ಮಾತೃ ವಾತ್ಸಲ್ಯದಲಿ ಮೀರಿಸುವಳೆಲ್ಲರನು ವಿಶ್ವ ಮಾನವ ತತ್ವ ಬೆಳಸಿದಾಕೆ ‘ನನ್ನಕ್ಕ’ …ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಸಂಸ್ಕೃತಿಯನೆಚ್ಚರಿಸಿ ಸಂಸ್ಕಾರವೆತ್ತರಿಸಿ
ಸಾಗುತಿಹಳೆನ್ನಕ್ಕ ಧರಣಿ ಜಾತೆ
ಸಂಬಂಧವಿಲ್ಲದೆಯೆ ಸಂಬಂಧಿಯಾಗುತಲಿ
ಸನ್ನಡತೆಯಿಂದೆನ್ನ ಕರೆಯುವಾಕೆ
ಲೇಖನಿಯ ಹಿಡಿದಿರಲು ಕಾವ್ಯವರಳುವುದಲ್ಲೆ
ಭಾವ ಬೆರೆಸುತ ಬರೆವ ಬರಹ ಮಾತೆ
ಸ್ಫುಟದಿ ಬರೆಯುವಳೆಲ್ಲ ಬೆರಗು ಮೂಡಿಸುವಂತೆ
ಕಾತರಿಸುತೋದುಗರು ಪಠಿಸುವಂತೆ
ಸತ್ಕಾರ್ಯ ಮಾಡುತಲಿ ಸತ್ಕರಿಸುತೆಲ್ಲರನು
ಕಷ್ಟವಡರಿದರೆ ಸಂತೈಸುವಾಕೆ
ಮಾತೃ ವಾತ್ಸಲ್ಯದಲಿ ಮೀರಿಸುವಳೆಲ್ಲರನು
ವಿಶ್ವ ಮಾನವ ತತ್ವ ಬೆಳಸಿದಾಕೆ
ಬರಿನೋವು ನುಂಗುತಲಿ ನಗುವ ಮೊಗವನೆ ಸೂಸಿ
ಹಸಿರುಟ್ಟ ಬುವಿಯಂತೆ ಹೊಳೆಯುವಾಕೆ
ಗರ್ವವಿಲ್ಲದೆ ದಿನವು ದಾನ ಧರ್ಮದಿ ನಡೆದು
ಬಾಳ ಸಾಗಿಸುವಾಗ ಧೇನಿನಂತೆ.
- ಚನ್ನಕೇಶವ ಜಿ ಲಾಳನಕಟ್ಟೆ
