ಕೊಡಗಿನ ವಿಶೇಷ ಹಬ್ಬ ಹುತ್ತರಿ ಹಬ್ಬಕ್ಕೆ ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತಾ ಕೊಡಗಿನ ಕವಿಯತ್ರಿ, ಶಿಕ್ಷಕಿ ಹಾಗೂ ಲೇಖಕಿಯಾದ ಶಿವದೇವಿ ಅವನೀಶಚಂದ್ರ ಅವರ ರಚನೆಯ ಒಂದು ಕವನವನ್ನು ತಪ್ಪದೆ ಮುಂದೆ ಓದಿ…

ಫೋಟೋ ಕೃಪೆ : ಹೇಮಂತ್ ಪಾರೇರ್
ಹುತ್ತರಿ ಬಂದಿದೆ ಸಂಭ್ರಮ ತುಂಬಿದೆ ಕೊಡಗಿನ ರೈತರ ಮನದಲ್ಲಿ
ರೋಹಿಣಿ ನಕ್ಷತ್ರದ ಹುಣ್ಣಿಮೆ
ಬೆಳಗಲು
ಬರುವಳು ಸಿರಿ ದೇವಿಯು ಮನೆಯ ಕಣಜವ ತುಂಬಲು
ಧಾನ್ಯಲಕ್ಷ್ಮಿಗೆ ಸ್ವಾಗತ ಕೋರಲು
ಮೊಳಗುವುವು ವಾದ್ಯಗಳು ಶುಭಕೋರಿ
ಭಕ್ತಿ ಶ್ರದ್ಧೆಯ ಆಚರಣೆಯು ಮೆರೆವುದು ಮನದಲಿ
ಮಂಗಳವ ಬೀರಿ
ಬಂಧು ಬಳಗವು ಸೇರಿರಲು
ಐನ್ಮನೆಲೆಂತಹ ಸಡಗರವು
ತಳಿರು ತೋರಣ ಪುಷ್ಪಾಲಂಕಾರದಿ ಮನೆ ಮನವೆಲ್ಲಾ ಸಿಂಗರವು
ತಂಬಿಟ್ಟು ತುಪ್ಪ,ಅಕ್ಕಿಯ ಪಾಯಸ ಹುತ್ತರಿ ಗೆಣಸಿನ
ಖಾದ್ಯಗಳು
ಹಿರಿಯರ ವಾತ್ಸಲ್ಯದ ನಡೆನುಡಿಗಳು
ಎಳೆಯರ ಪಾಲಿಗೆ ಅಮೃತವು
ಪೊಲಿ ಪೊಲಿಯೇ ಬಾ ಪೊಲಿಯೇ ಬಾ ಎನ್ನುವ ಘೋಷವು ಮುಗಿಲು ಮುಟ್ಟುವ ಸಡಗರವು
ಬಾಣ ಬಿರುಸು,ನಕ್ಷತ್ರ ಕಡ್ಡಿಗಳ ಅಲಂಕಾರವು ಬಾನಲಿ ಬಿಡಿಸುವ ಚಿತ್ರಗಳು
ಸರತಿಯ ಸಾಲಲಿ ಸುಗ್ಗಿಯ ಪೂಜಿಸಿ ಧನ್ಯರಾಗುವ ಅಮೂಲ್ಯ ಘಳಿಗೆಗಳು
ಹುತ್ತರಿ ಹಬ್ಬವು ಕೊಡಗಿನ
ನಾಡಹಬ್ಬವು
ಆಟೋಟ ಮನರಂಜನೆಗಳ ಮೇಲ್ಮೆಗಳು
ಒಡಲಿನ ಹಸಿವಿಗೆ ಕಸುವನು
ಭರಿಸುವ ಅನ್ನಪೂರ್ಣೆಯ
ವರದಹಸ್ತಗಳು
ಹುತ್ತರಿ ಕೋಲು ಹಾಕಲು ಬನ್ನಿ ಮಂದ್ ಮಾನಿಗಳಲಿ ಖುಷಿಯಿಂದ
ಭೂಮಿಯ ಹಸಿರು ಹಿಂಗದೆ ಇರಲು ಬೇಡುವ ಕಾವೇರಿ ತಾಯಿಯನ್ನ ಭಕ್ತಿಯಿಂದ ಕೋರುವ
ಇಗ್ಗುತಪ್ಪನ ಶುಭಾಶೀರ್ವಾದವನ್ನ…
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು.
