ಬಸವಣ್ಣ, ದಾಸ ಶ್ರೇಷ್ಠರಿಂದ ಭವ್ಯವಾದ ಭಾಷೆಯಿದು,ಗತವೈಭವದಿ ಮೆರದ ಕನ್ನಡಮ್ಮನ ಸಾಮ್ರಾಜ್ಯವಿದು… ಯುವ ಕವಿಯತ್ರಿ ಬಿ.ಆರ್.ಯಶಸ್ವಿನಿ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ಕನ್ನಡದ ಕಂಪು ಎಲ್ಲೆಡೆ ಪಸರಿಸಿರಲು
ಕಣಕಣದಲ್ಲೂ ಬೆರೆತು ರಾರಾಜಿಸುತ್ತಿರಲು
ಮಾತಿನಲ್ಲೂ, ಮೌನದಲ್ಲೂ ಕನ್ನಡದ ನುಡಿಗಳಿರಲು
ಶ್ರೀಗಂಧದಂತೆ ಚಂದವು ನಮ್ಮ ಕನ್ನಡದ ನುಡಿಯು..
ಶ್ರೀಗಂಧದ ತವರೂರು ಶಿಲ್ಪಕಲೆಗಳ ಬೀಡಿದು
ರನ್ನ,ಪಂಪ,ಜನ್ನ ಕವಿಗಳು ಮೆರೆಸಿದ ನಾಡಿದು
ಬಸವಣ್ಣ, ದಾಸ ಶ್ರೇಷ್ಠರಿಂದ ಭವ್ಯವಾದ ಭಾಷೆಯಿದು
ಗತವೈಭವದಿ ಮೆರದ ಕನ್ನಡಮ್ಮನ ಸಾಮ್ರಾಜ್ಯವಿದು..
ಕನ್ನಡದ ಮೊದಲ ಶಾಸನವೇ ಹಲ್ಮಿಡಿಯಾಗಿರಲು
ಪಂಪನು ಮೊದಲನೇ ಕವಿಯಾಗಿರಲು
ಅಕ್ಕಮಹಾದೇವಿ ಮೊದಲ ಕವಯಿತ್ರಿಯಾಗಿರಲು
ಕವಿಗಳಿಂದ ಶ್ರೀಮಂತವಾಗಿದೆ ನಮ್ಮಿ ಕರುನಾಡು
ಕನ್ನಡ ಸಾಹಿತ್ಯವು ಸಿರಿತನದಿಂದ ಕೂಡಿರಲು
ನಿತ್ಯವೂ ನವೋಲ್ಲಾಸದಿ ಉದಯಿಸುವ ಕವಿಗಳಿರಲು
ಸಾವಿರಾರು ವರ್ಷಗಳಿಂದ ಹಳೆಯದಾದರು
ಹೊಚ್ಚ ಹೊಸತರದಂತಿದೆ ನಮ್ಮ ಮಾತೃ ಭಾಷೆಯು..
- ಬಿ.ಆರ್.ಯಶಸ್ವಿನಿ
