‘ಕರಿಯು ಕನ್ನಡಿಯೊಳಗೆ’ ನಾಟಕ ಕೃತಿ ಓದುಗರನ್ನು ಸೆಳೆಯುತ್ತಿದ್ದು, ಹಿರಿಯ ಸಾಹಿತಿಗಳ ಅನಿಸಿಕೆಗಳನ್ನೂ ಹಂಚಿಕೊಳ್ಳಲಾಗಿದೆ. ಮುಂದೆ ಓದಿ…
(ಪುಸ್ತಕ ಕೊಳ್ಳುವವರು ೯೮೮೦೧೪೪೭೦೫ (9880144705 ) ಗೆ ಸಂಪರ್ಕಿಸಬಹುದು.)
ಡಾ.ಎಂ ಎಂ ಕಲಬುರ್ಗಿಯನ್ನ ಅಮರಗೊಳಿಸಿದ್ದೀರಿ ಅವನ ಬಗ್ಗೆ ಒಂದು ಪರಿಚಯ ಪುಸ್ತಕ ಬರೆಯುವುದಕ್ಕಿಂತ ಮಿಗಿಲಾದ ಸೃಜನಶೀಲ ಕೆಲಸ ಮಾಡಿದ್ದೀರಿ. ನನಗೆ ಬಹಳ ಆನಂದವಾಗಿದೆ. ಅಭಿನಂದನೆಗಳು ಶೇಖರ್ ಎಂದು ಖ್ಯಾತ ಕವಿ, ನಾಟಕಕಾರ, ವಿಮರ್ಶಕರಾದ ಡಾ.ಸಿದ್ದಲಿಂಗ ಪಟ್ಟನಶೆಟ್ಟಿ ಅವರು ಹೂಲಿಶೇಖರ್ ಅವರ ಹೊಸ ನಾಟಕ ಕೃತಿ ‘ಕರಿಯು ಕನ್ನಡಿಯೊಳಗೆ’ ಓದಿ ಹೇಳಿದರು.
ಅವರು ಮುಂದುವರೆದು ನಿಮ್ಮ ನಾಟಕವನ್ನು ಓದಿ ಹೊಸ ಬಗೆಯ ಪ್ರಯೋಗ ಮತ್ತು ಚಿಂತನೆ ಮೆರಗು ತಂದಿದೆ, ಬಿಜ್ಜಳ ಸಾವಿನ ಬಗ್ಗೆ ನಿಮ್ಮ ಹಿಂದಿನ ನಾಟಕದಲ್ಲಿ ಮೂಡಿಸಿದ ವಿಚಾರ, ಚಿಂತನ, ಇಲ್ಲಿ ಇನ್ನಷ್ಟು ದಿಟ್ಟವಾಗಿ,ಸ್ಪಷ್ಟವಾಗಿ ವ್ಯಕ್ತವಾಗಿದೆ. ನಾಟಕ ರಚನೆಯ ನಿಮ್ಮ ಕೃತಿತ್ವ ನಾಟಕದಲ್ಲಿ ಇನ್ನಷ್ಟು ಪುಟಗೊಂಡಿದೆ, ಖುಷಿಯಾಗಿದೆ ಎಂದೂ ಹೇಳಿದ್ದಾರೆ.
ಕರ್ನಾಟಕ ಶರಣ ಸಾಹಿತ್ಯ ಪರಿಷತ್ ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ನಾಟಕವಿದು. ಈಗಾಗಲೇ ರಂಗಪ್ರಯೋಗ ಕಂಡಿದೆ. ಇತ್ತೀಚಿಗೆ ಬೆಂಗಳೂರು ವಿಶ್ವವಿದ್ಯಾಲಯದ ನಾಟಕ ವಿಭಾಗದ ವಿದ್ಯಾರ್ಥಿಗಳು ಈ ನಾಟಕದ ಪ್ರಯೋಗವನ್ನು ಯಶಸ್ವಿಯಾಗಿ ರಂಗದ ಮೇಲೆ ತಂದಿದ್ದು, ನಾಟಕ ಹೀಗೆ ಯಶಸ್ವಿಯಾಗಲೆಂದು ಶುಭ ಹಾರೈಸುವೆ.

- ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ (ಖ್ಯಾತ ಕವಿ, ನಾಟಕಕಾರ, ವಿಮರ್ಶಕರು)
ಹೂಲಿಶೇಖರ್ ಡಾ ಎಂ ಎಂ ಕಲಬುರ್ಗಿ ಅವರ ಸಾವಿನ ಹಿನ್ನೆಲೆಯಲ್ಲಿ ಶರಣರ ಕನಸು ಭಗ್ನವಾಗುತ್ತಿರುವುದನ್ನು ಮಾರ್ಮಿಕವಾಗಿ ಅನಾವರಣಗೊಳಿಸುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಹೂಲಿಶೇಖರ್ ಅವರು ಒಬ್ಬ ಯಶಸ್ವಿ ನಿರ್ದೇಶಕರೂ ಆಗಿರುವ ಕಾರಣ ರಂಗರೂಪವನ್ನು ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿ ಸೂಚನೆಗಳ ಮೂಲಕ ಮುಂದಿನ ಪ್ರದರ್ಶನಗಳ ಯಶಸ್ಸಿಗೂ ಕಾರಣರಾಗಿದ್ದಾರೆ. ನಾಟಕದ ವಸ್ತು, ಅದರ ನಿರ್ಹಣೆಯ ಬಿಗಿ,ಪಾತ್ರಗಳ ಸಮರ್ಥ ವಿನ್ಯಾಸ, ಅರ್ಥಪೂರ್ಣ ಮತ್ತು ಹರಿತವಾದ ಮಾತುಗಳು ಒಟ್ಟಾರೆ ನಾಟಕವನ್ನು ಮರೆಯಲಾಗದಂತೆ ಮಾಡುತ್ತವೆ.

- ಡಾ. ಎಚ್. ಎಸ್. ಗೋಪಾಲರಾವ್ (ಶಾಸನ ಶಾಸ್ತ್ರಜ್ಞರು, ಬೋಧಕರು, ಬರಹಗಾರರು)
ನಾಟಕ ನಡುವಿನ ಸಂಭಾಷಣೆಗಳು ಮಹಾಮನೆ ಜಗತ್ತಿನ ಮನೆ ಆಗುವವರೆಗೆ ನಮಗೆ ಮೋಕ್ಷವಿಲ್ಲ ಹಾಗೂ ಅವರೇಕೆ ನಮ್ಮನ್ನು ಕೊಂದರು ಇವರೇಕೆ ಕೋಲ್ಲುತ್ತಿದ್ದಾರೆ ಮತ್ತು ವಚನಗಳನ್ನ ಹಾಡ್ತಾರಷ್ಟ ಅನುಸರಿಸುವುದಿಲ್ಲ ನಾಟಕದಲ್ಲಿ ಬರುವ ಇಂತಹ ಮಾತುಗಳೇ ಇಡೀ ನಾಟಕದ ಸಾರವನ್ನೇ ಹೇಳುತ್ತವೆ.
ಸತ್ಯ ಮತ್ತು ಗಟ್ಟಿ ಕಥೆ,ಮನಮಿಡಿಯುವ ಸಂಭಾಷಣೆ, ಇಂದು ಬಸವಣ್ಣನವರನ್ನು ಒಳಗೊಂಡಂತೆ ಶರಣರ ಸ್ದಿತಿ ಏನು? ಎತ್ತ ಎನ್ನುವ ಚಿತ್ರಣವನ್ನು ನಾಟಕ ಕಟ್ಟಿ ಕೊಟ್ಟಿದೆ.
ಶರಣರ ಪರಿಸ್ಥಿತಿ ಈ ನಾಟಕಕ್ಕೂ ಆಗಬಾರದು. ರಾಜ್ಯದಂತ ಹೆಚ್ಚೆಚ್ಚಾಗಿ ಇದು ಪ್ರದರ್ಶಗೊಳ್ಳಲಿ.

- ಯ.ರು.ಪಾಟಿಲˌ ಖ್ಯಾತ ಕಾದಂಬರಿಕಾರರು