ಕೆರೆ ಕಟ್ಟೆಗಳು ಬತ್ತಿ ದನ ಕರುಗಳು ನೀರಿಲ್ಲದೆ ಒದ್ದಾಡುತ್ತಿರುವವಲ್ಲ ! ಅಯ್ಯೋ ಎಂದು ಮೊರೆಯಿಟ್ಟರೂ ನಮ್ಮನ್ನು ಯಾರೂ ಕೇಳುವರಿಲ್ಲ !…ಪ್ರೊ. ಸಿದ್ದು ಸಾವಳಸಂಗ ಅವರ ಬರಗಾಲದ ಕುರಿತಾದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಬಿಸಿಲಧಗೆ ಹೊಗೆಯಾಗಿ
ಉಸಿರ ಕಟ್ಟುತಿಹುದಲ್ಲ !
ಈ ಧರೆ ಉರಿವ ಕೆಂಡವಾಗಿ
ಮನುಜನ ಸುಡುತಿಹುದಲ್ಲ !!
ಗಿಡ ಮರಗಳ ಎಲೆಗಳು
ಎಲ್ಲಿಯೂ ಅಲುಗಾಡುತ್ತಿಲ್ಲ !
ಪಶು ಪಕ್ಷಿಗಳಿಗೆ ಕುಡಿಯುವ
ನೀರಿಲ್ಲದೆ ಒದ್ದಾಡುತ್ತಿರುವವಲ್ಲ !!
ಹೊಸ್ತಿಲು ದಾಟಿ ಮನುಜ
ಹೊರಗೆ ಕಾಲಿಡಲಾಗುತ್ತಿಲ್ಲ !
ಬಿಸಿಗಾಳಿಗೆ ಜನ ತತ್ತರಿಸಿ
ಹೌಹಾರಿ ಕಂಗೆಟ್ಟಿ ಹೋದರಲ್ಲ !!
ಅಂಗಡಿ ಮುಂಗಟ್ಟುಗಳ ಬಾಗಿಲು
ಮುಚ್ಚಿ ಬೀಕೋ ಎಂದುವಲ್ಲ !
ಮನೆಯಲ್ಲಿ ಸುಮ್ಮನೆ ಕುಳಿತು ಜನ
ಬಿಸಿ ಗಾಳಿಯ ಸೇವಿಸಿ ಉಸಿರು ಬಿಟ್ಟರಲ್ಲ !!
ಕೆರೆ ಕಟ್ಟೆಗಳು ಬತ್ತಿ ದನ ಕರುಗಳು
ನೀರಿಲ್ಲದೆ ಒದ್ದಾಡುತ್ತಿರುವವಲ್ಲ !
ಇದನ್ನು ನೋಡುತ್ತಿರುವ ರೈತ ಕಣ್ಣು ಬಿಟ್ಟು
ಕೈಲಾಗದೆ ಸುಮ್ಮನೆ ಕುಳಿತಿರುವನಲ್ಲ !!
ಅಯ್ಯೋ ಎಂದು ಮೊರೆಯಿಟ್ಟರೂ
ನಮ್ಮನ್ನು ಯಾರೂ ಕೇಳುವರಿಲ್ಲ !
ನಮ್ಮ ಕೂಗು ಬರೀ ಅದು
ಅರಣ್ಯ ರೋಧನವಾಯಿತಲ್ಲ !!
ಮುಂದಿನ ಪೀಳಿಗೆಗಾಗಿ ನಾವು
ಸಸಿಗಳನ್ನು ನೆಟ್ಟು ರಕ್ಷಿಸಬೇಕಲ್ಲ !
ಅವರ ಶಾಪ ನಮಗೆ ತಟ್ಟದಿರಲು
ಇಂದೆ ಕೆಲಸ ಪ್ರಾರಂಭ ಮಾಡಬೇಕಲ್ಲ !!
- ಪ್ರೊ. ಸಿದ್ದು ಸಾವಳಸಂಗ, ತಾಜಪುರ ( ಕಾವ್ಯನಾಮ – ಚಿರಂಜೀವಿ ) – ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳು, ವಿಜಯಪುರ.
