ಒಂದು ಫೋಟೊದ ಹಿಂದಿನ ಕತೆ

ಕ್ರೈಸ್ತ ಮಿಶಿನರಿ ಒಬ್ಬರು ಕೈಯಲ್ಲಿ ಹಸಿದ ಮಗುವಿನ ಕೈಯಿದೆ.  ಇಡೀ ಉಗಾಂಡದ ದುರಂತ ಸ್ಥಿತಿಯನ್ನು ಇದು ಬಿಂಬಿಸುತ್ತದೆ. ಆ ದೇಶಕ್ಕೆ ಸಹಾಯ ಹಸ್ತ ಬೇಕಿದೆ ಎಂಬುದೇ ಇಲ್ಲಿನ ತಿರುಳು. ಛಾಯಾಗ್ರಾಹಕ ಸಿದ್ಧರಾಮ ಕೂಡ್ಲಿಗಿ ಅವರು ಇನ್ನೊಬ್ಬ ಛಾಯಾಗ್ರಾಹಕ  ಮೈಕ್ ವೆಲ್ಸ್ ಅವರು ಕ್ಲಿಕಿಸಿದ ಒಂದು ಚಿತ್ರದ ಹಿಂದಿನ ಕತೆಯಿದು…

ಫೋಟೊಗಳನ್ನು ಸ್ಪರ್ಧೆಗೆ ಕಳಿಸೋದು, ಅವುಗಳಿಗೆ ಬಹುಮಾನ, ಪುರಸ್ಕಾರ ಸಿಗೋದು ಫೋಟೊಗ್ರಾಫರ್ ಗಳಿಗೆ ಅತ್ಯಂತ ಸಂತಸದ ಸಂಗತಿ. ಕೆಲವು ಫೋಟೊಗಳನ್ನು ಕ್ಲಿಕ್ ಮಾಡಿದಾಗ ಬಹುಮಾನ ಬಂದರೂ ಅದು ತುಂಬ ಬೇಸರ ಹಾಗೂ ನೋವಿನ ಸಂಗತಿಗಳಾಗಿಬಿಡುವ ಸಂದರ್ಭಗಳೂ ಇರುತ್ತವೆ.

ಫೋಟೋ ಕೃಪೆ : google

ಇಲ್ಲಿ ನೋಡಿ ಈ ಚಿತ್ರ Wrold Press Photo ಪುರಸ್ಕಾರ ಲಭಿಸಿದ ಫೋಟೊ. ಇದನ್ನು ಕ್ಲಿಕ್ ಮಾಡಿದ ವ್ಯಕ್ತಿ ಮೈಕ್ ವೆಲ್ಸ್ (Mike Wells). ಉಗಾಂಡದ ಕರಮೊಜಾ ಎಂಬ ಜಿಲ್ಲೆಯಲ್ಲಿ ಈ ಚಿತ್ರವನ್ನು ಎಪ್ರಿಲ್ 1980ರಲ್ಲಿ ಕ್ಲಿಕ್ ಮಾಡಲಾಯಿತು. ಇಲ್ಲಿ ವಿಶೇಷವೆಂದರೆ ಉಗಾಂಡದಲ್ಲಿ 1980ರಲ್ಲಿ ಭೀಕರ ಕ್ಷಾಮ ತಲೆದೋರಿ ಹಸಿವಿನಿಂದಲೇ ಶೇ.20ರಷ್ಟು ಜನ ಸಾವಿಗೀಡಾದರೆ, ಶೇ.60ರಷ್ಟು ಶಿಶುಗಳೂ ಸಹ ಮರಣ ಹೊಂದಿದವು. ಜಗತ್ತಿನ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ದುರಂತದ ಸಂಗತಿಯಾಗಿದೆ.

ಈ ಎಲ್ಲ ಸಂಗತಿಯನ್ನು ಇದೊಂದೇ ಚಿತ್ರ ಹೇಳಿ ಬಿಡುತ್ತದೆ. ಇಲ್ಲಿ ವಿವರಣೆಯ ಅಗತ್ಯವೇ ಇಲ್ಲ. ಜಗತ್ತಿನ ಯಾವುದೇ ನಾಯಕನೂ ಇಲ್ಲಿನ ಕ್ಷಾಮದ ಭೀಕರತೆಯ ಬಗ್ಗೆ ದನಿಯೆತ್ತುವುದು ಬೇಕಿಲ್ಲ, ಪತ್ರಿಕೆಗಳಲ್ಲಿ ಉದ್ದುದ್ದ ಸುದ್ದಿಯನ್ನು ಪ್ರಕಟಿಸುವುದೂ ಬೇಕಿಲ್ಲ. ಕೇವಲ ಈ ಒಂದೇ ಒಂದು ಚಿತ್ರವೇ ಸಾಕು ಎಲ್ಲ ತಿಳಿಸಿಬಿಡುತ್ತದೆ.

ಫೋಟೋ ಕೃಪೆ : google

ಕ್ರೈಸ್ತ ಮಿಶಿನರಿ ಒಬ್ಬರು ಕೈಯಲ್ಲಿ ಹಸಿದ ಮಗುವಿನ ಕೈಯಿದೆ. ಅಷ್ಟೇ ಇಲ್ಲಿನ ದೃಶ್ಯವಾದರೂ ಇಡೀ ಉಗಾಂಡದ ದುರಂತ ಸ್ಥಿತಿಯನ್ನು ಇದು ಬಿಂಬಿಸುತ್ತದೆ. ಆ ದೇಶಕ್ಕೆ ಸಹಾಯ ಹಸ್ತ ಬೇಕಿದೆ ಎಂಬುದೇ ಇಲ್ಲಿನ ತಿರುಳು.

ನಂತರ ಈ ಚಿತ್ರಕ್ಕೆ ಪ್ರಶಸ್ತಿ ಲಭಿಸಿದಾಗ “ಈ ಚಿತ್ರಕ್ಕಾಗಿ ನಾನು ಪ್ರಶಸ್ತಿ ಪಡೆಯಲು ನಾಚಿಕೆ ಪಡುತ್ತಿದ್ದೇನೆ” ಎಂದು ಅವರು ಹೇಳುತ್ತಾರೆ. ಈ ಚಿತ್ರ ಸ್ಪರ್ಧೆಗೆ ಹೋಗುವ ಮುಂದೆ 5 ತಿಂಗಳ ಕಾಲ ಪತ್ರಿಕೆಯಲ್ಲಿ ಪ್ರಕಟವಾಗದೇ ಹಾಗೇ ಕುಳಿತಿತ್ತು ಎಂದರೆ ನಂಬುತ್ತೀರಾ ? ನಿಜ. ಪತ್ರಿಕೆಯಲ್ಲಿ ಪ್ರಕಟವಾದ ನಂತರ ಇದು ಸ್ಪರ್ಧೆಗೆ ಹೋಯಿತು. ಈ ಚಿತ್ರಕ್ಕೆ ಪುರಸ್ಕಾರವೂ ಲಭಿಸಿತಾದರೂ ಛಾಯಾಗ್ರಾಹಕ ಮೈಕ್ ವೆಲ್ಸ್ ಹೇಳುತ್ತಾರೆ ” ಹಸಿವಿನಿಂದ ಸಾವಿಗೀಡಾಗುವ ಜನರ ಚಿತ್ರಗಳಿಗೆ ಬಹುಮಾನ, ಪುರಸ್ಕಾರಗಳನ್ನು ನಾನು ವಿರೋಧಿಸುತ್ತೇನೆ ” ಎನ್ನುತ್ತಾರೆ.

ಫೋಟೋ ಕೃಪೆ : google

ಏನೇ ಇರಲಿ ಮೈಕ್ ವೇಲ್ಸ್ ಚಿತ್ರ ತೆಗೆದರು, ಅದು ಜಾಗತಿಕ ಮಟ್ಟದಲ್ಲಿಯೇ ಅತ್ಯಂತ ಪ್ರಸಿದ್ಧ ಚಿತ್ರವೆಂದು ಹೆಸರು ಮಾಡಿತು, ಇಡೀ ದೇಶದ ಹಸಿವನ್ನು ಒಂದೇ ಒಂದು ಚಿತ್ರ ಬಿಂಬಿಸಿತು, ಆದರೆ ಇದಕ್ಕೆ ಪುರಸ್ಕಾರ ದೊರೆತಾಗ ಮಾತ್ರ ಮೈಕ್ ವೆಲ್ಸ್ ದು:ಖಪಡುತ್ತಾರೆ. ಯಾಕೆಂದರೆ ಈ ಚಿತ್ರವನ್ನು ಜಗತ್ತಿನ ಕಣ್ಣು ತೆರೆಸಲು ತೆಗೆದರೆ ಹೊರತು ಪ್ರಶಸ್ತಿಗಾಗಿ ಅಲ್ಲ.

ಇಂಥ ಚಿತ್ರಗಳನ್ನು ತೆಗೆಯುವ ಮುಂಚೆ ಎಲ್ಲ ಛಾಯಾಗ್ರಾಹಕರೂ ಇದನ್ನು ಗಮನಿಸಬೇಕು.


  • ಸಿದ್ಧರಾಮ ಕೂಡ್ಲಿಗಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW