ವೃತ್ತಿರಂಗಭೂಮಿಯಲ್ಲಿ ಮೂರು ಮುಖ್ಯ ಪರಂಪರೆಗಳು. ಅದು ನಟ ನಟಿಯರ ಅಭಿನಯ ಪರಂಪರೆ, ರಂಗಸಂಗೀತ ಪರಂಪರೆ, ರಂಗಸಜ್ಜಿಕೆ ಪರಂಪರೆ. ಹೀಗೆ ವೃತ್ತಿ ರಂಗಭೂಮಿಯ ಕುರಿತು ದಾವಣಗೆರೆಯ ರಂಗಾಯಣ ನಿರ್ದೇಶಕರಾದ ಮಲ್ಲಿಕಾರ್ಜುನ ಕಡಕೋಳ ಅವರು ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…
ಕನ್ನಡ ರಂಗಭೂಮಿಗೆ ನೂರೈವತ್ತಕ್ಕೂ ಹೆಚ್ಚು ವರುಷಗಳ ರಂಗೇತಿಹಾಸ. ಅಷ್ಟೂ ವರುಷಗಳ ಪರ್ಯಂತರವೂ ವೃತ್ತಿ ರಂಗಭೂಮಿಯದು ಸುದೀರ್ಘ ಪಯಣದ ರಂಗಚರಿತ್ರೆ. ಪ್ರೊಸಿನಿಯಂ ಮಾದರಿಯ ಅದು ಪಾರ್ಸಿ ಮತ್ತಿತರೆ ಪ್ರಭಾವಗಳಿಂದ ಬೃಹದಾಕಾರ ಬೆಳೆದು ರಾಷ್ಟ್ರೀಯ ರಂಗಭೂಮಿಯ ಗುರುತರ ಬಾಹುಳ್ಯ ಗಳಿಸಿತು. ಪುರಾಣೇತಿಹಾಸ, ಸ್ವಾತಂತ್ರ್ಯ ಚಳವಳಿ, ಖಾದಿ ಚಳವಳಿ, ಒರಿಜಿನಲ್ ದೇಶಭಕ್ತಿ, ಸಮಾಜೋಧಾರ್ಮಿಕ ನೀತಿ, ಅವಿಭಜಿತ ಕುಟುಂಬ ಪ್ರೀತಿ ಮುಂತಾದ ಗುಣಾತ್ಮಕ ದೇಸಿ ಸಂವೇದನೆಗಳ ರಂಗಸಂಸ್ಕೃತಿ ನಿರೂಪಿಸಿದ್ದು ವೃತ್ತಿ ರಂಗಭೂಮಿ.
ಮಹಾತ್ಮಾ ಗಾಂಧೀಜಿಯವರು ‘ಸತ್ಯಹರಿಶ್ಚಂದ್ರ’ ಎಂಬ ವೃತ್ತಿ ರಂಗನಾಟಕ ನೋಡಿ ಜ್ಞಾನೋದಯ ಬದುಕಿನ ಸಾಕ್ಷಾತ್ಕಾರ ಕಂಡುಕೊಂಡವರು. ವರನಟ ಡಾ. ರಾಜಕುಮಾರ ಮತ್ತು ಅವರ ಸಮಕಾಲೀನ ಅನೇಕರು ವೃತ್ತಿ ರಂಗಭೂಮಿ ನಾಟಕಗಳ ದಿವಿನಾದ ಪರಂಪರೆ ಪೊರೆದ ಪ್ರಾತಃಸ್ಮರಣೀಯರು. ಹಾಗೆಯೇ ಅಂದು ನಾಟಕ ಕಂಪನಿಗಳು ಅವರನ್ನು ಸಾಕಿ ಸಲಹಿದ್ದು ಸಹಿತ ಅಷ್ಟೇ ಪ್ರಖರ ಸತ್ಯ. ಅಂತಹ ಹಲವು ಮಹತ್ತರ ಕಾರಣಗಳಿಂದಾಗಿಯೂ ವೃತ್ತಿ ರಂಗಭೂಮಿಯ ಅಸ್ಮಿತೆಯು ಜನಪ್ರಿಯತೆಯ ಮಹತ್ವದ ಪಾರಮ್ಯ ಮೆರೆದಿದೆ.

ಅಂದಿನ ವಸಾಹತುಶಾಹಿ ಕಂಪನಿ ಸರಕಾರಗಳ ಸಂದರ್ಭದಲ್ಲಿ ಜನ್ಮತಾಳಿದ ನಾಟಕ ಕಂಪನಿಗಳು ಇವತ್ತಿಗೂ ವೃತ್ತಿ ರಂಗಭೂಮಿಯ ನಾಟಕ ಕಂಪನಿಗಳೆಂದೇ ಪ್ರತೀತಿ ಉಳಿಸಿಕೊಂಡಿವೆ. ವೃತ್ತಿರಂಗಭೂಮಿಯ ನಾಟಕ ಪಠ್ಯಗಳಿಗೆ ಅರ್ಥಾತ್ ಎಂಬ ಪರ್ಯಾಯದ ಸರಳ ಹೆಸರುಗಳಿರುವುದು ವಾಡಿಕೆ. ಅಂತೆಯೇ ಅದೇ ರಿವಾಜಿನಲ್ಲಿ ಕಂಪನಿ ನಾಟಕ ಅರ್ಥಾತ್ ವೃತ್ತಿ ರಂಗಭೂಮಿ ಎಂತಲೂ ಕೆಲವರು ಅರ್ಥೈಸಿದ್ದಾರೆ. ಒಂದು ಶತಮಾನದಷ್ಟು ಹಿಂದೆ ವೃತ್ತಿ ರಂಗಭೂಮಿಯ ನೂರಾ ಮುವತ್ತಾರು ನಾಟಕ ಕಂಪನಿಗಳು ಕನ್ನಡನಾಡಿನ ತುಂಬಾ ಅಗಾಧವಾದ ರಂಗಬೆರಗು ಬಿತ್ತಿ ಬೆಳೆದಿವೆ. ಅದೊಂದು ಸುದೀಪ್ತ ರಂಗವೈಭವದ ಸುವರ್ಣ ಕಾಲ. ಅಂತಹ ಸದಭಿರುಚಿ ಮತ್ತು ಸಹೃದಯ ಸಂಪನ್ನ ಕಾಲ ಈಗ ಖಂಡಿತಾ ಉಳಿದಿಲ್ಲ.
ನಾಟಕ ಕಂಪನಿಗಳ ಸಂಖ್ಯೆ ಮತ್ತು ಗುಣಸಂಖ್ಯೆ ಎರಡೂ ಗಣನೀಯವಾಗಿ ಇಳಿಮುಖಗೊಂಡಿವೆ. ಕಂಪನಿಗಳ ಸಂಖ್ಯೆ ಕೇವಲ ಇಪ್ಪತ್ತಾರಕ್ಕೆ ಇಳಿದಿದೆ. ಈ ಇಪ್ಪತ್ತಾರು ನಾಟಕ ಕಂಪನಿಗಳು ಈಗ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಮಾತ್ರ ಇವೆ. ಅವುಗಳಲ್ಲಿ ಕೆಲವು ಅರೆಕಾಲಿಕ ಮತ್ತೆ ಕೆಲವು ಮುಚ್ಚಿಹೋಗುವ ಸ್ಥಿತಿಯಲ್ಲಿವೆ. ಈ ಅಂಕಿಅಂಶಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಅನುದಾನದ ಕಾಯಕಲ್ಪ ಯೋಜನೆಯ ಮಾಹಿತಿ. ಅದೇನೇ ಇರಲಿ, ಲಕ್ಷ ಲಕ್ಷ ರೂಪಾಯಿಗಳ ಸರ್ಕಾರದ ಅನುದಾನ ಬಹುಪಾಲು ನಾಟಕ ಕಂಪನಿಗಳ ಉಸಿರಾಟಕ್ಕೆ ಪ್ರಾಣವಾಯು ಒದಗಿಸಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಹಗಲುವೇಷಗಾರರ ಆರೇಳು ವೃತ್ತಿನಾಟಕ ಕಂಪನಿಗಳು ಅಕ್ಷರಶಃ ಅವರ ಅನ್ನದ ಮಾರ್ಗಗಳು. ಏಕೆಂದರೆ ರಂಗಕಲೆಯೇ ಅವರ ಏಕೈಕ ಕಾಯಕ. ವಚನ ಚಳವಳಿಯ ಬಹುರೂಪಿ ಚೌಡಯ್ಯ, ಜಗತ್ತಿನ ಮೊಟ್ಟಮೊದಲ ವೃತ್ತಿ ರಂಗಕರ್ಮಿ. ಅಂತಹ ಪರಂಪರೆ ಇವರದು.
ನಾಟಕ ಕಂಪನಿಗಳು ಮಾತ್ರ ವೃತ್ತಿ ರಂಗಭೂಮಿ ಪ್ರಕಾರ(Form)ಗಳಲ್ಲ. ಹಾಗೆ ನೋಡಿದರೆ ದಕ್ಷಿಣ ಕರ್ನಾಟಕದ ಕಡೆ ಅನುದಾನ ಪಡೆಯುವ ಒಂದೇಒಂದು ನಾಟಕ ಕಂಪನಿ ಈಗಿಲ್ಲ. ಹಾಗೆಂದು ಅಲ್ಲಿ ವೃತ್ತಿರಂಗಭೂಮಿ ಜೀವಂತವಾಗಿಲ್ಲ ಎಂದು ಹೇಳಲಾಗದು. ಕಂಪನಿಗಳಿಗೆ ಬದಲು ದಕ್ಷಿಣದ ಬಹುತೇಕ ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಕಲಾವಿದರು, ನೂರಾರು ಹವ್ಯಾಸಿ ತಂಡಗಳು ವರ್ಷಕ್ಕೆ ಸಹಸ್ರಾರು ವೃತ್ತಿ ರಂಗಭೂಮಿ ನಾಟಕಗಳ ಉತ್ಕೃಷ್ಟ ಪ್ರದರ್ಶನ ನೀಡುತ್ತವೆ. ತನ್ಮೂಲಕ ಲೋಕಮನ್ನಣೆ ಗಳಿಸುತ್ತಿರುವ ಹೆಗ್ಗಳಿಕೆ ಮತ್ತು ಪರಂಪರೆಯಾಗಿ ಬೆಳೆದಿವೆ. ಈ ರಂಗಸಂಭ್ರಮವನ್ನು ಕೆಲವರು ಹರಕೆಯಂತೆ ಆಚರಿಸುತ್ತಾರೆ. ಮಾಹಿತಿಯೊಂದರ ಪ್ರಕಾರ ಒಂದುವರ್ಷಕ್ಕೆ ಕರ್ನಾಟಕದಾದ್ಯಂತ ಹವ್ಯಾಸಿ ಕಲಾವಿದರಿಂದ ಅಜಮಾಸು ಹದಿನೈದರಿಂದ ಹದಿನೆಂಟು ಸಾವಿರ ವೃತ್ತಿ ರಂಗಭೂಮಿ ನಾಟಕಗಳು ಪ್ರದರ್ಶನ ಕಾಣುತ್ತವೆ.
ಈ ಎಲ್ಲ ಪ್ರದರ್ಶನಗಳು ಸರಕಾರದ ಅನುದಾನಕ್ಕೆ ಅರ್ಜಿಹಾಕಿ ಕಾಯದೇ, ಇವರು ಇದಕ್ಕಾಗಿ ₹ ಎಂಬತ್ತರಿಂದ ನೂರು ಕೋಟಿಯಷ್ಟು ತಮ್ಮ ‘ಸ್ವಂತಹಣ’ ವರ್ಷವೊಂದಕ್ಕೆ ಖರ್ಚು ಮಾಡುತ್ತಾರೆ. ಇದು ಅಕ್ಷರಶಃ ಜನಸಂಸ್ಕೃತಿ ಬೆಳವಣಿಗೆಗೆ ನೆರವಾಗುತ್ತಿರುವ “ಜನಸಾಮಾನ್ಯರ ರಂಗಭೂಮಿ” ಎಂಬುದನ್ನು ಈ ಮೂಲಕ ಸಾಕ್ಷೀಕರಿಸುತ್ತದೆ. ಅಂತೆಯೇ ವೃತ್ತಿ ರಂಗಭೂಮಿಯು ಕನ್ನಡಲೋಕದ ಸಾಂಸ್ಕೃತಿಕ ಶಕ್ತಿಯಾಗಿದೆ. ಬಹುತ್ವ ಭಾರತದ ಪ್ರಾದೇಶಿಕ ಭಾಷೆ, ಪರಿಸರದ ರಂಗವಾಂಛೆ ಸಮೃದ್ಧಿಯಾಗಿ ಹೊರಹೊಮ್ಮಿದ್ದನ್ನು ಇಲ್ಲಿ ಗುರುತಿಸಬಹುದಾಗಿದೆ.
ಹಳೆಯ ಮೈಸೂರು ಪ್ರಾಂತ್ಯದ ಹದಿಮೂರು ಜಿಲ್ಲೆಗಳಲ್ಲಿ ವರ್ಷಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ವೃತ್ತಿರಂಗಭೂಮಿಯ ಪೌರಾಣಿಕ ನಾಟಕಗಳು ಪ್ರಯೋಗಗೊಳ್ಳುತ್ತವೆ. ವರ್ತಮಾನದ ಯಾವುದೇ ವೃತ್ತಿಪರ ನಾಟಕ ಕಂಪನಿಗಳಲ್ಲಿ ಕಾಣಸಿಗದ ಕಂದ, ವೃತ್ತ ಮತ್ತು ಸೀಸ ಪದ್ಯಗಳೆಂಬ ರಂಗಗೀತೆಗಳ ಸಿರಿಘಮಲು ಇವರ ರಂಗಪ್ರಯೋಗಗಳಲ್ಲಿ ಪರಿಮಳಿಸುತ್ತವೆ. ಹವ್ಯಾಸಕ್ಕಾಗಿ ಗ್ರಾಮೀಣ ಮತ್ತು ಶಹರವಾಸಿ ಕಲಾವಿದರು ಆಡುವ ವೃತ್ತಿ ರಂಗಭೂಮಿಯ ಈ ನಾಟಕಗಳು ಕಂಪನಿ ನಾಟಕಗಳ ಪ್ರಭಾವ ಪ್ರೇರಿತ ಪ್ರದರ್ಶನಗಳೇ ಆಗಿರುತ್ತವೆ. ಕಂಪನಿ ನಾಟಕಗಳು ಗ್ರಾಮೀಣ ಹವ್ಯಾಸಿಗಳಿಗೆ ಮಾತೃಮಾದರಿ. ಹಾಗಂತ ಅಲ್ಲಲ್ಲಿ ಕೆಲವು ಅಪದ್ಧಗಳು ಇಲ್ಲದಿಲ್ಲ. ತಮ್ಮೂರಿನ ದೈವದ ಪರಿಶೆಗೋ, ಗ್ರಾಮದೇವತೆಗಳ ಜಾತ್ರೆಗೋ ಆಡುವ ಇವುಗಳಿಗೂ ಕಂಪನಿಗಳ ಮಾದರಿಯ ನಾಟ್ಯಸಂಘದ ಪರಂಪರಾಗತ ಹೆಸರುಗಳೇ ಅಪ್ಯಾಯಮಾನ. ಇವು ನಾಟಕ ಕಂಪನಿಗಳ ವಿಸ್ತೃತ ರೂಪಗಳಾಗಿವೆ.
ನಾಟಕ ಕಂಪನಿಗಳ ಹೆಸರಿನಲ್ಲೇ ನಾಟ್ಯ ಮತ್ತು ಸಾಹಿತ್ಯ, ಸಂಗೀತದ ಜೀವಸತ್ವವಿದೆ. ಹಲಗೇರಿಯ ಕುಡುಗೋಲು ಜೆಟ್ಟೆಪ್ಪನವರ ಕಂಪನಿ ಹೆಸರು ಶ್ರೀ ಹಾಲಸಿದ್ದೇಶ್ವರ ಸಾಗ್ರ ಸಂಗೀತ ನಾಟ್ಯ ಮಂಡಳಿ. ಇತ್ತ ಹಳೆಯ ಮೈಸೂರು ಪ್ರಾಂತ್ಯದ ಸುಬ್ಬಯ್ಯ ನಾಯ್ಡು ಕಂಪನಿ ಹೆಸರು ‘ಕರ್ನಾಟಕ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’ ಎಂದಿತ್ತು. ನಾಟಕ ಸಂಘಗಳ ಹೆಸರಲ್ಲಿ ಇಷ್ಟದೈವದ ಅನುಸಂಧಾನದೊಂದಿಗೆ ನಾಟ್ಯ ಮತ್ತು ಸಂಗೀತದ ಸಾಹಚರ್ಯ ಇರುತ್ತದೆ. ಅದೊಂದು ಆನುಷಂಗಿಕ ಫಲಶೃತಿ. ಅರಮನೆ ಮತ್ತು ಗುರುಮನೆಗಳಿಗೆ ಮಾತ್ರ ಮೀಸಲಾಗಿದ್ದ ಶಾಸ್ತ್ರೀಯ ಸಂಗೀತ, ನೃತ್ಯಗಳನ್ನು ಜನಸಾಮಾನ್ಯರು ಪರವಶವಾಗುವಂತೆ ಲೋಕಕ್ಕೆ ಪರಿಚಯಿಸಿದ್ದು ನಮ್ಮ ಕಂಪನಿ ನಾಟಕಗಳು.
ಒಂದರ್ಥದಲ್ಲಿ ಅಂದಿನ ನಾಟಕ ಕಂಪನಿಗಳು ಸಾಂಸ್ಕೃತಿಕ ಅರಿವಿನ ಮನೆಗಳಾಗಿದ್ದವು. ಅಂತೆಯೇ ಕುವೆಂಪು, ಬೇಂದ್ರೆ, ಅನಕೃ ಅವರಂಥ ಮೇಧಾವಿಗಳು ಅಂದಿನ ನಾಟಕ ಕಂಪನಿಗಳ ಒಡನಾಡಿಗಳಾಗಿದ್ದರು. ಅಂದಿನ ಸಾಂಸ್ಕೃತಿಕ ಸ್ವಾಯತ್ತತೆಯನ್ನು ಇಂದು ನಾಟಕ ಕಂಪನಿಗಳು ಉಳಿಸಿಕೊಂಡಿಲ್ಲ. ಆದಾಗ್ಯು ಗ್ರಾಮೀಣ ಹವ್ಯಾಸಿಗಳು ಆಡುವ ವೃತ್ತಿ ರಂಗಭೂಮಿ ನಾಟಕಗಳಿಗೆ ಕಂಪನಿ ನಾಟಕಗಳೇ ರೋಲ್ ಮಾಡೆಲ್. ಕಂಪನಿಯ ನಟ, ನಟಿಯರ ಅಭಿನಯ ಮಾದರಿ ಅನುಕರಣೀಯ. ಅಲ್ಲೊಂದು Actor Orientation ಇರುತ್ತದೆ.
ವೃತ್ತಿರಂಗಭೂಮಿಯಲ್ಲಿ ಮೂರು ಮುಖ್ಯ ಪರಂಪರೆಗಳು. ಅದು ನಟ ನಟಿಯರ ಅಭಿನಯ ಪರಂಪರೆ. ಮಾನವಿ ಅದೃಶ್ಯಪ್ಪನವರ ಭೀಮನ ಪಾತ್ರ, ಗಂಗಾಧರರಾಯರ ದುರ್ಯೋಧನನ ಪಾತ್ರ, ನಮ್ಮಕಾಲದ ಮನಸೂರ ಸುಭದ್ರಮ್ಮನ ಮಲ್ಲಮ್ಮ ಇಲ್ಲವೇ ದ್ರೌಪದಿ ಪಾತ್ರ ನೋಡಲೆಂದೇ ಬರುವ ಪ್ರೇಕ್ಷಕ ಗಣವಿತ್ತು. ಹಾಗೆಯೇ ರಂಗಸಂಗೀತ ಪರಂಪರೆ. ಜುಬೇದಾಬಾನು ಸವಣೂರು ರಂಗಗೀತೆ ಕೇಳಲೆಂದೇ ಬರುವ ಜನಸ್ತೋಮವಿತ್ತು. ಈಗಲೂ ಮೈಸೂರು ಪ್ರಾಂತ್ಯದ ಪುಟ್ಟಣ್ಣಯ್ಯ ಮತ್ತು ಕಿರಗಸೂರು ರಾಜಪ್ಪ ಸೇರಿದಂತೆ ಅನೇಕರ ರಂಗಗೀತೆಗಳಿಗೆ ಅಪಾರ ಬೇಡಿಕೆ.
ಪ್ರಮುಖವಾಗಿ ರಂಗಸಜ್ಜಿಕೆ ಪರಂಪರೆ. ಗುಬ್ಬಿ ವೀರಣ್ಣನವರ ನಾಟಕ ಕಂಪನಿ ದಾವಣಗೆರೆಗೆ ಬರುತ್ತದೆಂದರೆ ರೈಲ್ವೆ ವ್ಯಾಗನ್ ಗಳಲ್ಲಿ ಕಂಪನಿಯ ರಂಗಸಂಪತ್ತು ಬರುತ್ತಿತ್ತು. ಮೊಲ, ಜಿಂಕೆ, ಕುದುರೆ, ಪಾರಿವಾಳ ಹೀಗೆ ಪ್ರಾಣಿ ಪಕ್ಷಿಗಳ ಪುಟ್ಟ ಮ್ಯುಜಿಯಮ್ ಅದಾಗಿರುತ್ತಿತ್ತು. ಉತ್ತರ ಕರ್ನಾಟಕದ ಸುಳ್ಳದ ದೇಸಾಯರ ಕಂಪನಿಯು ರಂಗಸಜ್ಜಿಕೆಗೆ ಫೇಮಸ್. ಈಗಲೂ ಖಾಸಗಿಯಾಗಿ ರಂಗಸಜ್ಜಿಕೆಗಳ ಝಗಮಗಿಸುವಿಕೆಗೆ ಬರವಿಲ್ಲ. ಹೀಗೆ ನಾಟಕ ಕಂಪನಿಗಳು ಪರಂಪರೆಗಳ ಆಡುಂಬೊಲವೇ ಆಗಿದ್ದವು. ಗೋಕಾಕ ಬಸವಣ್ಣೆಪ್ಪನವರ ಶಾರದಾ ಸಂಗೀತ ನಾಟಕ ಮಂಡಳಿ ಈಗಿನ ರೆಪರ್ಟರಿಗಳಿಗಿಂತ ಮಿಗಿಲಾದ ರಂಗಭೂಮಿಯ ವಿಶ್ವವಿದ್ಯಾಲಯವೇ ಆಗಿತ್ತು.
ಚರಿತ್ರೆಕಾರರು ವೃತ್ತಿ ರಂಗಭೂಮಿಯನ್ನು ಪ್ರಧಾನ ಸಂಸ್ಕೃತಿಧಾರೆಗೆ ಪರಿಗಣಿಸಲಿಲ್ಲ. ಕೆಲವರಂತೂ ಅದನ್ನು ಅಧೀನ ಸಂಸ್ಕೃತಿಯಂತೆಯೂ ನೋಡದೇ “ವೃತ್ತಿ ರಂಗದ ಪಡದೆ ಅದಿನ್ನೂ ಸುಡದೇ” ಎಂದವರುಂಟು. ಆಧುನಿಕ ರಂಗಭೂಮಿಯ ಶ್ರೀರಂಗರ ಕುರಿತು “ಶ್ರೀರಂಗ ಸಾರಸ್ವತ” ಎಂಬ ಹೆಬ್ಬೊತ್ತಿಗೆಗಳ ಮೀಮಾಂಸಾ ಸಂಪುಟಗಳನ್ನೇ ಇಲಾಖೆ ಪ್ರಕಟಿಸಿದೆ. ವೃತ್ತಿ ರಂಗಭೂಮಿಯ ದಿಗ್ಗಜ ಮತ್ತು ಕನ್ನಡದ ಶೇಕ್ಸ್ ಪಿಯರ್ ಎಂದೇ ಕನ್ನಡಿಗರ ಮನೆಮಾತಾದ ಕಂದಗಲ್ ಹಣಮಂತ್ರಾಯರ ಕುರಿತು ಒಂದಾದರೂ ಗ್ರಂಥ ಪ್ರಕಟಿಸಲಿಲ್ಲ.

ಫೋಟೋ ಕೃಪೆ : ಅಂತರ್ಜಾಲ
ಮೊನ್ನೆ ಮೊನ್ನೆಯಷ್ಟೇ ಸರಕಾರ ಕಂದಗಲ್ ಹನುಮಂತರಾಯರ ಹೆಸರಿನ ಪ್ರತಿಷ್ಠಾನ ಸ್ಥಾಪಿಸಿರುವುದು ಸ್ವಾಗತಾರ್ಹ. ವೃತ್ತಿರಂಗಭೂಮಿಯನ್ನು ವಿದ್ವತ್ ಜಗತ್ತು ಕಡೆಗಣಿಸಿರಬಹುದು. ಆದರೆ ಜನಮಾನಸದ ಲೋಕಮೀಮಾಂಸೆಯಲ್ಲಿ ವೃತ್ತಿ ರಂಗಭೂಮಿಗೆ ಅಪೂರ್ವ ಜಾಗವಿದೆ ಎಂಬುದನ್ನು ಕಡೆಗಣಿಸಲಾಗದು. ಕಾಲಾನುಕ್ರಮದಲ್ಲಿ ಸ್ಥಿತ್ಯಂತರ ಕಂಡರೂ ಮೂಲ ಮನೋಧರ್ಮದ ಪ್ರೇಕ್ಷಕರ ನಿರೀಕ್ಷೆಗಳನ್ನು ಕಳೆದುಕೊಂಡಿಲ್ಲ. ಈಚೆಗೆ ಕಾರ್ಪೋರೆಟ್ ಕಲ್ಚರ್ ಸೃಷ್ಟಿಸಿದ ಟ್ರೆಂಡಿಂಗ್ ಕಾಮೆಡಿ ಕೊಳಕಾಟಗಳು ಸಹೃದಯ ಸದಭಿರುಚಿ ಹದಗೆಡಿಸಿವೆ.
ವೃತ್ತಿ ರಂಗಭೂಮಿಗೆ ಒಳ್ಳೆಯದನ್ನು ಮಾಡಬೇಕೆಂಬ ಸದಿಚ್ಛೆ ಸರಕಾರಕ್ಕಿದೆ. ಏನು ಮಾಡಬೇಕೆಂಬ ಸ್ಪಷ್ಟತೆಯೂ ಇರಬೇಕಿದೆ. ಅದಕ್ಕಾಗಿ ಸಮಗ್ರ ಅಧ್ಯಯನ, ಸಂಶೋಧನೆಗಳ ವಿಸ್ತೃತವಾದ ಕಾರ್ಯಯೋಜನೆ ರೂಪಿಸಬೇಕಿದೆ. ಆ ನಿಟ್ಟಿನಲ್ಲಿ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ತನ್ನ ಸ್ವರೂಪ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ. ಅಷ್ಟಕ್ಕೂ ಆರಂಭಕ್ಕೆ ಅದು ‘ವೃತ್ತಿ ರಂಗಭೂಮಿ ಕೇಂದ್ರ’ ಹೆಸರಿನ ಸಮಗ್ರ ಅಧ್ಯಯನ, ಸಂಶೋಧನೆ ಮತ್ತು ರಂಗಶಿಕ್ಷಣದ ಧ್ಯೇಯ ಹೊಂದಿತ್ತು. ನಂತರದಲ್ಲಿ ರಂಗಾಯಣವೆಂದು ರೂಪಾಂತರ ಆಗಿದ್ದು ನಿಕಷಕ್ಕೆ ಬಿಟ್ಟದ್ದು. ವೃತ್ತಿ ರಂಗಭೂಮಿ ಹಿತಾಸಕ್ತಿಗಳ ಸಮಗ್ರ ಭೂಮತೆಯನ್ನು ವರ್ತಮಾನೀಕರಿಸಿ ಸಂಗೋಪಿಸಬೇಕಿದೆ.
- ಮಲ್ಲಿಕಾರ್ಜುನ ಕಡಕೋಳ – ನಿರ್ದೇಶಕರು, ವೃತ್ತಿ ರಂಗಭೂಮಿ, ರಂಗಾಯಣ, ದಾವಣಗೆರೆ
