ಪ್ರೀತಿಯೊಳಗೆ ನಂಬುಗೆಯನ್ನು ಕಳೆದುಕೊಳ್ಳಬಾರದು… ಕವಿ ಎಮ್ಮಾರ್ಕೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಸಲಿಗೆ ಇದ್ದರೂ ಮೀರಲಿಲ್ಲ, ಸರಹದ್ದನೆಂದಿಗೂ ಸಖಿ
ಬಳಿಗೆ ಇದ್ದರೂ ಜಾರಲಿಲ್ಲ, ಮೈಮನವೆಂದಿಗೂ ಸಖಿ
ಪ್ರೀತಿಯೊಳಗೆ ನಂಬುಗೆಯನ್ನು ಕಳೆದುಕೊಳ್ಳಬಾರದು
ಸ್ವಾತಂತ್ರ್ಯವಿದ್ದರೂ ಹಾರಲಿಲ್ಲ, ಬೇಲಿಯೆಂದಿಗೂ ಸಖಿ
ನೆಪವೊಡ್ಡಿ ನೆನಪಾಗುತಲಿವೆ, ಕಳೆದಂತ ಕ್ಷಣಗಳೆಲ್ಲವು
ಸನಿಹದಲ್ಲಿದ್ದರೂ ತಲುಪಲಿಲ್ಲ, ತೀರವನೆಂದಿಗೂ ಸಖಿ
ಎಲ್ಲವೂ ಪಾರದರ್ಶಕವಿದ್ದಲ್ಲಷ್ಟೇ ಪ್ರೀತಿಗೆ ಉಳಿಗಾಲ
ಪರದೆಯಿದ್ದರೂ ಮರೆಮಾಚಿಲ್ಲ, ಏನನ್ನೆಂದಿಗೂ ಸಖಿ
ಕುಂಬಾರನ ತಾಳ್ಮೆಗೆ ಮಾಡಿದ ಮಡಿಕೆಯೊಂದೇ ಸಾಕು
ಬೆಂದಿದ್ದರೂ ತೋರ್ಪಡಿಸಿಲ್ಲ, ಬೇಗೆಯನೆಂದಿಗೂ ಸಖಿ
- ಎಮ್ಮಾರ್ಕೆ
