ಮಾನಸ….ಇದು ಮನಸಿನ ಮಾತು (ಭಾಗ-೪೯)

ಸಂತೋಷ ಜೀವನೋತ್ಸಾಹ. ಸಂತೋಷ ಏನಿದು ಸಂತೋಷ? ನಾವು ಸಂತೋಷವಾಗಿರಲು ಏನು ಮಾಡಬೇಕು? ಯಾವುದಕ್ಕೆ ಸಂತೋಷವಾಗುತ್ತದೆ? ಹೀಗೆ ಹಲವಾರು ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ಉತ್ತರಿಸಿದ್ದಾರೆ ತಪ್ಪದೆ ಮುಂದೆ ಓದಿ…

ಸಂತೋಷವನ್ನು ನಾವು ಬೇರೆಲ್ಲೂ ಹುಡುಕಬೇಕಿಲ್ಲ. ನಮ್ಮಲ್ಲೇ ಇರುತ್ತದೆ. ಕೆಲವರಿಗೆ ಸಣ್ಣ ಸಣ್ಣ ವಿಷಯದಲ್ಲಿ ಸಂತೋಷವಾದರೆ ಅಂದರೆ ಇಷ್ಟವಾದ ತಿಂಡಿ ತಿಂದಾಗ, ಇಷ್ಟವಾದ ಬಟ್ಟೆ ತೊಟ್ಟಾಗ, ಒಂದು ಹಾಡು ಕೇಳಿದಾಗ, ಸುಂದರ ಹೂಗಳನ್ನು ನೋಡಿದಾಗ, ಪಕ್ಷಿಗಳ ಕಲರವ ಕೇಳಿದಾಗ, ಸೂರ್ಯೋದಯ, ಸೂರ್ಯಾಸ್ತ ನೋಡಿದಾಗ ಹೀಗೆ ಹಲವಾರು ಸಣ್ಣ ಕಾರಣಗಳಿಗೆ ಸಂತೋಷ ಪಡುತ್ತಾರೆ.

ಕೆಲವರು ಬಹಳ ಉನ್ನತವಾಗಿ ಸಂತೋಷವನ್ನು ಪಡೆಯಲು ಇಷ್ಟ ಪಡುತ್ತಾರೆ. ಆಫೀಸಿನಲ್ಲಿ ಪ್ರಮೋಷನ್ ಆದಾಗ, ಮನೆ ಕಟ್ಟಿದಾಗ, ವಾಹನಗಳನ್ನು ತೆಗೆದುಕೊಂಡಾಗ, ಒಡವೆ ವಸ್ತುಗಳನ್ನು ಕೊಂಡಾಗ ಹೀಗೆ ದೊಡ್ಡ ಮೊತ್ತದ ವಸ್ತುಗಳಿಂದ ಸಂತೋಷ ಹೊಂದುತ್ತಾರೆ.

ಮಾನವನ ಸಂತೋಷ ನಿರ್ಧರಿಸುವಲ್ಲಿ ನಾಲ್ಕು ಹಾರ್ಮೋನ್ ಗಳು ಪ್ರಮುಖ ಪಾತ್ರ ವಹಿಸುತ್ತದೆ. ಎಂಡೋರ್ಫಿನ್, ಡೋಪಾಮೈನ್‌, ಸೆರೊಟೊನಿನ್‌ ಮತ್ತು ಆಕ್ಸಿಟೊಸಿನ್‌.

ಫೋಟೋ ಕೃಪೆ : google

ಎಂಡೋರ್ಫಿನ್ ಹಾರ್ಮೋನ್ :

ಯೋಗಾಭ್ಯಾಸ ಮಾಡುವಾಗ, ದೈಹಿಕವಾದ ಕಸರತ್ತುಗಳು, ವಾಯುವಿಹಾರ ಹೀಗೆ ಕೆಲವು ಕೆಲಸಗಳು ಸಂತೋಷವಾಗಿಡುತ್ತದೆ. ನಗುವುದು, ನಗಿಸುತ್ತಿರುವುದೂ ಸಹ ಸಂತೋಷ ಪಡುವ ಮತ್ತೊಂದು ಮಾರ್ಗ.

ಡೋಪಾಮೈನ್‌ ಹಾರ್ಮೋನ್ :

ನಮ್ಮ ಜೀವನದ ಪ್ರಯಾಣದಲ್ಲಿ ನಮ್ಮ ಆಸೆಗಳು, ಧ್ಯೇಯ, ಗುರಿ ತಲುಪಿದಾಗ ಈ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ನಾವು ಪೂರ್ಣಗೊಂಡ ಕೆಲಸದಲ್ಲಿ ಒಳ್ಳೆಯ ಫಲಿತಾಂಶ ಸಿಕ್ಕಿದಾಗ ಒಳ್ಳೆಯದು ಎಂಬ ಭಾವನೆ ಮತ್ತು ಸಂತೋಷ ಅನುಭವಿಸುವುದು ಈ ಹಾರ್ಮೋನಿಂದಲೇ.

ಸೆರೊಟೋನಿನ್ ಹಾರ್ಮೋನ್ :

ಇತರರಿಗೆ ಸಹಾಯ ಮಾಡಿದಾಗ, ಬೇರೆಯವರ ಭಾವನೆಗಳಿಗೆ ಸ್ಪಂದಿಸಿದಾಗ, ಸಮಾಜ ಸೇವೆಯಲ್ಲಿ ತೊಡಗಿದಾಗ, ಗಿಡಮರಗಳನ್ನು ನೆಟ್ಟಾಗ, ನಮ್ಮಲ್ಲಿರುವ ಕಲೆ ಹೊರಹೊಮ್ಮಿದಾಗ ಅಂದರೆ ಬರವಣಿಗೆ, ಚಿತ್ರಕಲೆ, ಸಂಗೀತ, ನೃತ್ಯ ಯಾವುದೇ ರೀತಿಯ ನಮ್ಮ ಕಲೆ ಅರಳಿದಾಗ ಈ ಹಾರ್ಮೋನ್ ಬಿಡುಗಡೆಯಾಗುತ್ತದೆ.

ಆಕ್ಸಿಟೊಸಿನ್ ಹಾರ್ಮೋನ್  :

ನಮ್ಮ ಆತ್ಮೀಯರ ಸಂಬಂಧಿಗಳೊಂದಿಗೆ, ಸ್ನೇಹಿತರೊಂದಿಗೆ ಅಥವಾ ಕುಟುಂಬದವರ ಜೊತೆ ಇದ್ದಾಗ ಆಕ್ಸಿಟೊಸಿನ್ ಬಿಡುಗಡೆಗೊಳ್ಳುತ್ತದೆ. ಮಕ್ಕಳನ್ನು ತಬ್ಬಿಕೊಂಡಾಗ, ಗಂಡ ಹೆಂಡತಿ ಸಂಬಂಧದಲ್ಲಿ ಈ ಹಾರ್ಮೋನ್ ಬಿಡುಗಡೆಗೊಂಡು ಸಂತೋಷವಾಗುತ್ತದೆ. ಮಕ್ಕಳಿಗೆ ತಾಯಿಯ ಸ್ಪರ್ಷ ಬಹಳ ಸಂತೋಷಕೊಡುತ್ತದೆ. ಅಮ್ಮನ ಮಡಿಲು ಸಂತೋಷಕೊಡುತ್ತದೆ, ಮಕ್ಕಳು ಮಾಡಿದ ಸಣ್ಣ ಪುಟ್ಟ ಕೆಲಸಗಳನ್ನು ಪ್ರಶಂಸಿಸಿ ಅವರನ್ನು ತಬ್ಬಿ ಬೆನ್ನು ತಟ್ಟಿದಾಗ ಈ ಹಾರ್ಮೋನ್ ಬಿಡುಗಡೆ ಹೊಂದುತ್ತದೆ.

ಕಾರಣಗಳು ಹಲವಾರಿರಲಿ ಅದು ನಮಗೆ ಸಂತೋಷ ಕೊಡುವ ವಿಷಯವಾಗಿರಬೇಕು. ಸಂತೋಷವನ್ನು ಕಾಣುವ ಕಾರಣಕ್ಕಾಗಿ ಜೀವನವನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳಬೇಕು. ಸಂತೋಷವನ್ನು ಅರಸಿ ಹೋಗುವ ಬದಲು ಅದನ್ನು ನಾವೇ ಕಂಡುಕೊಳ್ಳಬೇಕು. ದುಡ್ಡು ಕೊಟ್ಟು ಕೊಂಡುಕೊಳ್ಳುವ ವಸ್ತುವಲ್ಲ ಈ ಸಂತೋಷ. ಸಂತೋಷದಿಂದ ಜೀವನ ಮಾಡಲು ಅದು ನಮ್ಮ ಕೈಯಲ್ಲಿಯೇ ಇದೆ.

ಸಂತೋಷವಾಗಿರಲು ಹಲವಾರು ಮಾರ್ಗಗಳಿವೆ, ಆದರೆ ಪ್ರತಿಯೊಬ್ಬರಿಗೂ ಅನುಗುಣವಾದ ವಿಧಾನ ಭಿನ್ನವಾಗಬಹುದು.

ಫೋಟೋ ಕೃಪೆ : google

ಸಂತೋಷವನ್ನು ಹೆಚ್ಚಿಸಲು ಸಹಾಯ ಮಾಡಬಹುದಾದ ಅಂಶಗಳು :

ಬಂದಿದ್ದನ್ನು ಹಾಗೇ ಸ್ವೀಕರಿಸುವ ಮನೋಭಾವವಿರಬೇಕು. ಜೀವನದಲ್ಲಿ ಏನನ್ನಾದರೂ ಸರಿ ಸ್ವೀಕರಿಸುವ ಮನೋಭಾವದ ಶಕ್ತಿಯನ್ನು ಬೆಳಸಿಕೊಳ್ಳಬೇಕು. ಪ್ರತಿಯೊಂದು ಅನುಭವವನ್ನೂ ಕಲಿಕೆ ಎಂದು ನೋಡಬೇಕು. ಜೀವನಕ್ಕೆ ಬೇಕಾದ ಬಹಳ ಮುಖ್ಯವಾದ ಅಂಶ ಆರೋಗ್ಯಕರ ಜೀವನ ಶೈಲಿ.  ನಿತ್ಯ ವ್ಯಾಯಾಮ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ ಹಾಗು ಆರೋಗ್ಯಕರ ಆಹಾರ ಸೇವಿಸಿ, ನಿದ್ರೆಯನ್ನು ಸರಿಯಾಗಿ ಮಾಡಬೇಕು. ಸದಾ ಧನಾತ್ಮಕ ಚಿಂತನೆ ನಮ್ಮ ಜೀವನವನ್ನು ಹುರುಪಾಗಿ ಇಡುತ್ತದೆ
ಯಾವಾಗಲೂ ಒಳ್ಳೆಯದನ್ನೇ ಯೋಚಿಸಬೇಕು. ತೊಂದರೆಗಳು ಬಂತೆಂದು ಯೋಚಿಸುವ ಬದಲು ಪರಿಹಾರಗಳತ್ತ ಗಮನ ಕೊಡಬೇಕು.

ಏಕಾಗ್ರತೆ, ಮಾಡುವ ಕೆಲಸದತ್ತ ಪೂರ್ಣ ಗಮನ ಮತ್ತು ಧ್ಯಾನ :

ಪ್ರಸ್ತುತ ಕ್ಷಣದಲ್ಲಿ ಜೀವಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಧ್ಯಾನ ಅಥವಾ ಪ್ರಾಣಾಯಾಮದಿಂದ ಮನಸ್ಸಿಗೆ ಶಾಂತಿ ತರುವ ಅಭ್ಯಾಸ ಬೆಳಸಿಕೊಳ್ಳಬೇಕು. ಮಾಡುವ ಕೆಲಸಗಳಲ್ಲಿ ಶ್ರದ್ದೆ ಹಾಗು ಶಿಸ್ತು ಇದ್ದರೆ ಜೀವನ ಕ್ರಮಬದ್ಧವಾಗಿ ಸಾಗುತ್ತದೆ.

ಸೌಹಾರ್ದ ಹಾಗು ಗುಣಾತ್ಮಕ ಸಂಬಂಧಗಳು :

  • ಸ್ನೇಹಿತರು, ಕುಟುಂಬದವರು ಮತ್ತು ಸುತ್ತಮುತ್ತಲಿನವರ ಜೊತೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ.
  • ಸಾಮಾನ್ಯ ಸಂಭಾಷಣೆಗಳು ಮತ್ತು ಹಾಸ್ಯ ಮನಸ್ಥಿತಿಯು ಸಂತೋಷವನ್ನು ಹೆಚ್ಚಿಸುತ್ತದೆ.
  • ಆಸಕ್ತಿಯುತ ಜೀವನ
  • ನಿಮ್ಮ ಹವ್ಯಾಸಗಳಿಗೆ ಮತ್ತು ಆಸಕ್ತಿಗಳಿಗೆ ಪ್ರಾಮುಖ್ಯತೆ ಕೊಡಬೇಕು.
  • ನೀವು ಇಷ್ಟ ಪಟ್ಟು ಪ್ರೀತಿಸುವ ಕೆಲಸಗಳನ್ನು ಮಾಡಬೇಕು.
  • ಬೇಸರವನ್ನು ಕಡಿಮೆ ಮಾಡಿಕೊಳ್ಳಿ
  • ಅನಾವಶ್ಯಕವಾಗಿ ಹೋಲಿಕೆ ಮಾಡುವುದು, ಹೊಟ್ಟೆ ಕಿಚ್ಚು ಹಾಗು ಅತಿಯಾದ ಆತಂಕ ಇವುಗಳಿಂದ ದೂರವಿರಬೇಕು.
  • ಸಾಮಾಜಿಕ ಮಾಧ್ಯಮದ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು.
  • ಧನ್ಯತಾಭಾವ (Gratitude)
  • ದಿನನಿತ್ಯ ನೀವು ಹೊಂದಿರುವ ಚಿಕ್ಕಚಿಕ್ಕ ಸಂತೋಷದ ಕ್ಷಣಗಳನ್ನು ಗುರುತಿಸಿಕೊಂಡು ಧನ್ಯತಾ ಭಾವ ಇರಬೇಕು. ಧನ್ಯತಾಭಾವವನ್ನು ಹೊಂದುವುದರಿಂದ ಆತ್ಮತೃಪ್ತಿ ಹೆಚ್ಚುತ್ತದೆ. ಅತೀ ಆಸೆ ಇಂದ doora ಇರಬಹುದು.
  • ಸಹಾಯ ಮಾಡುವ ಅಭ್ಯಾಸ
  • ಇತರರಿಗೆ ಸಹಾಯ ಮಾಡುವುದು ಆಂತರಿಕ ಸಂತೋಷವನ್ನು ನೀಡುತ್ತದೆ.
  • ಸಣ್ಣ ದಾನ ಧರ್ಮವೂ ಸಹ ದೊಡ್ಡ ಮೊತ್ತದಲ್ಲಿ ಸಂತೋಷ ತರುತ್ತದೆ.
  • ಸ್ನೇಹ ಮತ್ತು ಪ್ರಪಂಚದ ಜೊತೆಗೆ ಹೊಂದಿಕೊಂಡು ಹೋಗುವ ಸ್ವಭಾವ ಬೆಳೆಸಿಕೊಳ್ಳಬೇಕು.
  • ನೈಸರ್ಗಿಕವಾಗಿ ಸಿಕ್ಕಿರುವ ಪ್ರಕೃತಿ ಸೌಂದರ್ಯವನ್ನು ಅನುಭವಿಸಬೇಕು, ಪ್ರಕೃತಿಯ ಜೊತೆ ಕಾಲ ಕಳೆಯಬೇಕು. ಹೊಸ ಅನುಭವಗಳನ್ನು ಸ್ವೀಕರಿಸಿ, ಇದರೊಂದಿಗೆ ಪ್ರಯಾಣವೂ ಒಂದು ಭಾಗವಾಗಿ ಇಟ್ಟುಕೊಂಡು ಆಗಾಗ ಪ್ರಯಾಣ ಮಾಡುತ್ತಿದ್ದಾರೆ ಮನಸಿಗೆ ಆಹ್ಲಾದ ಸಿಗುತ್ತದೆ.
  • ಸಂತೋಷ ನಿಮ್ಮ ಒಳಗೆಯೇ ಅಡಗಿರುತ್ತದೆ ಅದು ದುಃಖದ ಮನೋಭಾವವನ್ನು ಬದಲಾಯಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಸಂತೋಷ ಅವರವರ ಕೈಯಲ್ಲೇ ಇರುತ್ತದೆ. ಹೊರಗಿನ ಸಂತೋಷ ಕ್ಷಣಿಕ ಆದರೆ ಮನಸು ಸದಾ ಪ್ರಫ್ಫುಲ್ಲವಾಗಿರಲು ಸಂತೋಷದ ಆಯ್ಕೆ ನೀವೇ ಮಾಡಿಕೊಳ್ಳಬೇಕು.

  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading