ಸೋತು ಸುಣ್ಣವಾದವರ ಬಗ್ಗೆ ನಿಮ್ಮದೇ ಧಾಟಿಯಲ್ಲಿ ಜರೆಯುತ್ತಿದ್ದೀರಿ…ಕವಿ ವಿಮಲಾ ಪದಮಗೊಂಡ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ವರ್ಷಗಳ ಹಿಂದಿನ ಒಂದೇ
ಒಂದು ನೋವಿನ ಚರ್ಚೆಯಲ್ಲೇ
ಹೊರಳಾಡುತ್ತಿದ್ದೀರಿ,
ಮೊನ್ನೆ ಘಟಿಸಿದ ನೋವು ನನಗಿಂದು
ಕೊಳೆತ ಗೊಬ್ಬರವಾಗಿದೆ,
ಭವಿಷ್ಯದಲ್ಲಿ ವೇಗವಾಗಿ ಓಡಲಿಚ್ಛಿಸಿದರೂ
ಭೂತದಲ್ಲೇ
ಕುಂಟುತ್ತಾ ನಡೆಯುತ್ತಿದ್ದೀರಿ,
ನಿಮ್ಮ ಓಟದ ರಭಸ – ಕುಂಟು ಕಾಲಿನ ಮಧ್ಯೆ
ನಾನು
ಒಂದೇ ವೇಗದಲ್ಲಿ ಲಯ ತಪ್ಪದೆ ನಡೆಯುತ್ತಿದ್ದೇನೆ,
ಸೋತು ಸುಣ್ಣವಾದವರ ಬಗ್ಗೆ ನಿಮ್ಮದೇ
ಧಾಟಿಯಲ್ಲಿ ಜರೆಯುತ್ತಿದ್ದೀರಿ,
ಸೋಲು – ಗೆಲುವಿನ ಹಂಗಿನ ಗುಂಗಿಲ್ಲದೆ ‘ ಬೊಗಸೆಯಲ್ಲಿ
ಅನುಭವಗಳನ್ನು ಗಟ್ಟಿಯಾಗಿ ಹಿಡಿದು ‘ಇಂದು’
ನಾ ಕೌತುಕ ಪಡುತ್ತಿದ್ದೇನೆ,
ಹಿಂದಿನ ಜನ್ಮದ ಕರ್ಮ,
ಮುಂದಿನ ಜನ್ಮಕ್ಕೆ ಸ್ವರ್ಗದ ಕುರಿತು
ಟೀಕೆ ಟಿಪ್ಪಣಿಯ ನಶೆ ಏರಿಸಿಕೊಂಡಿರುವಿರಿ,
ನಾನು ಸ್ವರ್ಗ- ಕರ್ಮಗಳ ಸೇತುವೆಯ
ಬಂಧನವನ್ನು ಬೀಳಿಸಿ
‘ಈ’
ಬದುಕಿನ ಆನಂದವನ್ನು ಹೀರುತ್ತಿದ್ದೇನೆ
ಹತ್ತಿರ ಬರುವವರಿಗೂ ಒಂದಿಷ್ಟು
ನೈವೇದ್ಯವಾಗಿ ನೀಡಿ..!!
- ವಿಮಲಾ ಪದಮಗೊಂಡ – ಬರಹ ವ್ಯಸನಿ
