ಇತಿಹಾಸದ ಉಪನ್ಯಾಸಕರಾದ ಹೆಚ್. ಖಂಡೋಬರಾವ್ ಅವರು “ಅಮೂಲ್ಯ ಶೋಧ” ಎಂಬ ಏಕವ್ಯಕ್ತಿ ನಿರ್ಮಾಣದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವುದರ ಜೊತೆಗೆ ನಾಣ್ಯಗಳು ಮತ್ತು ಶಿವಮೊಗ್ಗವನ್ನು ಕುರಿತಂತೆ ಅನೇಕ ಪುಸ್ತಕಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಅವರ ಸಾಧನೆಯ ಕುರಿತು ಬಾಣಾವರ ಶಿವಕುಮಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಹೆಚ್. ಖಂಡೋಬರಾವ್ ಅವರು ‘ಉತ್ತಮ ನಾಣ್ಯ ಸಂಗ್ರಾಹಕ’, ‘ನಾಣ್ಯ ಭೀಷ್ಮ’, ‘ಗುರುಬಸವಶ್ರೀ’ ಇತ್ಯಾದಿ ಪ್ರಶಸ್ತಿ ಪಡೆದ ಇವರಿಗೆ ‘ಅಮೂಲ್ಯ ಸಿರಿ’ ಎಂಬ ಅಭಿನಂದನ ಗ್ರಂಥವನ್ನೂ ಅರ್ಪಿಸಲಾಗಿದೆ.
ಮಗರ್ ಕುಟುಂಬದ ಶ್ರೀ ಹೆಚ್. ಖಂಡೋಬರಾವ್ ಮೂಲತ: ಮಹಾರಾಷ್ಟ್ರದ ಪುಣೆಯ ಬಳಿಯ ದೇವಳಗಾಂವ್ ಎಂಬ ಊರಿನವರು. ಮೂಲತ: ದೇಶ ಸೇವೆಯನ್ನು ಪ್ರಾರಂಭದಿಂದಲೂ ಮಿಲಿಟರಿ ಸೇವೆಯ ಮೂಲಕವೇ ಪ್ರಾರಂಭಿಸಿದ ಕುಟುಂಬ ಇವರದು.
ಕ್ರಿ.ಶ. ೧೬೪೦ ರಲ್ಲಿ ಷಹಾಜಿ ಮಹಾರಾಜರ ಜೊತೆಯಲ್ಲಿ ಕರ್ನಾಟಕಕ್ಕೆ ಬಂದ ಮಿಲಿಟರಿ ಕಾರ್ಯವನ್ನು ಮುಂದುವರಿಸಿತು. ಬಿಜಾಪುರದ ಸುಲ್ತಾನನ ಪರವಾಗಿ ಮೈಸೂರು ಅರಸರ ಮೇಲೆ ಜಯ ಗಳಿಸಿದ ಷಹಾಜಿ ಮಹಾರಾಜರು ಬೆಂಗಳೂರನ್ನು ಬಳುವಳಿಯಾಗಿ ಪಡೆದು ೨೭ ವರ್ಷಗಳ ಕಾಲ ಅದನ್ನು ಆಳಿದರು. ಷಹಾಜಿ ಮಹಾರಾಜರಿಗೆ ಮಲೆನಾಡಿನ ಕೆಲಭಾಗ ಅವರ ವಶದಲ್ಲಿದ್ದು ಕ್ರಿ.ಶ. ೧೬೭೦ ರಲ್ಲಿ ಚನ್ನಗಿರಿಗೆ ಬಂದಾಗ ಅಲ್ಲೇ ವಿಧವಶರಾದರು. ಅವರ ಸಮಾಧಿಯನ್ನು ಚನ್ನಗಿರಿ ಸಮೀಪದ ಹೊದಿಗೆರೆಯಲ್ಲಿ ಮಾಡಲಾಗಿದೆ.
ಷಹಾಜಿ ಮಹಾರಾಜರ ಮರಣದ ನಂತರ ಇವರ ಕುಟುಂಬ ಬೆಂಗಳೂರಿಗೆ ಹಿಂದಿರುಗಿದ ಮೇಲೆ ಪೋಲೀಸ್ ಪಟೇಲರಾಗಿ ಮೈಸೂರಿನ ಅರಸರು ನೇಮಿಸಿದರು. ಬಳಿಕ ಮಂಡ್ಯದ ಬಳಿಯ ಕಾರಸವಾಡಿಗೆ ಆಗಮಿಸಿದರು. ಅಲ್ಲಿ ಪೋಲೀಸ್ ಪಟೇಲರಾಗಿ ಕರಗಳ ವಸೂಲಿ ಹಾಗೂ ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇಂಗ್ಲಿಷರು ಭಾರತವನ್ನು ವಹಿಸಿಕೊಂಡ ಮೇಲೆ ಪಟೇಲ್ ಗಿರಿಯನ್ನು ಹಿಂಪಡೆಯಿತು. ನಂತರ ಮಗರ್ ಕುಟುಂಬ ಮೈಸೂರು ಒಡೆಯರ ಕುದುರೆ ಸೈನ್ಯದಲ್ಲಿ ಕಾಯಕವನ್ನು ಪಡೆಯಿತು. ಇವರ ಅಜ್ಜ ಹಾಗೂ ಚಿಕ್ಕ ಅಜ್ಜ ಸೇವೆ ಸಲ್ಲಿಸುತ್ತಿರುವಾಗಲೇ ಇವರ ತಂದೆ ಹನುಮಂತರಾವ್ ಮೈಸೂರು ಲಾನ್ಸರ್ಸ್’ಗೆ (ಕುದುರೆ ಸೈನ್ಯ) ಸೇರಿ ನಾಲ್ವಡಿ ಕೃಷ್ಣರಾಜ ಒಡೆಯರ ಅಚ್ಚುಮೆಚ್ಚಿನವರಾಗಿ ಅವರ ಜೊತೆಯಲ್ಲೇ ಪೋಲೋ ಹಾಗೂ ಬೇಟೆಗೆ ಹೋಗುತ್ತಿದ್ದರು. ಜಯಚಾಮರಾಜೇಂದ್ರ ಒಡೆಯರ ತಂದೆ ಕೃಷ್ಣರಾಜ ಒಡೆಯರ ಸಹೋದರ ನರಸರಾಜ ಒಡೆಯರಿಗೆ ಕುದುರೆಯ ಸವಾರಿ ಹೇಳಿಕೊಟ್ಟವರು ಇವರ ತಂದೆ ಹನುಮಂತರಾವ್’ರವರು.
೧೯೧೪ ರಲ್ಲಿ ಮೊದಲನೆಯ ಮಹಾಯುದ್ಧಕ್ಕೆ ಹೋಗಲೇಬೇಕೆಂಬ ಇಚ್ಛೆಯಿಂದ ನಾಲ್ವಡಿಯವರ ಇಚ್ಛೆಗೆ ವಿರುದ್ಧವಾಗಿ ಮಹಾಯುದ್ಧದಲ್ಲಿ ಭಾಗವಹಿಸಿ ವಿಜಯಮಾಲೆಯನ್ನು ಧರಿಸಿ ಹಿಂದಿರುಗಿದರು. ನಂತರ ೧೯೩೯-೪೫ ರಲ್ಲಿ ನಡೆದ ಎರಡನೆಯ ಮಹಾಯುದ್ಧದಲ್ಲಿಯೂ ಭಾಗವಹಿಸಿದರು. ೧೯೨೧ ರಲ್ಲಿ ಕಾರಸವಾಡಿಯ ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಮೀಪದ ಚಿಕ್ಕ ಹಳ್ಳಿಯ ನರಸಿಂಗರಾವ್ ಗಾಯಕವಾಡ್ ಅವರ ಮಗಳಾದ ಲಕ್ಷ್ಮೀಬಾಯಿಯನ್ನು ಮದುವೆಯಾಗಿ ಕತ್ತಿಯನ್ನು ಹಿಡಿದ ಕೈ ನೇಗಿಲನ್ನು ಹಿಡಿದು ಜೀವನ ಸಾಗಿಸುವಲ್ಲಿ ಅನೇಕ ಎಡರು ತೊಡರುಗಳನ್ನು ಅನುಭವಿತು ಈ ಕುಟುಂಬ.
೧೯೫೩ ರಲ್ಲಿ ಹೆಚ್. ಖಂಡೋಬರಾವ್ ಇವರ ಮೂರನೇ ಅಣ್ಣ ಶ್ರೀನಿವಾಸರಾವ್ ಜೊತೆಯಲ್ಲಿ ಇಡೀ ಕುಟುಂಬ ಶಿವಮೊಗ್ಗೆಗೆ ಬಂದು ನೆಲೆಸುವ ಯೋಗ ಉಂಟಾಯಿತು. ಬಡತನದ ಬೇಗೆಯಲ್ಲಿ ಜೀವನ ನಡೆಸಿ ಶ್ರೀ ಹೆಚ್. ಖಂಡೋಬರಾವ್ ಶಿವಮೊಗ್ಗೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಪದವಿಯನ್ನು ಪಡೆದು ಶಿವಮೊಗ್ಗೆಗೆ ಹಿಂತಿರುಗಿ ಬಿ.ಎಡ್. ಮತ್ತು ಎಂ.ಎ. ಪದವಿಯನ್ನು ಪಡೆದು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಉಪಾಧ್ಯಾಯರಾಗಿ, ಇತಿಹಾಸದ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ೧೯೯೮ರಲ್ಲಿ ನಿವೃತ್ತಿ ಹೊಂದಿದರು.
ಈ ಮಧ್ಯೆ ನರಸಿಂಹರಾಜಪುರ ಸಮೀಪದ ಧಾನಿವಾಸ ಎಂಬಲ್ಲಿ ವಾಸವಾಗಿದ್ದ ಕುಟುಂಬ ೧೯೫೯ ರಲ್ಲಿ ನಿರ್ಮಿಸಿದ ಭದ್ರಾ ಅಣೆಕಟ್ಟೆಯಿಂದ ಜಲಾವೃತವಾದ ನಂತರ ಲಕ್ಕಿನಕೊಪ್ಪಕ್ಕೆ ಬಂದು ನೆಲೆಸಿತು. ಶಿವಮೊಗ್ಗದ ಅಪ್ಪಾಜಿರಾವ್ ಕಾಂಪೌಂಡ್’ನಲ್ಲಿ ವಾಸವಾಗಿದ್ದ ಇವರ ಪಕ್ಕದ ಮನೆಗೆ ಓದಲು ಬಂದ ಆ ಕುಟುಂಬದ ಯಶೋಧ ಅವರ ಪರಿಚಯವಾಗಿ ಮುಂದೆ ಪ್ರೇಮಿಗಳಾಗಿ ೧೯೭೨ ರಲ್ಲಿ ವಿವಾಹ ನೆರವೇರಿತು.
ಇವರ ಪತ್ನಿ ಯಶೋಧ ಮೈಸೂರಿನಲ್ಲಿ ಇತಿಹಾಸದ ಎಂ.ಎ. ಪದವಿಯನ್ನು ಪಡೆದು ೧೯೭೨ ರಲ್ಲಿ ಕಮಲಾ ನೆಹರೂ ಕಾಲೇಜಿನಲ್ಲಿ ಇತಿಹಾಸದ ಉಪನ್ಯಾಸಕಿಯಾಗಿ ನೇಮಕಗೊಂಡು ರಂಜಿತ್ ಹಾಗೂ ವಿಕ್ರಮ್ ಮಕ್ಕಳನ್ನು ಪಡೆದರು. ಈಗ ಅವರ ಮಕ್ಕಳು ಉತ್ತಮ ವಿದ್ಯಾವಂತರಾಗಿ ಸ್ವತಂತ್ರ ಜೀವನ ನಡೆಸುತ್ತಿದ್ದಾರೆ.
೧೯೯೬ ರಲ್ಲಿ ಪತ್ನಿ ಯಶೋಧ ಇವರಿಗೆ ಎರಡು ಮೂತ್ರ ಪಿಂಡಗಳು ವಿಫಲವಾದಾಗ ಅವುಗಳನ್ನು ಕಸಿ ಮಾಡಿಸಲಾಯಿತು. ಮೂತ್ರ ಪಿಂಡದ ಕಸಿ ಸಫಲವಾಗಿ ಇವರ ಪತ್ನಿ ೧೨ ವರ್ಷಗಳು ಜೀವಿಸಿದ್ದು, ೨೦೦೭ ರಲ್ಲಿ ಮೂತ್ರ ಪಿಂಡ ವಿಫಲವಾಗಿ ವಿಧಿವಶರಾದರು.
೨೦೦೮ ರಲ್ಲಿ ಶಿವಮೊಗ್ಗೆಯ ಸಮೀಪದ ಲಕ್ಕಿನಕೊಪ್ಪ ಎಂಬ ಊರಿನಲ್ಲಿ “ಅಮೂಲ್ಯ ಶೋಧ” ಎಂಬ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದ್ದು ನಾಣ್ಯ ದರ್ಶಿನಿ, ಮಲೆನಾಡು ದರ್ಶಿನಿ, ಭಾರತ ದರ್ಶಿನಿ ಎಂಬ ವಿಭಾಗಗಳನ್ನು ಹೊಂದಿದೆ.
ಮಗರ್ ಎಂಬ ಪ್ರಕಾಶನವನ್ನು ಸ್ಥಾಪಿಸಿ ಅನೇಕ ಪುಸ್ತಕಗಳನ್ನೂ ಹೊರತರಲಾಗಿದೆ. ‘ನಾಣ್ಯ ಕರ್ನಾಟಕ’, ‘ನಾಣ್ಯ ಭಾರತ’, ‘ಸ್ವತಂತ್ರ ಭಾರತದ ನಾಣ್ಯಗಳು’, ‘ನಾಣ್ಯಗಳ ಇತಿಹಾಸ’, ‘ಅಮೂಲ್ಯ ಶಿವಮೊಗ್ಗ’ ಇತ್ಯಾದಿ ಕೃತಿಗಳನ್ನು ಹೊರತರಲಾಗಿದೆ.
- ಬಾಣಾವರ ಶಿವಕುಮಾರ್ – ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು