ಸಫ್ದರ್ ಹಷ್ಮಿ – ಬಾದಲ್ ಸರ್ಕಾರ್ ನೆನಪಿನ ರಾಜ್ಯ ಮಟ್ಟದ ಬೀದಿ ನಾಟಕೋತ್ಸವ ಇತ್ತೀಚಿಗೆ ಗಾಂಧಿ ಕುಟೀರ, ಚಿತ್ರಕಲಾ ಪರಿಷತ್ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು, ರಂಗ ನಿರ್ದೇಶಕರಾದ ಕಿರಣ್ ಭಟ್ ಅವರು ಬೀದಿ ನಾಟಕೋತ್ಸವದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ …
ಒಂದನ್ನುಒತ್ತಿ ಎರಡನ್ನಾದರೂಒತ್ತಿ
ಶಿವಮೊಗ್ಗ ಸಮುದಾಯದ ಬೀದಿ ನಾಟಕವಿದು. ಇತ್ತೀಚಿಗೆ ನಿರಂತರವಾಗಿ ನಡೆಯಿತ್ತಿರುವ ಸೈಬರ್ ಅಪರಾಧಗಳು ಮತ್ತು ಅವುಗಳಿಂದ ಬಚಾವಾಗುವ ಉಪಾಯಗಳ ಕುರಿತು ಸಾರ್ವಜನಿಕರನ್ನು ಎಚ್ಚರಿಸುವ ಪ್ರಯತ್ನ. ಸೈಬರ್ ಕಳ್ಳನೊಬ್ಬ ನಡೆಸುವ ಕರಾಮತ್ತುಗಳ ಸುತ್ತ ಹೆಣೆದ ಪುಟ್ಟ ಕಥೆ.
ಆಶಯಗಳನ್ನು ತಲುಪಿಸುವಸಲ್ಲಿ ಸಫಲವಾಯಿತು.
ರಚನೆ, ನಿರ್ದೇಶನ : ಡಾ.ಲವ ಜಿ ಆರ್.
ಕತ್ತೆ ಪುರಾಣ
ಹೊಸಪೇಟೆಯ ‘ಬಹುತ್ವ’ ದ ಬೀದಿ ನಾಟಕವಿದು.ಬ್ರಜೇಶ್ ಶರ್ಮರ ಹಿಂದಿ ನಾಟಕದ ಎಳೆ ಯೊಂದನ್ನು ಇಟ್ಟುಕೊಂಡು ಪ್ರೊ ಬಿ ಗಂಗಾಧರಮೂರ್ತಿ ಯವರು ಕನ್ನಡಕ್ಕೆ ಆ ಅನುವಾದಿಸಿದ್ದು.ವರ್ತಮಾನದ ಭಾರತದ ಸಮಾಜೋ ರಾಜಕೀಯ ಸ್ಥಿತಿಗಳನ್ನು ವಿಮರ್ಶೆಸುತ್ತ ಸಾಗುವ ನಾಟಕ,ನಾಯಕನೊಬ್ಬನ ಸುಳ್ಳು,ಕಪಟ,ಮಾಧ್ಯಮ ಶೋಕಿಗಳನ್ನು ವಿಡಂಬಿಸುತ್ತ ಅಮೇರಿಕಾದ ಸುಂಕದ ನೀತಿ ಯನ್ನೂ ಕಿಚಾಯಿಸುತ್ತ ಜಾಗತಿಕವಾಗುತ್ತದೆ ಅದೇ ಹೊತ್ತಿಗೆ ಇತ್ತೀಚಿಗೆ ನಡೆದ ಮರ್ಯಾದೆಗೇಡು ಹತ್ಯೆಯ ಕುರಿತೂ ಮಾತಾಡುತ್ತದೆ. ರಂಗ ಚಲನೆಗಳು, ಪ್ರಾಪ್ ಗಳ ಜಾಣತನದ ಬಳಕೆ, ಹಾಡುಗಳು,ಮಾತುಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗುವ ಈ ನಾಟಕ ನಾನು ಇತ್ತೀಚಿಗೆ ನೋಡಿದ ಒಳ್ಳೆಯ ಬೀದಿ ನಾಟಕಗಳಲ್ಲೊಂದು.
ನಿರ್ದೇಶಕರು : ಡಾ.ಸಹನಾ ಪಿಂಜಾರ್
****
ಪಾಪ ನಿವೇದನೆ
ಬೆಂಗಳೂರು ಸಮುದಾಯದ ನಾಟಕ ಇದು.ಡಾ ರಾಜಪ್ಪ ದಳವಾಯಿ ಯವರು ರಚಿಸಿದ ಈ ನಾಟಕ ಮೀಸಲಾತಿಯ ಇತಿಹಾಸವನ್ನು ಹೇಳುತ್ತ ಹೇಳುತ್ತ ಅದರ ರಾಜಕೀಯದ ಕುರಿತೂ ಚರ್ಚಿಸುತ್ತದೆ. ಪ್ರಸ್ತುತ ಸಂದರ್ಭದಲ್ಲಿ ತುಂಬಾ ಚರ್ಚೆಯಲ್ಲಿರುವ ವಿಷಯವಿದು.
ನಿರ್ದೇಶಕರು: ಉದಯ ಸೋಸಲೆ.
ತಂಡವೇ ತಿಳಿಸಿದಂತೆ ಒಂದೇ ದಿನದ ಅವಧಿಯಲ್ಲಿ ಸಿದ್ಧವಾದ ನಾಟಕವಾದರಿಂದ ಪ್ರಾರಂಭಿಕ ತೊಡಕುಗಳಿವೆ. ನಾಟಕದಲ್ಲಿ ಉಪಯೋಗಿಸಿದ ಬಿದಿರಿನ ಪ್ರಾಪ್ಸ್ ಬರೇ ಅಲಂಕಾರವಾಗದೆ ಬೇರೆ ರೀತಿಯಲ್ಲಿ ಬಳಸುವ ಬಗ್ಗೆ ಯೋಚಿಸಬಹುದೇನೋ. ಇನ್ನೊಂದಿಷ್ಟು ರಿಹರ್ಸಲ್ ಗಳಾದರೆ ಒಳ್ಳೆಯ ಪ್ರದರ್ಶನಗಳಗಬಹುದು.
****
ಫಾರ್ ಸೇಲ್
ಹಷ್ಮೀ ಥೀಯೇಟರ್ ಫೋರಮ್ ನ ಈ ನಾಟಕದ ರಚನೆ,ನಿರ್ದೇಶನ:ಡಾ.ಟಿ ಎಚ್ ಲವಕುಮಾರ್. ಮೂಲ ನಿವಾಸಿಗಳನ್ನು ಬಲಾತ್ಕಾರವಾಗಿ ಹಿಂಸಿಸಿ ಹೊರಹಾಕುತ್ತ,ಅವರ ಬದುಕಿಗೆ ಕೊಳ್ಳಿಯಿಡುತ್ತ ಅವರ ಅಸ್ತಿಯನ್ನು ‘ಧಣಿ’ ಗಳಿಗೆ ಮಾರುವ ಹಿನ್ನೆಲೆಯ ಈ ನಾಟಕ ಸಾಂಕೇತಿಕವಾಗಿ ದೇಶವೇ ಕೆಲವರ ಕೈಗೆ ಹೋಗುತ್ತಿರುವ ಅಪಾಯವನ್ನುಹೇಳುತ್ತ ಹೋಗುತ್ತದೆ. ಅಲ್ಲಲ್ಲಿ ಹಳೆಯ ‘ಹೋರಾಟದ ಹಾಡುಗಳನ್ನು’ ಬಳಸಿಕೊಳ್ಳುತ್ತ ಕಟ್ಟಿದ ಈ ನಾಟಕ ಬಹು ಭಾಷೆಯದ್ದು. ಇದೂ ವಿಶೇಷವೇ. ಆ ಮೂಲಕ ನಾಟಕ ಸಾರ್ವತ್ರಿಕವೂ ಆಗಿಬಿಡುತ್ತದೆ.
****
ಹತ್ಯೆ
ವಸ್ತುವಿನ ದೃಷ್ಟಿಯಿಂದ ತುಂಬಾ ವಿಶಿಷ್ಟವಾದ ನಾಟಕ ಇದು. ಯುವ ಜೀವಗಳ ಆತ್ಮಹತ್ಯೆಗೆ ಸಂಬಂಧಿಸಿದ್ದು.ಯಮರಾಜ ಚಿತ್ರಗುಪ್ತರ ನಡುವಿನ ಚರ್ಚೆ ಯ ಹಿನ್ನೆಲೆಯಲ್ಲಿ ಎರಡು ಮೂರು ಕಥೆಗಳ ಮೂಲಕ ಯುವ ಜನರ ಆತ್ಮಹತ್ಯೆಗೆ ಕಾರಣ ಹುಡುಕುತ್ತ ಪರಿಹಾರಗಳನ್ನೂ ಕಂಡುಕೊಳ್ಳುವ ಪ್ರಯತ್ನ ಇದು.ರಂಗ ಚಲನೆಗಳು ಗಮನಾರ್ಹವಾಗಿದ್ದವು.
ಎಲ್ಲ ನಾಟಕಗಳಲ್ಲಿ ಕಂಡು ಬಂದದ್ದು ಯುವ ಜನರು ತೋರಿದ ಉತ್ಸಾಹ, ರಂಗ ಪ್ರೀತಿ ಮತ್ತು ತೊಡಗಿಕೊಳ್ಳುವಿಕೆ. ಮೇಲಿಂದ ಮೇಲೆ ನಾಟಕಗಳನ್ನು ನೋಡಿದಾಗ ಅನಿಸಿದ್ದು, ಐ ಕೆ ಬೋಳುವಾರ್ ಹೇಳಿದಂತೆ ಬೀದಿ ನಾಟಕಗಳ ವಸ್ತ್ರಲಂಕಾರದ ವಿಷಯದಲ್ಲಿ ಈಗಿರುವ ‘ಯುನಿಫಾರ್ಮ್ ’ ನ ಆಚೆ ಯೋಚಿಸುವದು ಒಳ್ಳೆಯದೇನೋ ಎನಿಸಿತು.ಉದಾ: ತಕ್ಷಣ ಬದಲಾಯಿಸಬಲ್ಲ ಪಾತ್ರಕ್ಕೊಪ್ಪುವ ಸರಳ ಉಡುಪು.
ಹಾಗೇ ಹಿಂಸೆಯ ದೃಶ್ಯಗಳನ್ನು ವಿನ್ಯಾಸಗೊಳಿಸುವಾಗ ಈ ನಾಟಕಗಳನ್ನು ಕೆಲವು ಸಲ ಹುರು ಬುರುಕಾದ ಬೀದಿಗಳಲ್ಲೂ ಅಭಿನಯಿಸ ಬೇಕಾಗಬಹುದು ಎನ್ನುವದನ್ನೂ ನೆನಪಿಟ್ಟುಕೊಳ್ಳಬೇಕು.
‘ಅಭಿನಯ ತರಂಗ’ ಈ ನಾಟಕದ ರಚನೆ, ನಿರ್ದೇಶನ: ಯೋಗೇಶ್ ಸಿ.
- ಕಿರಣ ಭಟ್ – ರಂಗನಿರ್ದೇಶಕರು, ನಟರು, ಹೊನ್ನಾವರ.
