ಸುಧೀಂದ್ರ ಭಂಡಾರ್ಕಾರ್ ಅವರು ಕೆಳದಿ ರಾಜರ ಭಂಡಾರ ನಿರ್ವಹಿಸುತ್ತಿದ್ದ ವಂಶದವರು, ‘ಸ ಶೇಷ’ ದಲ್ಲಿ ತಮ್ಮ ಮನೆತನದ ಇತಿಹಾಸ ದಾಖಲಿಸಿದ್ದಾರೆ, ಈ ಇತಿಹಾಸ ಕಾದಂಬರಿ ಕುರಿತು ಅರುಣ ಪ್ರಸಾದ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ ಮತ್ತು ಶೇರ್ ಮಾಡಿ …
ಪುಸ್ತಕ : ಸ ಶೇಷ
ಲೇಖಕರು : ಸುಧೀಂದ್ರ ಭಂಡಾರ್ಕರ್
ಪ್ರಕಾರ : ಐತಿಹಾಸಿಕ ಕಾದಂಬರಿ
ಖರೀದಿಗಾಗಿ : 94488 85151
ಕೆಳದಿ ಅರಸರ ರಾಜಧಾನಿ ಆಗಿದ್ದ ಬಿದನೂರು ನಗರದಲ್ಲಿನ ಸುಧೀಂದ್ರ ಭಂಡಾರ್ಕಾರ್ ಕೆಳದಿ ರಾಜರ ಭಂಡಾರ ನಿರ್ವಹಿಸುತ್ತಿದ್ದ ವಂಶದವರು, ರಾಣಿ ಚೆನ್ನಮ್ಮಾಜಿ ಆಳ್ವಿಕೆ ಕಾಲದಲ್ಲಿ ಕೋಶಾಧಿಕಾರಿ ಆಗಿದ್ದ ಪುರುಶೋತ್ತಮಯ್ಯರ ಇತಿಹಾಸ ಸಂಶೋಧನೆಯ ಮುಖಾಂತರ ತಮ್ಮ ಮನೆತನದ ಇತಿಹಾಸ ದಾಖಲಿಸುವ ಜೊತೆಗೆ ಈ ಐತಿಹಾಸಿಕ ಕಾದಂಬರಿ ಸಶೇಷದಲ್ಲಿ ಕೆಳದಿ ಇತಿಹಾಸದ ಬೇರೆ ಬೇರೆ ಘಟನಾವಳಿಗಳನ್ನು ತುಂಬಾ ಸುಂದರವಾಗಿ ಶೇಷ ಮತ್ತು ಸೂರಿ ಎಂಬ ಎರಡು ಪಾತ್ರಗಳಲ್ಲಿ ಸಂಭಾಷಣೆಯಲ್ಲಿ ಕುತೂಹಲದಿಂದ ಓದಿಸಿ ಕೊಳ್ಳುವಂತ ಕಾದಂಬರಿ ಬರೆದಿದ್ದಾರೆ.
ಈ ಎರೆಡು ಪಾತ್ರದಲ್ಲಿರುವ ಸೂರಿ ವರ್ತಮಾನದ ಕಾದಂಬರಿ ಕತ೯ರಾದ ಸುಧೀಂದ್ರ ಭಂಡಾರ್ಕಾರ್ ಆಗಿದ್ದರೆ ಕುಣುಬಿ ಶೇಷ ಭೂತಕಾಲದ ಅಂದರೆ ಕೆಳದಿ ಆಳ್ವಿಕೆಯ 200 ವರ್ಷಗಳ ಎಲ್ಲಾ ಘಟಾನಾವಳಿಗಳನ್ನು ಪ್ರತ್ಯಕ್ಷವಾಗಿ ನೋಡಿದ ಕಾಲಾತೀತ ವ್ಯಕ್ತಿ.
ವಿಶೇಷ ಅಂದರೆ ಇವರಿಬ್ಬರ ಸಂಭಾಷಣೆ ನಡೆಯುವುದು ಇತಿಹಾಸದ ಕಥೆ ನಡೆದ ಪ್ರದೇಶದ ಕೋಟೆ ಕೊತ್ತಲಗಳ ಈಗಿನ ಪಾಳುಬಿದ್ದ ಆಗಿನ ಘಟನಾವಳಿಗಳ ಸಾಕ್ಷಿಯಾಗಿ ಇರುವ ಪ್ರದೇಶದಲ್ಲಿ. ಈ ಕಾದಂಬರಿಯಲ್ಲಿ ಬರುವ ವಿಶೇಷ ಘಟನೆಗಳಲ್ಲಿ ರಾಜ ಸೋಮಶೇಖರ ನಾಯಕರು ಮೃತರಾದಾಗ ರಾಣಿ ಚೆನ್ನಮ್ಮ ಸತಿ ಪದ್ಧತಿ ವಿರೋಧಿಸಿ ಬದುಕಿ ರಾಣಿಯಾದದ್ದು.
ಮೈಸೂರಿನ ಪೂರ್ಣಯ್ಯನವರಿಂದ ಕೆಳದಿ ಸಾಮ್ರಾಜ್ಯ ಸಂಪೂರ್ಣ ನಶಿಸಿ ಹೋಗುವುದು.
ಆ ಕಾಲದಲ್ಲಿ ನಡೆಯುವ ಪಂಚಾಯಿತಿ ಏನೂ ಅರಿಯದ ಬಾಲೆಗೆ ಅವಳ ತಾಯಿ ನೀಡಿದ ಅಶ್ವಾಸನೆಯಂತೆ ಗೌಡನನ್ನ ಗುಂಡಿಕ್ಕಿ ಕೊಂದ ದೀವರ ಹುಡುಗನಿಗೆ ತಾಳಿ ಕಟ್ಟಿಸಿ ಅದೇ ಕ್ಷಣದಲ್ಲಿ ಗೌಡನಿಗೆ ಗು0ಡಿಕ್ಕಿದ ದೀವರ ಹುಡುಗನಿಗೆ ಪಂಚಾಯಿತಿ ಕಟ್ಟೆಯ ಮರಕ್ಕೆ ನೇಣು ಹಾಕುತ್ತಾರೆ. ಪತಿ ಸತ್ತ ಮೇಲೆ ಸತಿ ಸಹಗಮನವನ್ನು ಆ ಬಾಲಕಿಗೆ ಮಾಡಿಸುವ ಪ೦ಚಾಯಿತಿದಾರರ ಧುರ್ತತನ ಜಾತಿಯತೆ ಮನ ಕಲಕುತ್ತದೆ. ಈ ನಿಜ ಕಥೆಯ ಸ್ಮಾರಕವಾಗಿ ಅಲ್ಲಿ ನೊಂದ ಅಕ್ಕಮ್ಮಳ ಗುಡಿಯೂ ಅಲ್ಲಿದೆ.
ವೀರಮ್ಮಾಜಿ ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಪೂನಾದಲ್ಲಿ ಆಶ್ರಯ ಪಡೆಯುತ್ತಾಳೆ ನಂತರ ಗದುಗಿನ ಸಮೀಪ ಅವಳ ಸಮಾಧಿ ಇದೆ ಎಂಬ ಸಂಶೋದಕರು ಹೇಳುತ್ತಾರೆ ಇಲ್ಲಿ ವೀರಮ್ಮಾಜಿ ಮತ್ತು ಅವಳ ಮಗನನ್ನು ಕುತಂತ್ರದಿಂದ ಅಪಹರಿಸಿ ಕೋಟೆ ಕೆರೆಯ ಮೊಸಳೆಗೆ ಆಹಾರ ಮಾಡಿದ್ದಾಗಿ ದಾಖಲಿಸಿದ್ದಾರೆ. ರಾಣಿ ಚೆನ್ನಮ್ಮಾಜಿ ಆ ಕಾಲದ ಮಠಗಳು ರಾಜ್ಯಬಾರದಲ್ಲಿ ಹಸ್ತಕ್ಷೇಪ ಮಾಡುವುದು ಸಹಿಸದೆ ಸ್ಥಳಿಯ ಆಡಳಿತದ ನಾಡ ಕಚೇರಿಗಳ ಸ್ಥಾಪಿಸುವುದು ಕೆಳದಿ ಅರಸರ ಆಡಳಿತ ಚಾಣಕ್ಷತೆಗೆ ಒಂದು ಉಧಾಹರಣಿ.
ಆ ಕಾಲದಲ್ಲಿ ನೂರಾರು ಮಠಗಳಿದ್ದು ಅವುಗಳು ಪ್ರಜೆಗಳಿಗೆ ವಿದ್ಯಾಬ್ಯಾಸ ಯುದ್ದ ಕಲೆಯ ತರಬೇತಿ ನೀಡುತ್ತಿದ್ದವು.
ಕೆಳದಿ ಇತಿಹಾಸದ ದಾಖಲೆ ಕೆಳದಿ ನೃಪವಿಜಯದಲ್ಲಿ ಕೆಳದಿ ರಾಜದಾನಿ ನಗರ ಸಮೀಪದ ರಾಮಚಂದ್ರ ಮಠದ ಉಲ್ಲೇಖವೇ ಇಲ್ಲ. ಎನೇ ಆಗಲಿ ಕೆಳದಿ ಸಾಮ್ರಾಜ್ಯ ಪ್ರಾರಂಭವಾಗಿ ನಾಲ್ಕುನೂರು ವರ್ಷದ ನಂತರ ಕೆಳದಿ ಇತಿಹಾಸದ ಕಥೆಯ ಅನೇಕ ಘಟನೆಗಳು ಪುಸ್ತಕವಾಗಿ ಬರುತ್ತಿದೆ ಎನ್ನುವುದು ಸಂತೋಷದ ವಿಚಾರ.
ಕೆಳದಿ ಇತಿಹಾಸದ ಎಲ್ಲಾ ವಿಚಾರಗಳೂ ಇವರಿಬ್ಬರ ಸಂಭಾಷಣೆಯ ಮೂಲಕ ಕೆಳದಿ ಸಾಮ್ರಾಜ್ಯದ ಇತಿಹಾಸ ಹೇಳುವ ಈ ಐತಿಹಾಸಿಕ ಕಾದಂಬರಿ ಎಲ್ಲರೂ ಓದಬೇಕು. ನಾನು ಈಜು ಕಲಿತದ್ದು ಕೆಳದಿ ಅರಸರು ನಿಮಿ೯ಸಿದ ನಗರ ಸಮೀಪದ ದೇವಗಂಗೆ ಈಜು ಕೊಳದಲ್ಲಿ ಮತ್ತು ನನ್ನ ಊರಾದ ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕ ಚಂಪಕ ಸರಸ್ಸುವಿನ ಕಥೆ ಇಲ್ಲಿನ ಜನಪದಲ್ಲಿದ್ದದ್ದನ್ನು ಕಾಲ್ಪನಿಕ ಕಾದಂಬರಿ ರೂಪದಲ್ಲಿ ಎರೆಡು ವರ್ಷದ ಹಿಂದೆ ಪ್ರಕಟಿಸಿದ್ದರಿಂದ ಸುದೀಂದ್ರ ಭಂಡಾರ್ಕರ್ ಅವರ ಸಶೇಷ ತುಂಬಾ ಆಸಕ್ತಿಯಿಂದ ಓದಿದೆ.
- ಅರುಣ ಪ್ರಸಾದ್