ಮುದ್ದು ಮಕ್ಕಳಿಗಾಗಿ ಬದುಕುವೆನು ಪ್ರತಿ ದಿವಸ, ಆದಷ್ಟು ಬೇಗ ಬಂದುಬಿಡುವೆನು ಒಂದು ದಿವಸ…ಕವಿ ನಾಗರಾಜ ಜಿ. ಎನ್. ಬಾಡ ಅವರು ವಿಧನೆ ಹೆಣ್ಣಿನ ನೋವನ್ನು ಕವನದ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…
ಮತ್ತೆ ಮತ್ತೆ ನಿನ್ನ ನೋಡಬೇಕು
ನಿನ್ನ ಹಿಂದೆ ಹಿಂದೆ ಸುಳಿಯಬೇಕು
ನಿನ್ನ ಹೆಸರ ಕೂಗಿ ಕೂಗಿ ಕರೆಯಬೇಕು
ನಿನ್ನ ಜೊತೆ ಜೊತೆಗೆ ನಡೆಯಬೇಕು
ಮನದ ಮಾತನ್ನೆಲ್ಲ ಪೂರ್ತಿ ಹೇಳಬೇಕು
ಭಾವನೆಗಳಿಂದ ಬಿಡುಗಡೆಯ ಪಡೆಯಬೇಕು
ನೋವನ್ನೆಲ್ಲ ಒಂದೊಂದಾಗಿ ಹೊರ ಹಾಕಬೇಕು
ನಕ್ಕು ನಲಿಯುತ ಎಲ್ಲವನ್ನು ಮರೆಯಬೇಕು
ಯೋಚನೆ ಯಾಚನೆ ಮನದಿ ನೂರಿದೆ
ನನ್ನೊಳಗೆ ಸಾವಿರ ಸಾವಿರ ದೂರಿದೆ
ಹೇಳಿ ಹಗುರಾಗಬೇಕಾದ ಹುಸಿ ಮುನಿಸಿದೆ
ನಿನ್ನ ಗಾಢ ಮೌನದ ಮೇಲೆ ತುಂಬಾ ಸಿಟ್ಟಿದೆ
ಒಮ್ಮೊಮ್ಮೆ ಅದೆಂತ ಗುಡುಗು ಸಿಡಿಲು
ಮಗದೊಮ್ಮೆ ಶಾಂತಿ ಸಹನೆಯ ಮಡಿಲು
ಎಲ್ಲವನ್ನೂ ಬಚ್ಚಿಟ್ಟುಕೊಂಡಿರುವಡಿರುವ ಒಡಲು
ಎಂದಿಗೂ ಉಕ್ಕಿ ವಿನಾಶ ಮಾಡದ ಕಡಲು
ಸದ್ದು ಗದ್ದಲವಿಲ್ಲದೆ ಎದ್ದು ಹೋದೆ ನೀನು
ಒಂಟಿ ಒಬ್ಬಂಟಿ ಆಗಿಹೋದೆ ಈಗ ನಾನು
ಏನು ಹೇಳಿದರೇನು ಮತ್ತೆ ಬರುವುದಿಲ್ಲ ನೀನು
ಸುಂದರ ಕನಸುಗಳ ಮತ್ತೆ ಕಾಣಬಹುದೇನು
ನೀನಿಲ್ಲದೆ ಬದುಕಬಹುದು ಮತ್ತಷ್ಟು ವರುಷ
ಇನ್ನೆಲ್ಲಿ ಉಳಿದೀತು ಮರೆಯಲಾರದ ಹರ್ಷ
ಮುದ್ದು ಮಕ್ಕಳಿಗಾಗಿ ಬದುಕುವೆನು ಪ್ರತಿ ದಿವಸ
ಆದಷ್ಟು ಬೇಗ ಬಂದುಬಿಡುವೆನು ಒಂದು ದಿವಸ
ಸಾವು ಯಾರಿಗೂ ಎಂದಿಗೂ ಕಾಯುವುದಿಲ್ಲ
ಅನುಭವಿಸುವ ನೋವು ಕೊನೆಗೊಳ್ಳುವುದಿಲ್ಲ
ಮರೆತು ಬದುಕ ಬೇಕು ನೋವ ನುಂಗಿ ಇಲ್ಲಿ
ಸೋಲು ಗೆಲುವು ನೋವು ನಲಿವುಗಳನ್ನು
ಮರೆತು ಇರುವಷ್ಟು ಕಾಲ ಬದುಕ ಬೇಕಿಲ್ಲಿ
- ನಾಗರಾಜ ಜಿ. ಎನ್. ಬಾಡ, ಕುಮಟ.
