ಕೃಷ್ಣ ಜನ್ಮಾಷ್ಟಮಿಯ ದಿನದಂದು ತೀರ್ಥಳ್ಳಿ ಪಟ್ಟಣದ ಚತ್ರಿಕೆರೆಯ ಪ್ರಸಾದ್ ನೇತ್ರಾಲಯದ ಎದುರಿಗೆ ಜನಿಸಿದ ವಾರಸುದಾರರಿಲ್ಲದ ಗಂಡು ಕರವಿಗೆ “ಕೃಷ್ಣ” ಎಂದು ಹೆಸರಿಡಲಾಯಿತು. ಮುಂದೆ ಆ ಕರುವನ್ನು ಲಕ್ಷ್ಮಮ್ಮ ಅವರು ಜವಾಬ್ದಾರಿ ತಗೆದುಕೊಂಡರು, ರಾಘವೇಂದ್ರ ಸಿ ಅವರು ಬರೆದ ಸಾಮಾಜಿಕ ಕಾಳಜಿ ಕುರಿತು ಲೇಖನ, ಮುಂದೆ ಓದಿ…
ಮೊನ್ನೆ ಅಂದರೆ ಆಗಸ್ಟ್ 19ನೇ ತಾರೀಕು ಕೃಷ್ಣ ಜನ್ಮಾಷ್ಠಮಿಯ ದಿನದಂದು ತೀರ್ಥಳ್ಳಿ ಪಟ್ಟಣದ ಚತ್ರಿಕೆರೆಯ ಪ್ರಸಾದ್ ನೇತ್ರಾಲಯದ ಎದುರಿಗೆ ಮಧ್ಯಾಹ್ನ 3:00 ಗಂಟೆ ಹೊತ್ತಿಗೆ ನೋಡು ನೋಡುತ್ತಿದ್ದಂತೆಯೇ ಗೋಮಾತೆಯೊಂದು ಗಂಡು ಕರವಿಗೆ ಸರಾಗವಾಗಿ ಜನ್ಮವನ್ನು ನೀಡಿರುತ್ತಾಳೆ.
ಆದರೆ ಈ ಗೋಮಾತೆಯ ವಾರಸುದಾರರು ಯಾರೆಂದು ಎಷ್ಟು ಪ್ರಯತ್ನ ಪಟ್ಟರು ತಿಳಿಯಲಿಲ್ಲ. ಸುತ್ತಮುತ್ತಲು ದನಗಳನ್ನು ಸಾಕುತ್ತಿರುವ ಗೊತ್ತಿರುವ ವಾರಸುದಾರರನ್ನು ಕರೆತಂದು ತೋರಿಸಿ ಕೇಳಿದರು ನಮಗೆ ಗೊತ್ತಿಲ್ಲ, ನಮ್ಮದಲ್ಲ ಎನ್ನುವ ಉತ್ತರ ನೀಡಿ ಹೋದರು.
ಆದ್ದರಿಂದ ಆ ಪುಟ್ಟ ಕರುವನ್ನು ಹಾಗೆ ರೋಡಿನಲ್ಲಿ ಬಿಡುವುದು ಸುರಕ್ಷಿತವಾಗಿರಲಿಲ್ಲ .ನಾಯಿಗಳು ಕಚ್ಚುವ ಸಂಭವ ಹೆಚ್ಚಾಗಿ ಇರುತ್ತದೆ, ಇನ್ನೂ ಈ ಅನಾಥ ಗೋಮಾತೆಯನ್ನು ಎಲ್ಲಿಗೆ ಸಾಗಿಸುವುದು ಎಂಬ ಪ್ರಶ್ನೆ ಕಾಡುತ್ತಿರುವಾಗಲೇ, ಪ್ರಸಾದ್ ನೇತ್ರಾಲಯದಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮಮ್ಮ ಎನ್ನುವ ತಾಯಿಯೊಬ್ಬರು ಸರ್, ಯಾರು ವಾರಸುದಾರರು ಇಲ್ಲ ಎಂದಾದರೆ ನಾನು ನಮ್ಮ ಮನೆಗೆ ತೆಗೆದುಕೊಂಡು ಹೋಗಿ ಸಾಕಬಹುದಾ..? ಎಂದು ಅತ್ಯಂತ ವಿನಮ್ರದಿಂದ, ಪ್ರೀತಿಯಿಂದ ಕೇಳಿಕೊಂಡಾಗ ಬೇಡ ಎಂದು ಹೇಳಲು ಮನಸ್ಸು ಬರಲಿಲ್ಲ ಅಲ್ಲದೆ ಯಾರಾದರೂ ಅದರ ಪಾಲನೆಯನ್ನು ಮಾಡಲೇಬೇಕಾಗಿತ್ತು.
ಹೀಗಿರುವಾಗ ಕೈಮರದಲ್ಲಿರುವ ಲಕ್ಷ್ಮಮ್ಮನ ಮನೆಗೆ ವಾಹನವನ್ನು ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ತಲುಪಿಸಲಾಯಿತು. ಹಾಗೆಯೇ ಕೃಷ್ಣ ಜನ್ಮಾಷ್ಟಮಿಯ ದಿನದಂದು ಜನಿಸಿದ ಈ ಗಂಡು ಕರವಿಗೆ “ಕೃಷ್ಣ” ಎಂದು ಹೆಸರನ್ನು ಇಡಲಾಗಿದೆ..
ಈಗಿನ ಕಾಲದಲ್ಲಿ ಒಂದು ದನ ಹಾಗೂ ಕರುವನ್ನು ಅದರಲ್ಲೂ ಗಂಡು ಕರುವನ್ನು ಸಾಕುತ್ತೇನೆ ಎನ್ನುವ ಆ ತಾಯಿಯ ಮಮಕಾರಕ್ಕೆ ಅನಂತ ಅನಂತ ಧನ್ಯವಾದಗಳು. ಇನ್ನು ಎಲ್ಲಾ ಜಾನುವಾರುಗಳನ್ನು ಸಾಕುತ್ತಿರುವ ವಾರಸುದಾರರಲ್ಲಿ ಒಂದು ವಿನಂತಿ, ನಿಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಹತ್ತಿರದ ಪಶು ವೈದ್ಯರ ಬಳಿ ಜಾನುವಾರುಗಳ ಕಿವಿಗಳಿಗೆ ಸರ್ಕಾರವು ನೀಡುವ ಗುರುತಿನ ಬಾರ್ ಕೋಡ್ ಪಟ್ಟಿ ಅಥವಾ ಟಿಕ್ಕಿ ಯನ್ನು ತಪ್ಪದೇ ಅಳವಡಿಸಿ.
ಇದರಿಂದ ನಿಮ್ಮ ಜಾನುವಾರುಗಳು ಈ ರೀತಿ ರಸ್ತೆಯಲ್ಲಿ ಕರವನ್ನು ಹಾಕಿದಾಗ ಅಥವಾ ರಸ್ತೆ ಅಪಘಾತಗಳಾದಾಗ ತಕ್ಷಣ ಆ ಬಾರ್ ಕೋಡ್ ಸಹಾಯದಿಂದ ನಿಮ್ಮ ಜಾನುವಾರುಗಳ ವಿವರಗಳನ್ನು ಪಡೆದು ವಾರಸುದಾರರನ್ನು ತಕ್ಷಣ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪಶು ವೈದ್ಯರನ್ನು ತಪ್ಪದೆ ಸಂಪರ್ಕಿಸಿ. ಪೂಜ್ಯನೀಯ ಕಾಮಧೇನು ಎಂದು ಕರೆಸಿಕೊಳ್ಳುವ ಗೋಮಾತೆಯನ್ನು ಈ ರೀತಿ ಅನಾಥವಾಗಿ ರಸ್ತೆಯಲ್ಲಿ ಬಿಡುವುದು ನಮಗೆ ಯಾರಿಗೂ ಶ್ರೇಯಸ್ಸಲ್ಲ.
- ರಾಘವೇಂದ್ರ ಸಿ (ಗೋಸಿರಿ ಪಂಚಗವ್ಯ ಹಾಗೂ ಸಾವಯವ ಉತ್ಪನ್ನ ಅಂಗಡಿ ಮಾಲೀಕರು, ಗೋಸಿರಿ ಸೇವಾ ಟ್ರಸ್ಟ್ ತಂಡದ ಆಯೋಜಕರು, ಮುಂದಿನ ದಿನಗಳಲ್ಲಿ ಗೋ ಸಂಪತ್ತನ್ನು ಈ ಟ್ರಸ್ಟ್ ಮೂಲಕ ಒಂದು ಮಾದರಿ ಗೋಶಾಲೆಯನ್ನು ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಹೊಂದಿರುವ ಯುವ ಸಮಾಜಕಾರ್ಯಕರ್ತರು) ತೀರ್ಥಹಳ್ಳಿ.
