ವಿಧಿಯಾಟ ನೋಡಿ. ಆಮ್ಲಜನಕ ನೀಡುವ ಗಿಡಮರಗಳ ಉಳಿವಿಗಾಗಿ ಅರ್ಧ ಶತಮಾನವನ್ನೇ ಸವೆಸಿದ ಸುಂದರ ಲಾಲ್ ಬಹುಗುಣ ಎನ್ನುವ ಆ ಮಹಾನ್ ಯೋಗಿ, ಸ್ವತಃ ಆಮ್ಲಜನಕ ಅಭಾವದಿಂದ ಅಸುನೀಗಬೇಕಾಯಿತು.
ಸುಂದರ ಲಾಲ್ ಬಹುಗುಣ ಎಂದರೆ ಕರ್ನಾಟಕದ ಮಟ್ಟಿಗೆ ಹಿಮಾಲಯದಿಂದ ಬಂದ ಬೆಳಕು. ಅಲ್ಲಿ ಆರಂಭವಾದ #ಚಿಪ್ಕೊ_ಚಳುವಳಿಯ ಕುಡಿಯನ್ನು ಮಲೆನಾಡಿನಲ್ಲಿ #ಅಪ್ಪಿಕೋ_ಚಳುವಳಿಯನ್ನಾಗಿ ಚಿಗುರಿಸಿದ ಸಂತ ಅವರು. ಉತ್ತರಾಖಂಡದ ದಟ್ಟಡವಿಯಲ್ಲಿ ಮಹಿಳೆಯರಿಂದ ಚಾಲನೆ ಪಡೆದ ಪರಿಸರ ರಕ್ಷಣಾ ಹೋರಾಟದ ಸಂದೇಶವನ್ನು ಬೇರೆ ರಾಜ್ಯಗಳಿಗಷ್ಟೇ ಅಲ್ಲ, ವಿಶ್ವದ ಅನೇಕ ದೇಶಗಳಲ್ಲಿ ಬಿತ್ತರಿಸುತ್ತಾ ಸುತ್ತಿದವರು.

ಫೋಟೋ ಕೃಪೆ : Telegraph india (ಸುಂದರ ಲಾಲ್ ಬಹುಗುಣ)
೧೯೫೦ ರಲ್ಲಿ ನೈರೋಬಿಯಲ್ಲಿ ವಿಶ್ವಸಂಸ್ಥೆ ಏರ್ಪಡಿಸಿದ್ದ ಶಕ್ತಿ ಸಮ್ಮೇಳನಕ್ಕೆ ಇವರು ಹಾಜರಾದ ವೈಖರಿ ಸದಾ ನೆನಪಿಡುವಂಥದ್ದು. ಹಿಮಾಲಯದ ಹಳ್ಳಿಗಾಡಿನ ಶ್ರಮಿಕ ಹೈದನಂತೆ ತಮ್ಮ ಬೆನ್ನಿಗೆ ಕಟ್ಟಿಗೆಯ ಹೊರೆಯನ್ನು ಬಿಗಿದುಕೊಂಡು ಏದುಸಿರು ಬಿಡುತ್ತ ಮೆಲ್ಲಗೆ ಮೆಟ್ಟಿಲು ಏರಿ ಅವರು ಸಭಾಂಗಣವನ್ನು ಪ್ರವೇಶಿಸಿ ಎಲ್ಲರ ಗಮನ ಸೆಳೆದು ಮಾಧ್ಯಮಗಳ ಮನ ಗೆದ್ದರು. ಅರಣ್ಯದ ಮಧ್ಯೆಯೇ ವಾಸಿಸುವವರೂ ಹೇಗೆ ಕಾರ್ಪೊರೇಟ್ ಗುತ್ತಿಗೆದಾರರ ಮುಷ್ಠಿಗೆ ಸಿಕ್ಕು ತುಂಡು ಸೌದೆಗಾಗಿ ಹೋರಾಡ ಬೇಕಾಗಿ ಬಂದಿದೆ ಎಂಬುದನ್ನು ಈ ವಿಶಿಷ್ಟ ದೃಶ್ಯ ಮಾಧ್ಯಮದ ಮೂಲಕ ಜಗತ್ತಿಗೆ ಬಿತ್ತರಿಸಿದರು.
ಹೋರಾಟ ಇವರಿಗೆ ಬೆನ್ನಿಗೆ ಸದಾ ಅಂಟಿಕೊಂಡ ವ್ಯಸನ. ತಮ್ಮ ೧೭ ನೇ ವಯಸ್ಸಿನಲ್ಲೇ ಸ್ವಾತಂತ್ರ ಹೋರಾಟಕ್ಕೆ ಕೈಜೋಡಿಸಿ ಸೆರೆಮನೆ ಸೇರಿದ್ದ ಅವರು ಸರ್ವೋದಯ ಕಾರ್ಯಕರ್ತರಾಗಿ ಊರೂರು ಸುತ್ತುತ್ತಿದ್ದಾಗ ಅವರ ನೆರೆಯ ಚಾಮೋಲಿ ಜಿಲ್ಲೆಯಲ್ಲಿಯೆ ಮಹಿಳೆಯರು ಮರಗಳನ್ನು ಅಪ್ಪಿಕೊಂಡು ಅರಣ್ಯ ಗುತ್ತಿಗೆದಾರರನ್ನು ಹಿಮ್ಮೆಟ್ಟಿಸಿದರು. ಇವರಿಗೆ ಹೋರಾಟದ ಹೊಸ ಹಾದಿ ಸಿಕ್ಕಂತಾಯಿತು. ಪತ್ರಿಕೆಗಳಿಗೆ ಆಗಾಗ ಲೇಖನಗಳನ್ನು ಬರೆಯುತ್ತಿದ್ದ ಬಹುಗುಣ ಈಗ ಚಿಪ್ಕೊ ಚಳುವಳಿಯ ಮೂಲಕ ಪರಿಸರ ಸಂರಕ್ಷಣೆಯ ವಕ್ತಾರರಾದರು.

ಫೋಟೋ ಕೃಪೆ : wikipedia
ಹಿಮಾಲಯದ ಸೂಕ್ಷ್ಮ ಪರಿಸರ ಅಭಿವೃದ್ಧಿಯ ದಾಳಿಗೆ ನಲುಗುತ್ತಿರುವುದನ್ನು ಊರೂರಿಗೆ ತಿಳಿಸಲೆಂದು ೧೯೮೦ ರ ಆರಂಭದಲ್ಲಿ ಕಾಶ್ಮೀರದಿಂದ ನಾಗಾಲ್ಯಾಂಡ್ ನ ಕೊಹಿಮಾವರೆಗೆ ಎರಡು ವರ್ಷಗಳ ಪಾದಯಾತ್ರೆ ನಡೆಸಿದ ಇವರು ಪರಿಸರ ಸಂತನೆಂದೇ ಪ್ರಸಿದ್ಧಿ ಪಡೆದರು. ಅದೇ ತಾನೇ ಇಡೀ ಜಗತ್ತಿಗೇ ಪರಿಸರ ಸಂರಕ್ಷಣೆಯ ಮಹತ್ವದ ಅರಿವು ಮೆಲ್ಲಗೆ ಮೂಡತೊಡಗಿತ್ತು. ಅದೇ ಸಂದರ್ಭದಲ್ಲಿ ಇಲ್ಲಿ ಕರ್ನಾಟಕದಲ್ಲಿ ಅರಣ್ಯ ನಾಶದ ಮಹಾ ಯಜ್ಞ ಆರಂಭವಾಗಿತ್ತು. ದಟ್ಟ ಅರಣ್ಯವನ್ನು ಸವರಿ ಹಾಕಿ ಹೊಸದಾಗಿ ನೀಲಗಿರಿ ನೆಡುವುದೇನು, ಅರಣ್ಯ ಮಧ್ಯೆ ಕಬ್ಬಿಣ ಮ್ಯಾಂಗನೀಸ್ ಗಣಿಗಾರಿಕೆ ನಡೆದಿದ್ದೇನು, ಕಾಳಿ ನದಿಯನ್ನು ಮುಗಿಸಿ ಬೇಡ್ತಿ ನದಿಗೂ ಅಪಾಯ ಎದುರಾದಾಗ ಜನರು ಎದ್ದರು.

ಫೋಟೋ ಕೃಪೆ : wix.com (ಸುಂದರ ಲಾಲ್ ಬಹುಗುಣ ಮತ್ತು ಅವರ ಧರ್ಮಪತ್ನಿ)
ಕೊಹಿಮಾ ಪಾದಯಾತ್ರೆಯಲ್ಲಿ ಜೊತೆಯಾಗಿದ್ದ ಶಿರಸಿಯ ಪಾಂಡುರಂಗ ಹೆಗಡೆಯ ಆಹ್ವಾನದ ಮೇರೆಗೆ ಸುಂದರ ಲಾಲ್ ಬಹುಗುಣ ಇಲ್ಲಿಗೂ ಬಂದು ಬೇಡ್ತಿ ಚಳುವಳಿಗೆ ಕೈಜೋಡಿಸಿದರು. ಚಿಪ್ಕೊ ಮಹಿಳೆಯರ ಸಾಹಸಗಳನ್ನು ಹಳ್ಳಿಯ ಯುವಜನರಿಗೆ ಬಣ್ಣಿಸಿದರು. ಇಲ್ಲೂ ಅಪ್ಪಿಕೋ ಆರಂಭವಾಯಿತು. ಈ ಚಳವಳಿಗೆ ದೇಶವ್ಯಾಪಿ ಕೀರ್ತಿ ಬಂದಿದ್ದೇ ತಡ, ಬಹುಗುಣರಿಗೆ ಅನೇಕ ದೇಶ ವಿದೇಶಗಳಿಂದಲೂ ಆಹ್ವಾನ ಬರತೊಡಗಿತ್ತು.
ಮೊದಲೇ ಸಂತನ ವೇಷಭೂಷಣ, ಮೆಲು ಮಾತು, ಅಹಿಂಸಾ ಮೂರ್ತಿಯ ಪ್ರತಿರೂಪ, “ಅರಣ್ಯ ಎಂದರೆ ಬರೀ ಫರ್ನಿಚರ್ ಮಾಡುವ ದಿಮ್ಮಿಗಳಲ್ಲ, ಅರಣ್ಯವೆಂದರೆ ಪೃಥ್ವಿಯ ಶ್ವಾಸಕೋಶ, ನದಿಗಳ ಜನ್ಮದಾಯಿನಿ, ಮಣ್ಣಿನ ರಕ್ಷಣೆಯ ಖಜಾನೆ” ಎಂದು ಪುರಾತನ ಋಷಿ ಮುನಿಯಂತೆ ನಿರುದ್ವೇಗದ ಪ್ರವಚನ ನೀಡುವ ಈ ಸಂತನ ಮಾತುಗಳಿಗೆ ಜನರನ್ನು ಮೋಡಿ ಮಾಡುವ ಶಕ್ತಿ ಇತ್ತು. ಎಲ್ಲೆಲ್ಲಿ ಸುಂದರ ಪ್ರಕೃತಿಗೆ ಅಭಿವೃದ್ಧಿಯ ಕೊಡಲಿ ಏಟು ಬೀಳುತ್ತಿದ್ದಲ್ಲೆಲ್ಲ ಸುಂದರ ಲಾಲ್ ಬಹುಗುಣ ಅಲ್ಲಿಗೆ ಹಾಜರಾಗತೊಡಗಿದರು. ಸೇಬು ಹಣ್ಣುಗಳನ್ನು ರವಾನೆಗೆಂದು ಕಟ್ಟಿಗೆಯ ಪ್ಯಾಕಿಂಗ್ ನೋಡಿ ಇವರು ಸೇಬು ಬಿಟ್ಟರು. ಭತ್ತ ಬೆಳೆಯಲು ಅಪಾರ ನೀರು ಬೇಕಾಗುವುದೆಂದು ಇವರು ಅನ್ನ ಬಿಟ್ಟರು. ಉರುವಲ ಸೌದೆಗೆಂದು ಗಿಡಮರಗಳ ನಾಶ ನೋಡಿ ಇವರು ಬೇಯಿಸಿದ ಆಹಾರ ತ್ಯಜಿಸಿದರು.

ಫೋಟೋ ಕೃಪೆ : Hindustan Times
ಪರಿಸರ ರಕ್ಷಣೆಯ ಹರಿಕಾರ ಎಂದೆಲ್ಲ ಪ್ರಸಿದ್ಧಿ ಪಡೆದ ಇವರಿಗೆ ಅಂತರರಾಷ್ಟ್ರೀಯ ಸ್ಥರದಲ್ಲಿ ನಾನಾ ಪ್ರಶಸ್ತಿಗಳು, ಗೌರವ ಡಾಕ್ಟರೇಟ್ ಕೂಡಾ ಬಂತು. ಇವರ ತಾಯ್ನಾಡಿನಲ್ಲೇ ತೆಹ್ರಿ ಅಣೆಕಟ್ಟಿಗೆ ಸಿದ್ಧತೆ ನಡೆದಾಗ ಅಲ್ಲಿ ಒಮ್ಮೆ ೪೫ ದಿನಗಳ, ಮತ್ತೊಮ್ಮೆ ೭೫ ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಆದರೆ ಹೋರಾಟಕ್ಕೆ ಬೆಲೆ ಸಿಗಲಿಲ್ಲ. ಆದರೆ ಪದ್ಮವಿಭೂಷಣ ಪ್ರಶಸ್ತಿ ಬಂತು. ಕೊನೆಗೆ ಅವರದೇ ಆಶ್ರಮದ ಪ್ರದೇಶ ಜಲಸಮಾಧಿಯಾಗಿ ಈ ವೃದ್ಧ ದಂಪತಿಗಳನ್ನು ಡೆಹ್ರಾಡೂನ್ ಗೆ ಸ್ಥಳಾಂತರಿಸಲಾಯಿತು. “ನೀನು ವಿಶ್ರಾಂತಿ ಪಡೆ, ನಾನೇ ಪ್ರಭುತ್ವಕ್ಕೆ ಪಾಠ ಹೇಳುತ್ತೇನೆ” ಎಂದು ಪ್ರಕೃತಿಯೇ ಇವರಿಗೆ ಹೇಳಿತೇನೋ , ಚಿಪ್ಕೊ ಚಳುವಳಿ ನಡೆದ ಅದೇ ಚಾಮೋಲಿಯಲ್ಲಿ ಹಿಮ ಕುಸಿತದಿಂದಾಗಿ ಕಳೆದ ಫೆಬ್ರವರಿಯಲ್ಲಿ ಧವಳಿ ಗಂಗಾ ಅಣೆಕಟ್ಟು ಭಗ್ನವಾಗಿ ೭೨ ಜನರ ಜಲಸಮಾಧಿಯಾಯಿತು.
- ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )
