ಅಪ್ಪ ಎಂದರೆ ಭಯ. ಅಪ್ಪ ಎಂದರೆ ಶಿಸ್ತು. ಆದರೆ ನನಗೆ ಅಪ್ಪ ಎಂದರೆ ಗೆಳೆಯ. ಅಪ್ಪ ಎಂದರೆ ನನ್ನ ಲೇಖನದ ವಿಮರ್ಶಕ ಮತ್ತು ವಿಲನ್.
ಲೇಖಕರ ಮಕ್ಕಳಿಗೆ ಅಪ್ಪನ ಖ್ಯಾತಿ ಮಕ್ಕಳಿಗೆ ಕೆಲವೊಮ್ಮೆ ವರವಾದರೆ, ಇನ್ನು ಕೆಲವೊಮ್ಮೆ ಶಾಪವಾಗುತ್ತದೆ. ನನಗಂತೂ ಶಾಲಾದಿನಗಳಲ್ಲಿ ಅಪ್ಪನ ಹೆಸರು ಕಂಟಿಯ ಮುಳ್ಳೇ ಆಗಿತ್ತು ಅಂತಲೇ ಹೇಳಬಹುದು. ಏಕೆಂದರೆ ಓದಿನಲ್ಲಿ ಅಷ್ಟಕಷ್ಟೆ ಇದ್ದವಳು ನಾನು. ಹೂಲಿಶೇಖರ್ ಮಗಳು… ಎನ್ನುವುದಕ್ಕೆ ಶಿಕ್ಷಕರ ಕಣ್ಣೆಲ್ಲ ನನ್ನ ಮೇಲೆಯೇ ಇರುತ್ತಿತ್ತು. ಮಾರಿಕಣ್ಣು ಹೋರಿ ಮೇಲೆ ಎನ್ನುವಂತೆ ಶಿಕ್ಷಕರು ನನಗೆ ಮಾರಿಯಂತೆ ಕಾಣುತ್ತಿದ್ದರು. ನನಗೆ ಬರುತ್ತಿದ್ದ ಅಂಕಗಳು ಅಷ್ಟಕಷ್ಟೆ. ಆದರೆ ನನ್ನ ಅಪ್ಪ ಮಾತ್ರ ನನಗೆ ಕಮ್ಮಿ ತಗೆದುಕೊಂಡೆ ಅಂತ ಎಂದು ಹೊಡೆದವನಲ್ಲ. ಈಗಿನ ಕಾಲದಲ್ಲಿ ಓದಿನ ಹೆಸರಿನಲ್ಲಿ ಮಕ್ಕಳನ್ನು ಮಾನಸಿಕವಾಗಿ ಹಿಂಸಿಸುವ ಅಪ್ಪ-ಅಮ್ಮನಿಗೆ ನೀನು ಮಾದರಿ. ಅಮ್ಮನ ಸಹಸ್ರನಾಮ ಲೆಕ್ಕಿಸುತ್ತಿರಲಿಲ್ಲ. ಕಮ್ಮಿ ಅಂಕ ಬಂದಾಗಲೆಲ್ಲ ನಾನು ಬೇಜಾರು ಆಗಬಾರದು ಎಂದು ಕಚೋರಿ ಅಂಗಡಿಗೆ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಚನ್ನಾಗಿ ತಿನ್ನಿಸುತ್ತಿದ್ದೆ. ಅದೇ ನಮಗೆ ಚಿಲ್ ಪಾರ್ಟಿ ಆಗಿರುತ್ತಿತ್ತು. ನಾನು ಎಸ ಎಸ ಎಲ್ ಸಿ ಪರೀಕ್ಷೆ ಬರೆಯುವಾಗ, ಪರೀಕ್ಷೆಯ ಭಯಕ್ಕೆ ನನ್ನ ಮಗಳು ಎಲ್ಲಿ ತಲೆತಿರುಗಿ ಬಿಳುತ್ತಾಳೋ ಎನ್ನುವ ಭಯಕ್ಕೆ ನೀನು ಶಾಲೆಯ ಹೊರಗೆ ಕಾಯುತ್ತ ನಿಂತಿದ್ದೆ. ಪರೀಕ್ಷೆಯ ಭಯಕ್ಕೆ ೧೦೨ ಡಿಗ್ರಿವರೆಗೂ ಜ್ವರ ಏರುತ್ತಿತ್ತು. ಪರೀಕ್ಷೆ ಮುಗಿದ ಮೇಲೆ ಅದೇ ಚಿಲ್ ಪಾರ್ಟಿ ಕಚೋರಿ ಅಂಗಡಿಗೆ ಹೋಗುತ್ತಿದ್ದೆವು. ಆಗ ಜ್ವರ ಇರುತ್ತಿರಲಿಲ್ಲ.
ನೀನು ಸಾಕಷ್ಟು ಪ್ರೀತಿ ಕೊಟ್ಟಿದ್ದೀಯ. ಆದರೆ ಅದರ ಜೊತೆಗೆ ದೊಡ್ಡ ವಿಲನ್ ಕೂಡ ಆಗಿದ್ದೆ. ಶಾಲಾ ದಿನಗಳಲ್ಲಿ ಶಿಕ್ಷಕರನ್ನು ನನ್ನ ಸುತ್ತ ಬೇಲಿಯಂತೆ ನಿಲ್ಲಿಸಿ, ನನ್ನ ಮೇಲೆ ಕಣ್ಣಿಡುವಂತೆ ಮಾಡಿದ್ದೂ ಸರಿಯಲ್ಲ. ಆ ದಿನಗಳಲ್ಲಿ ಸ್ನೇಹಿತರೊಂದಿಗೆ ಸಂತೋಷ ಪಡಲು ಬಿಡಲೇ ಇಲ್ಲ.
ನಿನ್ನ ಖ್ಯಾತಿ ದಾಂಡೇಲಿಗೆ ಸೀಮಿತ ಎಂದು ತಿಳಿದು ಅದೇ ಸಿಟ್ಟಿಗೆ, ಅದೇ ಬೇಸರಕ್ಕೆ ನಾನು ಬೆಂಗಳೂರು ಕಾಲೇಜಿಗೆ ಬಂದು ಸೇರಿದೆ. ಅಭಿನೇತ್ರಿ ಲಕ್ಷ್ಮಿ ಚಂದ್ರಶೇಖರ್ ಕೃಪಾಕಟಾಕ್ಷದಿಂದ ಎನ್ ಎಂ ಕೆ ಆರ್ ವಿ ಕಾಲೇಜಿಗೆ ಸೇರಿಕೊಂಡೆ. ಲಕ್ಷ್ಮಿ ಮೇಡಂ ಅವರು ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ನಾಟಕ ತಂಡದ ಉಸ್ತುವಾರಿ ಹೊಣೆ ಹೊತ್ತಿದ್ದರು. ನಾನು ಹೂಲಿಶೇಖರ್ ಮಗಳೆಂದ ಮೇಲೆ ನಾಟಕದ ರಕ್ತ ನನ್ನಲ್ಲೂ ಹರಿಯುತ್ತಿದೆ ಎಂದು ತಪ್ಪಾಗಿ ತಿಳಿದು ನನಗೆ ನಾಟಕಕ್ಕೆ ಸೇರಿಸಿದ್ದರು. ತಮಾಷೆಯ ವಿಷಯವೆಂದರೆ ನನಗೆ ವೇದಿಕೆಯ ಮೇಲೆ ನಿಲ್ಲುವುದೆಂದರೆ ಪಿಡ್ಸ್ ಬಂದಂತೆ ಅನುಭವ. ಆ ಭಯದಿಂದ ತಪ್ಪಿಸಿಕೊಳ್ಳಲು ನಾಟಕದ ದೃಶ್ಯದಲ್ಲಿ ಹೂವು ಹಿಡಿದು ನಿಲ್ಲುವ ಕೆಲಸ ಮಾಡಿದೆ. ವೇದಿಕೆಯ ಮೇಲೆ ಬಂದ ಹಾಗೆಯೂ ಇರಬೇಕು. ಕಾಣದೆಯೂ ಇರಬೇಕು ಎನ್ನುವ ಪಾತ್ರಗಳನ್ನು ನಾನು ಮಾಡಿದೆ. ಆದರೂ ಲಕ್ಷ್ಮಿ ಮೇಡಂ ತುಂಬಾ ಒಳ್ಳೆಯವರು. ಅಪ್ಪ ಅಲ್ಲಿಯೂ ನೀನು ತಪ್ಪು ಮಾಡಿದೆ. ಮಹಿಳಾ ಕಾಲೇಜಿಗೆ ಹಾಕಿ ತಲೆ ಓಡಿಸಿದೆ.
ಓದು ಮುಗಿದ ಮೇಲೆ ಐಟಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿ ನಿನ್ನ ಹೆಸರು ಮುಳ್ಳಾಗಲಿಲ್ಲ. ಬದಲಾಗಿ ಹೂವಾಯಿತು. ನಿನ್ನ ಕಣ್ಣು ತಪ್ಪಿಸಿ ಹುಡುಗನನ್ನು ಪ್ರೀತಿಸಿದೆ. ನಿನ್ನ ಕಣ್ಣ ಮುಂದೆ ಅವನನ್ನೇ ಮದುವೆಯೂ ಆದೆ. ಆ ತಪ್ಪನ್ನು ನೀನು ಪ್ರೀತಿಯಿಂದ ಸ್ವೀಕರಿಸಿದೆ.
ನಿನಗೆ ಮೂರೂ ಜನ ಮಕ್ಕಳು. ಮೂರೂ ಜನರಿಗೆ ಮಾವನಾದೆ. ಆರು ಜನ ಮೊಮ್ಮಕ್ಕಳಿಗೆ ಅಜ್ಜನಾದೆ. ಮಾವ ಹೋಗಿ ಅವರಿಗೂ ಅಪ್ಪನಾದೆ. ಈಗ ನಿನಗೆ ಆರು ಜನ ಮಕ್ಕಳು. ಬೆಳೆಂಬೆಳಗ್ಗೆ ಆರು ಜನಕ್ಕೂ ನಿನ್ನ ಫೋನ್ ಬರದಿದ್ದರೆ ಆ ದಿನ ಮುಂದೆ ಹೋಗುವುದಿಲ್ಲ. ಆರು ಜನರ ಕಷ್ಟಗಳಿಗೆ ಪರಿಹಾರ ಕೂಡುವ ಕಾನೂನು ಸಲಹೆಗಾರ ನೀನು. ನಿನ್ನ ಕಣ್ಣು ತಪ್ಪಿಸಿ ಆರು ಜನ ಏನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಮನೆಯ ಮುಖ್ಯ ದ್ವಾರ ನೀನು.
ನಾನು ದಾರಿ ತಪ್ಪಿದ ಮಗಳಾಗಲಿಲ್ಲ. ಓದಿ ಡಬ್ಬಹಾಕಿ ಮೂಲೆ ಕೂಡಲಿಲ್ಲ. ನಾನು ನಿನ್ನಂತೆ ಲೇಖಕಿಯಾದೆ.
– ಶಾಲಿನಿ ಹೂಲಿ ಪ್ರದೀಪ್