ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ಮನಸೇ ಮತ್ಯಾಕ ಮರಗುವೆ
ಮತ್ಯಾಕ ನೀ ಚಿಂತ್ಯಾಗ ಸೊರಗುವೆ
ನೋವುಂಡ್ಯಾಕ ಮನದಾಗ ಕೊರಗುವೆ.
ಕಲ್ಲಾದರು ಮತ್ತೆ ಕರಗುವೆ
ಬದುಕಿನ ಕಷ್ಟದ ಭಾರವ ಹೊರುವೆ
ಮೃದು ಬೆಣ್ಣೆಯಂತಾಗಿ ಅಂಗೈಗೆ ಬರುವೆ.
ದುಡಿದು ಬೆವರ ತೊಟ್ಟಿಕ್ಕುವೆ
ಚಿಗುರಿದ ಮನದಾಸೆಗಳ ಮುಚ್ಚಿಕ್ಕುವೆ
ಭವಿಷ್ಯದ ಬಾಳಿಗೆ ಅನ್ನದ ಗಂಟು ಕಟ್ಟಿಕ್ಕುವೆ.
ಸಂಸಾರದ ಜಂಜಾಟದ ನಡುವೆ
ಮಳೆಚಳಿ ಬಿಸಿಲೆನ್ನದೆ ಹಗಲೆಲ್ಲ ದುಡಿವೆ
ಪೆಟ್ಟಿನ ಭಯವಿದ್ದರೂ ಒರಳಿಗೆ ತಲೆಕೊಡುವೆ.
ಚಿಂತೆಯ ಕುಲುಮೆಯಲ್ಲಿ ಬೇಯುವೆ
ಬದುಕಿನ ದುಃಖ ದುಮ್ಮಾನಗಳನ್ನು ಮೆಟ್ಟುವೆ
ಕಷ್ಟಗಳ ಸರಮಾಲೆಯ ನಡುವೆ ಬದುಕು ಕಟ್ಟುವೆ.
ಬಿಸಿಲಲ್ಲಿ ದುಡಿದು ಸುಕ್ಕುಗಟ್ಟುವೆ
ಸೂರು ಹರಿದ ಮನೆಯಲ್ಲಿ ತೊಯ್ಯುವೆ
ಮೈಕೊರೆವ ಚಳಿಯಲ್ಲಿ ಗಡಗಡನೆ ನಡುಗುವೆ.
ಬಡಕಲು ದೇಹಕ್ಕೆ ಹರಿದಂಗಿ ತೊಡುವೆ
ದಣಿದರು ಹೊಟ್ಟೆಗಾಗಿ ಕೆರೆಕುಂಟೆ ತೋಡುವೆ
ಹೊಟ್ಟೆ ಹಸಿವು ಹಿಂಗಿಸಲು ಕೂಲಿನಾಲಿ ಮಾಡುವೆ.
ಮನಸೇ ಮತ್ಯಾಕ ಮರುಗುವೆ
ಮರಳಿನಲ್ಲಿ ಆಸೆಯ ಗೂಡೇಕೆ ಕಟ್ಟುವೆ
ಸಮಯ ನಿಲ್ಲದೆಂದು ಗೊತ್ತಿದ್ದೂ ಹಿಡಿದು ಕಟ್ಟುವೆ.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ. ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ.
