‘ವಕ್ಷ ಸ್ಥಲ’ ಕೃತಿ ಪರಿಚಯ

ಈಗಾಗಲೇ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿದ್ದ ಲೇಖಕಿ ಆಶಾ ರಘು ಅವರ ಇತ್ತೀಚಿನ ಹೊಸ ಕಾದಂಬರಿ ‘ವಕ್ಷ ಸ್ಥಲ’. ಹಲವು ಪ್ರತಿಷ್ಠಿತ ಪ್ರಶಸ್ತಿ ಗೌರವಗಳಿಗೆ ಇವರು ಪಾತ್ರರಾಗಿದ್ದಾರೆ. ಅವರ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  : ವಕ್ಷ ಸ್ಥಲ.
ಲೇಖಕರು: ಆಶಾ ರಘು.
ಉಪಾಸನಾ ಬುಕ್ಸ್ ಬೆಂಗಳೂರು.
ಮುದ್ರಣದ ವರ್ಷ: ೨೦೨೫ .
ಪುಟಗಳು:೨೦೮.
ಬೆಲೆ: ರೂ. ೨೭೦ .

ಸಾಮಾಜಿಕ -ಪೌರಾಣಿಕ ಎರಡೂ ಮಿಳಿತಗೊಂಡ ಈ ಕಥೆಯ ನಾಯಕಿ ಜಾನಕಿ. ಆಕೆಗೆ ತನ್ನ ಗಂಡ ರಾಘವನಲ್ಲಿ ಉತ್ಕಟವಾದ ಪ್ರೇಮ. ಆದರೆ ಅವನೀಗ ಅವಳನ್ನು ಅಗಲಿದ್ದಾನೆ.ಆಕೆ ಕಳೆದುಕೊಂಡ ತನ್ನ ಸರ್ವಸ್ವವಾದ ಗಂಡ ರಾಘವನ ಯೋಚನೆಯಲ್ಲಿರುವಾಗಲೇ, ಒಂದು ಕನಸು. ಅದೆಂದರೆ…ನೀರಿಲ್ಲದ ಬಾವಿಯಲ್ಲಿ ‘ಕಾಪಾಡಿ ‘ಎನ್ನುವ ಕೈಯೊಂದು ಕಾಣಿಸಿ, ಅದು ರಾಘವನೆ ಆಗಿರಬಹುದೇ ಎನಿಸುತ್ತದೆ.

ಬರಹಗಾರ್ತಿಯಾಗಿದ್ದ ಜಾನಕಿ ದುಃಖ ಮರೆಯಲು, ಏಕಾಂತ ಬಯಸಿ ತನ್ನ ಮಗ ಅರುಣನನ್ನು ತಾಯಿಯ ಮನೆಯಲ್ಲಿ ಬಿಟ್ಟು ತಿರುಪತಿಯ ಬೆಟ್ಟಕ್ಕೆ ಬರುತ್ತಾಳೆ.ಅವಳ ಸ್ಥಿತಿಯನ್ನು ಕಂಡು ಮರುಗುವ ಅಜ್ಜಿ ಆಕೆಗೆ ಹತ್ತುದಿನಗಳ ಕಾಲ ತಮ್ಮ ಮನೆಯಲ್ಲಿ ಆಶ್ರಯವಿತ್ತಿದ್ದಲ್ಲದೇ, ಶ್ರೀನಿವಾಸ ಕಲ್ಯಾಣದ ಕಥೆಯನ್ನೂ ಜಾನಕಿಗೆ ಹೇಳುವುದು ಬರಹಗಾರ್ತಿಯಾದ ಅವಳ ಬರಹಕ್ಕೆ ಸ್ಫೂರ್ತಿ ನೀಡುತ್ತದೆ.

ತನ್ನ ಉತ್ಕಟ ಪ್ರೇಮ ಕೂಡ ಭಕ್ತಿಯಂತೆಯೇ ಒಂದು ಸಮರ್ಪಣೆ.ಎಂದೇ ಭಾವಿಸುವ ಅವಳು ಪೌರಾಣಿಕ ನೆಲೆಯ ಶ್ರೀನಿವಾಸ- ಪದ್ಮಾವತಿ, ಕಲ್ಯಾಣದ ಗೋಕುಲದ ರಾಧೆ -ಶ್ಯಾಮರ ಪ್ರೇಮ ಹಾಗೂ ಗಿರಿಧರ- ಮೀರಾ ಇವರೆಲ್ಲರ ಕಥೆಗಳನ್ನೂ ಕೇಳಿ ಅಲ್ಲಲ್ಲಿ ಟಿಪ್ಪಣಿ ಮಾಡಿ ಕೊಳ್ಳುತ್ತಲೆ ತಮ್ಮ ದಾಂಪತ್ಯ ಜೀವನವನ್ನು ನೆನಪು ಮಾಡಿಕೊಳ್ಳುತ್ತಾಳೆ.

ಮಕ್ಕಳ ಆಟಿಕೆ ತಯಾರಿಸುವ ಕಂಪನಿಯೊಂದರ ಮಾಲೀಕ ರಾಘವ. ದೇವಸ್ಥಾನದಲ್ಲಿ ಹೂವಿನೊಂದಿಗೆ ಶುರುವಾದ ಅವರಿಬ್ಬರ ಮೊದಲ ಪರಿಚಯ,ಮತ್ತೊಮ್ಮೆ ಭೇಟಿ, ನಂತರ ಅವನ ಆಟಿಕೆ ಕಾರ್ಖಾನೆಯಲ್ಲಿ ಅವಳಿಗೂ ಕೆಲಸ ಸಿಕ್ಕಿದ್ದು, ವೃತ್ತಿಯೊಡನೆ ತನ್ನ ಪ್ರವೃತ್ತಿಯಾದ ಬರವಣಿಗೆಯನ್ನು ಮುಂದುವರೆಸುತ್ತಾ, ಅವನ ಮೆಚ್ಚುಗೆ ಗಳಿಸಿದ್ದು. ಹೀಗೆ ಉಂಟಾದ ಪ್ರೀತಿ ಕ್ರಮೇಣ ಅವರಿಬ್ಬರನ್ನೂ ಮದುವೆಯಲ್ಲಿ ಜೊತೆಗೂಡಿಸಿತ್ತು. ಹದಿನೈದು ವರ್ಷದ ಸುಮಧುರ ವೈವಾಹಿಕ ಜೀವನದಲ್ಲಿ ಮೂಡಿದ ಏಕೈಕ ಕುಡಿಯೆಂದರೆ ಮಗ ಅರುಣ.

ತನ್ನ ಜೀವನಕ್ಕೆ ಭರವಸೆ- ಭದ್ರತೆ ನೀಡಿದ ರಾಘವನ ಮೇಲೆ ಜಾನಕಿಗೆ ಇನ್ನಿಲ್ಲದ ಪ್ರೀತಿಯ ಸಮರ್ಪಣೆಯ ಭಾವ. ಅವನದು ದೊರೆಮಗನ ವ್ಯಕ್ತಿತ್ವ ಎಂದು ಕೊಂಡಾಡುವ ಅವಳು ಅಂತಹ ಗಂಡ ಸಿಕ್ಕಿದ್ದು ತನ್ನ ಅದೃಷ್ಟವೆಂದು ಭಾವಿಸಿದ್ದಳು.

ಅವಳ ಸುಪ್ತ ಮನಸ್ಸು ಅವನು ಇಲ್ಲವೆಂದು ಒಪ್ಪಲು ಹಿಂದೇಟು ಹಾಕುತ್ತದೆ. ರಾಘವನು ಮೊಬೈಲ್ ಕಳೆದುಕೊಂಡು ತನ್ನೊಡನೆ ಸಂಪರ್ಕ ಹೊಂದಲು ಸಾಧ್ಯವಾಗದೇ ತನ್ನಂತೆ ಅಲ್ಲಿ ಪರಿತಪಿಸುತ್ತಿರ ಬಹುದೇ?.. ಇಲ್ಲಿ ತನಗೆ ಅಜ್ಜಿಯೊಬ್ಬಳು ಸಿಕ್ಕಂತೆ.. ಅಲ್ಲಿ ಅವನೂ ಅಜ್ಜನೊಬ್ಬನೊಂದಿಗೆ ಕಾಡಲ್ಲಿ ದಾರಿತಪ್ಪಿ ಓಡಾಡುತ್ತಿರಬಹುದೇ?… ಎಂದೆಲ್ಲಾ ಚಿಂತಿಸುತ್ತಾಳೆ.

ತನ್ನೆಲ್ಲ ನೋವನ್ನು ಬರೆದು ಹೊರಹಾಕಲು ಪ್ರಯತ್ನಿಸುವ ಜಾನಕಿ ಪುರಾಣದ ದೇವತೆಯರ ಪಾತ್ರಗಳಲ್ಲಿ ತನ್ನನ್ನು ಸಮೀಕರಿಸಿಕೊಳ್ಳುತ್ತಾ ‘ತನ್ನ ಗಂಡ ಮರಳಿ ಬರುತ್ತಾನೆ ‘ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಾಳೆ. ಪ್ರೇಮ ಮತ್ತು ವಿರಹದ ದಟ್ಟತೆಯೇ ಈ ಕತೆಯ ಸಾಂದ್ರತೆ ಎನ್ನ ಬಹುದು.

ನೀನು ದೇವರಿಗೆ ಶರಣಾಗದ ಹೊರಟು ಮುಂದಿನ ದಾರಿಯಿಲ್ಲ.. ಎನ್ನುವ ಹಿರಿಯರ ಮಾತಿನಂತೆ, ವ್ರತ ಆಚರಣೆ ಮಾಡುವ ಜಾನಕಿಯ ಮನೋಭಿಲಾಶೆ ,ಸಂಕಟ ಶಮನವಾಗಿದ್ದು ಹೇಗೆ?.

ಕಲ್ಪನೆ,ವಾಸ್ತವ,ಭಾಷಾ ಸೌಂದರ್ಯ, ದೈವೀಕ ಪ್ರೀತಿ, ಭಕ್ತಿಯ ಪರಾಕಾಷ್ಟೆ ಇವನ್ನೆಲ್ಲಾ ಲೇಖಕಿ ಆಪ್ತ ಹಾಗೂ ಪ್ರಬುದ್ಧವಾಗಿ ಚಿತ್ರಿಸಿದ್ದಾರೆ.ವಿಷ್ಣು ಲಕ್ಷ್ಮಿಯನ್ನು ತನ್ನ ವಕ್ಷ ಸ್ಥಲದಲ್ಲಿ ಧರಿಸಿರುವಂತೆ ತಾನೂ ತನ್ನ ನಲ್ಲನ ಹೃದಯ ಮಂದಿರದಲ್ಲಿ ಶಾಶ್ವತವಾದ ಸ್ಥಾನ ಪಡೆಯಬೇಕೆನ್ನುವ ಆರಾಧನಾಭಾವವೇ ಇದರ ಸಾರ.

ಇದನ್ನು ಲೇಖಕಿ ಸಮರ್ಥವಾಗಿ ಮತ್ತು ಸ್ವಾರಸ್ಯಕರವಾಗಿ ತಮ್ಮ ಬರಹದಲ್ಲಿ ಮೂಡಿಸಿದ್ದಾರೆ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading