“ಸಂಧ್ಯಾ ದೀಪ” ಕಾದಂಬರಿಗಾರ್ತಿ ರಜನಿ ಭಟ್ ಕಲ್ಮಡ್ಕ ಅವರ ಮೊಟ್ಟ ಮೊದಲನೆಯ ಕಾದಂಬರಿಯಾಗಿದ್ದು, ಈ ಪುಸ್ತಕದ ಕುರಿತು ಲೇಖಕರಾದ ರಾಘವೇಂದ್ರ ಇನಾಮದಾರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಲೇಖಕರ ನುಡಿಯೊಂದಿಗೆ ಆರಂಭವಾಗುವ “ಸಂಧ್ಯಾ ದೀಪ” ಕಾದಂಬರಿಯು ಲೇಖಕಿ ರಜನಿ ಭಟ್ ಅವರ ಮೊಟ್ಟ ಮೊದಲನೆಯ ಕೂಸು. ಅವರು ಚಿಕ್ಕಂದಿನಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾಗ ಅಡಗಿ ಕೊಳ್ಳುತ್ತಿದ್ದ ಅಜ್ಜನ ಮನೆಯ ಉಪ್ಪರಿಗೆಯ ನೆನಪು ಈ ಕಾದಂಬರಿ ಬರೆಯಲು ಸ್ಫೂರ್ತಿ ಆಯ್ತು ಅಂತ ಅವರೇ ಹೇಳಿದ್ದಾರೆ. ಕಥೆ ಹ್ಯಾಗೆ ಹುಟ್ಟಿತು ಅಂತ ತಿಳಿಯೋದು ಕೂಡ ಎಷ್ಟು ಚೆಂದ ಅಲ್ವಾ…?
ಇನ್ನೂ ಕಾದಂಬರಿ ಬಗ್ಗೆ ವಿಮರ್ಶೆ ಬರಿಯುವಷ್ಟು ಸಾಮರ್ಥ್ಯ ನನ್ನಲ್ಲಿ ಇಲ್ಲವಾದರೂ ನನ್ನ ಮಸ್ತಕಕ್ಕೆ ಹೊಳೆದದ್ದನ್ನು ಅಲ್ಪ ಸ್ವಲ್ಪ ಬರೆದಿದ್ದೇನೆ.
ಇಲ್ಲಿವರೆಗೂ ನಮ್ಮ ಕಥಾಗುಚ್ಛ, ಪ್ರತಿಲಿಪಿ, ಹಾಗೂ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಇವರ ಅನೇಕ ಬರಹಗಳು ಪ್ರಕಟಗೊಂಡಿದ್ದು ಈಗಷ್ಟೇ ಅವರು ಒಂದು ಹೆಜ್ಜೆ ಮುಂದೆ ಇಟ್ಟು ಸಂಧ್ಯಾ ದೀಪ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ನಿಮ್ಮುಂದೆ ಇಟ್ಟಿದ್ದಾರೆ. ಅವರಿಗೆ ಹೃದಯದಿಂದ ಅಭಿನಂದನೆಗಳನ್ನು ತಿಳಿಸುತ್ತಾ ಈ ಕಾದಂಬರಿ ಬಗ್ಗೆ ಸ್ವಲ್ಪ ಮಾತ್ರ ಬರೆದಿದ್ದೇನೆ.
(ಸಂಧ್ಯಾ ದೀಪ” ಕಾದಂಬರಿಗಾರ್ತಿ ರಜನಿ ಭಟ್ ಕಲ್ಮಡ್ಕ)
ಕಾದಂಬರಿ ಪೂರ್ತಿಯಾಗಿ ಕಾಲ್ಪನಿಕ ಆಗಿದ್ದರೂ ಕೂಡ ಅಲ್ಲಿರುವ ಬಹು ಮುಖ್ಯ ಪಾತ್ರ ಶಾಂಭವಿ ಟೀಚರ್ ಮಾತ್ರ ನಿಮ್ಮಲ್ಲಿ ಅಚ್ಚು ಒತ್ತಿದ ಹಾಗೆ ಉಳಿದು ಬಿಡುತ್ತಾರೆ.
ಸಂಜೆ ನಾಲ್ಕರ ಸಮಯ ಶಾಲೆಯ ಗಂಟೆ ಬಾರಿಸಿದೊಡನೆ ಮಕ್ಕಳು ಆಶಿಸ್ತಿನಿಂದ ಹೊರಡುವುದನ್ನು ನೋಡಿದ ಶ್ರೀನಿವಾಸರು, ಅಲ್ಲಿನ ಶಿಕ್ಷಕರ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಶಿಕ್ಷರೆಲ್ಲರೂ ತಮ್ಮ ತಪ್ಪಿಗೆ ತಲೆ ತಗ್ಗಿಸಿ ನಿಂತು ಕೊಳ್ಳುತ್ತಾರೆ.ಶ್ರೀನಿವಾಸರು ಸಾಮಾನ್ಯವಾಗಿ ಎಲ್ಲಾ ಶಿಕ್ಷಕರು ಹೋದ ಬಳಿಕವೇ ಜವಾನ ಅಯ್ಯಪ್ಪನೊಂದಿಗೆ ಹೊರ ಬಿಳುವರು. ಆದರೆ ಈ ದಿನ ಮಾತ್ರ ಅವರಿಗೆ ಮತ್ತೆಲ್ಲೋ ಕೆಲಸವಿರುವ ಕಾರಣ ತಾವಷ್ಟೇ ಹೊರಟಿದ್ದಾರೆ. ಆಗ ಜವಾನ ಅಯ್ಯಪ್ಪನನ್ನು ಕೂಗಿ, ” ದಯವಿಟ್ಟು ಏಳನೆಯ ತರಗತಿಯ ಬಾಗಿಲನ್ನು ತಪ್ಪದೇ ಹಾಕು” ಅಂತ ಹೇಳಿ ಹೋಗುತ್ತಾರೆ. ಜವಾನ ಅಯ್ಯಪ್ಪ ಪ್ರತಿ ದಿನವೂ ತಪ್ಪದೇ ಏಳನೆಯ ತರಗತಿ ಬಾಗಿಲನ್ನು ಹಾಕಿದ್ದಾಗಲೂ ಮಾರನೆಯ ದಿನ ಆ ತರಗತಿ ಮಾತ್ರ ತೆರೆದೇ ಇರುತ್ತದೆ ಇದು ಯಾಕೆ..? ಆ ಕೋಣೆಯೇ ಹಾಗಾಗಲು ಕಾರಣವೇನು? ಅಂತ ತಿಳಿಯ ಬೇಕೆಂದರೆ ಈ ಕಾದಂಬರಿ ಓದಲೇ ಬೇಕು.
(ಲೇಖಕರಾದ ರಾಘವೇಂದ್ರ ಇನಾಮದಾರ ಅವರೊಂದಿಗೆ ಸಂಧ್ಯಾ ದೀಪ” ಕಾದಂಬರಿಗಾರ್ತಿ ರಜನಿ ಭಟ್ ಕಲ್ಮಡ್ಕ)
ಪುಸ್ತಕದ ಹನ್ನೆರಡನೆಯ ಪುಟದಲ್ಲಿ ಬರುವ ಹೊಸ ಪಾತ್ರವೇ ಶಾಂಭವಿ ಟೀಚರ್. ಎಂದಿನಂತೆ “ಅಮ್ಮೆ ನಾರಾಯಣ ದೇವಿ” ಅಂತ ಹೇಳುತ್ತಾ, ಶಾಂಭವಿ ಟೀಚರ್ ಪ್ರತಿದಿನ ಮನೆಯ ಹಜಾರೆಯಲ್ಲಿ ಹಚ್ಚುವ ದೀಪವೇ “ಸಂಧ್ಯಾ ದೀಪ” ಈಗ ಗೊತ್ತಾಯ್ತತಲ್ವಾ..?? ಶೀರ್ಷಿಕೆ ಹ್ಯಾಗೆ ಬಂತು ಅಂತ.
ಇನ್ನು ಈ ಕಾದಂಬರಿ ಬಗ್ಗೆ ಇನ್ನೂ ಹೆಚ್ಚು ವಿಸ್ತರವಾಗಿ ನಾನು ಹೇಳುವುದಿಲ್ಲ. ಕಾರಣ, ಈ ಕಾದಂಬರಿ ನೀವೆಲ್ಲರೂ ಓದಲೇ ಬೇಕು. ರಜನಿ ಅವರ ನಿರೂಪಣೆ ಆಸ್ವಾದಿಸಲೇ ಬೇಕು….. ಕಾದಂಬರಿಯ ಪ್ರತಿಯೊಂದು ಪುಟಗಳಲ್ಲೂ ಕುತೂಹಲ ಕೆರಳಿಸುವ ರಜನಿ ಅವರ ನಿರೂಪಣೆ ಅಂತೂ ನಿಜಕ್ಕೂ ಮೆಚ್ಚುವಂಥದ್ದು.
ಧನ್ಯವಾದಗಳು.
- ರಾಘವೇಂದ್ರ ಇನಾಮದಾರ (ಲೇಖಕರು, ಪುಸ್ತಕ ವಿಮರ್ಶಕರು, ಕತೆಗಾರರು)