ಹೆಣ್ಣು ತನಗೆ ಆಗುವ ಹಿಂಸೆ, ದೌರ್ಜನ್ಯವನ್ನ ‘ಮರ್ಯಾದೆ’ ಗೆ ಅಂಜಿ ತನ್ನ ಶಕ್ತಿ ಮೀರಿ ಸಹಿಸಿಕೊಂಡು, ಮಿತಿ ಮೀರಿದಾಗ ಕೊನೆಗೆ ಯಾರಿಗೂ ಹೇಳದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವುಗಳಿಗೆ ಅದುವೇ ಸ್ತ್ರೀ ಶೋಷಣೆಯನ್ನು ಪ್ರೋತ್ಸಾಹಿಸುವ ಸಾಹಿತ್ಯ ಮತ್ತು ಸಿನಿಮಾಗಳು ಎನ್ನುವ ಡಿ.ಶಬ್ರಿನಾ ಮಹಮದ್ ಅಲಿ ಅವರ ಚಿಂತನ ಲೇಖನವನ್ನು ಓದಿ…
ಹೆಣ್ಣಿನ ಮೇಲಾಗುವ ದೌರ್ಜನ್ಯ ಮತ್ತು ಹಿಂಸೆಯ ಹೆಚ್ಚಳಕೆ ‘ಮರ್ಯಾದೆ’ ಹೆಸರಿನ ಸೈರಣೆಯೇ ಪ್ರೇರಣೆ!
ನಮ್ಮ ಅಜ್ಜಿ ಮುತ್ತಜ್ಜಿ ಕಾಲದಿಂದ ಇಂದಿನವರೆಗೂ ಹೆಣ್ಣು ತನ್ನ ಮೇಲಾಗುವ ಶೋಷಣೆ, ಹಿಂಸೆ ಹಾಗೂ ದೌರ್ಜನ್ಯಕ್ಕೆ ‘ಮರ್ಯಾದೆ’ ಎಂಬ ಬೆಚ್ಚನೆಯ ಹೊದಿಕೆ ಹೊದಿಸಿ ತನ್ನ ನೋವು ಸಂಕಟವನ್ನು ನಿದ್ರೆಗೆ ಜಾರಿಸಿ ತಾನು ಜಾಗೃತಳಾಗಿರುವೆ. ತಾನು ಅತ್ಯಂತ ಸಂತೋಷದಿಂದಿರುವೆ ಎಂಬಂತೆ ನಟಿಸುತ್ತಲೆ ಬಂದಿದ್ದಾಳೆ. ವಿಪರ್ಯಾಸವೆನೆಂದರೆ ಆ ನಟನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿದ ಈ ‘ಸಮಾಜ’ ಆಕೆಗೆ ‘ತಾಳ್ಮೆಯಗಣಿ’, ‘ತ್ಯಾಗಮಯಿ’ ಎಂಬ ಹೊಗಳಿಕೆಯ ಪಟ್ಟ ಕಟ್ಟಿ ತಮ್ಮ ಅಟ್ಟಹಾಸ ಮೆರೆಯುತ್ತಲೇ ಬಂದಿದೆ.
ಶೋಷಣೆಯ ಹೆಸರಲಿ ಆ ಹೊಗಳಿಕೆಯ ಪಟ್ಟಗಳು ಯಾರಿಗೆ ಬೇಕು? ಅವುಗಳಿಂದ ಹೆಣ್ಣುಕುಲಕೆ ಆಗುವ ಪ್ರಯೋಜನವಾದರೂ ಏನಾದರೂ ಇವೆಯಾ? ಇವೆ ಎಂದು ಹೇಳಲು ನಿಮ್ಮಿಂದ ಸಾಧ್ಯವಿದೆಯಾ! ಹೌದು ಎಂದಾದಾರೆ, ಸಂದೇಹವೇ ಬೇಡ ನಿಮ್ಮದು ಮತ್ತದೆ ಮೊಂಡುವಾದ ಇರಲಿ, ಇಲ್ಲಿ ನಾವು ಚರ್ಚಿಸಬೇಕಾದದ್ದು, ತನ್ನ ಮೇಲಾಗುವ ಹಿಂಸೆ, ದೌರ್ಜನ್ಯವನ್ನು ಮುಚ್ಚಿಡುವ ಈ ‘ಮರ್ಯಾದೆ’ ಎಂಬ ಬೆಚ್ಚನೆಯ ಹೊದಿಕೆಯನ್ನು ಆ ಹೆಣ್ಣಿನ ಕೈಗಿತ್ತವರು ಯಾರು? ಎಂದು ಒಮ್ಮೆ ಯೋಚಿಸಿ ನೋಡಿ. ಆಗ ನಿಮ್ಮ ಕಣ್ಮುಂದೆ ಬಂದು ನಿಲ್ಲುವವರು ಹೆತ್ತವರು, ಮನೆಯ ಹಿರಿಕರು. ಇವರೊಟ್ಟಿಗೆ ನನ್ನೆದಿರು ಮತ್ತೊಂದು ಹೆಬ್ಬಂಡೆಯಂತೆ ನಿಂತಿದೆ. ಅದುವೇ ಸ್ತ್ರೀ ಶೋಷಣೆಯನ್ನು ಪ್ರೋತ್ಸಾಹಿಸುವ ಸಾಹಿತ್ಯ ಮತ್ತು ಸಿನಿಮಾಗಳು.
ಹೆಣ್ಣನ್ನು ‘ಭೂಮಿ’ಗೆ ಹೋಲಿಸಿ ಸಹಿಸಿಕೊಳ್ಳುವುದು ಆಕೆಯ ‘ಆ ಜನ್ಮಸಿದ್ಧ ಕರ್ತವ್ಯ’ ಎಂಬಂತೆ ಆಕೆಗಾಗುವ ಶೋಷಣೆ, ಹಿಂಸೆ ದೌರ್ಜನ್ಯಕ್ಕೆ ಹೊಂದಿಕೊಳ್ಳುವಂತಹ ಮನಸ್ಥಿತಿಯನ್ನು ಪುರಾಣ ಕತೆಗಳ ಮೂಲಕ ಜಾನಪದ ಗೀತೆಗಳ ಮೂಲಕ ಸಿನಿಮಾಗಳ ಮೂಲಕ ತರುವಲ್ಲಿ ಈ ಸಮಾಜ ಅಂದಿಗೂ ಇಂದಿಗೂ ತನ್ನ ಕ್ರೌರ್ಯ ಮೆರೆಯುತ್ತಲೇ ಬಂದಿದೆ.
ಒಂದು ಜಾನಪದ ಗೀತೆಯ ಸಾಲುಗಳು ಹೀಗಿವೆ
ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು
ಹೊತ್ತಾಗಿ ಇಕ್ಕಿದರು ಉಣಬೇಕು| ತೌರೀಗೆ
ಒಳ್ಳೆಯ ಹೆಸರಾ ತರಬೇಕು||
ಆದದ್ದೆಲ್ಲಾ ಸಹಿಸಿಕೊಂಡರೆ ಮಾತ್ರ ಸಾದ್ವಿ; ಪ್ರಶ್ನಿಸಿದರೆ ಚಾಂಡಾಲಿ, ಗಯ್ಯಾಳಿ, ಚಾರಿತ್ರ್ಯಹೀನಳು. ಇದು ಈ ಸಮಾಜದ ಹೆಣ್ಣು ಗಂಡು ಸೇರಿದಂತೆ ಬಹುತೇಕರ ಮನಸ್ಥಿತಿ ಪ್ರಶ್ನಿಸಿದ್ದನ್ನ ಒಪ್ಪುವವರು ಬೆರಳಣಿಕೆ ಮಾತ್ರ.
ಈ ಮೇಲಿನ ಜಾನಪದ ಗೀತೆಯ ‘ತೌರೀಗೆ ಹೆಸರಾ ತರಬೇಕು’ ಎಂಬ ಕೊನೆಯ ಸಾಲು ಒಬ್ಬ ತಾಯಿ ತನ್ನ ಮಗಳಿಗೆ ತಿಳುವಳಿಕೆ ಹೇಳುವ ನೆಪದಲಿ ಗಂಡನ ಮನೆಯಲ್ಲಾಗುವ ದೌರ್ಜನ್ಯ, ಹಿಂಸೆಯನ್ನು ಸಹಿಸಿಕೊಳ್ಳುವಂತೆ ಸಿದ್ಧಮಾಡುತಿದ್ದಾಳೆ. “ನಿನಗೆ ಎಷ್ಟೇ ಕಷ್ಟ ಬಂದರೂ ನೆರೆಹೊರೆಯವರಿಗೆ ತೌರೀಗೆ ಹೇಳಬಾರದು. ಅಷ್ಟೇಯಲ್ಲ, ನಿನ್ನ ಜೀವಕ್ಕೆ ಕುತ್ತು ಬಂದರೂ, ನೀನು ಭೂಮಿ ತೂಕದ ತಾಳ್ಮೆಯಿಂದ ನೋವು ನುಂಗಿಕೊಳ್ಳಬೇಕು. ಆಗಲೇ ನೀನು ತೌರೀಗೆ ಹೆಸರು ತರ್ತಿಯಾ” ಎಂಬ ಭಾವನಾತ್ಮಕ ಮಾತನ್ನು ಹೇಳುವ ಮೂಲಕ ಮಗಳ ಬದುಕನ್ನ ಪ್ರಶ್ನಿಸುವ ಮನೋಭಾವದಿಂದ ದೂರ ಮಾಡುತಿದ್ದಾಳೆ.
ಇದು ಕೇವಲ ಒಬ್ಬ ತಾಯಿಯ ಮಾತಲ್ಲ,ಬಹುತೇಕ ಎಲ್ಲಾ ತಾಯಂದಿರ ಮಾತು ಇದೇ ಆಗಿದೆ. ಈ ಒಂದು ಮಾತಿನಿಂದ ಅದೆಷ್ಟು ಹೆಣ್ಮಕ್ಳು ತನ್ನ ತವರಿನ ಮೇಲಿನ ಪ್ರೇಮದಿಂದ ತನ್ನ ಮೇಲಾಗುವ ಹಿಂಸೆ, ದೌರ್ಜನ್ಯವನ್ನ ‘ಮರ್ಯಾದೆ’ ಗೆ ಅಂಜಿ ತನ್ನ ಶಕ್ತಿ ಮೀರಿ ಸಹಿಸಿಕೊಂಡು, ಮಿತಿ ಮೀರಿದಾಗ ಕೊನೆಗೆ ಯಾರಿಗೂ ಹೇಳದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಾವುದೋ ಕಾಲದ ಇತಿಹಾಸ ಬೇಡ. ನಮ್ಮ ಬಾಲ್ಯದಲ್ಲಿ ನಮ್ಮದೇ ಊರಿನ ಹೆಣ್ಮಕ್ಳ ಸಾವಾಗೀಡಾಗಿದ್ದನ್ನ ನೆನಪಿಸಿಕೊಳ್ಳೋಣಾ. ಏನಿಲ್ಲವೆಂದರೂ ಒಬ್ಬೊಬ್ಬರಿಗೆ ಒಂದೆರಡು ಹಿಂಸಾತ್ಮಕ ಸಾವುಗಳು ನಮ್ಮೆದಿರು ಬಂದು ನಿಲ್ಲುತ್ತವೆ ಅಲ್ಲವೇ?. ಅಷ್ಟೇಯಲ್ಲ, ಸತ್ತ ಮೇಲೆ ಹೆತ್ತತಾಯಿ ಬಂದು, “ನನಗಾದ್ರು ಒಂದೂ ಮಾತು ಹೇಳದೇ ಹೋದೆಯಲ್ಲಮ್ಮಾ” ಅಂತಾ ಕಣ್ಣೀರು ಹಾಕಿದ್ದು ಸಹ ನೆನಪಾಗುತ್ತದೆ. ಹೇಳದಂತೆ ತಡೆದದ್ದು ನಾನೇ ಎಂಬ ಪರಿಜ್ಞಾನವೂ ಅವರಿಗಿರುವುದಿಲ್ಲ. ಇದು ವಾಸ್ತವ.

ಇನ್ನೂ ಪುರಾಣದ ಕತೆಗಳು, ಸಿನಿಮಾಗಳು ಸಹ ಹೆಣ್ಣಿನ ಶೋಷಣೆಯನ್ನ ಪ್ರೋತ್ಸಾಹಿಸುತ್ತಲೆ ಬಂದಿವೆ. ಹೆಣ್ಣು ಸಹಿಸಿಕೊಂಡ್ರೆ ಮಾತ್ರ ಬದುಕು ಸಾಧ್ಯ ಎಂಬ ಮನಸ್ಥಿತಿಯನ್ನ ತರುವಲ್ಲಿ ಇವುಗಳ ಪಾತ್ರವೂ ಹಿರಿದಿದೆ. ಇಂತಹ ಸಾಹಿತ್ಯ ಮತ್ತು ಸಿನಿಮಾಗಳಿಗೆ ಕಡಿವಾಣ ಹಾಕಬೇಕಿದೆ.
‘ಹೆಣ್ಣು’ ಸಹಿಸದರಷ್ಟೇ ಬದುಕಲ್ಲ, ಅನ್ಯಾಯವನ್ನು, ಅಸತ್ಯವನ್ನು ಪ್ರಶ್ನಿಸಿದರೂ ಬದುಕುತ್ತಾಳೆ’ಎಂಬುದನ್ನ ಅರ್ಥಮಾಡಿಸಬೇಕಿದೆ. ಆದ್ದರಿಂದ ಹೆತ್ತವರು ಮಕ್ಕಳಿಗೆ ಬದುಕಿನ ಮೌಲ್ಯಗಳ ಜೊತೆಗೆ ಪ್ರಶ್ನಿಸುವುದನ್ನ ಕಲಿಸಬೇಕಿದೆ. ಹಿಂಸೆ ಮತ್ತು ದೌರ್ಜನ್ಯವನ್ನ ಮೊದಲ ಬಾರಿಯೇ ಪ್ರಶ್ನಿಸಿ ತಡೆದರೆ ಅದರ ಕ್ರೌರ್ಯಕೆ ಭವಿಷ್ಯವಿರುವುದಿಲ್ಲ ಎಂಬುದನ್ನ ಮನದಟ್ಟು ಮಾಡಬೇಕಿದೆ. ‘ಮರ್ಯಾದೆ’ ಅಂತಾ ಸಹಿಸಿಕೊಂಡರೆ ಅದು ಹೆಮ್ಮರವಾಗಿಬಿಡುತ್ತದೆ. ಆದ್ದರಿಂದ ಆ ಹಿಂಸೆ ಮತ್ತು ದೌರ್ಜನ್ಯವನ್ನು ಮೊಳಕೆಯಿದ್ದಾಗಲೆ ಚಿವುಟಿ ಹಾಕಬೇಕು. ಸರಿ ತಪ್ಪು ಏನೇಯಿದ್ದರೂ ಕುಳಿತು ಮಾತಿನಲ್ಲಿ ಬಗೆಹರಿಸಿಕೊಳ್ಳುವ ಮನಸ್ಥಿತಿಗೆ ತರಬೇಕು. ದೈಹಿಕ ಹಿಂಸೆಗೆ, ದೌರ್ಜನ್ಯಕೆ ಅವಕಾಶ ಮಾಡಿಕೊಡಬಾರದು ಎಂಬುದನ್ನ ಎಳೆ ಎಳೆಯಾಗಿ ಬಿಡಿಸಿ ಹೇಳಬೇಕಿದೆ. ಸಹಿಸಿಕೊಳ್ಳುವುದರಿಂದ ದಾಂಪತ್ಯದಲ್ಲಾಗಲಿ,ಬದುಕಿನಲ್ಲಾಗಲಿ ಮೇಲ್ನೋಟದ ಹೊಂದಾಣಿಕೆ ಆಗುತ್ತದೆ,ಸಹಿಸುವ ಬದಲು, ಪ್ರಶ್ನಿಸಿ ಸರಿಪಡಿಸಿದರೆ ಸಂಬಂಧಗಳ ಬಂಧ ಆಂತರಿಕವಾಗಿ ಬಿಗಿಯಾಗುತ್ತವೆ ಎಂಬುದನ್ನ ಅರುಹಬೇಕಿದೆ.
ಹೀಗೆ ನಾವು ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಕ ಮಕ್ಕಳು ತಾವು ಅನುಭವಿಸಿದ ಹಿಂಸೆ, ದೌರ್ಜನ್ಯ, ಶೋಷಣೆಯಿಂದ ಬೇಸತ್ತು ‘ಮರ್ಯಾದೆ’ ಎಂಬ ಹೆಸರಲಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಬಹುದು ಎಂಬುದು ನನ್ನ ಮನದಾಶಯ. ಕಾರಣ ದೌರ್ಜನ್ಯವನೆಲ್ಲಾ ಸಹಿಸಿಕೊಂಡು ‘ಒಳ್ಳೆಯವಳು’ ಎಂಬ ಅನಗತ್ಯದ ಪಟ್ಟ ಕಟ್ಟಿಕೊಂಡು ಅಸಂತೋಷದಿಂದ, ಅಸಮಾಧಾನದಿಂದ, ಅತೃಪ್ತಿಯಿಂದ ಬದುಕುವುದಕ್ಕಿಂತ ಅನ್ಯಾಯವನು, ದೌರ್ಜನ್ಯವನು ಖಂಡಿಸಿ ಧೈರ್ಯದಿಂದ ಆತ್ಮತೃಪ್ತಿಯಿಂದ ಬದುಕವುದೇ ನಿಜವಾದ ಬದುಕು. ಏನಂತಿರಾ?
- ಡಿ.ಶಬ್ರಿನಾ ಮಹಮದ್ ಅಲಿ – ಲೇಖಕಿ, ಚಳ್ಳಕೆರೆ.
