ಸುಶಿಕ್ಷಿತ ಸಮಾಜದ ಭದ್ರ ಅಡಿಪಾಯ “ಸ್ತ್ರೀಶಕ್ತಿ”

ಗಂಡು ಇಲ್ಲದ್ದಿದ್ದರೂ ಒಂದು ಮನೆಯನ್ನು ಹೆಣ್ಣು ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಿಭಾಯಿಸಿ ನಿರ್ವಹಿಸುತ್ತಾಳೆ. ಆದರೆ ಅದೇ ಒಂದು ಹೆಣ್ಣಿಲ್ಲದ ಮನೆಯನ್ನು ಗಂಡು ಖಂಡಿತವಾಗಿಯೂ ಅವಳಷ್ಟು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಿಭಾಯಿಸಿ ನಿರ್ವಹಿಸಲು ಸಾಧ್ಯವಿಲ್ಲ. ಗೀತಾಂಜಲಿ ಎನ್. ಎಮ್ ಅವರು ಹೆಣ್ಣಿನ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಹೆಣ್ಣಿನಿಂದಲೇ ಇಹವು| ಹೆಣ್ಣಿನಿಂದಲೇ ಪರವು
ಹೆಣ್ಣಿಂದ ಸಂಪದವು| ಹೆಣ್ಣೊಲ್ಲದಣ್ಣಗಳು
ಯಾರು ಸರ್ವಜ್ಞ ||

  •  ಸರ್ವಜ್ಞ ಹೆಣ್ಣಿನ ಘನತೆ ಮತ್ತು ಮಹತ್ವವನ್ನು ತನ್ನ ತ್ರಿಪದಿಯೊಂದರಲ್ಲಿ ಈ ರೀತಿಯಯಾಗಿ ಬಿಂಬಿಸಿದ್ದಾನೆ. ಅಂದರೆ ಹೆಣ್ಣು ಕೇವಲ ಒಂದು ಸಂಸಾರಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೇ ಎಷ್ಟು ಮುಖ್ಯ ಎನ್ನುವುದನ್ನು ಈ ವಚನದ ಮೂಲಕ ಸರ್ವಜ್ಞ ಸಾರಿದ್ದಾನೆ. ತ್ಯಾಗ, ಚೈತನ್ಯ ಸಾಮರ್ಥ್ಯದ ಪ್ರತಿನಿಧಿಯಾಗಿ ಒಂದು ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸುವ ಮಹಾನ್ ಶಕ್ತಿ ಹೆಣ್ಣು ಸುಶೀಕ್ಷಿತ ಸಮಾಜದ ಬೆನ್ನೆಲುಬಾಗಿ ಬಹುಮುಖ್ಯ ಪಾತ್ರವಹಿಸುತ್ತಾಳೆ. ಒಂದು ಕುಟುಂಬ ಇಲ್ಲವೆ ಸಂಸಾರ ಸನ್ಮಾರ್ಗದಲ್ಲಿದ್ದರೆ ಸಂಪೂರ್ಣ ಸಮಾಜವೇ ಸುಶಿಕ್ಷಿತವಾಗಿರುತ್ತದೆ ಎಂಬುದು ಅಕ್ಷರಸಹ ಸತ್ಯವಾದ ಮಾತು. ಕುಟುಂಬ, ಸಂಸಾರ, ಕೌಟುಂಬಿಕ ಮೌಲ್ಯಗಳು… ಎಂದ ಕೂಡಲೆ ಕಣ್ಣ ಮುಂದೆ ಬರುವುದು ಆ ಮನೆಯ ಗೃಹಿಣಿ ! ಪ್ರೀತಿ,ಸಹನೆ, ತ್ಯಾಗ, ಸ್ನೇಹ, ಒಗ್ಗಟ್ಟು ಸಂಸ್ಕಾರ ಸಹಿಷ್ಣತೆ ಸಹಬಾಳ್ವೆ ಹೊಂದಾಣಿಕೆ ಮೊದಲಾದ ಎಲ್ಲಾ ಮೌಲ್ಯಗಳು ಸಮ್ಮಿಳಿತ ಗೊಂಡ ಆಕೆ ಅವುಗಳನ್ನು ತಾನೂ ಪಾಲಿಸುತ್ತಾ ಮನೆಯಮಂದಿಗೂ ಬೋಧಿನೆ ಮಾಡುವ ಶಿಕ್ಷಕಿಯೂ ಆಗಿ ಒಂದು ಸಂಸಾರಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೇ ಅವಳ ಕೊಡುಗೆ ಬಹಳ ಅಮೂಲ್ಯವಾದದ್ದು.
  • ತನ್ನ ಮಕ್ಕಳಿಗೆ ಸಂಸ್ಕಾರ ಕೊಟ್ಟು ತಿದ್ದಿ ತೀಡಿ ಸನ್ಮಾರ್ಗದಲ್ಲಿ ಬೆಳೆಸುವ ರೂವಾರಿಯಾಗಿ ತಾಯಿಯ ಪಾತ್ರ ಬೆಲೆ ಕಟ್ಟಲಾಗದ್ದು. ಹೆಣ್ಣಾಗಲಿ ಗಂಡಾಗಲಿ ಸಮಾಜ ಆ ವ್ಯಕ್ತಿಯನ್ನು ಗುರುತಿಸುವುದು ಗೌರವಾದರಗಳಿಗೆ ಪಾತ್ರವನ್ನಾಗಿಸುವುದು ಆ ವ್ಯಕ್ತಿಯ ಜ್ಞಾನ ಗುಣ ನಡೆತೆ ಮತ್ತು ವ್ಯಕ್ತಿತ್ವದ ಮೂಲಕ, ಅಂದಮೇಲೆ ಈ ಎಲ್ಲಾ ಗುಣಗಳ ಹಿಂದೆ ಒಂದು ಶಕ್ತಿ ಇರಲೇಬೇಕಲ್ಲವೇ..? ಆ ಮಹೋನ್ನತ ಶಕ್ತಿಯೇ ತಾಯಿ. ಒಬ್ಬ ಹೆಣ್ಣಿಗೆ ಶಿಕ್ಷಣ ನೀಡಿದರೆ ಸಂಪೂರ್ಣ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಎಂದು ಹೇಳಿದ ಗಾಂಧಿಯವರ ಮಾತೂ ಇದನ್ನೇ ಎತ್ತಿ ಹಿಡಿಯುತ್ತದೆ. ಮನೆಯ ಮಕ್ಕಳು ಹಾದಿತಪ್ಪಿ ನಡೆದರೆ ಸಮಾಜ ಮೊದಲು ಧೂಷಿಸುವುದು ಆ ಮನೆಯ ಹೆಣ್ಣನ್ನು ಅರ್ಥಾತ್ ತಾಯಿಯನ್ನು ಒಂದು ಸಂಸಾರದ ಕೇಂದ್ರ ಬಿಂದುವಾಗಿ ಪುರುಷ ಪ್ರದಾನ ಸಮಾಜದ ಕಟ್ಟು_ನಿಟ್ಟು ನಿರ್ಬಂಧಗಳ ಜೊತೆ ವಿಧಿಯೊಡ್ಡುವ ಸವಾಲುಗಳು ಹಾಗೂ ಪರೀಕ್ಷೆಗಳನ್ನು ಎದುರಿಸುತ್ತಾ ಪ್ರತಿಹಂತದಲ್ಲೂ ಹೊಂದಾಣಿಕೆಯಿಂದ ಸಂಸಾರವೆಂಬ ಭವಸಾಗರವನ್ನು ನಿರ್ವಹಿಸುವುದು ನಿಜಕ್ಕೂ ಅವಳಿಗೆ ಸವಾಲಾಗಿರುತ್ತದೆ.
  • ತನ್ನ ಮನೆಯ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುದರ ಜೊತೆಗೆ ಕಾಸು ಕಾಸನ್ನೂ ಉಳಿತಾಯ ಮಾಡಿಕೊಂಡು ಬರುವ ಕಷ್ಟಗಳನ್ನು ದೈರ್ಯವಾಗಿ ಎದುರಿಸುತ್ತ ತಾಯಿಯಾಗಿ ಮಕ್ಕಳ ಬೇಡಿಕೆಗಳನ್ನು ಬಹು ಜಾಣ್ಮೆಯಿಂದ ಈಡೇರಿಸುವ ಅವಳ ಕ್ಲಿಷ್ಟ ಪರಿಸ್ಥಿತಿ ಅವಳಿಗಷ್ಟೇ ಗೊತ್ತಿರುತ್ತದೆ. ಒಂದು ಕುಟುಂಬವೆಂದರೆ ಅಲ್ಲಿ ವೈವಿಧ್ಯತೆ ಇರುತ್ತದೆ ತಾನು ಹುಟ್ಟಿ ಬೆಳೆದ ವಾತಾವರಣ ಯಾವುದೇ ಇದ್ದರೂ ಮದುವೆಯಾದ ಮನೆಯ ವಾತಾವರಣ ಹಾಗೂ ಆ ಕುಟುಂಬದ ವೈವಿಧ್ಯತೆಗಳನ್ನು ಸರಿದೂಗಿಸಿಕೊಂಡು ಸಮಚಿತ್ತ ಭಾವದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆ ಸಂಸಾರವನ್ನು ಯಶಸ್ವಿಯಾಗಿ ಮುನ್ನೆಡೆಸುವಲ್ಲಿ ಅವಳ ಪಾತ್ರ ಬಹಳ ಮೌಲ್ಯಯತ ವಾಗಿರುವಂಥದ್ದು.
  • ಇನ್ನೂ ಮನೆಯ ಹೊರಗೆ ದುಡಿಯುವ ಮಹಿಳೆಯರಿಗೂ ತಮ್ಮ ಮೊದಲ ಆದ್ಯತೆ ಕುಟುಂಬವೇ ಆಗಿರುತ್ತದೆ. ಪುರಾತನ ಕಾಲದಿಂದಲೂ ಮಹಿಳೆಯರು ತನ್ನ ಮನೆಗೆ ಮಾತ್ರವಲ್ಲದೆ ದೇಶ, ಗಡಿ ಧರ್ಮ ರಕ್ಷಣೆಗೂ ಟೊಂಕ ಕಟ್ಟಿ ನಿಂತಿದ್ದಾರೆ ನಮ್ಮ ಭಾರತೀಯ ಮಾತೆಯರು ಸಹನೆ ಹಾಗೂ ತ್ಯಾಗ ಮೂರ್ತಿಗಳ ಪ್ರತೀಕವಾಗಿ ದೇಶ, ಧರ್ಮಕ್ಕೆ ಚ್ಯುತಿ ಬಂದಾಗ ಹೋರಾಟಕ್ಕೂ ಸಿದ್ಧರಾಗಿ ನಿಲ್ಲುತ್ತಿದ್ದರು ,ಪುರಾಣಕಾಲದ ಸ್ತ್ರೀಯರು ಕೇವಲ ಶಾಸ್ತ್ರಾಧ್ಯಯನ ಮಾತ್ರ ಮಾಡುತ್ತಿರಲಿಲ್ಲ ಅಗತ್ಯಬಿದ್ದಾಗ ಶಸ್ತ್ರವನ್ನೂ ಕೈಯಲ್ಲಿ ಹಿಡಿಯುತ್ತಿದ್ದರು. ಒಂದು ಕೈಯಲ್ಲಿ ಶಾಸ್ತ್ರವನ್ನು ಹಿಡಿದರೆ ಇನ್ನೊಂದು ಕೈಯಲ್ಲಿ ಶಸ್ತ್ರವನ್ನು ಹಿಡಿಯುವ ಕ್ಷಾತ್ರತೇಜಸ್ಸು ಪರಾಣದ ಸ್ತ್ರೀಯರಲ್ಲಿ ಇತ್ತು ಎಂಬುದನ್ನು ಇತಿಹಾಸದ ಪುಟ ತಿರುವಿದಾಗ ತಿಳಿಯುತ್ತೇವೆ, ಇದಕ್ಕೆ ಸಾಕ್ಷಿ ಎಂಬಂತೆ ಎಷ್ಟೋ ಸ್ತ್ರೀಯರು ಗಂಡ ರಣರಂಗದಲ್ಲಿ ಯುದ್ಧ ಮಾಡುವಾಗ ಗಂಡನೊಂದಿಗೆ ಹೋರಾಟ ಮಾಡಿದ್ದಾರೆ ದಶರಥನಿಗೆ ಯುದ್ಧದಲ್ಲಿ ಕೈಕೇಯಿ ಸಹಾಯ ಮಾಡಿದ್ದಳು ಝಾನ್ಸಿರಾಣಿ ಲಕ್ಷ್ಮೀಬಾಯಿ ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಅಸಂಖ್ಯಾತ ಮಹಿಳೆಯರು ಈ ಮಾತೃಭೂಮಿ ಗಾಗಿ ಹೋರಾಡಿ ಹುತಾತ್ಮರಾಗಿದ್ದಾರೆ.
  • ಹಾಗೆಯೇ ಇಂದಿನ ಆಧುನಿಕ ಮಹಿಳೆಯರು ಇನ್ನೂ ಒಂದು ಹೆಜ್ಜಿ ಮುಂದೆ ಹೋಗಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸಮನರಾಗಿ ದುಡಿಯುತ್ತಿದ್ದಾರೆ ಸಾಮಾಜಿಕ ಆರ್ಥಿಕ ರಾಜಕೀಯ ಹೀಗೆ ಎಲ್ಲಾಕ್ಷೇತ್ರದಲ್ಲೂ ತಮ್ಮದೇ ಆದ ಸಾಧನೆ ಮಾಡಿದ್ದಾರೆ, ದೇಶದ ಅತ್ಯುನ್ನತ ಹುದ್ದೆಗಳಾದ ಪ್ರಧಾನಮಂತ್ರಿ ರಾಷ್ಟ್ರಪತಿ ಹುದ್ದೆಗಳಾದಿಯಾಗಿ ವಿಜ್ಞಾನಿ ಗಗನಯಾತ್ರಿ, ಭಾಹ್ಯಾಕಾಶ ಪೈಲೆಟ್ ಹಾಗೂ ವಿವಿಧ ಉದ್ಯಮಗಳೂ ಸೇರಿದಂತೆ ಕಲ್ಪನಾಚಾವ್ಲರಿಂದ,,ಕಿರಣ್ ಬೇಡಿ, ಪಿ, ಟಿ,ಉಷಾ ಸರಳಾ ತುಕ್ರಾಲ್ ಸುಧಾಮೂರ್ತಿ ಯವರೆಗೂ ಸಾವಿರಾರು ಮಹಿಳೆಯರು ಉತ್ತಮ ಕೊಡುಗೆಗಳನ್ನು ಕೊಟ್ಟಿದ್ದಾರೆ ಮತ್ತು ಇಂದಿಗೂ ಕೊಡುತ್ತಿದ್ದಾರೆ.
  • ಪುರುಷಪ್ರಧಾನ ಸಮಾಜವೆಂದೇ ಗುರುತಿಸಿ ಕೊಂಡಿರುವ ಈ ಸಮಾಜದಲ್ಲಿ ಪುರುಷರಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆಯೆಂದು ತೋರಿಸುತ್ತಿದ್ದಾರೆ ಗಂಡಸರಿಗೇ ಮೀಸಲು ಎಂದು ತಿಳಿದುಕೊಂಡಿದ್ದ ಕ್ಷೇತ್ರಗಳಲ್ಲೂ ಹಲವಾರು ರೀತಿಯ ಸಾಧನೆಗಳನ್ನು ಮಾಡುವುದರ ಮೂಲಕ ಸಮಾಜಕ್ಕೆ ಸ್ತ್ರೀ ಶಕ್ತಿಯ ಕೊಡುಗೆ ಎನೆಂಬುದನ್ನು ತೋರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬಸ್ ಚಾಲಕಿ, ಅಟೋ ಚಾಲಕಿಬಸ್ ಕಂಡಕ್ಟರ್ ಫುಡ್ ಡೆಲವರಿ, ಹೋಟೆಲ್ ಉದ್ಯಮ ಸೆಕ್ಯೂರಿಟಿ ವಿಭಾಗ ಸೇರಿದಂತೆ ಕಲೆ ಕ್ರೀಡೆ, ಸಾಹಿತ್ಯ, ಸಾಹಸ ಪ್ರವೃತ್ತಿಯಂತಹ ಸಾಧನೆಯಲ್ಲಿ ತೊಡಗಿ ಪ್ರತೀ ಕ್ಷೇತ್ರದಲ್ಲೂ ಮುನ್ನಡೆಯುತ್ತಾ ತಾನು ಅಬಲೆಯಲ್ಲ ಎಂಬುದನ್ನು ಜಗತ್ತಿಗೆ ತೋರಿಸುತ್ತಾ ಯಶಸ್ವಿಯಾಗಿ ಮುನ್ನೆಡೆಯುತ್ತಿದ್ದಾರೆ.
  • ಪ್ರಕೃತಿಗೂ – ಸ್ತ್ರೀಗೂ ಅವಿನಾಭಾವ ಸಂಬಂಧವಿದ್ದು. ಸ್ತ್ರೀ ಭೂಮಿಯಾಗಿ, ಮುಗಿಲಾಗಿ ಮೇರುಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ದಿಯ ಸಂಕೇತವೆಂದು ಪರಿಭಾವಿಸಲಾಗಿದೆ.ಮಹಿಳೆ ಇಲ್ಲದ ಮನೆ ನಿಜಕ್ಕೂ ವ್ಯೆವಸ್ಥಿತವಾಗಿರಲು ಸಾಧ್ಯವೇ ಇಲ್ಲ ತಾಯಿಲ್ಲದ ಮನೆ ನಾವಿಕನಿಲ್ಲದ ನೌಕೆಯಂತೆ ಇರುತ್ತದೆ, ನೆಮ್ಮದಿ ಎಂಬುದು ಆ ಮನೆಯಲ್ಲಿ ಮರೀಚಿಕೆಯಾಗಿ ಉಳಿಯುತ್ತದೆ ಒಂದು ಸಂಸಾರದ ಕಣ್ಣಾಗಿ ಹೆಗಲಾಗಿ ಆ ಮನೆಯನ್ನು ಹೆಣ್ಣು ಬೆಳಗುವುದರಿಂದಲೇ ಮನೆಯಲ್ಲಿನ ಪುರುಷರು ಮತ್ತು ಮಕ್ಕಳು ಸಮಾಧಾನದಿಂದ ಸಂಸ್ಕಾರಯುತವಾದ ಹಾಗೂ ನೆಮ್ಮದಿಯಾದ ಸುಗಮ ಜೀವನ ನೆಡೆಸಲು ಸಾಧ್ಯ.
  • ಗಂಡು ಇಲ್ಲದ್ದಿದ್ದರೂ ಒಂದು ಮನೆಯನ್ನು ಹೆಣ್ಣು ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಿಭಾಯಿಸಿ ನಿರ್ವಹಿಸುತ್ತಾಳೆ. ಆದರೆ ಅದೇ ಒಂದು ಹೆಣ್ಣಿಲ್ಲದ ಮನೆಯನ್ನು ಗಂಡು ಖಂಡಿತವಾಗಿಯೂ ಅವಳಷ್ಟು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಿಭಾಯಿಸಿ ನಿರ್ವಹಿಸಲು ಸಾಧ್ಯವಿಲ್ಲ.!ಯಾವಾಗ ಒಂದು ಸಂಸಾರ,ಒಂದು ಮನೆ,ಒಂದು ಕುಟುಂಬ ನೆಮ್ಮದಿ ಹಾಗೂ ಸಂಸ್ಕಾರದಿಂದ ಇರುತ್ತದೆಯೋ ಆಗ ಇಡೀ ಸಮಾಜ ಸುಶಿಕ್ಷಿತವಾಗಿರುತ್ತದೆ ಸುಶಿಕ್ಷಿತ ಸಮಾಜದ ಭದ್ರಅಡಿಪಾಯವೇ “ಸ್ತ್ರೀ ಶಕ್ತಿ”ಹಾಗಾಗಿ ಮಕ್ಕಳನ್ನು ಬೆಳೆಸುವಲ್ಲಿ ತಾಯಿಯ ಪಾತ್ರ ತುಂಬಾ ಮಹತ್ವವಾದದ್ದು !

  • ಗೀತಾಂಜಲಿ ಎನ್. ಎಮ್  – ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW