ವ್ಯಕ್ತಿಗಳಿಂದಾಗಲಿ, ವಸ್ತುಗಳಿಂದಾಗಲಿ, ಪ್ರಾಣಿಪಕ್ಷಿಗಳಿಂದಾಗಲಿ ಯಾವುದಾದರೂ ಒಂದನ್ನು ಮೆದುಳು ಕೆಟ್ಟದು ಅಂತ ತೀರ್ಮಾನ ಮಾಡಿಕೊಂಡುಬಿಟ್ಟರೆ ನಮ್ಮ ಮನಸ್ಸು ಮರೆಯಬೇಕೆಂದು ಇಚ್ಛಿಸಿದರೂ ಮೆದುಳಿಗೆ ಮರೆಯಲು ಸಾಧ್ಯವಾಗುವುದಿಲ್ಲ. ಬಿ.ಆರ್.ಯಶಸ್ವಿನಿ ಅವರ ಈ ಲೇಖನವನ್ನು ಪೂರ್ತಿಯಾಗಿ ಓದಿ ….
ನಮ್ಮ ಮೆದುಳು ನಕಾರಾತ್ಮಕ ಪಕ್ಷಪಾತವನ್ನು ಹೊಂದಿದ್ದು, ಒಳ್ಳೆಯ ನೆನಪುಗಳಿಗಿಂತ ಕೆಟ್ಟ ನೆನಪುಗಳನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತದೆ. ಖುಷಿಯ ಕ್ಷಣಗಳು ಮನಸ್ಸಿಗೆ ಆಹ್ಲಾದ ತಂದುಕೊಟ್ಟಿದ್ದರೆ, ನೋವು, ದುಃಖ, ಮನಸ್ಸಿನಾಳದಲ್ಲಿ ಮನೆ ಮಾಡಿಕೊಂಡು ಬಿಡುತ್ತವೆ. ಸಂತೋಷದ ಘಳಿಗೆಯನ್ನು ನೆನಪಿಸಿಕೊಂಡು ಸಂತಸಪಡುವಷ್ಟರಲ್ಲಿ ಮತ್ತೊಂದು ಅಹಿತಕರ ಘಟನೆ ಮನಸ್ಸಿಗೆ ಬಂದು ಕುಳಿತುಕೊಂಡು ಬಿಡುತ್ತವೆ. ಏಕೆಂದರೆ ಅದರಿಂದ ಮನಸ್ಸಿಗೆ ಅಷ್ಟು ನೋವಾಗಿರುತ್ತದೆ.
ಹುಟ್ಟಿದ ಕ್ಷಣದಿಂದ ತಿಳುವಳಿಕೆ ಬರುವವರೆಗೂ ಖಾಲಿ ಪುಸ್ತಕದಂತೆ ಇದ್ದ ನಮ್ಮ ಮೆದುಳು ಒಂದೊಂದು ಘಟನೆಗಳನ್ನು, ಪುಸ್ತಕದ ಜ್ಞಾನ, ಬದುಕಲು ಬೇಕಾದ ಬುದ್ಧಿವಂತಿಕೆ, ನೋವು, ನಲಿವುಗಳನ್ನು ಪ್ರತಿಯೊಂದು ವಿಷಯವನ್ನು ಮೆದುಳೆಂಬ ಪುಸ್ತಕದಲ್ಲಿ ಬರೆದುಕೊಳ್ಳುತ್ತಾ ಹೋಗುತ್ತಂದೆ. ಅಷ್ಟು ವಿಷಯಗಳಲ್ಲಿ ಎಲ್ಲವೂ ಹಿತವಾಗಿದ್ದರೂ,ಬೇಡವಾದ ವಿಷಯವನ್ನೆ ಮೆಲುಕು ಹಾಕುವುದೇ ಮೆದುಳಿನ ಕೆಲಸವಾಗಿ ಬಿಟ್ಟಿರುತ್ತದೆ.
ನಾವು ದಾರಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ಕಾಲಿಗೆ ಮುಳ್ಳು ಚುಚ್ಚಿರುತ್ತದೆ. ಆ ಮುಳ್ಳು ತುಂಬಾ ಆಳಕ್ಕೆ ಹೋಗಿ ಚುಚ್ಚಿದ್ದರೆ ಆ ಜಾಗದಲ್ಲಿ ಉಂಟಾದ ನೋವು ತುಂಬಾ ದಿನಗಳವರೆಗೂ ಹಾಗೆಯೇ ಇರುತ್ತದೆ. ತುಂಬಾ ಆಳಕ್ಕೆ ಚುಚ್ಚದೆ ಚರ್ಮದ ತುದಿಯಲ್ಲಿ ಚುಚ್ಚಿದ್ದರೆ ಆ ನೋವು ಕೆಲವು ಸಮಯದವರೆಗೂ ಅಥವಾ ಒಂದೆರೆಡು ದಿನಗಳವರೆಗೂ ಇರಬಹುದು ಅಷ್ಟೆ.

ತುಂಬಾ ಆಳಕ್ಕೆ ಚುಚ್ಚಿದ ಮುಳ್ಳು ಹಳೆ ನೋವಾಗಿ ಚುಚ್ಚಿದ ಜಾಗಕ್ಕೆ ಏನಾದರೂ ಒತ್ತಿದ್ದರೂ ಸಾಕು ಮೆದುಳು ಚುರುಕಾಗಿ ಬಿಡುತ್ತದೆ. ಮತ್ತೆ, ಮತ್ತೆ ಕಾಣಿಸುವ ನೋವಿಗೆ ಒದ್ದಾಡುತ್ತಿರುತ್ತೇವೆ. ಒಂದೆರಡು ದಿನಗಳ ನಂತರ ಮರೆಯಾದ ನೋವಿನ ಜಾಗದಲ್ಲಿ ಮುಳ್ಳು ಚುಚ್ಚಿದ ಜಾಗವೆಂದು ಏನು ಕುರುಹುಗಳು ಇರುವುದಿಲ್ಲ. ಮತ್ತೆ ಮತ್ತೆ ಮೆದುಳಿಗೆ ನೆನಪು ಮಾಡುವ ಸನ್ನಿವೇಶಗಳು ಬರುವುದಿಲ್ಲ. ಆದರಿಂದ ತುಂಬಾ ಆಳಕ್ಕೆ ಚುಚ್ಚಿದ ಕೆಟ್ಟ ನೆನಪೇ ಪದೆ ಪದೆ ನೆನಪಾಗುತ್ತದೆ.
ಮತ್ತೆ ಅದೇ ದಾರಿಯಲ್ಲಿ ಪ್ರಯಾಣಿಸಬೇಕಾಗುವ ಸಂದರ್ಭ ಎದುರಾದಾಗ ಮುಳ್ಳಿನ ನೆನಪಾಗಿ ಅದಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇವೆ. ಮರೆಯಬೇಕೆಂದರೂ ಹೇಗಾದರೂ ಸರಿ ಮತ್ತೆ ಮರುಕಳಿಸುವಂತಾಗಿಬಿಡುತ್ತದೆ.
ಕೆಲವೊಮ್ಮೆ ಆಹಿತಕರ ಘಟನೆಗಳು ನಮ್ಮಲ್ಲಿ ಪ್ರೋತ್ಸಾಹ ಉಂಟು ಮಾಡುವಂತ್ತಿದ್ದು, ಆ ಕೆಲಸ ನಿನ್ನಿಂದ ಆಗುತ್ತೆ ಅಂತ ಮೆದುಳು ಪ್ರೋತ್ಸಾಹ ನೀಡಿದರೆ ಆಗ ಮನಸ್ಸು ನನ್ನಿಂದ ಆಗಲ್ಲ ಅಂತ ಹಿಂದೆ ಸರಿಯುವಂತೆ ಮಾಡಿಬಿಡುತ್ತದೆ. ಮನಸ್ಸು ದುರ್ಬಲವಾಗಿದ್ದು ಮೆದುಳು ಕೂಡ ದುರ್ಬಲವಾಗಿದ್ದರೆ ನೋವು ಮತ್ತೆ ಮರುಕಳಿಸುತ್ತವೆ. ಮನಸ್ಸು ದುರ್ಬಲವಾಗಿದ್ದರೂ ಕೂಡ ಮೆದುಳು ಧೃತಿಗೆಡದೆ ಬಲವಾಗಿದ್ದರೆ ಮನಸ್ಸಿಗೆ ದೈರ್ಯ ತುಂಬಿ ಅದು ಅಂದುಕೊಂಡು ಕಾರ್ಯವನ್ನು ಗುರಿ ತಲುಪಿಸುವಂತೆ ಮಾಡುತ್ತದೆ.
ಒಟ್ಟಿನಲ್ಲಿ ವ್ಯಕ್ತಿಗಳಿಂದಾಗಲಿ, ವಸ್ತುಗಳಿಂದಾಗಲಿ, ಪ್ರಾಣಿಪಕ್ಷಿಗಳಿಂದಾಗಲಿ ಯಾವುದಾದರೂ ಒಂದನ್ನು ಮೆದುಳು ಕೆಟ್ಟದು ಅಂತ ತೀರ್ಮಾನ ಮಾಡಿಕೊಂಡುಬಿಟ್ಟರೆ ನಮ್ಮ ಮನಸ್ಸು ಮರೆಯಬೇಕೆಂದು ಇಚ್ಛಿಸಿದರೂ ಮೆದುಳಿಗೆ ನೋವು ತಂದ ವ್ಯಕ್ತಿ, ವಸ್ತು, ಪ್ರಾಣಿಪಕ್ಷಿಗಳು ಕಣ್ಮುಂದೆ ಬಂದಾಗ ಆ ಆಹಿತಕರ ಘಟನೆ ಮತ್ತೆ ನಡೆಯಬಾರದೆಂದು ಮತ್ತೆ ಅದೇ ಹಳೆಯ ಕೆಟ್ಟ ನೆನಪನ್ನು ಮೆದುಳು ಮಾಡಿಕೊಂಡು ಬಿಡುತ್ತದೆ.
ಏಕೆಂದರೆ ಪ್ರಾಣಿಷಕ್ಷಿಗಳಂತೆ ತಕ್ಷಣಕ್ಕೆ ಮರೆಯುವ ಶಕ್ತಿಯನ್ನು ಮಾನವನಿಗೆ ದೇವರು ಕರುಣಿಸಿಲ್ಲ. ಮನಸ್ಸು ದುರ್ಬಲವಾಗಿರದೆ ಧೃಢವಾಗಿದ್ದರೆ ಮಾತ್ರ ಆ ಕೆಟ್ಟ ನೆನಪುಗಳನ್ನು ಮರೆಯಲು ಸಾಧ್ಯ. ಅದಕ್ಕೆ ನೆನಪೆಂಬ ಶಕ್ತಿಯನ್ನು ಭಗವಂತ ಜಾಗರುಕತೆಯಿಂದ ಇರಲೆಂದು ಈ ವರವನ್ನು ಕರುಣಿಸಿದ್ದಾನೆ. ಕೈಕಾಲು ಗಟ್ಟಿಯಾಗಿ ದುಡಿದು ತಿನ್ನುವ ಶಕ್ತಿ ಇರುವವರೆಗೂ ನೆನಪುಗಳು ಜೀವಂತವಾಗಿರಲು ಕರುಣಿಸಿ ತನ್ನ ಕಾಲ ಮೇಲೆ ತಾನು ನಿಂತು ಬದುಕುವ ಅವಧಿಯನ್ನು ಪೂರ್ಣಗೊಳಿಸಿದ ನಂತರವೇ ನಮಗೆ ಮರೆವಿನ ಶಕ್ತಿ ಕರುಣಿಸಿದ್ದಾನೆ.
- ಬಿ.ಆರ್.ಯಶಸ್ವಿನಿ
