‘ಉಸಿರು ನಿಂತ ಮೇಲು ಭಾರವಿಳಿಯದೇ, ಭಾರವಾದ ಮಣ್ಣು ಮೇಲಿತ್ತು’ ಎಂತಹ ಅದ್ಬುತ ಸಾಲು. ಕವಿ ಖಾದರ್ ಅವರ ಕಾವ್ಯದಲ್ಲಿ ಪ್ರಪಂಚದ ಕಾಳಜಿಯಿದೆ. ಅದನ್ನು ಸೂಕ್ಷ್ಮವಾಗಿ ತಮ್ಮ ಕಾವ್ಯದಲ್ಲಿ ಕಟ್ಟಿಕೊಡುವ ಪರಿ ಓದುಗರ ಮನ ಗೆದ್ದಿದೆ…
ಮನೆಯ ನಡುವಲೋಂದು ಅಡ್ಡ ಕಂಬವಿತ್ತು
ಕಂಬಕ್ಕೆ ಹಗ್ಗವೊಂದು ಜೋತು ಬಿದ್ದಿತ್ತು
ಹಗ್ಗಕ್ಕೊಂದು ಶಿರ ತೇಲುತಲಿತ್ತು
ತೇಲುತ್ತಿದ್ದವನ ತಲೆಯಲ್ಲಿ ನೋವೊಂದಿತ್ತು
ನೋವು ನೂರು-ಸಾವಿರವಾಗಿ ಸುಡುತಲಿತ್ತು
ಕೊಕ್ಕು ಮಾತಿನ ಶಾಂತ ಸಮುದ್ರದ
ಭಯಾನಕ ಅಲೆಯಿತ್ತು
ಅವಮಾನ ಅಪಮಾನದ ಪರದೆ
ಹೊಡೆದು ಜೀವನ ಸುನಾಮಿಯಾಗಿತ್ತು
ದುಡಿದದ್ದೆಲ್ಲವ ಧಾರೆ ಎರೆದರೂ
ಜೀವನ ಬತ್ತಿದ ಬುಗೆಯಾಗಿತ್ತು
ಹೊಟ್ಟೆಕಟ್ಟಿ ನಿದ್ದೆಗೆಟ್ಟು ಮಾಡಿದ್ದೆಲ್ಲವೂ
ಹೊಟ್ಟೆಯ ಇಳಿಯದ ಬಿಸಿ ನೀರಾಗಿತ್ತು
ಇದ್ದೆರಡು ಜೀವವು ಜಲಪಾತದಂತೆ
ಜಾರಿಹೋದ ಸಂಕಟವೊಂದಿತ್ತು
ನೋವುಂಡು ನರಳಿ ಜ್ವಾಲಾಮುಕಿಯಂತೆ
ಸ್ಫೋಟಿಸಿದ ಕಹಿ ನೆನಪಿತ್ತು
ಮಳೆಯಲಿ ನೆನೆದು ಚಳಿಯಲಿ ಮುದುಡಿ
ಭಾವನೆಗಳು ಬೆಂದ ಕ್ಲಿಷ್ಟ ಜೀವವಿತ್ತು
ಇಲ್ಲೇನೂ ಇಲ್ಲವೆಂದು ಅಲ್ಲಾರೊ
ಕರಿಯುತಿಹರೆಂಬ ತಪ್ಪು ಗ್ರಹಿಕೆಯಿತ್ತು
ಉಸಿರು ನಿಂತ ಮೇಲು ಭಾರವಿಳಿಯದೇ
ಭಾರವಾದ ಮಣ್ಣು ಮೇಲಿತ್ತು
ಎಲ್ಲಿ ಹೋದರೂ ಬಿಡದು
ಈ ಜಗದ ಪೀಡೆ
- ಖಾದರ್ (ಯುವ ಕವಿ, ಬರಹಗಾರ)
