‘ಒಡಲ ಕುಡಿ’ ಕವನ – ರಶ್ಮಿ ಪ್ರಸಾದ್

ನನ್ನಯ ರೂಪ ಗುಣಾವಗುಣಗಳ ಪಡಿಯಚ್ಚು, ಮುದ್ದು ನುಡಿ ಮುಗ್ಧ ಸ್ನಿಗ್ಧ ನಗೆ ಬೆಲ್ಲದಚ್ಚು…ಕವಿಯತ್ರಿ ರಶ್ಮಿ ಪ್ರಸಾದ್ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ಕರುಳ ಬಂಧದ ನನ್ನೊಡಲ ಬಳ್ಳಿ ಇವಳು
ನನ್ನಯ ಜೀವ-ಜೀವನದ ಮುದ್ದು ಮಗಳು
ನನ್ನ ತನು-ಮನದ ಹಾವಭಾವಗಳ ತಿರುಳು
ನನ್ನ ಅಧರಗಳ ಚಿರ ಚಿರಂತನ ಮುಗುಳು

ಬಯಸಿ ಬೇಡಿ ಪಡೆದ ಮುತ್ತಿನಂತಹ ಬಾಲೆ
ನವಮಾಸ ಗರ್ಭಗುಡಿ ಬೆಳಗಿದ ದೀಪಮಾಲೆ
ಇವಳ ಜನನದೊಂದಿಗೆ ನನಗೂ ಪುನರ್ಜನ್ಮ
ಇವಳಿಂದ ಬಾಳಲಿ ತೀರದ ಸಂತಸ ಸಂಭ್ರಮ

ನನ್ನಯ ರೂಪ ಗುಣಾವಗುಣಗಳ ಪಡಿಯಚ್ಚು
ಮುದ್ದು ನುಡಿ ಮುಗ್ಧ ಸ್ನಿಗ್ಧ ನಗೆ ಬೆಲ್ಲದಚ್ಚು
ನನ್ನ ಮಡಿಲ ಬೆಳದಿಂಗಳಾಗಿಸಿದ ಋತು ಗಾನ
ಅನುಕ್ಷಣ ಆನಂದ ಅನುಭಾವದ ಭಾವಯಾನ

ಒಮ್ಮೊಮ್ಮೆ ತಾಯಿ ಅವಳೋ ನಾನೋ ವಿಸ್ಮಯ
ಆ ಮೋಡಿ ಗಾರುಡಿಯಲಿ ಎಲ್ಲ ಅಯೋಮಯ
ಇವಳಾಟ ಮಾಟಕೆ ಮೀಸಲು ನನ್ನೆಲ್ಲ ಸಮಯ
ಮಗಳಲ್ಲ ಇವಳು ನನ್ನಬಾಳ ನಿತ್ಯಸತ್ಯ ಸೌಭಾಗ್ಯ


  • ರಶ್ಮಿ ಪ್ರಸಾದ್ (ರಾಶಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading