ಆ ವೈದ್ಯರಿಗೇನು ಗೊತ್ತು? ನಮ್ಮಿಬ್ಬರ ಆ ಬಾಂಧವ್ಯ !! ಅವರೇನು ಬಲ್ಲರು ಹೇಳು ನಮ್ಮ ಬಿಡಿಸದಾ ಬಂಧ!!…ಕವಿಯತ್ರಿ ಕೆ.ಸಿ.ರತ್ನಶ್ರೀ ಶ್ರೀಧರ್ ಅವರ ಕವನವನ್ನು ತಪ್ಪದೆ ಪೂರ್ತಿಯಾಗಿ ಓದಿ…
ಮರೆಯಬೇಕಂತೆ ನಿನ್ನ
ಮರೆತು ಹೇಗೆ ಕಳೆಯಲಿ
ನೀನಿಲ್ಲದ ರಾತ್ರಿಗಳನು
ನಾ ಹೇಗೆ ತೊರೆಯಲಿ
ನೀ ನೀಡಿದ ಆಸರೆಯನು
ನಾ ಹೇಗಿರಲಿ ನೀನಿಲ್ಲದೆ
ಮರೆಯಲಿ ಹೇಗೆ ನಿನ್ನ ನಾ
ತಲೆಶೂಲೆ ಕಾಡಿದಾಗ
ನಿದಿರದೇವಿ ಕರೆದಾಗ
ಆಯಾಸದಿ ಬಳಲಿದಾಗ
ದುಃಖದಲಿ ನಾ ಕಂಗೆಟ್ಟು
ನಿನ್ನೆದೆಯಲಿ ತಲೆಯಿಟ್ಟು
ಅತ್ತಾಗಲೆನ್ನ ಕಣ್ಣೊರೆಸಿದ್ದ
ನಿನ್ನ ಮರೆಯಲಿ ಹೇಗೆ ನಾ
ನಿನ್ನ ಸಹವಾಸ ಬಿಡಬೇಕಂತೆ
ನಿನ್ನಿಂದ ದೂರ ಇರಬೇಕಂತೆ
ನಿನ್ನ ಎದೆಯಾಸರೆಯ ನಾ
ಈಗಲೇ ತೊರೆಯಬೇಕಂತೆ
ನ(ಬೆ)ನ್ನ ಬೇನೆ ದೂರಾಗಲು
ನಿನ್ನ ನಾ ಮರೆಯಬೇಕಂತೆ
ಮರೆಯಲಿ ಹೇಗೆ ನಿನ್ನ ನಾ
ಆ ವೈದ್ಯರಿಗೇನು ಗೊತ್ತು?
ನಮ್ಮಿಬ್ಬರ ಆ ಬಾಂಧವ್ಯ !!
ಅವರೇನು ಬಲ್ಲರು ಹೇಳು
ನಮ್ಮ ಬಿಡಿಸದಾ ಬಂಧ!!
ನೀ ಕೊಟ್ಟಿದ್ದೆ ನನಗೆ ಇಂಬು
ನೀ ನನ್ನ ಪ್ರೀತಿಯ ದಿಂಬು
ತೊರೆಯಲಿ ಹೇಗೆ ನಿನ್ನ ನಾ
- ಕೆ. ಸಿ. ರತ್ನಶ್ರೀ ಶ್ರೀಧರ್
