ಕನ್ನಡವೇ ಗರ್ವವೂ, ಪರ್ವವೂ ನಮಗದೇ ಸಕಲ ಸರ್ವವೂ…ಕವಿ ಎಮ್ಮಾರ್ಕೆ ಅವರು ಕನ್ನಡ ರಾಜ್ಯೋತ್ಸವದ ಕುರಿತು ಬರೆದ ಈ ಕವನವನ್ನು ತಪ್ಪದೆ ಮುಂದೆ ಓದಿ…
ಈ ಕನ್ನಡ ಬರಿ ಭಾಷೆಯಲ್ಲ
ಕನ್ನಡಿಯದು ನಮಗೆ,
ಈ ಕನ್ನಡ ಬರಿ ನುಡಿಯಲ್ಲ
ಮುನ್ನುಡಿಯು ನಮಗೆ
ಸಾಹಿತ್ಯಲೋಕದಿ ಕನ್ನಡಿಗರ
ಕೊಡುಗೆಯದು ಗರಿಷ್ಟ,
ಕನ್ನಡ ಮರೆತು ಅನ್ಯಭಾಷೆಗೆ
ಅಂಟಿ ಮಾಡದಿರಿ ಕನಿಷ್ಟ
ಆದರದಿ ಗೌರವಿಸಿರಿ ಅನ್ಯ
ಭಾಷೆಗಳನು ಈಗಲೂ,
ಕನ್ನಡ ಮಾತೆಯ ಪೂಜಿಸಿ
ಎಲ್ಲದಕ್ಕಿಂತ ಮೊದಲು
ತಾಯಂತೆ ತಾಯ್ನುಡಿಯ
ಕಾಯಬೇಕಿದೆ ನಾವು,
ನಾಡು-ನುಡಿಯ ರಕ್ಷಣೆಗೆ
ಬಂದರೂ ಬರಲಿ ಸಾವು
ಹೂವಿಗೆ-ಹೂವು,ಮುಳ್ಳಿಗೆ
ಮುಳ್ಳು ಎಂಬುದೇ ನೀತಿ,
ಕನ್ನಡದ ಆಸ್ಮಿತೆಗಾಗಿ ಮೆಟ್ಟಿ
ನಿಲ್ಲಲೇಬೇಕು ಎಲ್ಲ ಭೀತಿ
ಕನ್ನಡವೇ ಸತ್ಯವೂ,ನಿತ್ಯವೂ
ಉಳಿದುದೆಲ್ಲ ನಿಮಿತ್ಯವು,
ಕನ್ನಡವೇ ಗರ್ವವೂ, ಪರ್ವವೂ
ನಮಗದೇ ಸಕಲ ಸರ್ವವೂ
ರಾಜ್ಯೋತ್ಸವದಿ ರಾರಾಜಿಸಲಿ
ಕೆಂಪು ಹಳದಿಯ ಭಾವುಟ,
ತೆರೆಯೋಣ ಬರೆಯೋಣ ಬನ್ನಿ
ಸಿರಿಗನ್ನಡದ ಹೊಸ ಸಂಪುಟ
- ಎಮ್ಮಾರ್ಕೆ
