೭೫ ರ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರುತ್ತಾ. ಎಲ್ಲಿದೆ ಸ್ವಾಯತ್ತತೆ ? ಪ್ರಶ್ನೆಗೆ ಉತ್ತರ ಹುಡುಕುತ್ತಾ…ಲೇಖಕಿ ಅಮೃತ ಎಂ ಡಿ ಅವರ ಒಂದು ಚಿಂತನ ಲೇಖನ ಓದುಗರ ಮುಂದಿದೆ…
೭೫ ರ ಸ್ವಾತಂತ್ರ್ಯ, ಏನನ್ನು ತಂದುಕೊಟ್ಟಿತ್ತು..? ಏನನ್ನು ಕಸಿದು ಕೊಂಡಿತ್ತು..? ಉತ್ತರವಿಲ್ಲದೆ ಕಾಡುತ್ತಿದೆ ನೂರೆಂಟು ಪ್ರಶ್ನೆಗಳು. ಸಾವಿರ ಜನರ ಹೋರಾಟ, ಶ್ರಮ, ನೋವು, ಬಲಿದಾನ ಅದೆಲ್ಲದರ ಬಳುವಳಿಯಾಗಿ ಬಂದಂತಹ ಸ್ವಾತಂತ್ರ್ಯ ಮನುಷ್ಯನ ಎದೆಯಲ್ಲಿ ಅಚ್ಚೊತ್ತಿ ಹೆಮ್ಮರವಾಗಿ ನೆನಪುಗಳ ಕೂಡಿ ಇಟ್ಟಿದೆ. ದಾಸ್ಯ ಕಳೆದು ಉರುಳಿದ ಈ ಸುದಿನಕ್ಕೆ ಅಮೃತ ಮಹೋತ್ಸವದ ಸಂಭ್ರಮ ಎಲ್ಲೆಡೆ ಸದ್ದು ಮಾಡುತ್ತಿದೆ.
ನಾ ಕಂಡ ಭಾರತ, ನನ್ನ ದೇಶ ಭಾರತ, ಭಾರತಾಂಬೆಯ ಮಡಿಲಲ್ಲಿ ಜನಿಸಿದ ನಾ ಕಂಡ ಅಖಂಡ ಭಾರತ ಪರಿಕಲ್ಪನೆ ಇದಲ್ಲ. ನಾ ಓದಿ ಬೆಳೆದು ಬಂದ ಪರಂಪರೆಯ ವಿಷಯ ಕೂಡ ಇದಲ್ಲ ..
ಸಾವಿರಾರು ಜನರ ಬಲಿದಾನದ ದ್ಯೋತಕವಾಗಿ ಲಭಿಸಿದ ಅಧಿಕಾರದ ಬಳಕೆ ಇದಲ್ಲ.
ಎಷ್ಟೇ ಎತ್ತರಕ್ಕೆ ಏರಿದರು ನಡೆದು ಬಂದ ಹಾದಿಯ ಮರೆಯಬಾರದು, ಇಂದಿನ ನೆಮ್ಮದಿಯ ಜೀವನಕ್ಕೆ ಭದ್ರ ಬುನಾದಿ ಹಾಕಿ ಹುತಾತ್ಮರಾದವರ ನೆನಪು ಎಷ್ಟು ಜನಕ್ಕೆ ಇದೆ..? ಅದೆಲ್ಲ ಬಿಡಿ, ರಾಮ ರಾಜ್ಯದ ಕನಸು ಹೊತ್ತು ಸ್ವಾತಂತ್ರ್ಯಕ್ಕೆ ಅಹಿಂಸಾ ಮಾರ್ಗದಿಂದ ಹೋರಾಡಿದ ಮಹಾನುಭಾವನ ರಾಮ ರಾಜ್ಯದ ಕನಸು ಎಲ್ಲಿದೆ..? ಅದನ್ನು ಬಿಡಿ, ಒಂದು ಹೊತ್ತಿನ ಊಟಕ್ಕೆ ಗಾಣದ ಎತ್ತಿನಂತೆ ದುಡಿಯುವನ ಶ್ರಮದ ಫಲದ ಕುರುಹು ಯಾವ ಉಗ್ರಾಣ ಸೇರಿದೆ..?
ಅದನ್ನು ಬಿಡಿ ನಿಟ್ಟುಸಿರು ಬಿಟ್ಟು ನೆಮ್ಮದಿಯ ಚಾದರ ಹಾಸಿ ದಿನದ ಆಯಾಸ ಕಳೆಯಲು ಎಷ್ಟು ಜನಕ್ಕೆ ಮಾಳಿಗೆ ಇದೆ..? ಅದನ್ನು ಬಿಡಿ, ೭೫ ರ ಸಂಭ್ರಮ ಎಂದು ಸಂಭ್ರಮಿಸಲು ಇನ್ನೂ ಕೆಲವರಿಗೆ ಸ್ವಾತಂತ್ರ್ಯ ದಕ್ಕಿಲ್ಲ ಎಂಬುದು ಕೂಡ ವಿಷಾದನೀಯ. ನಮ್ಮೊಳಗೆ ಹತ್ತಿಕೊಂಡ ಬೆಂಕಿ, ಕಿತ್ತಾಟ, ಒದ್ದಾಟ ಬಡಿದಾಟ ಇವುಗಳು ಯಾವುದು ಸಹ ಶಮನಗೊಂಡಿಲ್ಲ, ತಂತಾನೆ ಬೂದಿ ಮುಚ್ಚಿದ ಕೆಂಡದಂತೆ, ಛಲ ಬಿಡದ ಫೀನಿಕ್ಸ್ ಪಕ್ಷಿಯಂತೆ ರೆಕ್ಕೆ ಕಟ್ಟಿ ಕುಣಿಯುತ್ತಲಿದೆ.
ಭವ್ಯ ಭಾರತದ ನವ್ಯ ಪ್ರಜೆಗಳಿಗೆ, ಇಡಿ ಭಾರತದ ಪ್ರತಿನಿಧಿಗಳಾಗಿ ನಿಲ್ಲುವ ಭಾರತಾಂಬೆಯ ಒಡಲ ಕಂದಗಳಿಗೆ ಮುಟ್ಟುತ್ತಿರುವ ಸಂದೇಶವಾದರು ಏನು ..? ಜಾತಿ ಎಂದರೇನು..? ಧರ್ಮ ಎಂದರೇನು? ಕೋಮು ಗಲಭೆ ಎಂದರೇನು? ಎಂಬ ಪ್ರಶ್ನೆಗಳ ಹುಟ್ಟಿಗೆ ಉತ್ತರವಾಗಲಾ ೨೫೦ ವರುಷಗಳ ದಾಸ್ಯವನ್ನು ಕಟುವಾಗಿ ತಿರಸ್ಕರಿಸಿ ಸ್ವಾತಂತ್ರ್ಯದ ಹಣತೆ ಬೆಳಗಿಸಿ ನಕ್ಕಿದ್ದು ಈ ಬೆಳೆವಣಿಗೆಗಾಗಿಯೇ..?
೭೫ರ ಸ್ವಾತಂತ್ಯ ಸಂಭ್ರಮ ಎಂದು ಎದೆ ಹುಬ್ಬಿಸಿ ಖುಷಿಯ ಹೊನಲಲ್ಲಿ ತೇಲಿ ಹೋಗಲಾ..? ಇಲ್ಲ ಭವ್ಯ ಭಾರತದ ನನ್ನ ದೊರೆಗಳು ಸೂಕ್ತ ಮಾಹಿತಿ ಸಿಗದೆ ನನ್ನ ದೇಶದ ತಪ್ಪಾಗಿ ಅರ್ಥೈಸಿಕೊಂಡು ಎಡವುತ್ತಿದ್ದಾರೆ ಎಂದು ಹಳಹಳಿಸಿ ಕೊರಗಲಾ..?
೭೫ ರ ಸ್ವಾತಂತ್ರ್ಯ ಸಂಭ್ರಮವೆಂದು ಇದುವರೆಗೂ ನಡೆದು ಬಂದ ಖಾದಿಯ ಬಾವುಟ ಮರೆಯಾಗಿ ಪ್ಲಾಸ್ಟಿಕ್ ಬಾವುಟ ತಲೆ ಎತ್ತಿದೆ ಎಂದು ಖುಷಿ ಪಡಲಾ..? ಇಲ್ಲ ಸನಾತನ ಕಾಲದಿಂದ ಬಂದ ಪರಂಪರೆ ಮರೆಯಾಗುತ್ತಿದೆ, ಮುಂದಿನ ದಿನಗಳಲ್ಲಿ ನಿಷೇದವಾಗಿರುವ ಪ್ಲಾಸ್ಟಿಕ್ ರಾರಾಜಿಸುತ್ತದೆ ಎಂಬ ಗುಮಾನಿ ಇಲ್ಲಿಂದ ಶುರುವಾಗಿದೆ ಎಂಬ ಕಳವಳವ ಯಾರಿಗೆ ಮುಟ್ಟಿಸಲಿ..?
೭೫ ರ ಸ್ವಾತಂತ್ರ್ಯ ಸಂಭ್ರಮ ದಿನವಿಡೀ ಹಾರಲು ಬಿಟ್ಟ ಬಾವುಟ, ಮಳೆ ಗಾಳಿಗೆ ತೇಲಿ ನಲಿದಾಡಲಿ ಎನ್ನಲಾ..? ಅಪಮಾನ ಮಾಡಬಾರದು ಎಂದು ದಿನ ಬೆಳಗುವ ನಾಯಕ ಪಶ್ಚಿಮ ಮುಟ್ಟುವ ಮುನ್ನವೆ ಕಾಪಿಟ್ಟ ಪರಂಪರೆ ನಿಯಮ ಮೀರಿತ್ತು ಎಂದು ದುಃಖಿಸಲೆ .?
ಹೀಗೆ ನೂರೆಂಟು ಸಿಟ್ಟಿದೆ, ಗೊಂದಲವಿದೆ, ಆದರೂ ಹೇಳುವೆ, ನೀ ಕೇವಲ ಬಾವುಟವಲ್ಲ, ನೂರ ನಲವತ್ತೊಂದು ಕೋಟಿ ಜನರ ಭಾವುಕತೆ, ನೀ ಕೇವಲ ಭಾರತೀಯರ ಅಸ್ತಿತ್ವವನ್ನು ಬಿಂಬಿಸುವ ಬಿಂಬಕಾರಕವಲ್ಲ, ಪ್ರತಿ ಮನೆಯ ನೆಮ್ಮದಿಯ ಪ್ರತಿರೂಪಕ..
ಹೆಮ್ಮೆಯಿಂದ ಹೇಳುವೆ ನನ್ನ ದೇಶ ಭಾರತ,
ಭಾರತ್ ಮಾತಾ ಕೀ ಜೈ.
ಜೈ ಹಿಂದ್ ಜೈ ಭಾರತ ಮಾತೆ..
- ಅಮೃತ ಎಂ ಡಿ ( ಕವಿಯತ್ರಿ, ಯುವ ಲೇಖಕಿ, ಶಿಕ್ಷಕಿ)
