ಶ್ರೀ ಸಿದ್ದಾಪುರ ಶಿವಕುಮಾರ್ ಅವರ ‘ಆ ಕರ್ಣನಂತೆ’ ಪುಸ್ತಕವನ್ನು ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಅರ್ಪಿಸಿದ್ದು, ಪುಸ್ತಕದ ಕುರಿತು ಎಚ್ ವಿ ಮೀನಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : “ಆ ಕರ್ಣನಂತೆ “
ಲೇಖಕರು : ಶ್ರೀ ಸಿದ್ದಾಪುರ ಶಿವಕುಮಾರ್
ಪ್ರಕಾಶಕರು : ಡಾ. ಟಿ. ವರದರಾಜ ಪೈ
ಮೊಬೈಲ್ no. : 9611773433
ನಾನು ಎಲ್ಲಾ ನಟ ಹಾಗೂ ನಟಿಯರ ಉತ್ತಮ ನಟನೆಗೆ ಅಭಿಮಾನಿ ಆಗಿದ್ದೇನೆ ಹೊರತು, ಯಾರನ್ನೂ ಅತಿಯಾಗಿ ಹಚ್ಚಿಕೊಂಡಿಲ್ಲ. ಆದರೆ ಡಾ. ವಿಷ್ಣುವರ್ಧನ್ ಅವರು ಏನೋ ಮೋಡಿ ಮಾಡಿದ್ದು, ಅವರು ನನ್ನ ಮನದಲ್ಲಿ ಅಚ್ಚ ಹಸಿರಾಗಿ ಉಳಿದುಬಿಟ್ಟಿದ್ದಾರೆ. ಇದಕ್ಕೆ ಕಾರಣ ಅವರ ಮಾನವೀಯತೆಯ ಗುಣ ಹಾಗೂ ಶಾಂತ ಸ್ವಭಾವ, ಹಾಗಾಗಿ “ಆ ಕರ್ಣನಂತೆ” ಪುಸ್ತಕವು ನನ್ನನ್ನು ಓದಲು ಆಕರ್ಷಿಸಿತು.

ಪುಸ್ತಕದ ಪ್ರತಿ ಒಂದು ಪುಟವು ಡಾ ವಿಷ್ಣುವರ್ಧನ್ ಅವರ ಉತ್ತಮ ನಟನೆ, ನಡೆ, ನುಡಿ, ತ್ಯಾಗ, ಸೌಹಾರ್ದತೆ, ನಂಬಿಕೆ, ಮಾನವೀಯತೆ, ಸೇವೆ, ಆಧ್ಯಾತ್ಮ, ಆದರ್ಶಗಳು….. ಹೀಗೆ ಇನ್ನು ಅನೇಕ ಸಾತ್ವಿಕ್ ಗುಣಗಳ ಜೀವಾತ್ಮ ವಿಷ್ಣುವರ್ಧನ್ ಎಂಬುದನ್ನು ಅನಾವರಣ ಗೊಳಿಸಿದ್ದು, ವಿಷ್ಣುವರ್ಧನ್ ಅವರ ಬಗ್ಗೆ ಹೆಮ್ಮೆ ಮತ್ತು ಗೌರವ ಮತ್ತಷ್ಟು ಹೆಚ್ಚಿತು.
ಚಿತ್ರರಂಗದ ಅನೇಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ, ಎಲ್ಲರೊಂದಿಗೂ ಉತ್ತಮ ಸಂಭಂದವನ್ನು ಬೆಸೆದಿದ್ದರು. ಚಿತ್ರ ರಂಗದ ಕಲಾವಿದರಿಗೆ ವಿಷ್ಣುವರ್ಧನ್ ಅವರು ಮಾಡಿರುವ ಸಹಾಯ ಅಷ್ಟಿಷ್ಟಲ್ಲ. ಕೆಲವರಿಗೆ ಜೀವನವನ್ನು ಕಟ್ಟಿಕೊಟ್ಟಿದ್ದರೆ, ಸಿಹಿಕಹಿ ಚಂದ್ರು ಅವರಿಗೆ ಪ್ರಾಣದಾತನಾಗಿದ್ದಾರೆ. ಇನ್ನು ಕೆಲವರಿಗೆ ಬದುಕಿನ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ ಡಾ ವಿಷ್ಣುವರ್ಧನ್ ಅವರು. ಇವರ ಈ ಗುಣಗಳಬಗ್ಗೆ ಪ್ರಚಾರವೇ ಆಗಿರಲಿಲ್ಲ. ಬಲಗೈ ಇಂದ ಕೊಟ್ಟ ದಾನ ಎಡಗೈ ಗೆ ಗೊತ್ತಾಗ ಬಾರದು ಎನ್ನುವುದಕ್ಕೆ ಡಾ. ವಿಷ್ಣುವರ್ಧನ್ ಅವರು ಮಾದರಿ ಆಗಿದ್ದಾರೆ. ಒಬ್ಬರ, ಇಬ್ಬರ….. ಅನೇಕರಿಗೆ ವಿಷ್ಣುವರ್ಧನ್ ಅವರು ಜೀವ ದಾತರಾಗಿದ್ದರು ಎಂದು ತಿಳಿದು ಬಹಳ ಭಾವುಕಳಾದೆ.

ಇವರ ಮೇಲೆ ಇಲ್ಲದ ಆರೋಪಗಳ ಸುರಿಮಳೆ ಆಗಿ, ಇವರ ಮನೆಯ ಮೇಲೆ ಕಿಡಿಗೇಡಿಗಳಿಂದ ಕಲ್ಲುಗಳ ತೂರಾಟ ಅದ್ದಾಗಲೂ, ಮತ್ತು ಇವರ ಮೇಲೆಯೂ ಕೂಡ ಕಲ್ಲು ತೂರಿದಾಗಲೂ ಮೌನ ವಹಿಸಿ, ಎಲ್ಲಾ ಸುಳ್ಳಿನ ಅಪವಾದ, ಅವಮಾನಗಳನ್ನು ಸಹಿಸಿ, ತಾನೊಬ್ಬ ಶ್ರೇಷ್ಠ ಜೀವಿ ಎಂದು ಬದುಕಿ ತೋರಿಸಿಕೊಟ್ಟವರು ಡಾ ವಿಷ್ಣುವರ್ಧನ್ ಅವರು.
ಎಲ್ಲರೂ ಒಮ್ಮೆ ಓದಬೇಕಾದ ಪುಸ್ತಕ ಇದಾಗಿದೆ.
ವಿಷ್ಣುವರ್ಧನ್ ಅವರ, “ಗುಳ್ಳನ” ಪಾತ್ರದ ಈ ಹಾಡು ನನ್ನ ಅಚ್ಚುಮೆಚ್ಚಿನ ಹಾಡು.
ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ…
ಬಯಲು ಸೀಮೆಯ ಗಂಡು ಬಲು ಗುಂಡು
ಜಗ ಮೊಂಡು ದುಂಡು ಹೂ ಚೆಂಡು
ನನ್ನ ಸರದಾಗೆ ರಸ ಗುಂಡು…..
ಡಾ ವಿಷ್ಣುವರ್ಧನ್ ಅವರ ಅತ್ಮಕ್ಕೆ ಶಾಂತಿ ಮತ್ತು ನೆಮ್ಮದಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ
- ಎಚ್ ವಿ ಮೀನಾ
