ರುಡಾಲಿಗಳ ಸಮೂದಾಯ ಈ ಪಂಗಡಕ್ಕೆ ರಾಜ ಮಹಾರಾಜರ ಇತಿಹಾಸ ಇದೆ. ಶೋಕಾಚಾರಣೆ ಸಂದರ್ಭದಲ್ಲಿ ಈ ರುಡಾಲಿ ಎನ್ನುವ ಪಂಗಡದವರನು ಕರೆಯಿಸುತ್ತಾರೆ. ಅವರು ಉಳ್ಳಾಡಿಕೊಂಡು ಅಳುತ್ತಾರೆ. ರುಡಾಲಿ ಪಂಗಡದ ಕುರಿತು ಡಾ. ಕೃಷ್ಣವೇಣಿ. ಆರ್.ಗೌಡ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಏನಿದು ಹೆಸರಲ್ಲಿಯೇ ಏನೋ ಸೂಚಿಸುತ್ತದೆಯಲ್ಲ ಎನ್ನುತ್ತಾ ಹುಡುಕಿದ ಅರ್ಥಕ್ಕೆ ಸಿಕ್ಕದ್ದು ರಾಜಸ್ಥಾನದ ಒಂದು ಪಂಗಡ ಅದುವೇ “ರುಡಾಲಿ” ಎನ್ನುವ ಸಮೂದಾಯ. ಇದು ರಾಜಸ್ಥಾನದ ಸುತ್ತ ಮುತ್ತಲೂ ಅದರಲ್ಲೂ ಊರ ಹೊರಗಡೆ ಇರುವ ರುಡಾಲಿಗಳ ಸಮೂದಾಯ ಈ ಪಂಗಡಕ್ಕೆ ರಾಜ ಮಹಾರಾಜರ ಇತಿಹಾಸ ಇದೆ. ನಾಡಿಗೊಂದು ಸಂಪ್ರದಾಯ, ಸಂಸ್ಕೃತಿ, ಕಲೆ, ಆಚರಣೆಯ ಆವಿಭಕ್ತ ಕುಟುಂಬ ನಮ್ಮ ಭಾರತ ಮಾತೆ ನೀಡಿದ್ದಾಳೆ. ನಾವು ಸಂಪ್ರದಾಯಗಳ ಬಿಟ್ಟರೂ ಅವುಗಳು ನಮ್ಮನ್ನು ಬಿಡುವುದಿಲ್ಲ ಎನ್ನುವ ಭಾಷಾ ಪರಿಚಯದೊಳು ಕಂಡಿದ್ದೆ ಮತ್ತು ಕೇಳಿದ್ದು ಕೂಡ. ಆಚಾರ, ವಿಚಾರ, ಸಂಪ್ರದಾಯಗಳು ಜಾತಿಯೊಳು ಒಡಗೂಡಿ ರಾಜ್ಯದ ಇತಿಹಾಸ ಪುಟದೊಳು ಗಟ್ಟಿ ಚರಿತ್ರೆಯಾಗಿವೆ. ನಮ್ಮ ಭಾರತ ಜಾತ್ಯತೀತವಾಗಿ ಹೋರಾಡಿದರೂ ಕೊನೆಗೆ ಗೆಲ್ಲುವುದು ಜಾತಿಯ ಮೀಸಲಾತಿಗಳು.

ಫೋಟೋ ಕೃಪೆ :google
ರಾಜಸ್ಥಾನ ಎಂಬುದು ರಾಜರ ಆಸ್ಥಾನ. ಇಲ್ಲಿ ರಾಜ ಮಹಾರಾಜರುಗಳ ಮನೆಯಲ್ಲಿ ವ್ಯಕ್ತಿ ತೀರಿ ಹೋದಾಗ ಹತ್ತು ದಿನದ ಶೋಕಾಚಾರಣೆಗಾಗಿ ಈ ರುಡಾಲಿ ಎನ್ನುವ ಪಂಗಡದವರನು ಕರೆಯಿಸಿ ಅವರು ಕಪ್ಪು ಸೀರೆಯ ಧರಿಸಿ ಹತ್ತರಿಂದ ಹದಿನೈದು ಜನ ಮಹಿಳೆಯರು ಬಂದು ಜೋರಾಗಿ ಉಳ್ಳಾಡಿಕೊಂಡು ಅಳುತ್ತ , ಸತ್ತ ಮನೆಯ ಸಂತಾಪಕ್ಕೆ ಸಾಂತ್ವನ ಸೂಚಿಸುವುದು ಇವರ ಕೆಲಸ. ಇವರು ಹಾಗೆ ಅತ್ತರೆ ಮಾತ್ರ ಸತ್ತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುತ್ತದಂತೆ ಎನ್ನುವ ನಂಬಿಕೆ, ವಾಡಿಕೆ ಇದೆ.
ಹತ್ತು ದಿನದವರೆಗೂ ನಿರಂತರವಾಗಿ ಅಳುತ್ತಾರೆ. ಕಾರ್ಯ ಮುಗಿದಮೇಲೆ ರುಡಾಲಿಗಳು ಮನೆಗೆ ವಾಪಾಸ್ ಹೋಗುವಾಗ ಧವಸ , ಧಾನ್ಯ, ಕಾಳು, ಕಡಿ, ಒಂದಿಷ್ಟು ರೊಕ್ಕ ಕೊಟ್ಟು ಕಳಿಸುವುದು ಇಂದಿಗೂ ಆಚರಣೆಯಲ್ಲಿದೆ. ದಿನಾಲೂ ಇವರನ್ನು ಕರೆದೊಯ್ಯಲು ಒಂದು ಗಾಡಿ ಬರುತ್ತದೆ. ಅದರೊಳು ಮನೆಯ ಅಕ್ಕಪಕ್ಕದ ಹೆಂಗಸರೆಲ್ಲ ಕಪ್ಪು ಸೀರೆಯನು ಮುಖ ಕಾಣದ ಹಾಗೆ ಹೊದಿಸಿಕೊಂಡು ಬರುವುದು ಮತ್ತು ಉಳ್ಳಾಡಿಕೊಂಡು ಅಳುವುದು ಇವರ ಕೆಲಸ.
ನೋಡಿ ಕಪ್ಪು ಬಟ್ಟೆ ಒಂದು ಕಡೆ ಹೋರಾಟದ ಸಂಕೇತವಾದರೆ, ಇಲ್ಲಿ ಕಪ್ಪು ಬಟ್ಟೆ ಅಂತರಂಗದ ರೋಧನೆಯನ್ನು ಹೊರ ಹಾಕುತ್ತದೆ. ಈಗಲೂ ರಾಜಸ್ಥಾನದ ಕೆಲ ಹಳ್ಳಿಗಳಲ್ಲಿ ಈ ಸಮೂದಾಯವು ಇನ್ನೂ ಇವೆ. ಈ ರುಡಾಲಿಗಳು ಸಂತಾಪದ ಅಳುಕನ್ನು ತಮ್ಮ ಅಂತರಾಳದ ಕಣ್ಣೀರ ಕೂಗಿನಿಂದ ಹೊರಹಾಕಿ ಮಹಾರಾಜರ ಮನ ಮತ್ತು ಮನೆತನವನು ಹಗುರಗೊಳಿಸುವುದು ಈ ಮಹಿಳೆಯರ ವಾಡಿಕೆಯಾಗಿದೆ. ಮತ್ತು ಈ ದೇಶದಲ್ಲಿ ವಾಡಿಕೆ ಇಲ್ಲದೇ, ಐತಿಹ್ಯ, ನಂಬಿಕೆ, ರೀತಿ ರಿವಾಜುಗಳು ಇನ್ನು ಜಾನಪದದ ಜೀವಂತ ಪಳೆಯುಳಿಕೆಗಳಾಗಿವೆ.

ಫೋಟೋ ಕೃಪೆ : google
ಈ ರುಡಾಲಿ ಎನ್ನುವ ಸಿನಿಮಾವನ್ನು ರಾಖಿ ಗುಲಜಾರ್ ಹಾಗೂ ಡಿಂಪಲ್ ಕಪಾಡಿಯಾ, ರಾಜ್ ಬಬ್ಬರ್ ತಾರಾಗಣದಲ್ಲಿ ಇದ್ದಾರೆ. ಲತಾ ಮಂಗೇಷ್ಕರ್ ಅವರು”ಹೊ ಯಾರಾ ಸಿಲಿ ಸಿಲಿ ವಿರಹಾಕಿ ರಾತ್ ಅದುರಾ” “ಎನ್ನುವ ಹಾಡು ಕೂಡಾ ತುಂಬಾ ಸಾಕಷ್ಟು ಖ್ಯಾತಿ ಹೊಂದಿತ್ತು.
ಸತ್ತ ಶವದ ಎದುರು ಕೆಲವರು ತಲೆ ಕೂದಲು ಬಿಚ್ಚಿಕೊಂಡು ಎದೆ ಎದೆ ಬಡಿದು ಕೊಳ್ಳುತ್ತಾ ಅಳುತ್ತಾರೆ. ಇನ್ನೊಬ್ಬರು ನಾಟಕೀಯವಾಗಿ ಕಣ್ಣೀರು ಸುರಿಸುವರು. ಮತ್ತೊಬ್ಬರು ಇನ್ನೊಬ್ಬರ ಮನಸು ಚುಚ್ಚುವ ಹಾಗೆ ವ್ಯಂಗ್ಯವಾಗಿ ಆಡಿಕೊಂಡು ಅಳುವರು. ಕೆಲವರು ರಾಜಕೀಯವಾಗಿ ಶ್ರದ್ದಾಂಜಲಿ ಸಲ್ಲಿಸುವರು. ಕೆಲವರು ಮೌನವಾಗಿ ಸಂತಾಪ ಸೂಚಿಸುತ್ತಾರೆ. ಏನೇ ಮಾಡಿದರೂ ಸತ್ತ ಶವ ಎದ್ದು ಬರೋಲ್ಲ. ಆದರೂ ಈ ಅಳುವ ನಾಟಕ ತಪ್ಪಿದ್ದಲ್ಲ. ಮೊದಲಿನ ಕಾಲದಲ್ಲಿ ಬಾಂಧವ್ಯ ಬೆಸುಗೆಗೆ ಅಂತಾರಾಳದಿಂದ ಕಣ್ಣೀರು ಹೊರ ಬರುತ್ತಿತ್ತು, ಮನಸು ಹಗುರಾಗಿ ಕಣ್ಣು ಸ್ವಚ್ಛವಾಗುತಿತ್ತು.
ಸಿನಿಮಾದಲ್ಲಿ ಮುತ್ತೈದೆ ಸಾವು ಬಂದಾಗ ಶವಕ್ಕೆ ಸ್ನಾನ ಮಾಡಿಸಿ, ಆರಿಸಿಣ ಕುಂಕುಮ ಹಚ್ಚುವಾಗ ಸಿನಿಮಾದ ಥಿಯೇಟರ್ ಗಳಲ್ಲಿ ಕಣ್ಣೀರ ಕೋಡಿ ಹರಿಯುತ್ತಿತ್ತು. ಅಥವಾ ಟಿವಿ ನೋಡುವಾಗ ಪಾತ್ರಧಾರಿಗಳ ಗಂಗಾ ಜಲ ಹರಿವ ಮುಂಚೆಯೇ ನಮ್ಮ ತಾಯಂದಿರು ಅಳುವುದು ನಾವೆಲ್ಲ ನೋಡಿದ್ದೇವೆ. ಆದರೆ ಈಗಿನ ಜಾಹೀರಾತಿನೊಳು ಸಾಯೋದು ಕೂಡಾ ಕಾಮಿಡಿಯ ಭಾಗವಾಗಿದೆ. ಲೈಫ್ ಇನ್ಸೂರೆನ್ಸ್ ಪಾಲಿಸಿ. Cm ಮತ್ತು perk ಜಾಹೀರಾತು ಮೂಲಕ ಈ ದಿನಗಳಲ್ಲಿ ಕಾಣುತ್ತೇವೆ.
ಆದರೆ ಇಲ್ಲಿ ರಾಜಸ್ಥಾನದಲ್ಲಿ ರಾಜ ಮನೆತನಗಳಲ್ಲಿ ಕಪ್ಪು ಬಟ್ಟೆಯ ವ್ಯಕ್ತಿತ್ವ ತುಂಬಾ ದೊಡ್ಡದು. ಈ ರುಡಾಲಿ ಮಹಿಳೆಯರಿಗೂ ಭಾವನೆಗಳಿರುತ್ತವೆ, ಅವರು ಮನುಷ್ಯರೇ, ಆದರೆ ರೂಢಿಗತವಾದ ಬಂದ ಸಂಪ್ರದಾಯ ಮರೆಯುವ ಹಾಗಿಲ್ಲ. ಆದ್ದರಿಂದ ಈರುಡಾಲಿ ಮಹಿಳಾ ಸಂಪ್ರದಾಯ ಮಹತ್ವವಾದುದು. ಈ ದೇಶದಲ್ಲಿ ಹೆಣ್ಣೊಂದು ಜಾತಿ, ಗಂಡೊಂದು ಜಾತಿಯಾದರೂ ವಿವಿಧ ರೀತಿಯ ಜಾತಿಯನ್ನು ಒಳಗೊಂಡಿದೆ. ನಮ್ಮ ದೇಶ… ಈ ಕಣ್ಣೀರ ಸೊಗಡು ಭಾವನಾತ್ಮಕತೆಯ ಭವ್ಯತೆ ಸೂಚಿಸುತ್ತದೆ. ಯಾರ ಮುಂದೆ ಹೇಳಲಾಗದ ಅಳುಕನ್ನು ಮಾನವ ದೇವರ ಮುಂದೆ ಅತ್ತಾಗ ಮನವೆಲ್ಲ ಹಗುರಾಗಿರುತ್ತೆ. ಅಲ್ಲದೇ ಬರುವ ಕಣ್ಣೀರು ಯಾವ ಜಾತಿಯದು ಎಂದು ನೋಡದೇ ಕಣ್ಣ ಮೂಲಕ ಹೊರಬರುವುದು ಎಷ್ಟು ಸೋಜಿಗವಲ್ಲವೇ?.
- ಡಾ. ಕೃಷ್ಣವೇಣಿ. ಆರ್.ಗೌಡ
