ಪ್ಯಾರಾಲಿಂಪಿಕ್ಸ್’ನಲ್ಲಿ ಭಾರತವನ್ನು ಪ್ರತಿನಿಧಿಸಿದ ರಕ್ಷಿತಾ ರಾಜು ಅವರ ಸಾಧನೆಯ ಕುರಿತು ಲೇಖಕರಾದ ಬಾಣಾವರ ಶಿವಕುಮಾರ್ ಅವರು ಓದುಗರಿಗೆ ಪರಿಚಯಿಸಿದ್ದಾರೆ, ತಪ್ಪದೆ ಮುಂದೆ ಓದಿ…
ಮಲೆನಾಡಿನ ಮಡಿಲಿನಲ್ಲಿ ಹುಟ್ಟಿದ ಪ್ರತಿಭೆಗೆ, ಬಡತನ, ಅಂಧತ್ವ, ಅನಾಥ ಪ್ರಜ್ಞೆ ಇವ್ಯಾವುದೂ ಸಾಧನೆಗೆ ಅಡ್ಡಿಯಾಗಲಿಲ್ಲ. ಅಂಧತ್ವವೊಂದೇ ತಮ್ಮ ಸಮಸ್ಯೆ,ಅದನ್ನೇ ಮೆಟ್ಟಿ ಓಡಲು ನಿರ್ಧರಿಸಿದ ರಕ್ಷಿತಾ ರಾಜು ಈಗ ಪ್ಯಾರಾಲಿಂಪಿಕ್ಸ್’ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸಾಧಕಿ. ಈ ವರ್ಷದ ಖೇಲೋ ಇಂಡಿಯಾದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.
ಮೂಡಿಗೆರೆ ತಾಲೂಕು ಬಾಳೂರು ಸಮೀಪದ ಗುಡ್ನಹಳ್ಳಿಯ ರಕ್ಷಿತಾ ರಾಜು ಅವರಿಗೆ ಹುಟ್ಟಿನಿಂದಲೇ ಅಂಧತ್ವ ಇತ್ತು. ಹುಟ್ಟಿದ ಎರಡನೇ ವರ್ಷಕ್ಕೆ ತಾಯಿ, ಹತ್ತನೇ ವರ್ಷಕ್ಕೆ ತಂದೆಯನ್ನು ಕಳೆದುಕೊಂಡರು. ಮಾತು ಬಾರದ, ಕಿವಿಯೂ ಕೇಳಿಸದ ಅಜ್ಜಿ ಲಲಿತಮ್ಮರೊಂದಿಗೆ ಬೆಳೆದರು.
ಎಲ್ಲಾ ನೋವುಗಳನ್ನು ನುಂಗಿ ಬೆಳೆದ ರಕ್ಷಿತಾ ಅವರಿಗೆ ಶಿಕ್ಷಕಿ ಸಿಂಥಿಯಾ ಫೈಸ್ ಮೊದಲ ಮಾರ್ಗದರ್ಶಕರು. ಅವರ ಸಲಹೆಯಂತೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿರುವ ಆಶಾಕಿರಣ ಅಂಧ ಮಕ್ಕಳ ಶಾಲೆಗೆ ಸೇರಿದರು. ಬಳಿಕ ಅವರಿಗೆ ಅವಕಾಶಗಳು ತೆರೆದುಕೊಳ್ಳುತ್ತಾ ಹೋದವು.

ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಓದಿನ ಜೊತೆಯಲ್ಲೇ ಕ್ರೀಡೆಯಲ್ಲಿ ತೊಡಗಿಸಿಕೊಂಡರು. ಅಲ್ಲಿ ಶವಾದ್ ಎಂಬ ಹಿರಿಯ ವಿದ್ಯಾರ್ಥಿ ಅಂಧರ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ಅವರು ಇವರ ಪ್ರತಿಭೆಯನ್ನು ಗುರುತಿಸಿದರು. ಶವಾದ್ ಅವರಿಗೆ ರಾಹುಲ್ ಅವರು ಗೈಡ್ ರನರ್ ಕೂಡ ಇದ್ದರು. ಅವರೇ ರಕ್ಷಿತಾ ಅವರನ್ನು ಗುರುತಿಸಿ ಬೆಂಗಳೂರಿಗೆ ಕರೆದೊಯ್ದರು. ಅಲ್ಲಿಂದ ರಕ್ಷಿತಾ ಅವರ ಜೀವನದ ದಿಕ್ಕು ಬದಲಾಯಿತು.
‘ಡೆಲ್ಲಿ ನ್ಯಾಷನಲ್ಸ್’ ನಲ್ಲಿ ೪೦೦ಮೀ. ಓಟದಲ್ಲಿ ಚಿನ್ನದ ಪದಕ ಗಳಿಸಿದರು. ನಂತರ ೧೫೦೦ಮೀ. ಓಟ ಆಯ್ಕೆ ಮಾಡಿಕೊಂಡರು. ರಾಹುಲ್ ಅವರು ಗೈಡ್ ರನ್ನರ್ ಜೊತೆಗೆ ಕೋಚ್ ಆಗಿ ಈ ಪ್ರತಿಭೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ರಕ್ಷಿತಾ ಮೊದಲ ಬಾರಿಗೆ ೨೦೧೬ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಅಂಧ ಮಕ್ಕಳ ಕ್ರೀಡಾಕೂಟದಲ್ಲಿ ೪೦೦ಮೀ ಓಟದಲ್ಲಿ ಗೆದ್ದು ಬೀಗಿದ್ದರು. ಏಳು ವರ್ಷಗಳಿಂದ ಅವರು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ೨೦೨೨ ರಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ, ೨೦೨೩ರಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್’ಗಳಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾದರು. ಇದೇ ವರ್ಷ ಸೀನಿಯರ್ ವರ್ಲ್ಡ್ ಚಾಂಪಿಯನ್ ಶಿಪ್ಪ್’ನಲ್ಲಿ ಫೈಲ್’ನಲ್ಲಿ ಐದನೇ ಸ್ಥಾನ ಪಡೆದರು. ಫೈನಲ್’ಗೆ ತಲುಪಿದ ಮೊದಲ ಸ್ಪರ್ಧಿ ಎನಿಸಿಕೊಂಡರು.
- ಬಾಣಾವರ ಶಿವಕುಮಾರ್ – ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು
