ವಾಸ್ತವದಲ್ಲಿ ಇರುವ ನಿಜ ಅಥವಾ ಸತ್ಯದ ಅರಿವಾಗದೆ ನಮ್ಮ ಮನಸ್ಸಿನಲ್ಲಿ ಮೂಡುವ ನಂಬಿಕೆಯ ದಾಸರಾಗಿ ಜೀವನದಲ್ಲಿ ಸಾಕಷ್ಟು ಕಷ್ಟ – ನಷ್ಟ, ನೋವು – ಕಣ್ಣೀರಿಗೆ ನಮಗೆ ನಾವೇ ಆಮಂತ್ರಣ ನೀಡಿಕೊಳ್ಳುವುದೇ ಮನುಷ್ಯರ ಬದುಕು. – ಚಂದನ್, ತಪ್ಪದೆ ಮುಂದೆ ಓದಿ…
ನಮಗೆ ನಾವೇ ನಿಜವನ್ನು ಅರಿಯದೆ, ಸತ್ಯದ ಅನ್ವೇಷಣೆ ಮಾಡದೆ ಕುರುಡಾಗಿ ನಿಂತು ಎಲ್ಲವನ್ನೂ ನಮ್ಮ ಮನಸ್ಸಿನಿಂದ ಅರಿಯುತ್ತೇವೆ. ಮೆದುಳಿನಲ್ಲಿ ಆಲೋಚನೆಗೆ ಎಡೆ ಮಾಡಿಕೊಡದೆ ಹೃದಯವಂತಿಕೆ ಮೆರೆಯುವ ಭರದಲ್ಲಿ ನಮ್ಮ ಜೀವನದಲ್ಲಿ ನಮಗೆ ನಾವೇ ಕೆಲವೊಮ್ಮೆ ಗುಂಡಿ ತೋಡಿಕೊಂಡುಬಿಡುತ್ತೇವೆ.
ಎಲ್ಲರೂ ನಮ್ಮಂತಯೇ, ನಮ್ಮಲ್ಲಿ ಇರುವಂತೆಯೇ ಎಲ್ಲರಲ್ಲಿಯೂ ಒಂದೇ ರೀತಿಯ ಭಾವನೆಗಳಿರುತ್ತವೆ. ನಾವು ಅರ್ಥ ಮಾಡಿಕೊಂಡಂತೆಯೇ ಎಲ್ಲರೂ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ ಅಂತ ಮನಸ್ಸು ನಮ್ಮ ದಾರಿ ಕೆಡಿಸಿ, ನಮ್ಮನ್ನು ನೋವಿನ ಕೂಪಕ್ಕೆ ತಳ್ಳಿ ಬಿಡುತ್ತದೆ. ಕೊನೆಗೆ ಯಾರೂ ಇಲ್ಲದ ಅನಾಥರಂತೆ ಒಂಟಿಯಾಗಿಸಿ ಬಿಡುತ್ತದೆ.
ಕೊನೆಗೆ ಸತ್ಯದ ಅರಿವಾಗುವ ಹೊತ್ತಿಗೆ, ವಾಸ್ತವದಲ್ಲಿ ಇರುವ ಸತ್ಯ ಅಥವಾ ನಿಜ ಅನ್ನೋದು ನಮಗೆ ಅರಿವಾಗುವ ಹೊತ್ತಿಗೆ ಮನಸ್ಸು ಹುಚ್ಚು ಹಿಡಿದಂತಾಗಿ ಆಲೋಚಿಸುವ ಅಥವಾ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿಯಿಂದ ಎಂದೋ ದೂರವಾಗಿ ಬಿಟ್ಟಿರುತ್ತದೆ. ಭರವಸೆಯಿಲ್ಲದ ಬದುಕಿಗೆ ಇದುವೇ ಮೂಲ ಕಾರಣ.
ಮನಸ್ಸಿನ ಮಾತಿಗೆ ಮರುಳಾಗುವ ಮುನ್ನ ವಾಸ್ತವದಲ್ಲಿನ ಸತ್ಯದ ಅರಿವಾಗಬೇಕು. ಮನಸ್ಸಿನಲ್ಲಿ ಆಲೋಚಿಸಿ ಸರಿ – ತಪ್ಪುಗಳ ಹಾಗು ಪ್ರತಿಯೊಂದು ವಿಷಯದಲ್ಲಿಯೂ ಯಾವುದು ನಿಜ ಅಥವಾ ಯಾವುದು ಸುಳ್ಳು ಎಂಬುದರ ಸ್ಪಷ್ಟತೆ ಪಡೆದುಕೊಳ್ಳಬೇಕು. ಬಾಯಿಂದ ಹೊರಡುವ ಪ್ರತಿ ಮಾತು, ನೀಡುವ ಪ್ರತಿಯೊಂದು ಭಾಷೆ – ವಾಗ್ದಾನ ನಿಜವಾಗಲ್ಲ. ನಿಜವಾಗುವ ಹಂಬಲ ಹಾಗು ಭ್ರಮೆಯಲ್ಲಿ ಅದು ಸಾಧ್ಯವಾಗುವುದೋ ಅಥವಾ ಬರೀ ಮಾತುಗಳೋ ಅಂತಲೂ ಆಲೋಚಿಸದೆ ನಂಬುವುದೇ ನಾವು ಮಾಡುವ ತಪ್ಪುಗಳು.
ಸ್ವಲ್ಪ ತಾಳ್ಮೆಯಿಂದ, ಸಮಯ ನೀಡಿ ಆಲೋಚಿಸಿದರೆ ಎಲ್ಲವೂ ಸ್ಪಷ್ಟವಾಗಿ ಅರ್ಥವಾಗುತ್ತದೆ. ಸ್ಪಷ್ಟತೆಯಿಂದ ಕಾಣುತ್ತದೆ. ಆಗ ನಮ್ಮ ನಿಲುವುಗಳು ಹಾಗು ನಿರ್ಧಾರಗಳಲ್ಲಿ ಸರಿ – ತಪ್ಪುಗಳ ಲೆಕ್ಕಾಚಾರ ತಾನಾಗಿಯೇ ಸಿಗುತ್ತೆ.
- ಚಂದನ್
