‘ನಮಸ್ಕಾರ’ ಎಂಬುವುದು ಯೋಗದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಹಿಂದೂ ಸಂಪ್ರದಾಯದಲ್ಲಿ ಒಬ್ಬರನ್ನೊಬ್ಬರು ಎದುರಗೊಂಡಾಗ ಸೌಜನ್ಯ ಕುಶಲೋಪರಿ ವಿಚಾರಿಸುವ ಒಂದು ಗೌರವಯುತ ರೂಪ ಇದು. ಹೀಗೆ ಯೋಗ ಹಾಗೂ ಅದರ ಮಹತ್ವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ವಕೀಲೆ, ಬರಹಗಾರ್ತಿ ಪವಿತ್ರ ಹೆಚ್.ಆರ್ ಅವರು, ತಪ್ಪದೆ ಮುಂದೆ ಓದಿ…
ಸಂಸ್ಕೃತ ಪದದಿಂದ ಬಂದಿರುವ ಯೋಗವು ವಿವಿಧ ಅರ್ಥಗಳನ್ನು ಹೊಂದಿದೆ. ಯೋಗ ಎಂದರೆ ನಿಯಂತ್ರಿಸುವ, ಐಕ್ಯವಾಗು ಅಥವಾ ಒಗ್ಗಟ್ಟು ಎಂಬರ್ಥಗಳ ಸಂಸ್ಕೃತ ಮೂಲ ಅರ್ಥವನ್ನು ಹೊಂದಿದೆ. ಭಾರತದ ಹೊರಗೆ ಯೋಗ ಪದವನ್ನು ಹಠಯೋಗ ಮತ್ತು ಅದರ ಆಸನಗಳನ್ನು ಗುರುತಿಸಲು ಬಳಸಲಾಗುತ್ತದೆ. ಹಿಂದೂ ತತ್ವ ಶಾಸ್ತ್ರದ ಸಂದರ್ಭದಲ್ಲಿ ಸರಳವಾಗಿ ಯೋಗ ಎಂದೆನಿಸಿಕೊಳ್ಳುವ ರಾಜ ಯೋಗವು ಸಾಂಖ್ಯ ಸಂಪ್ರದಾಯಕ್ಕೆ ಸೇರಿದ್ದು, ಅನೇಕ ಇತರ ಹಿಂದು ಗ್ರಂಥಗಳು, ಉಪನಿಷತ್ತುಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕ, ಶಿವಸಂಹಿತೆ ಮತ್ತು ಅನೇಕ ತಂತ್ರಗಳು ಸೇರಿದಂತೆ ಯೋಗದ ವಿವಿಧ ಮುಖಗಳನ್ನು ಪರಿಚಯಿಸಲಾಗಿದೆ.
ಫೋಟೋ ಕೃಪೆ :google
ಅದರಲ್ಲಿ ಮೊದಲನೇ ಸ್ಥಾನವನ್ನು ‘ನಮಸ್ಕಾರ’ ಎಂಬುವುದು ಪಡೆದಿದೆ. ಹಿಂದೂ ಸಂಪ್ರದಾಯದಲ್ಲಿ ಒಬ್ಬರನ್ನೊಬ್ಬರು ಎದುರಗೊಂಡಾಗ ಸೌಜನ್ಯ ಕುಶಲೋಪರಿ ವಿಚಾರಿಸುವ ಒಂದು ಗೌರವಯುತ ರೂಪ ಇದು. ಎರಡು ಕೈ ಮತ್ತು ಬೆರಳುಗಳನ್ನು ಸಮವಾಗಿ ಜೋಡಿಸಿ ಎದೆಗೆ ಒತ್ತಿದರೆ ಅದು ನಮಸ್ಕಾರ ಮುದ್ರೆಯಾಗುತ್ತದೆ. ಇಂದು ಈ ನಮಸ್ಕಾರ ಮುದ್ರೆ ಇಡಿ ವಿಶ್ವಕ್ಕೆ ಭರವಸೆ ತುಂಬುತ್ತಿದೆ. ಯೋಗದ ನಮಸ್ಕಾರ ಸಂಪ್ರದಾಯವನ್ನು ಜಗತ್ತಿನ ಎಲ್ಲ ದೇಶವೂ ಒಪ್ಪಿಕೊಂಡಿದೆ.
ಯೋಗ ಸಾಧನೆಯಿಂದ ಕ್ರಮೇಣ ಹಂತ-ಹಂತವಾಗಿ ಮನುಷ್ಯನು ಆತ್ಮವಿಕಾಸದ ತುತ್ತ ತುದಿಯನ್ನು ಮುಟ್ಟಬಲ್ಲ.ಈ ಸಾಧನೆಗೆ ಮುಖ್ಯವಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾನ್ಯ, ಧಾರಣ ಸಮಾಧಿಗಳೆಂಬ ಎಂಟು ಮೆಟ್ಟಿಲುಗಳುಂಟು. ಇದನ್ನೇ ಅಷ್ಟಾಂಗ ಯೋಗವೆಂದು ಕರೆಯುವರು. ಆಸನ, ಪ್ರಾಣಾಯಾಮಗಳು, ಯೋಗ ಸಾಧನೆಯ ಪ್ರಾಥಮಿಕ ಅವಸ್ಥೆ ಮಾತ್ರ. ಆದರೆ “ಶರೀರಮಾದ್ಯಂ ಖಲು ಧರ್ಮ ಸಾಧನಂ” ಎನ್ನುವಂತೆ ಆತ್ಮವಿಕಾಸಕ್ಕೆ ಅಣಿಯಾಗಲು ಆರೋಗ್ಯಯುತವಾದ ದೇಹದಾರ್ಢ್ಯವು ಮುಖ್ಯವಾದುದ್ದರಿಂದ ಈ ಆಸನ – ಪ್ರಾಣಾಯಾಮಗಳು ಪ್ರಾಥಮಿಕಾವಸ್ಥೆಯವಾದರೂ ಪ್ರಮುಖವಾದವುಗಳೇ ಆಗಿವೆ ಎಂಬುದು ನಮಗೆ ಈ ಕೊರೋನಾ ಕಾಲದಲ್ಲಿ ಎಲ್ಲರ ಅರಿವಿಗೆ ಬಂದಿರುತ್ತದೆ.

ನಮ್ಮ ದೇಹದ ಅಂಗ-ಸೂಕ್ಷ್ಮಾಂಗಗಳಲ್ಲಿ, ಕಣ – ಕಣಗಳನ್ನು ಭೇದಿಸಿ ದೇಹದ ಪೂರ್ಣಾರೋಗ್ಯವನ್ನು ಕಾಪಾಡಿಕೊಳ್ಳುವಂತ ರೋಗ ನಿವಾರಕ ಅದ್ಭುತ ಶಕ್ತಿಯು ಯೋಗಾಸನ, ಬಂಧ, ಕ್ರಿಯೆ, ಮುದ್ರೆ ಪ್ರಾಣಾಯಾಮದಲ್ಲಿ ಅಡಕವಾಗಿದೆ. ಆದರೆ ಪಾಶ್ಚಾತ್ತ್ಯ ಪದ್ದತಿಯ ವ್ಯಾಯಾಮಗಳಲ್ಲಿ ಈ ಸೂಕ್ಷ್ಮ ಶಕ್ತಿ ಕಂಡು ಬರುವುದಿಲ್ಲ. ಹಾಗಾಗಿಯೇ ಪಾಶ್ಚಾತ್ತ್ಯರೂ ಕೂಡ ಇತ್ತೀಚಿನ ದಶಕಗಳಲ್ಲಿ ” ಯೋಗಾಸನ”ಗಳಿಂದ ಆಕರ್ಷಿತರಾಗಿ ಅವರೂ ಕೂಡ ಅದನ್ನು ಆತ್ಮಸಾತ್ ಮಾಡಿಕೊಳ್ಳುತ್ತಿರುವುದು ಭಾರತೀಯರಿಗೆ ನಿಜಕ್ಕೂ ಅಭಿಮಾನದ ಸಂಗತಿಯಾಗಿದೆ.
ದೇಶ -ವಿದೇಶಗಳ ಇಂದಿನ ಆತೃಪ್ತ, ಆಶಾಂತ ಮಾನವ ಜೀವನಕ್ಕೆ ಹೊಸ ಚೈತನ್ಯ ನೀಡಿ ತನ್ನತ್ತ ಆಕರ್ಷಿಸಿರುವ ಈ ಭಾರತೀಯ ಯೋಗಾಭ್ಯಾಸವು ಪ್ರತಿಯೊಬ್ಬರ ಅಂತರಾಳದಲ್ಲೂ ಅದು ದೇಹಾರೋಗ್ಯ ರಕ್ಷಣೆಗೆ ಅನುಕೂಲಕರವೆಂದು ಧೃಡೀಕರಿಸಿದಲ್ಲದೆ ವೈಜ್ಞಾನಿಕ ಜಗತ್ತಿಗೂ ಒಂದು ಹೊಸ ದೃಷ್ಟಿ ನೀಡಿದೆ.
ಇಂತಹ ಯೋಗಾಭ್ಯಾಸಕ್ಕೆ ಜೂನ್ ತಿಂಗಳ 21 ನೇ ತಾರೀಖು ವರ್ಷದ ಅತ್ಯಂತ ಹೆಚ್ಚು ಹಗಲುಳ್ಳ ಮತ್ತು ಉದ್ದದ ದಿನ ಎಂದು ಕರೆಯುತ್ತಾರೆ. ಆದ್ದರಿಂದ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ‘ಅಂತರಾಷ್ಟ್ರೀಯ ಯೋಗ ದಿನ’ ವನ್ನಾಗಿ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಆಯನ ಸಂಕ್ರಾಂತಿ ದಿನವೆಂದು ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದ್ದರಿಂದ ದಕ್ಷಿಣಾಯನಕ್ಕೆ ಪರಿವರ್ತನ ಎಂದು ಗುರುತಿಸಲಾಗುತ್ತದೆ.
ಫೋಟೋ ಕೃಪೆ :google
ದೇಹವನ್ನು ಆರೋಗ್ಯಕರವಾಗಿ ಮತ್ತು ಮನಸ್ಸಿನಿಂದ ಎಚ್ಚರವಾಗಿರಲು ದಿನವಿಡಿ ಹೆಚ್ಚಿನ ಗಮನ ಹರಿಸುವ ಸಮಯದಲ್ಲಿ ಯೋಗ ವ್ಯಾಯಾಮ ಮಾತ್ರವಲ್ಲದೆ ನಿಮ್ಮೊಂದಿಗೆ ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡು ಹಿಡಿಯಲು ನೆರವಾಗುತ್ತದೆ, ನಮ್ಮ ಜೀವನ ಶೈಲಿ ಹಾಗೂ ಪ್ರಜ್ಞೆ ಹೆಚ್ಚಿಸುವ ಮೂಲಕ ಹವಾಮಾನದ ಬದಲಾವಣೆಯನ್ನು ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯವಾಗುತ್ತದೆ,
ಯೋಗ ಮಾಡುವುದರಿಂದ ಚಿಂತೆ ದೂಡಿ ಚಿಂತನೆ ಬೆಳಸಿ ಪ್ರಕೃತಿಯೊಂದಿಗೆ ನಮ್ಮ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಡುವ ಪರಮಾಪ್ತ ಯೋಗ, ಯೋಗವು ಮನಸ್ಸು ಮತ್ತು ದೇಹದಂಡನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ, ಹಾಗೆಯೇ ಪ್ರಕೃತಿ ಮತ್ತು ಮನಸಿನ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ ಜೊತೆಗೆ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿ ಇಡಲು ಸಹಾಯಕವಾಗುತ್ತದೆ,
ಹಾಗಾಗಿ ಎಲ್ಲರೂ ಯೋಗ ಮಾಡೋಣ ಆರೋಗ್ಯವನ್ನು ಕಾಪಾಡಿ ಕೊಳ್ಳೊಣ ಸ್ವಾಸ್ಥ ಸಮಾಜಕ್ಕೆ ಮುನ್ನುಡಿ ಬರೆಯೋಣ.
- ಪವಿತ್ರ ಹೆಚ್.ಆರ್