ತ ಇರಾನ್ ಇದನ್ನು ಅಲ್ಲಗಳೆಯುತ್ತದೆ, ನೆತನ್ಯಾಹು ಆಗಲಿ, ಪುತಿನ್ ಆಗಲಿ – ಯಾರೊಬ್ಬರೂ ಈತನ ಮಾತಿಗೆ ಸೊಪ್ಪು ಹಾಕದಿದ್ದರೂ ತಾನು ಯುದ್ಧ ನಿಲ್ಲಿಸಿದೆ ಎನ್ನುತ್ತಾನೆ. ಭಯೋತ್ಪಾದಕರ ಪ್ರೊಡೆಕ್ಷನ್ನಿನಲ್ಲೇ ಬದುಕಿರುವ ಪಾಕಿಸ್ತಾನದ ಜನರಲ್ ಅನ್ನು ಊಟಕ್ಕೆ ಕರೀತಾನೆ ಆದರೆ ಆತನೊಂದಿಗಿನ ಒಂದೂ ಫೋಟೋ ಹಂಚಿಕೊಳ್ಳಲ್ಲ, ಭಾರತ ಪಾಕಿಸ್ತಾನ ಎರಡೂ ಗ್ರೇಟ್ ಅಂತಾನೆ ಮೋದಿಯವರನ್ನು ದಿಢೀರನೆ ಆಹ್ವಾನಿಸಿ ಭಾರತ ತಿರಸ್ಕರಿಸಿದಾಗ ತೆಪ್ಪಗಾಗ್ತಾನೆ. ಅತ್ತ ಆ ಯುದ್ಧ ತಡೆದೆ, ಈ ಯುದ್ಧ ತಡೆದೆ ಎಂದೆಲ್ಲ ಸ್ವ ಘೋಷಿಸಿಕೊಳ್ತಾನೆ, ಆಮೇಲೆ ತಾನೇ ನೇರಾನೇರ ತನಗೆ ನೊಬೆಲ್ ಪ್ರಶಸ್ತಿ ಕೊಡ್ತಿಲ್ಲ, ಅನ್ಯಾಯ ಎಂದು ಪ್ರೆಸ್ ಮುಂದೆ ಗೋಳಾಡ್ತಾನೆ, ಇದಾದ ಮರುದಿವಸವೇ ಮತ್ತೊಂದು ದೇಶದ ಮೇಲೆ ಭೀಕರ ಬಾಂಬ್ ದಾಳಿ ಮಾಡಿ ತಾನು ಇದನ್ನು ಮಾಡಿದ್ದೇ ಶಾಂತಿ ಸ್ಥಾಪಿಸಲೋಸುಗ ಹೀಗೆ ಮಾಡಿದ್ದು, ಇನ್ನೆಲ್ಲ ಓಂ ಶಾಂತಿ ಶಾಂತಿ ಶಾಂತಿಃ ಅಂತ ನಗ್ತಾನೆ!

ನಾನು GOT ನೋಡುವ ನನ್ನವರ ಹತ್ರ “ಈ ಮ್ಯಾಡ್ ಕಿಂಗ್ ಹೇಗಿದ್ನೇನ ನೋಡಕಾಗಿತ್ತು…” ಎಂದು ಹೇಳಿದ್ದೆ. ಅವನನ್ನು ಇಂದು ನೋಡಿಬಿಟ್ಟೆ ಅನ್ನಿಸ್ತಿದೆಯಪ್ಪ. ಆದರೆ Jaime Lannister “Kingslayer” ಅನ್ನು ನೋಡೋದು ಬಾಕಿ ಇದೆ. ಮಸ್ಕ್ ಇರ್ಬಹುದು ಅಂದ್ಕೊಂಡಿದ್ದೆ. ಬಟ್ ಅಲ್ಲವೇನೋ ಅನ್ನಿಸ್ತಿದೆ. ಹಾಂ ಈ ಮ್ಯಾಡ್ ಕಿಂಗ್ ಲಿಸ್ಟಲ್ಲಿ ಹಲವರು ಬರ್ತಾರೆ ಮತ್ತು ನಾನಿಲ್ಲಿ ಯಾವ ದೇಶದ ಯಾವ ನಾಯಕರು ಸರಿ, ತಪ್ಪು ಎಂದೆಲ್ಲ ವಿಶ್ಲೇಷಿಸಲು ಹೋಗುತ್ತಿಲ್ಲ, ಅದು ನನ್ನ ಕೆಲಸವೂ ಅಲ್ಲ. ಆದರೆ ಸದ್ಯ ನನಗೆ ಹಲವು ವಿದ್ಯಮಾನಗಳಲ್ಲಿ ಶಿಬ್ಲಲ್ಲಿ ಹಾಕಿದ ಕಪ್ಪೆಯಂತೇ ಜಿಗುಯುವ ಈ ಒಬ್ಬ ಕಿಂಗ್ ಮಾತ್ರ ಸ್ವಲುಪ ಹೆಚ್ಚೇ ಲೂಸ್ ಅನ್ನಿಸಿಬಿಡ್ತು, ಎಲ್ಲ ಕಡೆ ಕೈ ತೂರಿಸ್ತಾ, ಚಿವುಟ್ತಾ, ಬೆಂಕಿ ಹಾಕ್ತ ಇರುವ ಈತನ ಈ ಹುಚ್ಚುತನದ ಪರಿಣಾಮ ನಿಜಕ್ಕೂ ಆತಂಕಕಾರಿ ಅನ್ನಿಸ್ತು. ಹೀಗಾಗಿ ಹಂಚಿಕೊಂಡೆ.
ಅಂದ ಹಾಗೆ ನನ್ನ ಕಸಿನ್ ಒಬ್ಳು ಅಮೇರಿಕಾದಲ್ಲಿದ್ದು, ಇಲೆಕ್ಷನ್ ಟೈಮ್ ಅಲ್ಲಿ ಹೇಳಿದ್ಲು… “ಇಲ್ಲಿ ಅಮೇರಿಕನ್ಸ್ ಕಥೆ ಕೇಳಡ… ಇಧರ್ ಖಾಯಿ, ಉಧರ್ ಕುಂವಾ ಹಾಂಗಿದ್ದು ಪರಿಸ್ಥಿತಿ, ಯಾರು ಗೆದ್ರೂ ಒಳ್ಳೇದಲ್ಲ” ಅಂತ. ಪಾಪ, ಎಷ್ಟು ಸತ್ಯ ಅನ್ನಿಸಿಬಿಡ್ತಿದೆ!
ಒಟ್ಟಿನಲ್ಲಿ ಜಗತ್ತಿನ ತುಂಬ ಹುಚ್ಚರ ಸಂತೆ ಹೆಚ್ಚಾಗಿ ಭೂಮಿ ನಲುಗುತ್ತಿದೆ. ಒಮ್ಮೆ ಅದು ಬೇಸತ್ತು ಸಮಾ ಮೈಕೊಡವಿಬಿಟ್ಟರೆ ಎಲ್ಲ ಹುಚ್ಚುಗಳು ನೆಟ್ಟಗಾಗಬಹುದು.
#ಅನ್ನಿಸಿದ್ದು #WW3 #Madking #GOT
- ತೇಜಸ್ವಿನಿ ಹೆಗಡೆ
