ಸಮಾಜ ಕಲ್ಯಾಣವನ್ನು ಮಾಡುವವರಲ್ಲಿ ಸ್ವಾಮೀಜಿಯವರ ಪಾತ್ರ ದೊಡ್ಡದು. ಅವರ ಮೇಲೆ ಭಕ್ತರಿಗೆ ಅಪಾರವಾದ ಭಕ್ತಿ ಗೌರವ ಇರುತ್ತದೆ. ಕತೆಗಾರ ಸೋಮೇಶ್ ಕಣದೂರ್ ಅವರು ಬರೆದ ಕತೆಯನ್ನು ತಪ್ಪ ಪೂರ್ತಿಯಾಗಿ ಓದಿ …
ಪಟ್ಟಣದಿಂದ ದೂರದಲ್ಲೊಂದು ಊರು. ಊರಿನಲ್ಲೊಂದು ಬೆಟ್ಟ. ಬೆಟ್ಟದ ಮೇಲೆ ಸ್ವಾಮೀಜಿ ಇದ್ದರು. ಸ್ವಾಮೀಜಿ ಆಶೀರ್ವಾದ ಪಡೆದರೆ ಕಷ್ಟಗಳೆಲ್ಲ ನೀರಿನಂತೆ ಪರಿಹಾರವಾಗುತಿತ್ತು.
ಆ ನಂಬಿಕೆಯಿಂದ ತುಳಸಿಯು ಬಹಳ ವರ್ಷಗಳಿಂದ ಸ್ವಾಮೀಜಿಯ ಪವಾಡ ನಂಬಿ ದೂರದ ಊರಿಂದ ವರ್ಷಕ್ಕೊಮ್ಮೆ ಭೇಟಿ ಕೊಡುತ್ತಿದ್ದಳು.
ತುಳಸಿಗೆ ಬೆಟ್ಟದ ಮೇಲಿರುವ ಸ್ವಾಮೀಜಿಯ ಮೇಲೆ ಅಪಾರವಾದ ನಂಬಿಕೆಯಿತ್ತು. ವಿರಳ ಭಕ್ತರಿದ್ದ ಆ ಊರಿನಲ್ಲಿ ಇದ್ದಕ್ಕಿಂದ್ದಂತೆ ದಿನೇ ದಿನೇ ಸ್ವಾಮೀಜಿಯ ಮಹಿಮೆ ಊರೆಲ್ಲ ಹಬ್ಬಿತು ಇದರಿಂದ ಭಕ್ತರ ದಂಡು ಹೆಚ್ಚಾಯಿತು. ಅದನ್ನರಿತ ಸ್ವಾಮೀಜಿಗಳು ಒಂದು ದಿನ ನಿಜವಾದ ಭಕ್ತರ ನಂಬಿಕೆ ಹಾಗೂ ವಿಶ್ವಾಸ ಪರೀಕ್ಷಿಸಲು ಮುಂದಾದರು.
ಬೆಟ್ಟದ ಕೆಳಗೆ ಸ್ವಾಮೀಜಿಯ ದರ್ಶನಕ್ಕೆ ಬರುವ ದಾರಿಯಲ್ಲಿ ಒಬ್ಬ ವ್ಯಕ್ತಿಯನ್ನು ಕೂರಿಸಿ ಸ್ವಾಮೀಜಿ ಹಾಗೂ ಆ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವಂತೆ ನಿರ್ದೇಶನ ಕೊಟ್ಟರು. ಆ ವ್ಯಕ್ತಿಯು ಸ್ವಾಮೀಜಿಯ ಆಜ್ಞೆಯಂತೆ ಅಪಪ್ರಚಾರ ಮಾಡಿ ಬಂದವರಲ್ಲಿ ಅಪನಂಬಿಕೆ ಮೂಡಿಸಿ ಹಿಂದಕ್ಕೆ ಕಳಿಸುತ್ತಿದ್ದನು. ಆದರೂ ಸಹ ಕೆಲವರು ಬೆಟ್ಟ ಹತ್ತಿ ಮೇಲೆ ಹೋಗಿ ಸ್ವಾಮೀಜಿಯ ದರ್ಶನ ಪಡೆಯುತ್ತಿದ್ದರು.
ಒಂದು ದಿನ ಮುಂಜಾನೆ ತುಳಸಿಯು ಸ್ವಾಮೀಜಿಯ ದರ್ಶನಕ್ಕೆ ಬಂದಳು. ಅವಳು ಗಮನಿಸಿದಂತೆ ದಾರಿಯುದ್ಧಕ್ಕೂ ಜನರು ಸ್ವಾಮೀಜಿಯ ಬೈಯುತ್ತಾ, ಹಿಂತಿರುಗಿ ಹೋಗುವುದನ್ನು ಗಮನಿಸಿದಳು. ಏನಾಗಿದೆ ಎಂದು ವಿಚಾರಿಸಲು ಅಪಪ್ರಚಾರ ಮಾಡುವವನ ಬಳಿ ಬಂದು ಕೇಳಿದಳು. ತುಳಸಿಗೆ ಅವನು ಇನ್ನಷ್ಟು ಕೆಟ್ಟ ರೀತಿಯಲ್ಲಿ ಆ ಸ್ವಾಮೀಜಿಯ ಬಗ್ಗೆ ಹೇಳಿದ.
ಅವನು ಏನೇ ಹೇಳಿದರೂ ಆ ಮಾತಿಗೆ ಬೆಲೆಯೇ ಕೊಡಲಿಲ್ಲ.
ಸ್ವಾಮೀಜಿಗೆ ಅಲ್ಲಿ ನಡೆಯುತ್ತಿದ್ದ ಅಪಪ್ರಚಾರದ ಬಗ್ಗೆ ಮಾಹಿತಿಯನ್ನು ನೀಡಿದಳು. ಆಗ ಸ್ವಾಮೀಜಿಯೂ ಅವಳ ದೃಢವಾದ ಭಕ್ತಿ, ವಿಶ್ವಾಸಕ್ಕೆ ಮೆಚ್ಚಿ ಇದ್ದ ವಿಷಯ ತಿಳಿಸಿದರು. ಆಗ ತುಳಸಿಗೆ ಸ್ವಾಮೀಜಿಯ ಮೇಲೆ ಇನ್ನಷ್ಟು ಭಕ್ತಿ ಹೆಚ್ಚಾಯಿತು. ಸ್ವಾಮೀಜಿ ತಮ್ಮ ದಿವ್ಯ ದರ್ಶನ ಕೊಟ್ಟರು. ಸಾಕ್ಷಾತ್ ಶಿವನೇ ಆ ಕ್ಷೇತ್ರದಲ್ಲಿ ಸ್ವಾಮೀಜಿಯ ರೂಪದಲ್ಲಿ ಬಂದಿದ್ದಾನೆ ಎಂದು ಭಕ್ತಿಪೂರ್ವಕವಾಗಿ ಕೈ ಮುಗಿದಳು.
ಪರಿಶುದ್ಧ ಭಕ್ತನ ಶ್ರದ್ದೆ ಹಾಗೂ ನಂಬಿಕೆಯು ದೇವರು ಅಥವಾ ಪುಣ್ಯಕ್ಷೇತ್ರದ ಮೇಲೆ ಎಷ್ಟೇ ಅಪಪ್ರಚಾರ ಮಾಡಿದರು ದೇವರ ಮೇಲಿನ ಭಕ್ತಿ ಮನುಷ್ಯರ ನಡವಳಿಕೆಯ ಮಾನದಂಡದ ಮೇಲೆ ಪರಿಣಾಮ ಬೀರುವಿದಿಲ್ಲ.
ಧರ್ಮೋ ರಕ್ಷತಿ ರಕ್ಷಿತಃ
- ಸೋಮೇಶ್ ಕಣದೂರ್ – ಬೆಂಗಳೂರು.
