ಕವಿ, ಲೇಖಕ ಕು.ಸ.ಮಧುಸೂದನ್ ರಂಗೇನಹಳ್ಳಿ ಅವರ ಸುಂದರ ಕವನ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ…
ಸುಮ್ಮನೆ ಅಗೆಯುತ್ತಿದ್ದೇವೆ
ಹಳೆ ಗೋರಿಗಳ
ಮೇಲೆದ್ದ ಅಸ್ಥಿಪಂಜರಗಳಿಗೊ
ನಮ್ಮದೇ ಚಹರೆಗಳು.
ಹಾಗೆ ಅಗೆದಗೆದು ಸುಸ್ತಾಗಿ
ವಿರಮಿಸಲೆಂದು ಕೂತು
ಬಿಚ್ಚಿದರೆ ಬುತ್ತಿಗಂಟುಗಳ
ನರಮನುಷ್ಯರ ಮಾಂಸದ ತುಣುಕುಗಳು
ಕುಡಿಯಲು
ಹಸಿಹಸಿ ರಕ್ತದ ಬಟ್ಟಲು.
ಹಿಂದೆ ಇಲ್ಲಿ ರಾಜನಿದ್ದ
ಜೊತೆಗೊಬ್ಬ ರಾಣಿ
ಆಸ್ಥಾನಕ್ಕೊಬ್ಬ ಮಂತ್ರಿ
ಅವರನ್ನೆಲ್ಲ ಕಾಯಲು
ನೂರಾರು ಸರದಾರರು
ಅವರ ಹೆಂಡಂದಿರು
ಹೆಂಡಂದಿರ ಮಿಂಡಂದಿರು
ಈಗಲೂ ಇದ್ದಾರೆ
ಮಂತ್ರಿ ಮಾಗದರು
ಅವರ ಭಟ್ಟಂಗಿಗಳು
ರಾಜನಾಸ್ಥಾನದ ವಿದೂಷಕ ಮಾತ್ರ
ಇದೀಗ ದೇಶಭಕ್ತನ
ಛದ್ಮವೇಷದಲ್ಲಿ
ಬೊಬ್ಬೆ ಹೊಡೆಯುತ್ತಿದ್ದಾನೆ
ಕಳ್ಳರಿದ್ದಾರೆ ಎಚ್ಚರಿಕೆ
ರಾಜನ ಕಾಲದ ಗುಲಾಮ
ಮಾತ್ರ ಈಗಲೂ ಗುಲಾಮನಾಗಿ
ಅರಮನೆಗಳಾವರಣಗಳ
ಕಸ ಗುಡಿಸುತ್ತಲೇ ಇದ್ದಾನೆ
ತುಸುವೂ ಬೇಸರಿಸದೆ!
- ಕು.ಸ.ಮಧುಸೂದನ್ ರಂಗೇನಹಳ್ಳಿ (ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ರಂಗೇನಹಳ್ಳಿ ಎನ್ನುವ ಹಳ್ಳಿಯಲ್ಲ ನೆಲೆಸಿರುವ ಇವರು ‘ಸಂಗಾತಿ’ ಸಾಹಿತ್ಯದ ವೆಬ್ ಪತ್ರಿಕೆಯ ಸಂಸ್ಥಾಪಕರ, ಪ್ರಧಾನ ಸಂಪಾದಕರಾಗಿರುವ ಇವರು ಇದುವರೆಗು ನಾಲ್ಕು ಕವನ ಸಂಕಲನಗಳನ್ನು, ಎರಡು ಕಥಾ ಸಂಕಲನಗಳನ್ನು,ಎರಡು ರಾಜಕೀಯ ಬರಹಗಳ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ)
