ಸಂಸ್ಕೃತಿ ಇದು ಮಾನವನ ಬದುಕಿನ ಸಾಧನದ ಮುಖ್ಯ ನಾಡಿಯಾಗಿದೆ. ಈ ಶಬ್ದ, ಕೃತಿ ಸೃಷ್ಟಿಯಿಂದಲೇ ಸನಾತನ ಕಾಲದಿಂದಲೇ ಧರ್ಮವಾಗಿ ಬಂದಿದೆ. ಜೀವನದಲ್ಲಿ ಬರುವ ಪ್ರಶ್ನೆಗೆ ಉತ್ತರ ಮತ್ತು ರೋಗಕ್ಕೆ ಪರಿಹಾರ ಇವೆರಡು ಸಿಗುವುದು ಈ ಶಬ್ದದಿಂದ. ಲೇಖಕರಾದ ಸಂಧ್ಯಾ ಟಿ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಸಂಸ್ಕೃತಿ ಫಲದಿಂದ ನಮ್ಮ ಹುಟ್ಟು ಇರುವುದು. ಮುಂದೆ ನಾವು ಕಾಯಾ, ವಾಚಾ, ಮನಸಾ ಈ ಮೂರರಿಂದ ಮಾಡುವ ಕರ್ಮಗಳಿಂದ ಧರ್ಮ, ಅಧರ್ಮ ಎನ್ನುವ ಕವಚಗಳನ್ನು ಧರಿಸುತ್ತೇವೆ.
ವಿಶ್ವಾಸ ನಂಬಿಕೆಯಿಂದ ಧರ್ಮ ಭ್ರಮೆಯಿಂದ ಅಧರ್ಮ ಹುಟ್ಟುವವು. ದೇಹ ಜಡ ಅದರಲ್ಲಿರುವ ಅಗೋಚರವಾದ ಚೇತನಾ ಶಕ್ತಿ ಸತ್ಯ ಹಾಗೂ ಶಾಶ್ವತ ಇದು ಧರ್ಮದ ಸಂದೇಶ. ಭ್ರಮೆಯಲ್ಲಿ ಜಡ ಚೇತನ ಗೋಚರಿಸುವದಿಲ್ಲ, ಉನ್ಮಾದ ಹೆಚ್ಚಿರುವದು. ಮನುಷ್ಯರೆಂದ ಮೇಲೆ ಅಸ್ವತಂತ್ರರು ನೂರಕ್ಕೆ ನೂರು ಶುದ್ಧವಿರುವುದಿಲ್ಲ. ಆದರೂ ಮಾನವೀಯತೆಯ ಮೌಲ್ಯ ಅರಿಯಲು ವಿಶಿಷ್ಟವಾದ ಮನಸ್ಸು ಇದೆ. ಅದರಿಂದ ಪ್ರಶ್ನೆ ಉತ್ತರ ಪರಿಹಾರ ತಿಳಿದುಕೊಳ್ಳಲು ಪ್ರಯತ್ನಿಸುವುದು ಸಂಸ್ಕೃತಿ.
ಬದುಕಿನಲಿ ಯಾವುದೆ ಹುದ್ದೆ, ಸ್ಥಾನ ಇರಲಿ, ಯಾವುದೇ ಆಟ ಓದು ಮುಂತಾದ ಚಟುವಟಿಕೆ ಇರಲಿ ಅವು ಸರಾಗವಾಗಿ ನಡೆದು ಆನಂದ ಕೊಡಬೇಕೆಂದರೆ ಅಲ್ಲಿ ಪರಿಮಿತಿಯ ತತ್ವ ಇರಲೇಬೇಕು. ಅದರಂತೆ ನಡೆದರೆ ಸಂಸ್ಕೃತಿ ಎನಿಸಿ ಸಾಧನೆಯಾಗುವುದು. ಆನಂದತೃಪ್ತಿ ಸಿಗುವುದು. ಪರಿಮಿತಿ ಮೀರಿದರೆ ಆಗುವ ಉನ್ಮಾದದಿಂದ ಕೊಲೆ ಸುಲಿಗೆ, ಅಪಶಬ್ದ ಈ ಅಸಂಸ್ಕೃತಿಯಿಂದ ಪರಿಸರ ಹಾನಿಯಾಗುವುದು.
ಹೇಳುವುದು ಸುಲಭ ನಡೆಯುವುದು ತುಂಬಾ ಕಷ್ಟ ಈಗಿರುವ ವಾತಾವರಣದ ಪರಿಸ್ಥಿತಿಯಲ್ಲಿ ಇದು ಸಹಜ. ಆದರೂ ಪ್ರಯತ್ನಿಸಬೇಕು.”ಹರಿ ಕಾಣಲು ಹರ ಸಾಹಸ ಬೇಕು.ಇದು ಕೋವಿದರ ನುಡಿ. ಯಾಕೆಂದರೆ ಅಧ್ಯಾತ್ಮಿಕ ಸತ್ಕಾರ್ಯಕ್ಕೆ ಹರನ ಪೂರ್ಣ ಅನುಗ್ರಹಬೇಕು. ಎಲ್ಲ ಇಂದ್ರಿಯಗಳನ್ನು ನಿಗ್ರಹ ಮಾಡಿ ಶುದ್ಧವಾಗಲು ಹರನ ಪ್ರೀತಿ ಗಳಿಸಬೇಕು.ಮನುಷ್ಯನ ಕರ್ಮಗಳು ಸಮುದ್ರದಂತೆ ಹರೀತಾ ಇರುತ್ತವೆ. ಅಲೆಗಳಂತೆ ಫಲಗಳು ಅಪ್ಪಳಿಸುತ್ತ ಇರುತ್ತವೆ. ಪಾರ್ವತಿ ಪರಮೇಶ್ವರನ ಸಹಾಯದಿಂದ ಹರಿಯ ವ್ಯಾಪ್ತಿಯ ರಹಸ್ಯ ಸಿಗುವುದು.ಇದೇ ಸಂಸ್ಕೃತಿಯ ಮೂಲ ತತ್ವ.
ಹೀಗೆ ಧನಾತ್ಮಕ ಜಿಜ್ಞಾಸೆ ಇದ್ದಲ್ಲಿ ಕುರುಕ್ಷೇತ್ರವು ಧರ್ಮಕ್ಷೇತ್ರ ಆಗುವುದೆಂದು ಮಹಾಭಾರತ ರಾಮಾಯಣ ಗ್ರಂಥದಲ್ಲಿ ತಿಳಿಸುತ್ತದೆ.ಅದರಲ್ಲಿ ಜ್ಞಾನ ಜಿಜ್ಞಾಸೆ ತೋರಿಸಿದ್ದಾರೆ. ದೇಹದೊಳಗಿರುವ ಅನ್ನಮಯ ಕೋಶ,ಪ್ರಾಣಮಯ ಕೋಶ,ಮನೋಮಯ ಕೋಶ,ವಿಜ್ಞಾನಮಯ ಕೋಶ ಕೊನೆಯದು ಆನಂದಮಯ ಕೋಶ ಈ ಐದು ಕೋಶಗಳನ್ನು ಅನುಕ್ರಮವಾಗಿ ತಿಳಿಯುತ್ತ ಆನಂದಮಯ ಜೀವನಕ್ಕೆ ಸಂಸ್ಕೃತಿ ದೊರೆತು ಸಾರ್ಥಕ ಸಾಧನೆಯಾಲೆಂದು ಹಾರೈಸುತ್ತ ಈ ಚಿಕ್ಕ ಲೇಖನವನ್ನು ಮುಗಿಸುತ್ತೇನೆ.
ಭಾವನೆಗಳು ಮನ ತುಂಬಿದರೆ
ಕವನಗಳಾಗಿ ಬರುವವು ಅಕ್ಷರ ಧಾರೆ
ಭಾವ ಭಕ್ತಿಯ ಐಕ್ಯತೆಯ ತೆರೆ
ಕವಿಯ ಮನದ ಕಂಪಿನ ವಿಚಾರ ಧಾರೆ
ಸ್ವರ ವ್ಯಂಜನಗಳ ಮಧುರ ಸ್ಪಂದನ
ಸುಸ್ವರ ಪ್ರಚುರಮತಿ ಶಬ್ದಗಳ ಮಿಲನ
ಅಜ ನುಡಿಸಿದ ಹೃದಯ ಸ್ವರ ಸಾರ ಚಲನ
ನಿಜ ಗುರು ತಿಳಿಸಿದ ಸ್ವರಶುದ್ಧ ವಚನ
ಉಚ್ಚಸ್ವರ ಹೃಸ್ವಸ್ವರ ವಿಸ್ತಾರಸ್ವರ ಭೇದ
ಸುಸ್ವರ ಕವನರೂಪದಲಿ ಸ್ವರಾಭೇದ
ಹಾವಭಾವನೆಯಲಿ ತುಂಬಿದೆ ಜೀವ
ಸಾವಧಾನದಿ ನೋಡಿರಿ ಕಳೆವುದು ನೋವು
ರವಿ ನೀಡುವ ಬಾಳಿಗೆ ಬೆಳಕಿನ ಸ್ಪೂರ್ತಿ
ಕವಿ ತಿಳಿಸುವ ಬದುಕಿಗೆ ಭಾವನೆಯ ರೀತಿ
ಕಿವಿಗಿಂಪು ಮನಕೆ ತಂಪು ಭಾವತರಂಗ ಪ್ರತಿ
ಸವಿ ಭಾವ ಗುಚ್ಛವೆ ದೇಶೋದ್ಧಾರ ಪ್ರತತಿ
ದೇಶನಾಶವು ಭಾವನೆಯ ಶಬ್ದಮಾಲೆಯಿಂದ
ಸ್ವದೇಶವು ಮಾತರಿಶ್ವಾಂತರ್ಗತ ಹರಿಯಿಂದ
ಸಂದೇಶ ಜನಪ್ರತಿನಿಧಿಗಳ ಶುದ್ಧತೆಯಿಂದ
ಸುದೇಶವು ಜನರ ಮನದ ಭಾವನೆಯಿಂದ
- ಸಂಧ್ಯಾ ಟಿ
