ಬದುಕಿಗೊಂದು ಸೆಲೆ (ಭಾಗ- ೫೨)

ಅರಬ್ಬಿ ಸಮುದ್ರದಲ್ಲಿ ತೇಲುತ್ತಿದ್ದ ಅತಿ ದೊಡ್ಡ ಹಡಗೊಂದು ಒಮ್ಮಿಂದೊಮ್ಮೆಲೆ ನಡೆದ ಆಕಸ್ಮಿಕದಿಂದಾಗಿ ತೇಲುತ್ತಿರುವ ಸ್ಮಶಾನವಾಗಿ ಬದಲಾಯಿತು. ಅಂತಹ ಪರಿಸ್ಥಿತಿಯಲ್ಲಿ ಅಲ್ಲಿದ್ದ 740 ಮಕ್ಕಳು ಇದಕ್ಕೆ ಕಾರಣವಾದ ಸಮುದ್ರವನ್ನು ಶಪಿಸುತ್ತಿದ್ದರು. ಮುಂದೇನಾಯಿತು, ವೀಣಾ ಹೇಮಂತಗೌಡ ಪಾಟೀಲ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಅದು 1942ನೇ ಇಸವಿ. ಆ ಹಡಗಿನಲ್ಲಿ 740 ಪೋಲ್ಯಾಂಡ್ ದೇಶದ ಮಕ್ಕಳು ಪ್ರಯಾಣ ಬೆಳೆಸಿದ್ದರು. ಅದರಲ್ಲಿ ಬಹುತೇಕ ಮಕ್ಕಳು ರಷ್ಯಾದ ಲೇಬರ್ ಕ್ಯಾಂಪುಗಳಿಂದ ತಪ್ಪಿಸಿಕೊಂಡು ಬಂದವರು, ದಿಕ್ಕಿಲ್ಲದವರು ಆಗಿದ್ದರು. ಲೇಬರ್ ಕ್ಯಾಂಪುಗಳಿಂದ ಬಂದವರು ಹಸಿವು, ಕಾಯಿಲೆ ಮತ್ತು ಒತ್ತಡಗಳಿಂದ ಬಳಲಿ ಸತ್ತ ಪಾಲಕರ ಸಲಹೆಯಂತೆ ಅಲ್ಲಿಂದ ತಪ್ಪಿಸಿಕೊಂಡು ಇರಾನ್ ಮೂಲಕ ಈ ಹಡಗನ್ನು ಏರಿದ್ದರು. ಆದರೆ ದುರದೃಷ್ಟ ಅವರನ್ನು ಇಲ್ಲಿಯೂ ಬೆನ್ನಟ್ಟಿತ್ತು. ಯಾರಿಗೂ ಅವರು ಬೇಕಾಗಿರಲಿಲ್ಲ.

ಆ ಕಾಲದ ಸೂರ್ಯ ಮುಳುಗದ ಅತಿ ದೊಡ್ಡ ಸಾಮ್ರಾಜ್ಯ ಎಂದು ಜಗತ್ತಿನಿಂದ ಕರೆಸಿಕೊಂಡ ಇಂಗ್ಲೆಂಡ್ ದೇಶದ ಬ್ರಿಟಿಷರು ಭಾರತವನ್ನು ಆಳುತ್ತಿದ್ದರು. ಭಾರತದ ಕರಾವಳಿ ತೀರದ ಒಂದೊಂದು ಬಂದರಿನಲ್ಲಿ ನಿಲ್ಲಿಸಿದಾಗಲೂ ಕೂಡ ಬ್ರಿಟಿಷ್ ಅರಸೊತ್ತಿಗೆಯ ಭಯದಿಂದ ಇವರಿಗೆ ಆಶ್ರಯ ಕೊಡಲು ಯಾರೂ ಒಪ್ಪದೇ ಹೋದರು. ಅವಕಾಶದ ಎಲ್ಲ ಬಾಗಿಲುಗಳು ಇವರಿಗೆ ಮುಚ್ಚಿ ಹೋಗಿದ್ದು. ನೀವು ನಮ್ಮ ಜವಾಬ್ದಾರಿಯಲ್ಲ ಮುಂದೆ ಸಾಗಿ ಎಂಬ ಮಾತನ್ನು ಕೇಳುತ್ತಲೇ ಬಂದರು.

ಆ ಹಡಗಿನಲ್ಲಿ ಅವರಿಗಾಗಿ ಇರಿಸಿದ ಆಹಾರದ ದಾಸ್ತಾನು ತೀರುತ್ತಾ ಬಂದಿತ್ತು. ಔಷಧಿಗಳು ಕೂಡ ಮುಗಿಯಲಾರಂಭಿಸಿತ್ತು. ಭರವಸೆ ಇಟ್ಟುಕೊಳ್ಳುವುದೇ ಅಪಾಯಕಾರಿ ಎಂಬ ಭಾವ ಅವರಲ್ಲಿ ಮುಸುಕಿತ್ತು.

12 ವರ್ಷದ ಮರಿಯಾ ಎಂಬ ಬಾಲಕಿ ತನ್ನ ಆರು ವರ್ಷದ ಸಹೋದರನ ಕೈಯನ್ನು ಹಿಡಿದುಕೊಂಡು ಅಲ್ಲಿಯೇ ಒಂದು ಮೂಲೆಯಲ್ಲಿ ಕುಳಿತಿದ್ದಳು. ತನ್ನ ತಮ್ಮನನ್ನು ಮಗನಂತೆ ಜೋಪಾನ ಮಾಡುವೆ ಎಂದು ಆಕೆ ಸಾಯುತ್ತಿದ್ದ ತನ್ನ ತಾಯಿಗೆ ಮಾತು ಕೊಟ್ಟಿದ್ದಳು. ಇಡೀ ಜಗತ್ತು ನೀವು ಬದುಕಲು ಅರ್ಹರಲ್ಲ ಎಂದು ಶರಾ ಬರೆದಿರುವಾಗ ನೀವು ನಿಮ್ಮವರನ್ನು ಹೇಗೆ ರಕ್ಷಿಸಿಕೊಳ್ಳುತ್ತೀರಿ ?

ಈ ವಿಷಯ ಗುಜರಾತ್ ನ ನವ ನಗರದ ಪುಟ್ಟ ಅರಮನೆಗೂ ತಲುಪಿತು. ಬ್ರಿಟಿಷ ಪ್ರಾಬಲ್ಯವನ್ನು ಹೊಂದಿದ ಅಲ್ಲಿಯ ಮಹಾರಾಜ ಜಾಮ ಸಾಹೇಬ ದಿಗ್ವಿಜಯ ಸಿಂಗ ಅವರ ಆಳ್ವಿಕೆಯಲ್ಲಿ ಇದ್ದ ಆ ರಾಜ್ಯದಲ್ಲಿ ಯಾವುದೇ ಸೈನಿಕ ಬಲವಿರಲಿಲ್ಲ. ಬಂದರುಗಳ ಮೇಲೆ ಹಕ್ಕು ಸ್ವಾಮ್ಯವಿರಲಿಲ್ಲ ಹಾಗೂ ನಿಜದ ಅರ್ಥದಲ್ಲಿ ಯಾವ ರೀತಿಯ ಅಧಿಕಾರ ಕೂಡ ಇರಲಿಲ್ಲ. ಸಲಹಾಕಾರರು ರಾಜನನ್ನು ಕುರಿತು 740 ಮಕ್ಕಳು ಸಮುದ್ರದ ಮಧ್ಯ ಭಾಗದಲ್ಲಿ ಸಿಲುಕಿಕೊಂಡಿದ್ದು ಅವರನ್ನು ಬ್ರಿಟಿಷರು ರಕ್ಷಿಸಲು ನಿರಾಕರಿಸಿದ್ದಾರೆ ಎಂದು ಹೇಳಿದರು.

ಅತ್ಯಂತ ಶಾಂತವಾದ ಧ್ವನಿಯಲ್ಲಿ ಮಹಾರಾಜ ತನ್ನ ಸಲಹಾಕಾರರಿಗೆ ಒಟ್ಟು ಎಷ್ಟು ಮಕ್ಕಳಿದ್ದಾರೆ ? ಎಂದು ಮತ್ತೊಮ್ಮೆ ಕೇಳಿದರು.740 ಮಕ್ಕಳು ಎಂದು ಸಲಹಾಕಾರ ಹೇಳಿದಾಗ ಅಲ್ಲೊಂದು ಭೀಕರ ಮೌನ ನೆಲೆಸಿತ್ತು.

ಫೋಟೋ ಕೃಪೆ : ಅಂತರ್ಜಾಲ

ಕೆಲ ಕ್ಷಣಗಳ ಯೋಚನೆಯ ನಂತರ ಮಹಾರಾಜ ಬ್ರಿಟಿಷರು ನನ್ನ ಬಂದರುಗಳ ಮೇಲೆ ಹಿಡಿತವನ್ನು ಹೊಂದಿರಬಹುದು ಆದರೆ ನನ್ನ ಆತ್ಮಾಭಿಮಾನದ ಮೇಲಲ್ಲ, ಆ ಎಲ್ಲ ಮಕ್ಕಳನ್ನು ನವನಗರದ ಬಂದರಿನಲ್ಲಿ ಇಳಿಸಿಕೊಳ್ಳಿ ಎಂದು ನಿರ್ಧಾರದ ಧ್ವನಿಯಲ್ಲಿ ಹೇಳಿದರು. ಇದರಿಂದ ನೀವು ಬ್ರಿಟಿಷ್ ವಸಾಹತುಶಾಹಿಯ ಕೋಪಕ್ಕೆ ತುತ್ತಾಗಬಹುದು ಎಂದು ಸಲಹಾಕಾರರು ಹೇಳಿದರೂ ಕೂಡ ರಾಜ ತನ್ನ ನಿರ್ಧಾರದಿಂದ ಹಿಂತೆಗೆಯಲಿಲ್ಲ.

ಕೂಡಲೇ ಆ ನೌಕೆಗೆ ಸಂದೇಶವನ್ನು ಕಳುಹಿಸಿ ಆ ಎಲ್ಲ 740 ಮಕ್ಕಳನ್ನು ನವನಗರದ ಬಂದರಿನಲ್ಲಿ ಇಳಿಸಲು ವ್ಯವಸ್ಥೆ ಮಾಡಲಾಯಿತು. 1942ರ ಆಗಸ್ಟ್ ತಿಂಗಳಿನಲ್ಲಿ ನೌಕೆ ಬಂದರಿನಲ್ಲಿ ಇಳಿಯಿತು. ಅತಿಯಾದ ಬಿಸಿಲಿಗೆ ಕಪ್ಪಾದ ಮಕ್ಕಳು ತಮ್ಮದೇ ನೆರಳಿನಂತೆ ಕಾಣುತ್ತಿದ್ದರು. ಅಳಲು ಕೂಡ ಸಾಧ್ಯವಾಗದಷ್ಟು ನಿಶ್ಯಕ್ತತೆ ಆವರಿಸಿದ್ದ ಅವರು ಯಾರಿಂದಲೂ ಏನನ್ನು ಅಪೇಕ್ಷಿಸಬಾರದು ಎಂಬ ನಿಷ್ಠುರ ಸತ್ಯದ ಅನುಭವವನ್ನು ಗಳಿಸಿದ್ದರು.

ಅವರಿಗಾಗಿ ಕಾಯ್ದು ನಿಂತಿದ್ದ ಮಹಾರಾಜರು ತಾವು ಧರಿಸಿದ್ದ ಶ್ವೇತ ವರ್ಣದ ಉಡುಪನ್ನು ಅದು ಕೊಳೆ ಯಾಗುವುದು ಎಂಬುದನ್ನು ಕೂಡ ಮರೆತು ಆ ಮಕ್ಕಳ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ನಿಟ್ಟಿನಲ್ಲಿ ಮೊಣಕಾಲೂರಿ ಕುಳಿತುಕೊಂಡಿದ್ದರು. ತಮ್ಮ ಪಾಲಕರನ್ನು ಕಳೆದುಕೊಂಡಾಗಿನಿಂದ ಮಾತನಾಡುವುದನ್ನೇ ಮರೆತಂತಿದ್ದ ಆ ಮಕ್ಕಳ ಅಳಲನ್ನು ದುಬಾಷಿಗಳ ಸಹಾಯದಿಂದ ಅರಿತ ಮಹಾರಾಜ ಇನ್ನು ಮೇಲೆ ನೀವ್ಯಾರೂ ಅನಾಥರಲ್ಲ. ನೀವೆಲ್ಲರೂ ನನ್ನ ಮಕ್ಕಳು. ನಿಮ್ಮನ್ನು ನಾನು ಪೋಷಿಸುತ್ತೇನೆ. ಇನ್ನು ಮೇಲೆ ನಾನೇ ನಿಮಗೆ ತಂದೆ ಎಂದು ಅವರನ್ನು ಮಹಾರಾಜರು ಸಂತೈಸಿದರು.

ಆ ಎಲ್ಲಾ ಮಕ್ಕಳಿಗೆ ಮಹಾರಾಜರು ನಿರಾಶ್ರಿತರ ಶಿಬಿರವನ್ನು ನಿರ್ಮಿಸಲಿಲ್ಲ. ಬದಲಾಗಿ ಬಹುದೊಡ್ಡ ಮನೆಯೊಂದನ್ನು ನಿರ್ಮಿಸಿದರು. ಭಾರತ ದೇಶದ ತಮ್ಮ ಹಕ್ಕಿನ ನೆಲ ಬಾಲಚಾದಿಯೆಂಬ ಪ್ರದೇಶದಲ್ಲಿ ಒಂದು ಪುಟ್ಟ ಪೋಲ್ಯಾಂಡ್ ದೇಶವನ್ನು ಸೃಷ್ಟಿಸಿದ ಮಹಾರಾಜರು ಆ ಮಕ್ಕಳಿಗೆ ಕೇವಲ ಊಟ- ವಸತಿಯನ್ನು ಮಾತ್ರ ನೀಡಲಿಲ್ಲ, ಬದಲಾಗಿ ಅವರ ಮಣ್ಣಿನ ನೆಲದ ವಾಸನೆಯನ್ನು ಮರುಕಳಿಸುವಂತೆ ಮಾಡಲು ಪೋಲಿಷ್ ಶಿಕ್ಷಕರನ್ನು ನೇಮಕ ಮಾಡಿ ಆ ಮಕ್ಕಳಿಗೆ ಪಾಠಗಳನ್ನು, ಕಥೆಗಳನ್ನು, ಅಲ್ಲಿಯ ಜನಪದ, ಜೋಗುಳ, ಉದ್ಯಾನಗಳು ಹಾಗೂ ಕ್ರಿಸ್ಮಸ್ ಟ್ರೀಗಳನ್ನು ಎಲ್ಲವನ್ನು ನಿರ್ಮಿಸಿ ಅವರಿಗೆ ಅವರದ್ದೇ ನೆಲದ ಎಲ್ಲಾ ವಿಷಯಗಳನ್ನು ಕಲಿಸಲು ಏರ್ಪಾಡು ಮಾಡಿದರು.

ಮಹಾರಾಜರು ಆ ಮಕ್ಕಳಿಗೆ ನರಳುವಿಕೆ ನಿಮ್ಮನ್ನು ಅಳಿಸಿ ಹಾಕುತ್ತದೆ. ಆದರೆ ನಿಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರ ಮತ್ತು ಸಂಪ್ರದಾಯಗಳು ಪವಿತ್ರವಾಗಿದ್ದು ಇಲ್ಲಿ ಅದೆಲ್ಲವನ್ನು ನಿಮಗಾಗಿ ರೂಪಿಸಿಕೊಡಲಾಗಿದೆ. ಅವುಗಳನ್ನು ಬೆಳೆಸಿ ಉಳಿಸಿಕೊಂಡು ಹೋಗುವ ಮೂಲಕ ನಿಮ್ಮ ಬದುಕನ್ನು ರೂಪಿಸಿಕೊಳ್ಳಿ ಎಂದು ಕಿವಿ ಮಾತನ್ನು ಹೇಳಿದರು.

ನಾಲ್ಕು ವರ್ಷಗಳ ಕಾಲ ಇಡೀ ಜಗತ್ತು ವಿಶ್ವ ಮಹಾಯುದ್ಧದ ದಳ್ಳುರಿಯಲ್ಲಿ ಬೆಂದರೆ ಇಲ್ಲಿ ಆ ಮಕ್ಕಳು ನಿರಾಶ್ರಿತರಂತಲ್ಲವೇ ಒಂದು ಕುಟುಂಬದಂತೆ ಜೊತೆಯಾಗಿ ಬೆಳೆದರು ಬದುಕಿದರು.

ಫೋಟೋ ಕೃಪೆ : ಅಂತರ್ಜಾಲ

ಮಹಾರಾಜರು ಕೂಡ ಆಗಾಗ ಮಕ್ಕಳನ್ನು ಭೇಟಿಯಾಗಿ ಅವರ ಹೆಸರನ್ನು ಹಿಡಿದು ಕರೆಯುವಷ್ಟರ ಮಟ್ಟಿಗೆ ಅವರೊಂದಿಗೆ ಬೆರೆತರು. ಅವರ ಹುಟ್ಟುಹಬ್ಬಗಳನ್ನು
ಆಚರಿಸಿದರು. ಎಂದೂ ಮರಳಿ ದೊರೆಯದ ತಂದೆ ತಾಯಿಗಳನ್ನು ನೆನೆಸಿ ಅಳುವ ಮಕ್ಕಳನ್ನು ಸಮಾಧಾನಿಸಿದರು. ಅಲ್ಲಿ ಕಾರ್ಯ ನಿರ್ವಹಿಸಲು ವೈದ್ಯರು, ಶಿಕ್ಷಕರು, ಆಹಾರ, ಬಟ್ಟೆ, ಶಿಕ್ಷಣ ಮತ್ತಿತರ ಎಲ್ಲ ಖರ್ಚುಗಳಿಗೆ ತಮ್ಮ ಸಂಪತ್ತಿನಿಂದ ಹಣವನ್ನು ಬಳಸಿದರು.

ನಾಲ್ಕು ವರ್ಷಗಳ ನಂತರ ಯುದ್ಧ ಮುಕ್ತಾಯವಾಗಿ ಅವರೆಲ್ಲರೂ ಮತ್ತೆ ತಮ್ಮ ದೇಶಕ್ಕೆ ಮರಳುವ ಕಾಲ ಬಂತು. ಸಾಕಷ್ಟು ದುಃಖದಿಂದ ತಮ್ಮ ದೇಶಕ್ಕೆ ಮರಳಿದ ಅವರ ಪಾಲಿಗೆ ಬಳಚಾದಿ ನಿಜವಾದ ಮನೆಯಾಗಿತ್ತು.

ಇಂದು ಆ ಮಕ್ಕಳಲ್ಲಿ ಬಹುತೇಕ ವೈದ್ಯರು ಶಿಕ್ಷಕರು ಮತ್ತಿತರ ವೃತ್ತಿ ನಿರತರಾಗಿದ್ದಾರೆ. ಎಷ್ಟೋ ಜನ ಮೊಮ್ಮಕ್ಕಳು ಮರಿ ಮಕ್ಕಳನ್ನು ಕಂಡಿದ್ದಾರೆ. ಇದೀಗ ಪೋಲೆಂಡ್ನಲ್ಲಿ ಹಲವಾರು ಶಾಲೆಗಳಿಗೆ ಹಾಗೂ ವೃತ್ತಗಳಿಗೆ ಜಾಮ್ ಸಾಹೇಬ್ ದಿಗ್ವಿಜಯ ಸಿಂಗ್ ಅವರ ಹೆಸರನ್ನು ಇಡಲಾಗಿದೆ. ಮುಂದೆ ಪೋಲೆಂಡ್ ದೇಶದ ಅತಿ ದೊಡ್ಡ ಗೌರವವನ್ನು ಮಹಾರಾಜರಿಗೆ ನೀಡಿ ಆ ದೇಶ ಗೌರವಿಸಿತ್ತು.

ಮಹಾರಾಜರ ಗೌರವಾರ್ಥ ಯಾವುದೇ ಶಿಲಾ ಸ್ಮಾರಕವಿಲ್ಲ ನಿಜ, ಆದರೆ 740 ಮಕ್ಕಳು ಅವರ ಸ್ಮರಣೆಯಲ್ಲಿಯೇ ಬದುಕನ್ನು ಕಳೆದಿದ್ದಾರೆ. ಆ 740 ಜನ ಮಕ್ಕಳು ಮುಂದೆ ದೊಡ್ಡವರಾದ ನಂತರ ತಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಇಡೀ ಜಗತ್ತಿನ ಬಾಗಿಲು ತಮ್ಮ ಪಾಲಿಗೆ ಮುಚ್ಚಿದಾಗ, ತಮ್ಮನ್ನು ಯಾರೊಬ್ಬರೂ ರಕ್ಷಿಸಲು ಒಪ್ಪದೇ ಹೋದಾಗ ಭಾರತ ದೇಶದ ಮಹಾರಾಜರೊಬ್ಬರು ತಮ್ಮನ್ನು ಕೇವಲ ರಕ್ಷಿಸಲಿಲ್ಲ ಬದಲಾಗಿ ತಮಗೆ ತಂದೆಯ ಸ್ಥಾನದಲ್ಲಿ ನಿಂತು ತಮ್ಮಲ್ಲಿನ ಅನಾಥ ಪ್ರಜ್ಞೆಯನ್ನು ಹೋಗಲಾಡಿಸಿ ಭರವಸೆಯನ್ನು ತುಂಬಿ ಮರಳಿ ಕಳುಹಿಸಿದ ಕಥೆಯನ್ನು ಇಂದಿಗೂ ಹೇಳುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ

ನೋಡಿದಿರಾ ಸ್ನೇಹಿತರೆ, ದೇವರು ನಮಗೆ ಕೊಟ್ಟು ನೋಡುವ ಮತ್ತು ಕಸಿದು ನೋಡುವ. ಎರಡು ರೀತಿಯಲ್ಲಿಯೂ ಪರೀಕ್ಷಿಸುತ್ತಾನೆ. ಕಸಿದುಕೊಂಡಾಗ ನಿರ್ಲಿಪ್ತ ಭಾವದಿಂದ ಪರಿಸ್ಥಿತಿಯನ್ನು ಒಪ್ಪಿಕೊಂಡು, ಪ್ರಯತ್ನಪೂರ್ವಕವಾಗಿ ಕಾರ್ಯನಿರ್ವಹಿಸಿ ಮುಂದೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ಎಂಬ ಭರವಸೆಯನ್ನು ಹೊಂದಿ ಬದುಕಿನಲ್ಲಿ ಮುಂದೆ ಸಾಗಬೇಕು.

ನಮಗೆ ದೇವರು ಎಲ್ಲವನ್ನು ಕೊಟ್ಟಾಗ ಎಲ್ಲವನ್ನು ಕೊಟ್ಟ ಆ ದೇವರು ಒಪ್ಪುವ ಹಾಗೆ ನಮಗಿಂತ ಕಡಿಮೆ ಅವಕಾಶಗಳನ್ನು ಹೊಂದಿರುವ ಜನರಿಗೆ ಸಹಾಯ ಸಹಕಾರವನ್ನು ನೀಡುವ ಅವರ ಬಾಳಿಗೆ ಬೆಳಕಾಗದಿದ್ದರೂ ಪರವಾಗಿಲ್ಲ ಬೆಳಕಿನ ಕುಡಿಯನ್ನು ತೋರಿದರೆ ಸಾಕು. ನಾವು ಆತನ ಪರೀಕ್ಷೆಯಲ್ಲಿ ಪಾಸಾದಂತೆಯೇ ಸರಿ. ಏನಂತೀರಾ ಸ್ನೇಹಿತರೆ ?


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW