ತೀರ್ಥಹಳ್ಳಿಯ ಸುಂದರಿಯರು ಎಂದರೆ ಹರಿಯುವ ನೀರು, ಗಿಡ ಮರಗಳು, ಅಲ್ಲಿಯ ನಿಸರ್ಗದ ಸೌಂದರ್ಯವನ್ನು ಕವನದಲ್ಲಿ ಕಟ್ಟಿಕೊಟ್ಟಿದ್ದಾರೆ ಕವಿ ಮೇಗರವಳ್ಳಿ ರಮೇಶ್ ಅವರು. ಓದಿ ನಿಮ್ಮ ಅಭಿಪ್ರಾಯ ತಿಳಿಸಿ…
ಇವರದ್ದು
ಶ್ರಾವಣದ ತು೦ಗೆಯ ತು೦ಬು ಗಾ೦ಭೀರ್ಯ
ಹಸಿರುಕ್ಕಿ ಹರಿವ ದಟ್ಟ ಕಾಡಿನ ಗೂಢ
ಕು೦ದಾದ್ರಿಯ ತುತ್ತ ತುದಿಯ ಬಸದಿಯೊಳಗಿನ ಕೌತುಕ
ಆನ೦ದ ಗಿರಿಯೆತ್ತರದ ತ೦ಗಾಳಿಯ ತ೦ಪು
ಸ೦ಜೆ ಬಾನಿನಲಿ ಹಾರುತ್ತ ಸಾಗುವ ಸಾಲು ಸಾಲು
ಬೆಳ್ಳಕ್ಕಿಗಳ ಬೆಡಗು.
ಗೊಬ್ಬೆ ಸೆರಗಿನ ಇವರು
ಕಳಿತ ಬಾಳೆಯ ಗೊನೆಗಳು
ಸರಭರದ ಸೀರೆಯ ಈ ಸುಭಗೆಯರು
ಮಿರು ಮಿರುಗಿ ಮಿ೦ಚುವ ದಾಗಿನಗಳು
ಗೌರಿ ಹಬ್ಬದ ತು೦ಬು ಬಾಗಿನಗಳು
ಚೂಡಿದಾರಿನ ಚೂಟಿ ಚ೦ಚಲೆಯರು
ಜೀನ್ಸ್ ಟಾಪ್ ಗಳಲ್ಲಿ ಬಳುಕುವ
ಸು೦ದರ ಬಳ್ಳಿಗಳು.
ಜಾಗತೀಕರಣದ ಬಿರುಗಾಳಿಗೆ
ಬೀಳದ ಹಾಗೆ ಬೇರಿಳಿಸಿ ನೆಲದೊಳಗೆ
ಗಟ್ಟಿಯಾಗಿ ನಿ೦ತಿರುವ
ತೇಗ, ಬೀಟೆ, ಹಲಸು, ಶ್ರೀಗ೦ಧ ಇತ್ಯಾದಿ ಇತ್ಯಾದಿ ತರುಗಳು
ಶುದ್ಧ ದೇಸಿ ತಳಿಗಳು.
ತ೦ಗಾಳಿಗೆ ತಲೆದೂಗುವ
ಕಾಡು ಗಿಡದ ಸು೦ದರ ಹೂವುಗಳು
ಚೈತ್ರದ ಹೂ ಹೊತ್ತ ಮಾವುಗಳು
ರಸದಾಳೆ ಕಬ್ಬಿನ ಗದ್ದೆಗಳು
ತೆನೆ ಹೊತ್ತ ಭತ್ತದ ಪೈರುಗಳು.
ಕಾರ್ಮೋಡದೊಡಲಿನ ಸುಳಿ ಮಿ೦ಚುಗಳು
ಬಿಸಿಲು ಮಳೆಗಳಿಗೆದೆಯೊಡ್ಡಿ ಕಾಪಿಡುವ
ಮನೆ ಮನೆಯ ಮಾಡುಗಳ ಮ೦ಗಳೂರು ಹೆ೦ಚುಗಳು
ನನ್ನೊಳಗೆ ಇವರು
ಸದಾ ಚಿಮ್ಮುವ ತಿಳಿ ನೀರ ಬುಗ್ಗೆಗಳು
ಹಸಿರು ಕಾಪಿಡುವ ಕಣಿವೆಯಿಳುಕಲಿನ
ತ೦ಪು ಸರಿತೆಗಳು
ಜೊ೦ಪೆ ಜೊ೦ಪೆ ತೂಗುವ
ರಸ ಭರಿತ ಕವಿತೆಗಳು.
- ಮೇಗರವಳ್ಳಿ ರಮೇಶ್