ಕನ್ನಡವೆಂದರೆ ಚಿನ್ನದ ಪದಗಳು…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದಿರುವ ಕನ್ನಡದ ಮೇಲೆ ಪ್ರೀತಿ ಹುಟ್ಟಿಸುವ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಅಕ್ಕರೆಯಿಂದಲಿ
ಸಕ್ಕರೆ ನುಡಿಗಳ
ಚಕ್ಕನೆ ನುಡಿಯುತಲಾಡುವೆನು
ಅಕ್ಕರವಿಲ್ಲದೆ
ಬಿಕ್ಕುತಲಳುವೆನು
ಸಿಕ್ಕರೆ ಕುಣಿಯುತಲೋಡುವೆನು
ಕನ್ನಡವೆಂದರೆ
ಚಿನ್ನದ ಪದಗಳು
ಹೊನ್ನಿನ ರಾಶಿಯ ಶೃಂಗಾರ
ಚೆನ್ನುಡಿ ಬರೆದಿಹ
ರನ್ನರು ಪಂಪರು
ಪೊನ್ನರ ಜನ್ನರ ಸತ್ಕಾರ
ಕವಿಕೋಗಿಲೆಗಳು
ಬುವನದಿ ಕಂಡರೆ
ಸವಿನುಡಿ ಕನ್ನಡದೊಡಲಿನಲಿ
ಕವಿದಿಹ ಮೋಡವು
ಸವಿಯುತ ಬರುವುದು
ಛವಿನುಡಿ ಕೇಳುತ ತಣಿಸುತಲಿ
ಮೆತ್ತಗೆ ಬರೆಯಲು
ಮುತ್ತಿನ ಹಾರವು
ಸುತ್ತುತ ಪೋಣಿಸುತಿಟ್ಟಂತೆ
ಗತ್ತನು ತರಿಸುತ
ಚಿತ್ತದಲುಳಿವುದು
ಬಿತ್ತಲು ಬೆಳೆವುದು ಫಲದಂತೆ.
- ಚನ್ನಕೇಶವ ಜಿ ಲಾಳನಕಟ್ಟೆ
